ಕಿರಿಯರಿಗೆ ಮಣೆ ಹಾಕುತ್ತಿರುವುದಕ್ಕೆ ಎಚ್.ಎಂ. ರೇವಣ್ಣ ಅಸಮಾಧಾನ
ಬೆಂಗಳೂರು, ಜೂನ್ 5: ರಾಜ್ಯ ಸಚಿವ ಸಂಪುಟದಲ್ಲಿ ಹಿರಿಯರ ಬದಲು ಕಿರಿಯರಿಗೆ ಅವಕಾಶ ನೀಡುವ ನಿರ್ಧಾರಕ್ಕೆ ಕಾಂಗ್ರೆಸ್ನ ಹಿರಿಯ ನಾಯಕ ಎಚ್.ಎಂ. ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಖಾತೆ ಹಂಚಿಕೆ ಸಂಬಂಧ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಚರ್ಚೆ ಆರಂಭವಾಗುವ ಮುನ್ನವೇ ಕಾಂಗ್ರೆಸ್ನ ಕೆಲವು ನಾಯಕರಲ್ಲಿ ಅಸಮಾಧಾನ ಭುಗಿಲೆದ್ದಿದೆ.
ಜೆಡಿಎಸ್ಗೆ ಇಂಧನ, ಹಣಕಾಸು ಸೇರಿದಂತೆ ಪ್ರಮುಖ ಖಾತೆಗಳನ್ನು ಬಿಟ್ಟುಕೊಡಲಾಗಿದೆ. ಅವರಲ್ಲಿ ಎಚ್.ಡಿ. ರೇವಣ್ಣ ಸೇರಿದಂತೆ ಎಲ್ಲ ಘಟಾನುಘಟಿ ನಾಯಕರು ಪ್ರಭಾವಿ ಖಾತೆಗಳನ್ನು ಪಡೆದುಕೊಳ್ಳಲಿದ್ದಾರೆ.
ಬೆಂಗಳೂರಿಂದ ದೆಹಲಿಗೆ ವರ್ಗಾವಣೆಗೊಂಡ ಕಾಂಗ್ರೆಸ್ನ ಸಚಿವ ಸ್ಥಾನ ಕಿತ್ತಾಟ
ಆದರೆ, ಕಾಂಗ್ರೆಸ್ನಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಸಚಿವರಾದವರಿಗೆ ಮತ್ತು ಆರಕ್ಕಿಂತ ಹೆಚ್ಚು ಬಾರಿ ಚುನಾವಣೆಯಲ್ಲಿ ಗೆದ್ದವರಿಗೆ ಸಚಿವ ಸ್ಥಾನ ನೀಡಬಾರದು ಎಂಬ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇದರಿಂದ ಪಕ್ಷದ ಹಿರಿಯರಿಗೆ ಸರ್ಕಾರದ ಆಡಳಿತದಲ್ಲಿ ಯಾವುದೇ ಪಾತ್ರವಿರುವುದಿಲ್ಲ. ಕೇವಲ ಶಾಸಕರಾಗಿ ಉಳಿಯಬೇಕಾಗುತ್ತದೆ. ಮಿಗಿಲಾಗಿ ತಮಗಿಂತ ಕಿರಿಯ, ಅನನುಭವಿಗಳ ಎದುರು ಕೆಲಸ ಮಾಡಿಸಿಕೊಳ್ಳಲು ಕೈಕಟ್ಟಿ ನಿಲ್ಲಬೇಕಾಗುತ್ತದೆ ಎಂದು ಎಚ್.ಎಂ. ರೇವಣ್ಣ ಅವರು ಬೇಸರ ಹೊರಹಾಕಿದ್ದಾರೆ.
ಮುಜರಾಯಿ ಕೊಡಿ, ಸುತ್ತಾಡಿಕೊಂಡಿರುತ್ತೇನೆ ಗುಡಿ : ಡಿಕೆಶಿ ಪ್ರಲಾಪ
ಕಿರಿಯ ಶಾಸಕರಿಗೆ ಮಣೆ ಹಾಕುವ ಹೈಕಮಾಂಡ್ ನಿರ್ಧಾರದ ವಿಚಾರದಲ್ಲಿ ಪಕ್ಷದ ಹಿರಿಯ ನಾಯಕರಲ್ಲಿ ಅತೃಪ್ತಿ ಉಂಟಾಗಿದೆ. ಅನುಭವಿಗಳಾಗಿದ್ದೂ, ಯಾವುದೇ ಅಧಿಕಾರವಿಲ್ಲದೆ ಕೂರಬೇಕಾಗುತ್ತದೆ ಎಂದು ಅನೇಕ ನಾಯಕರಲ್ಲಿ ಅಸಮಾಧಾನ ಮೂಡಿದೆ ಎಂದು ಮೂಲಗಳು ತಿಳಿಸಿವೆ.
ಪಕ್ಷದ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರೂ ಖಾತೆ ಹಂಚಿಕೆ ಸಂಬಂಧ ನೇರವಾಗಿ ತಮ್ಮ ಅಕ್ರೋಶ ಹೊರಹಾಕಿದ್ದರು. ಇಂಧನ ಖಾತೆಯನ್ನು ಬಯಸಿದ್ದ ಅವರಿಗೆ ಅದು ಕೈತಪ್ಪಿದೆ. ಇದರಿಂದ ಸಿಟ್ಟಿಗೆದ್ದ ಅವರು ಮುಜರಾಯಿ ಖಾತೆ ಕೊಡಿ, ದೇವಸ್ಥಾನ ಸುತ್ತಾಡಿಕೊಮಡು ಇರುತ್ತೇನೆ ಎಂದು ಖಾರವಾಗಿ ವರಿಷ್ಠರ ಮುಂದೆ ಹೇಳಿದ್ದರು.