ಕ್ಯಾಸಿನೋ ತೆರೆಯುತ್ತೀರಾ, ನೋಡ್ತಿನಿ ಎಂದ ಡಿ ಕೆ ಶಿವಕುಮಾರ್
ಬೆಂಗಳೂರು, ಫೆಬ್ರವರಿ 24: ಕರ್ನಾಟಕಕ್ಕೆ ಶ್ರೀಮಂತ ರಾಷ್ಟ್ರಗಳಿಂದ ಮೋಜು ಮಸ್ತಿಗೆ ಎಂದು ಬರುವ ವಿದೇಶಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ರಾಜ್ಯದಲ್ಲಿಯೂ ಕ್ಯಾಸಿನೋ ಜೂಜು ಕೇಂದ್ರಗಳನ್ನು ತೆರೆಯಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಮುಂದಿಟ್ಟಿದೆ.
ಆದರೆ, ಇದಕ್ಕೆ ಕಾಂಗ್ರೆಸ್ ಮುಖಂಡ ಡಿ ಕೆ ಶಿವಕುಮಾರ್ ಅವರು, ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕ್ಯಾಸಿನೋಗಳನ್ನು ತೆರೆಯುತ್ತೇವೆ ಎಂದು ಯಡಿಯೂರಪ್ಪ ಅವರು ಬಜೆಟ್ನಲ್ಲಿ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು. ಅಲ್ಲಿಯವರೆಗೂ ಇದರ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದು ಮಾಧ್ಯಮಗಳ ಎದುರು ಹೇಳಿದ್ದಾರೆ.
ಜೂಜು ಪ್ರಿಯರಿಗೆ ಬಿಜೆಪಿ ಸರ್ಕಾರ ಕೊಡುತ್ತಿರುವ ಕೊಡುಗೆಯಾದರೂ ಏನು?
ಕ್ಯಾಸಿನೋಗಳನ್ನು ತೆರೆಯವುದರಿಂದ ಜನರಿಗೆ ಹಾಗೂ ಪ್ರವಾಸೋದ್ಯಮ ಇಲಾಖೆಗೆ ಹೇಗೆ ಅನುಕೂಲ ಆಗುತ್ತೆ ಎಂದು ಹೇಳಲಿ ನೋಡೋಣ. ಆಮೇಲೆ ಅದರ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ.
'ರಾಜ್ಯದ ಕೆಲ ಕಡೆಗೆ ಪ್ರವಾಸೋದ್ಯಮ ಹಿತ ದೃಷ್ಠಿಯಿಂದ ಕ್ಯಾಸಿನೋಗಳನ್ನು ತೆರೆಯಬೇಕು ಎಂಬ ನಿರ್ಧಾರವನ್ನು ನಮ್ಮ ಇಲಾಖೆ ಮಾಡಿದೆ. ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಆರಂಭಿಸಲು ಅನುಮತಿ ನೀಡಲಾಗುವುದು. ಆದರೆ, ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ' ಎಂದು ಸಚಿವ ಸಿ.ಟಿ.ರವಿ ಹೇಳಿದ್ದರು.