ಗೌಡ್ರು ತಿನ್ನೋದನ್ನಾ 3ದಿನ ತಿಂದು ಮೋದಿ ಬದುಕಿದ್ರೆ, ನಾ ಒಪ್ಕೋತೀನಿ: ಸಿ ಎಂ ಇಬ್ರಾಹಿಂ
Recommended Video
ಮೈಸೂರು, ಮಂಡ್ಯ, ಏ 13: ಲೋಕಸಭಾ ಚುನಾವಣೆಯ ಜೆಡಿಎಸ್ - ಕಾಂಗ್ರೆಸ್ ಜಂಟಿ ಪ್ರಚಾರದ ವೇಳೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ತೀವ್ರ ಆಕ್ಷೇಪಾರ್ಹ ಪದಗಳನ್ನು ಬಳಸಿ ಕಾಂಗ್ರೆಸ್ಸಿನ ಹಿರಿಯ ಮುಖಂಡ, ಸಿ ಎಂ ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನೆರದ ಜನರ ಚಪ್ಪಾಳೆಗಿಟ್ಟಿಸಲು ಇಬ್ರಾಹಿಂ ಏಕವಚನದಲ್ಲಿ ವಾಗ್ದಾಳಿ ನಡೆಸುವುದು ಮಾಮೂಲಿಯಾಗಿದ್ದರೂ, ಮೈಸೂರು ಮತ್ತು ಮಂಡ್ಯ ಸಾರ್ವಜನಿಕ ಸಭೆಯಲ್ಲಿ ಅವರು ಪ್ರಧಾನಿ ಎನ್ನುವ ಕನಿಷ್ಠ ಗೌರವವಿಲ್ಲದೇ, ಮೋದಿ ವಿರುದ್ದ ಬಳಸಿದ ಪದಗಳಿಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಬಿಎಸ್ವೈ ಅವ್ರದ್ದು ಬಸ್ ಸ್ಟ್ಯಾಂಡ್ ಲವ್, ಕಾಂಗ್ರೆಸ್ಸಿನಗರು ಮುತ್ತೈದೆಯರು: ಸಿಎಂ ಇಬ್ರಾಹಿಂ
ಮಾಜಿ ಪ್ರಧಾನಿ ದೇವೇಗೌಡ್ರು ಮತ್ತು ಮಾಜಿ ಸಿಎಂ ಸಿದ್ದರಾಮಯ್ಯನವರ ಸಮ್ಮುಖದಲ್ಲೇ, ಇಬ್ರಾಹಿಂ ಕೀಳುಮಟ್ಟದ ಪದಪ್ರಯೋಗ ಮಾಡಿದ್ದಾರೆ. ಏ ನಿನ್ ಬಾಯಿಗೆ ಮಣ್ ಹಾಕಾ.. ಬಡ್ಡೇತದೆ.. ನಮ್ ಗೌಡ್ರು ತಿನ್ನೋದನ್ನು ಮೂರು ದಿನ ತಿಂದು ತೋರ್ಸು.. ಈ ರೀತಿಯ ಪದಗಳನ್ನು ಇಬ್ರಾಹಿಂ ಬಳಸಿದ್ದಾರೆ.
ಮೋದಿಗೆ ಬರೀ ಮುಸ್ಲಿಂ ಹೆಂಡತಿಯರದ್ದೇ ಚಿಂತೆ: ಮತ್ತೆ ಮಾತು ಹರಿಯಬಿಟ್ಟ ಸಿಎಂ ಇಬ್ರಾಹಿಂ
ಮೈತ್ರಿ ಅಭ್ಯರ್ಥಿ ಸಿ ಎಚ್ ವಿಜಯಶಂಕರ್ ಪರ ಮೈಸೂರಿನಲ್ಲಿ ಮತ್ತು ನಿಖಿಲ್ ಕುಮಾರಸ್ವಾಮಿ ಪರ ಮಳವಳ್ಳಿಯಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಇಬ್ರಾಹಿಂ ವಾಗ್ದಾಳಿ ನಡೆಸಿ, ನೆರೆದಿದ್ದ ಎರಡು ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರನ್ನು ಇಬ್ರಾಹಿಂ ರಂಜಿಸಿದರು. ಅವರು ಆಡಿದ ಮಾತು, ಯಥಾವತ್ತಾಗಿ, ಮುಂದೆ ಓದಿ..
ಮೋದಿ ವಿರುದ್ದ ಬಾಯಿಗೆ ಬಂದಂತೆ ಮಾತನಾಡಿದ ಇಬ್ರಾಹಿಂ
ಮಂಡ್ಯದಲ್ಲಿ ನಡೆಯುವ ಚುನಾವಣೆ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ನಡುವೆಯಲ್ಲ, ಅದು ಗುಜರಾತಿನ ವ್ಯಾಪಾರಿ ಪ್ರಧಾನಿ ಮೋದಿ ಮತ್ತು ನಮ್ಮ ಕನ್ನಡ ಮಣ್ಣಿನ ದೇವೇಗೌಡ್ರ ನಡುವೆ. ಮೋದಿಯ ಈ 5 ವರ್ಷದಲ್ಲಿ 36 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡರು. ಈ ಬಗ್ಗೆ ಮೈಸೂರಿಗೆ ಬಂದಿದ್ದ ಮೋದಿ ಏನಾದರೂ ಮಾತನಾಡಿದ್ದಾನಾ ಎಂದು ಪ್ರಶ್ನಿಸಿದ ಇಬ್ರಾಹಿಂ, ಅಂಬಾನಿ, ಅದಾನಿ, ಚಪಲಾನಿ ಮುಂತಾದವರಿಗೆ ಮಾತ್ರ ಮೋದಿ ಪ್ರಧಾನಿ. ಚೌಕೀದಾರ್.. ಅಂತೆ ಚೌಕೀದಾರ್.. ಅವನ್ ಮನೆ ಹಾಳಾಗ್ ಹೋಗಾ.. - ಸಿ ಎಂ ಇಬ್ರಾಹಿಂ.
ಅಚ್ಚೇದಿನ್ ಅಂತ ಊರೆಲ್ಲಾ ತಿರುಗಾಡುತ್ತಾ ಇದ್ದಾನೆ. ಇವನ ಬಾಯಿಗೆ ಮಣ್ ಹಾಕಾ
ಎಲ್ಲಾ ಬೆಲೆ ಏರಿಕೆಯಾಗಿದೆ, ಅಚ್ಚೇದಿನ್. ಅಚ್ಚೇದಿನ್ ಅಂತ ಊರೆಲ್ಲಾ ತಿರುಗಾಡುತ್ತಾ ಇದ್ದಾನೆ. ಇವನ ಬಾಯಿಗೆ ಮಣ್ ಹಾಕಾ. ಒಳ್ಳೆದಿನ ಬಂದಿದ್ದು ಅಂಬಾನಿ, ಅದಾನಿ ಮುಂತಾದ ಬಂಡವಾಳಶಾಹಿಗಳಿಗೆ ಮಾತ್ರ. ಅದ್ಯಾವ ಲೆಕ್ಕದಲ್ಲೂ ಮೋದಿ, 86ವರ್ಷದಿಂದ ಹೋರಾಟ ಮಾಡಿಕೊಂಡು ಬರುತ್ತಿರುವ ದೇವೇಗೌಡ್ರಿಗೆ ಸಮನಲ್ಲ. ಅವನು ಲಕ್ಷಾಂತರ ರೂಪಾಯಿಯ ಸೂಟುಬೂಟು ಹಾಕಿಕೊಳ್ಳುತ್ತಾನೆ. ನಮ್ ಗೌಡ್ರದ್ದು ಇನ್ನೂರು ರೂಪಾಯಿ ಪಂಚೆ, ನೂರು ರೂಪಾಯಿ ಶರ್ಟು. ನಮ್ ಗೌಡ್ರದ್ದು ಊಟ ಮುದ್ದೆ, ಬಸ್ಸಾರು. ಅವರು ತಿನ್ನೋದನ್ನಾ ಮೂರು ದಿನ ತಿಂದ್ರು ಜೀವಂತವಾಗಿದ್ರ, ಮೋದಿ ನಾ ಒಪ್ಕೋತೀನಿ - ಸಿ ಎಂ ಇಬ್ರಾಹಿಂ.
ಮುಂದುವರಿದ ಸಿ ಎಂ ಇಬ್ರಾಹಿಂ ವಾಕ್ ಲಹರಿ: ಈ ಬಾರಿ ರಾಮಮಂದಿರ, ಕರಸೇವೆ
ಗೌಡ್ರದ್ದು ಒರಿಜಿನಲ್ ಬೀಜ, ನಮಗೆ ಇವತ್ತು ನಾಟಿ ಬೀಜ ಬೇಕೇ ಹೊರತು, ಹೈಬ್ರಿಡ್ ಬೀಜ ಅಲ್ಲ
ಗೌಡ್ರದ್ದು ಒರಿಜಿನಲ್ ಬೀಜ, ನಮಗೆ ಇವತ್ತು ನಾಟಿ ಬೀಜ ಬೇಕೇ ಹೊರತು, ಹೈಬ್ರಿಡ್ ಬೀಜ ಅಲ್ಲ. ನಮ್ಮ ಅಭ್ಯರ್ಥಿ ಯುವ ಹೈವೋಲ್ಟೇಜ್ ಗೌಡ್ರ ಸಂತತಿ ಎಂದು ಮಂಡ್ಯದಲ್ಲಿ ಹೇಳಿದ ಇಬ್ರಾಹಿಂ, ಮಂಡ್ಯ ಗೆಲ್ಲಿಸೋದು ಸಿದ್ದರಾಮಯ್ಯನ ಜವಾಬ್ದಾರಿ, ಮೈಸೂರು ಗೆಲ್ಲಿಸೋದು ದೇವೇಗೌಡ್ರ ಜವಾಬ್ದಾರಿ. ಇವರಿಬ್ಬರಿಗೂ ನಾನು ಜವಾಬ್ದಾರಿ ಎಂದು ಇಬ್ರಾಹಿಂ ಹೇಳಿದ್ದಾರೆ.
ರೈತರ ಕಷ್ಟ ಏನು ಅನ್ನೋದು ನಿನಗೆ ಗೊತ್ತಿದೆಯಾ, ಸಿದ್ರಾಮಣ್ಣ ಮತ್ತು ಗೌಡ್ರ ಬಳಿ ಕೇಳು
ಮೈಸೂರಿನಲ್ಲಿ ಮಾತನಾಡುತ್ತಿದ್ದ ಇಬ್ರಾಹಿಂ, ಏ ಮೋದಿ.. ಪ್ರಧಾನಿಯಾಗಿ ಹಳ್ಳಿಕಡೆಗೆ ನೀ ಬಂದಿದ್ದೀಯಾ, ಬರೀ ವಿದೇಶ ಸುತ್ತೋದೇ ಆಗೋಯ್ತು. ನಮ್ಮ ರೈತರ ಕಷ್ಟ ಏನು ಅನ್ನೋದು ನಿನಗೆ ಗೊತ್ತಿದೆಯಾ, ನಮ್ ಸಿದ್ರಾಮಣ್ಣ ಮತ್ತು ಗೌಡ್ರ ಬಳಿ ಕೇಳು.. ಅವರು ವಿವರಿಸುತ್ತಾರೆ. ನಮ್ ಸೈನಿಕರನ್ನು ಕೊಂದು ಅದರಲ್ಲಿ ರಾಜಕೀಯ ಮಾಡುತ್ತಿದ್ದೀಯಾ - ಸಿ ಎಂ ಇಬ್ರಾಹಿಂ.
ನಿನ್ನ ಅಪ್ಪ ಏನು ಮಹಾರಾಜನ ಕುಟುಂಬಸ್ಥನಾ ಅಥವಾ ಐಎಎಸ್ ಅಧಿಕಾರೀನಾ
ನನಗೆ ಯಾರೂ ಇಲ್ಲ , ನನ್ನ ಬಳಿ ಏನೂ ಆಸ್ತಿಯಿಲ್ಲ ಎಂದು ಹೇಳುವ ನಿನಗೆ ಯಾರನ್ನೂ ಹುಟ್ಟಿಸಬೇಡಾ ಎಂದು ನಾವು ಹೇಳಿದ್ವಾ ಎಂದಿರುವ ಇಬ್ರಾಹಿಂ, ನಿನ್ನ ಅಪ್ಪ ಏನು ಮಹಾರಾಜನ ಕುಟುಂಬಸ್ಥನಾ ಅಥವಾ ಐಎಎಸ್ ಅಧಿಕಾರೀನಾ ಎಂದು ಇಬ್ರಾಹಿಂ ಲೇವಡಿ ಮಾಡಿದ್ದಾರೆ. ಇದು ಇಬ್ರಾಹಿಂ ಭಾಷಣದ ಹೈಲೆಟ್ಸ್.