ಕಾಂಗ್ರೆಸ್ ಮುಖಂಡ ಚಂದ್ರಶೇಖರ್ ಹಿರೇಮಠ್ ಎಎಪಿ ಸೇರ್ಪಡೆ
ಬೆಂಗಳೂರು, ಮೇ 3: ಸಾಮಾಜಿಕ ಹೋರಾಟಗಾರ ಹಾಗೂ ಕಾಂಗ್ರೆಸ್ ಮುಖಂಡ ಚಂದ್ರಶೇಖರ್ ಎಸ್. ಹಿರೇಮಠ್ ಮಂಗಳವಾರ ಬೆಂಗಳೂರಿನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದರು.
ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚಂದ್ರಶೇಖರ್ ಹಿರೇಮಠ್ರವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ, "ಚಂದ್ರಶೇಖರ್ರವರು ಕಾಂಗ್ರೆಸ್ನಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಅನುಭವವಿರುವವರು. ಅದರ ಜೊತೆಗೆ, ಸಾಮಾನ್ಯ ಜನರು ಹಾಗೂ ನೌಕರರಿಗಾಗಿ ಹತ್ತಾರು ಹೋರಾಟಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ. ಇಂತಹ ಅನುಭವಿ ನಾಯಕರ ಸೇರ್ಪಡೆಯಿಂದ ಪಕ್ಷಕ್ಕೆ ಆನೆಬಲ ಬಂದಂತಾಗಿದೆ" ಎಂದು ಹೇಳಿದರು.
ಚಂದ್ರಶೇಖರ್ ಎಸ್. ಹಿರೇಮಠ್ ಮಾತನಾಡಿ, "ರಾಜಕೀಯ ಹಾಗೂ ಆಡಳಿತದಲ್ಲಿ ಬದಲಾವಣೆ ತರುವುದರಲ್ಲಿ ಆಮ್ ಆದ್ಮಿ ಪಾರ್ಟಿ ಯಶಸ್ವಿಯಾಗುತ್ತಿದೆ. ಪಾರದರ್ಶಕ ಆಡಳಿತ ನೀಡುವ ಮೂಲಕ ದೇಶಕ್ಕೆ ಆಶಾದಾಯಕ ಪಕ್ಷವಾಗಿ ಎಎಪಿ ಹೊರಹೊಮ್ಮುತ್ತಿದೆ. ಜನಸಾಮಾನ್ಯ ಕುಂದುಕೊರತೆಗಳನ್ನು ಆಮ್ ಆದ್ಮಿ ಪಾರ್ಟಿ ಮಾತ್ರ ಸರಿಯಾಗಿ ಅರ್ಥ ಮಾಡಿಕೊಂಡು ಪರಿಹರಿಸಬಲ್ಲದು" ಎಂದು ತಿಳಿಸಿದರು.
ಪಿಎಸ್ಐ ನೇಮಕಾತಿ ಅಕ್ರಮ: ಮೇ 4ರಂದು ಕೆಪಿಎಸ್ಸಿ ಕಚೇರಿಗೆ ಬೀಗ ಜಡಿದು ಆಪ್ ಪ್ರತಿಭಟನೆ
"ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ರೈತ ರಹಿತ ಕಾರ್ಮಿಕ ವಿಭಾಗದ ಸಂಚಾಲಕರಾಗಿ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ನ ಉಪಾಧ್ಯಕ್ಷರಾಗಿ, ಎನ್ಎಸ್ಯುಐ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, ಕರ್ನಾಟಕ ಪ್ರದೇಶ ಕಾಂಗ್ರಸ್ ಸಮಿತಿಯ ಚುನಾಯಿತ ಸದಸ್ಯರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ" ಎಂದರು.
"ರಾಜ್ಯ ಸರಕಾರದ ವಿವಿಧ ಇಲಾಖೆ ಹಾಗೂ ನಿಗಮ ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರಕಾರಿ ದಿನಗೂಲಿ ಹಾಗೂ ಹಂಗಾಮಿ ನೌಕರರನ್ನು ಕಾಯಂಗೊಳಿಸಬೇಕೆಂದು ಆಗ್ರಹಿಸಿ ಹೋರಾಟ ಮಾಡಿ ಯಶಸ್ಸು ಗಳಿಸಿದ್ದಾರೆ" ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಅಭಿಪ್ರಾಯಪಟ್ಟರು.
ನಿರಾಶ್ರಿತರಿಗೆ ಪರಿಹಾರ ಕೊಡಿಸಿದವರು; "ರಾಜ್ಯ ಸರಕಾರದ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯಿತಿ ನೌಕರರನ್ನು ಕನಿಷ್ಠ ವೇತನದ ಅಡಿಯಲ್ಲಿ ತರಬೇಕೆಂದು ಆಗ್ರಹಿಸಿ ಹೋರಾಟ ಮಾಡಿ, ಸುಮಾರು 50 ಸಾವಿರ ನೌಕರರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ. ಸ್ಥಗಿತಗೊಂಡಿದ್ದ ಕಲಬುರಗಿ ಜಿಲ್ಲೆಯ ಏಕೈಕ ಸಕ್ಕರೆ ಕಾರ್ಖಾನೆಯು ಇವರ ಸತತ ಪ್ರಯತ್ನದಿಂದ ಪುನರಾರಂಭಗೊಂಡಿದೆ" ಎಂದು ತಿಳಿಸಿದರು.
"ಆಳಂದದ ಅಮರ್ಜಾ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ರೈತರೊಂದಿಗೆ ಪಾದಯಾತ್ರೆ ಮಾಡಿದ್ದರು. ಇದರ ಪರಿಣಾಮವಾಗಿ ಸರಕಾರವು 100 ಕೋಟಿ ರೂ. ಬಿಡುಗಡೆ ಮಾಡಿ ಯೋಜನೆಯನ್ನು ಪೂರ್ಣಗೊಳಿಸಿತು. ಅಲ್ಲದೇ, ಈ ಯೋಜನೆಯಡಿಯಲ್ಲಿ ಜಮೀನು, ಮನೆ ಕಳೆದುಕೊಂಡ ನಿರಾಶ್ರಿತರಿಗೆ ಪರಿಹಾರವನ್ನೂ ಕೊಡಿಸಿದ್ದಾರೆ" ಎಂದು ಮೋಹನ್ ದಾಸರಿ ಹೇಳಿದರು.
ಆಮ್ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಮಾತನಾಡಿ, "ರಾಜ್ಯ ಸರಕಾರದ ನರೇಗಾ ಯೋಜನೆಯಡಿಯಲ್ಲಿ ಹಾಗೂ ರಾಜ್ಯ ಸರಕಾರದ ನೋಂದಣಿ ಕಾರ್ಯಾಲಯದಲ್ಲಿ ಕಂಪ್ಯೂಟರ್ ಆಪರೇಟರ್ಗಳನ್ನು ಕನಿಷ್ಠ ವೇತನದ ಅಡಿಯಲ್ಲಿ ತಂದಿರುವುದರ ಹಿಂದೆ ಚಂದ್ರಶೇಖರ್ರವರ ಶ್ರಮವಿದೆ. ಕಲಬುರಗಿ ಜಿಲ್ಲೆಯ ಸಿಮೆಂಟ್ ಕಾರ್ಖಾನೆ ನೌಕರರಿಗೆ ಖಾಯಂಗೊಳಿಸುವುದು ಹಾಗೂ ಅವರಿಗೆ ಸಿಮೆಂಟ್ ವೇಜ್ ಬೋರ್ಡ್ ವೇತನ ಸಿಗುವಂತೆ ಮಾಡಿದ್ದಾರೆ" ಎಂದು ಮಾಹಿತಿ ನೀಡಿದರು.
"ಮದ್ಯಮುಕ್ತ ಆಳಂದ ಎಂಬ ಹೋರಾಟದಿಂದ ಆಳಂದ ತಾಲೂಕಿನ ಹಲವು ಗ್ರಾಮಗಳನ್ನು ಮದ್ಯಪಾನದಿಂದ ಮುಕ್ತಗೊಳಿಸಲು ಪ್ರಯತ್ನಿಸಿದ್ದಾರೆ. ಆಳಂದ ಪಟ್ಟಣದಲ್ಲಿ ಸುಮಾರು 250 ಅಂಗಡಿಗಳನ್ನು ಜಿಲ್ಲಾಡಳಿತ ತೆರವೂಗೊಳಿಸುವುದರ ವಿರುದ್ಧ ಹೋರಾಟ ಮಾಡಿ, ಪ್ರತಿಷ್ಠಿತ ರಾಮ ಮಾರ್ಕೆಟ್ ಉಳಿಸಿಕೊಳ್ಳಲು ಯಶಸ್ವಿ ಹೋರಾಟ ಮಾಡಿದ್ದಾರೆ" ಎಂದು ಹಿರೇಮಠ್ರನ್ನು ಹಾಡಿ ಹೊಗಳಿದರು.
Recommended Video
"ಕೇಂದ್ರೀಯ ವಿದ್ಯಾಲಯ ನಿರ್ಮಾಣದಿಂದಾಗಿ ಭೂಮಿ ಕಳೆದುಕೊಂಡ ಸುಮಾರು 70 ನೌಕರರಿಗೆ ನಿರಂತರ ಹೋರಾಟದ ಮೂಲಕ ವಿಶ್ವವಿದ್ಯಾಲಯದಲ್ಲಿ ಉದ್ಯೋಗ ಕೊಡಿಸಿದ್ದಾರೆ. ಕೈಮಗ್ಗ ನೇಕಾರರಿಗೆ ತಮ್ಮ ಕಚ್ಚಾ ಸಾಮಗ್ರಿಗಳ ಕೊರತೆ ಹಾಗೂ ವೇತನ ಪಾವತಿಸುವಲ್ಲಿ ವಿಳಂಬ ತಪ್ಪಿಸಲು ನಿರಂತರ ಹೋರಾಟ ಮಾಡಿ, ಕಲಬುರಗಿಯಲ್ಲೇ ಕಚ್ಚಾ ಸಾಮಗ್ರಿ ತಯಾರಿಸುವ ಘಟಕ ಪ್ರಾರಂಭಿಸಿ, ಕೈಮಗ್ಗ ನೇಕಾರರಿಗೆ ವೇತನ ಹೆಚ್ಚಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಸರಕಾರದ ಒಡೆತನದ ವಿದ್ಯುತ್ ಸರಬರಾಜು ಇಲಾಖೆಯ ಮೀಟರ್ ರೀಡರ್ಗಳನ್ನು ಕನಿಷ್ಠ ವೇತನದ ಅಡಿಯಲ್ಲಿ ತಂದು ಸೇವಾ ಭದ್ರತೆ ಒದಗಿಸಿರುವುದರ ಹಿಂದೆ ಚಂದ್ರಶೇಖರ್ ಎಸ್ ಹಿರೇಮಠ್ರವರ ಪರಿಶ್ರಮವಿದೆ" ಎಂದು ಜಗದೀಶ್ ವಿ ಸದಂ ಹೇಳಿದರು.