ಲೋಕಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ : ಜೆಡಿಎಸ್ಗೆ 6 ಸೀಟು!
Recommended Video
ಬೆಂಗಳೂರು, ಆಗಸ್ಟ್ 02 : ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ 2019ರ ಲೋಕಸಭೆ ಚುನಾವಣೆ ಎದುರಿಸುವುದಾಗಿ ಘೋಷಣೆ ಮಾಡಿದೆ. ಆದರೆ, ಉಭಯ ಪಕ್ಷಗಳ ನಡುವೆ ಸೀಟು ಹಂಚಿಕೆ ಪ್ರಕ್ರಿಯೆ ಇನ್ನೂ ಅಂತಿಮಗೊಂಡಿಲ್ಲ. ಯಾರಿಗೆ ಯಾವ ಕ್ಷೇತ್ರ ಬಿಟ್ಟು ಕೊಡಬೇಕು? ಎಂದು ಇನ್ನೂ ಚರ್ಚೆ ನಡೆಯುತ್ತಿದೆ.
ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿವೆ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡರೆ 9 ರಿಂದ 10 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಜೆಡಿಎಸ್ ಪಕ್ಷ ಬಯಸಿದೆ. ಆದರೆ, ಕಾಂಗ್ರೆಸ್ ಪಕ್ಷ ಕೇವಲ 6 ಸೀಟುಗಳನ್ನು ಬಿಟ್ಟುಕೊಡಲು ನಿರ್ಧರಿಸಿದೆ.
ಲೋಕಸಭೆ ಚುನಾವಣೆ ಮೈತ್ರಿಗೆ ಮುನಿಸು : ಎ.ಮಂಜು ಬಿಜೆಪಿಗೆ?
ಮೈತ್ರಿ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, 'ಕಾಂಗ್ರೆಸ್ ಜೆಡಿಎಸ್ ಪಕ್ಷವನ್ನು ಹೇಗೆ ನಡೆಸಿಕೊಳ್ಳಲಿದೆ?' ಎಂದು ನೋಡುತ್ತೇವೆ ಎಂದು ಹೇಳಿದ್ದಾರೆ. ಸೀಟು ಹಂಚಿಕೆ, ಅಭ್ಯರ್ಥಿಗಳ ಆಯ್ಕೆ ಮುಂತಾದವುಗಳ ಬಗ್ಗೆ ಇನ್ನೂ ಎರಡೂ ಪಕ್ಷಗಳು ನಿರ್ಧಾರ ಕೈಗೊಂಡಿಲ್ಲ.
ಲೋಕಸಭೆ : ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾದರೆ ಕಾಂಗ್ರೆಸ್ಗೆ ನಷ್ಟ!
2014ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಯಾವುದೇ ಮೈತ್ರಿ ಆಗಿರಲಿಲ್ಲ. 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 17, ಕಾಂಗ್ರೆಸ್ 9 ಮತ್ತು ಜೆಡಿಎಸ್ 2 ಸ್ಥಾನಗಳಲ್ಲಿ ಜಯಗಳಿಸಿದ್ದವು. ಈ ಬಾರಿ ಮೈತ್ರಿ ನಡೆದರೆ ಯಾವ ಪಕ್ಷಕ್ಕೆ ಎಷ್ಟು ಸೀಟು ಸಿಗಲಿದೆ? ಎಂದು ಕಾದು ನೋಡಬೇಕಿದೆ...
ಸೀಟು ಹಂಚಿಕೆ ಇನ್ನೂ ಆಗಿಲ್ಲ
ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ 2019ರ ಲೋಕಸಭೆ ಚುನಾವಣೆ ಎದುರಿಸುವುದಾಗಿ ಘೋಷಣೆ ಮಾಡಿದೆ. ಆದರೆ, ಉಭಯ ಪಕ್ಷಗಳ ನಡುವೆ, ಸೀಟು ಹಂಚಿಕೆ ಇನ್ನೂ ಅಂತಿಮಗೊಂಡಿಲ್ಲ. ಜೆಡಿಎಸ್ 9 ರಿಂದ 10 ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದೆ. ಆದರೆ, ಕಾಂಗ್ರೆಎಸ್ 6 ಸ್ಥಾನ ಬಿಟ್ಟುಕೊಡಲು ಮುಂದಾಗಿದೆ.
ಹಳೇ ಮೈಸೂರು ಭಾಗದಲ್ಲಿನ ಕ್ಷೇತ್ರಗಳನ್ನು ಬಿಟ್ಟುಕೊಡಲು ಜೆಡಿಎಸ್ ಬೇಡಿಕೆ ಇಟ್ಟಿದೆ. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೈಸೂರು ಭಾಗದ ಸೀಟುಗಳನ್ನು ಬಿಟ್ಟುಕೊಡಲು ಇನ್ನೂ ಒಪ್ಪಿಗೆ ನೀಡಿಲ್ಲ.
ಕಾಂಗ್ರೆಸ್ನಿಂದ ವರದಿ ತಯಾರಿಕೆ?
ಕಾಂಗ್ರೆಸ್ ಪಕ್ಷದ ಮೂಲ ನೆಲೆಯನ್ನು ಹಾಳು ಮಾಡಿಕೊಳ್ಳದೇ ಯಾವ ಕ್ಷೇತ್ರಗಳನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಬಹುದು ಎಂದು ಪಕ್ಷ ವರದಿ ತಯಾರಿಸುತ್ತಿದೆ. ಈ ವರದಿ ಆಧಾರದ ಮೇಲೆ ಸೀಟು ಹಂಚಿಕೆಯಾಗುವ ನಿರೀಕ್ಷೆ ಇದೆ.
ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಈಗಾಗಲೇ ಕಾಂಗ್ರೆಸ್ ಸಂಸದರು ಇದ್ದಾರೆ. ಈ ಸಂಸದರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸುವುದು ಕಷ್ಟ ಎಂಬುದು ಕಾಂಗ್ರೆಸ್ ವಾದ.
ಜೆಡಿಎಸ್ ಪಕ್ಷಕ್ಕೆ ಯಾವ ಕ್ಷೇತ್ರ
ಕಾಂಗ್ರೆಸ್ ಜೆಡಿಎಸ್ ಪಕ್ಷಕ್ಕೆ ಹಾಸನ, ಮಂಡ್ಯ, ಮೈಸೂರು, ಬೆಂಗಳೂರಿನ 1 ಕ್ಷೇತ್ರ ಉತ್ತರ ಕರ್ನಾಟಕದ 2 ಸೀಟುಗಳನ್ನು ಬಿಟ್ಟುಕೊಡಲು ಚಿಂತನೆ ನಡೆಸಿದೆ. ಆದರೆ, ಅಧಿಕೃತವಾಗಿ ಈ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ.
ಮಂಡ್ಯ, ಹಾಸನ, ಮೈಸೂರು-ಕೊಡಗು ಕ್ಷೇತ್ರಗಳನ್ನು ಪಡೆಯಲು ಭಾರೀ ಪೈಪೋಟಿ ಇದೆ. ಅದರಲ್ಲೂ ಹಾಸನವನ್ನು ಜೆಡಿಎಸ್ಗೆ ಬಿಟ್ಟುಕೊಡಬಾರದು ಎಂದು ಹಾಸನ ಜಿಲ್ಲಾ ಕಾಂಗ್ರೆಸ್ ನಾಯಕರು ವರಿಷ್ಠರಿಗೆ ಮನವಿ ಮಾಡಿದ್ದಾರೆ.
ಮೈಸೂರು ಕ್ಷೇತ್ರ
ಮೈಸೂರು-ಕೊಡಗು ಕ್ಷೇತ್ರ ಮತ್ತು ಹಾಸನ ಕ್ಷೇತ್ರ ಎರಡೂ ಪಕ್ಷಗಳಿಗೆ ಸವಾಲಾಗಿದೆ. ಮೈಸೂರು ಕ್ಷೇತ್ರದಿಂದ ಬಿಜೆಪಿಯಿಂದ ಕಾಂಗ್ರೆಸ್ಗೆ ಬಂದ ಮಾಜಿ ಸಂಸದ ಸಿ.ಎಚ್.ವಿಜಯಂಶಕರ್ಗೆ ಟಿಕೆಟ್ ನೀಡಲು ಸಿದ್ದರಾಮಯ್ಯ ಬಯಸಿದ್ದಾರೆ.
ಹಾಸನ ಕ್ಷೇತ್ರದಿಂದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಸ್ಪರ್ಧೆ ಮಾಡುತ್ತಾರೆ. ಆದ್ದರಿಂದ, ಆ ಕ್ಷೇತ್ರವನ್ನು ಕಾಂಗ್ರೆಸ್ ಬಿಟ್ಟುಕೊಡಲಿದೆಯೇ? ಎಂಬುದನ್ನು ಕಾದು ನೋಡಬೇಕು.
ಉತ್ತರದಲ್ಲಿ ಸೀಟು ಕೇಳಲ್ಲ
ಜೆಡಿಎಸ್ ಹಳೇ ಮೈಸೂರು ಭಾಗದಲ್ಲಿನ ಕ್ಷೇತ್ರಗಳಿಗೆ ಮಾತ್ರ ಬೇಡಿಕೆ ಇಡಲಿದೆ ಎಂಬುದು ಕಾಂಗ್ರೆಸ್ಗೂ ತಿಳಿದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಅಷ್ಟು ಪ್ರಬಲವಾಗಿಲ್ಲ. ಆದ್ದರಿಂದ, ಅಲ್ಲಿ ಸೀಟುಗಳನ್ನು ಕೇಳುವ ಸಾಧ್ಯತೆ ಇಲ್ಲ.
ಆದರೆ, ಜೆಡಿಎಸ್ ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡುತ್ತಿಲ್ಲ ಎಂಬ ಆರೋಪಗಳಿವೆ. ಅದರಿಂದ ಹೊರಬರಲು ಉತ್ತರದ ಕಡೆಯೂ ಪಕ್ಷ ಮುಖ ಮಾಡಬಹುದು. ಅದರಲ್ಲೂ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿರುವುದರಿಂದ ಈ ಭಾರಿ ಉತ್ತರದಲ್ಲಿ ಸ್ಥಾನಗಳು ಸಿಗುವ ನಿರೀಕ್ಷೆ ಇದೆ.