'ಕಳಂಕಿತ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ಮುಜುಗರ ಎನಿಸುವುದಿಲ್ಲವೇ?'
ಬೆಂಗಳೂರು, ಫೆಬ್ರವರಿ 27: ಇಂದು 79ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ವಿರೋಧಪಕ್ಷಗಳ ನಾಯಕರು ಕೂಡ ಶುಭಾಶಯ ಕೋರಿದ್ದಾರೆ. ಯಡಿಯೂರಪ್ಪ ಅವರಿಗೆ ಶುಭ ಹಾರೈಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಯಡಿಯೂರಪ್ಪ ಅವರ ಹುಟ್ಟುಹಬ್ಬಕ್ಕೆ ಹಾರೈಕೆ ತಿಳಿಸಿದೆ. ಆದರೆ ಅದರ ಬೆನ್ನಲ್ಲೇ ವ್ಯಂಗ್ಯದ ಸರಣಿ ಟ್ವೀಟ್ಗಳನ್ನೂ ಮಾಡಿದೆ.
'ರಾಜ್ಯದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಬಿ.ಎಸ್ ಯಡಿಯೂರಪ್ಪ ಅವರಿಗೆ 79ನೇ ಜನ್ಮದಿನದ ಶುಭಾಶಯಗಳು. ಆಯಸ್ಸು, ಆರೋಗ್ಯದಿಂದ ಕೂಡಿದ ಸುಖಕರ ಬದುಕು ನಿಮ್ಮದಾಗಿರಲಿ ಎಂದು ಆಶಿಸುತ್ತೇವೆ' ಎಂದು ರಾಜ್ಯ ಕಾಂಗ್ರೆಸ್ ಘಟಕ ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.
ಯಡಿಯೂರಪ್ಪಗೆ ಹುಟ್ಟುಹಬ್ಬದ ಶುಭಕೋರಿದ ಎಚ್ಡಿಕೆ, ಸಿದ್ದರಾಮಯ್ಯ!
ಆದರೆ ಯಡಿಯೂರಪ್ಪ ಅವರು ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡುವುದನ್ನು ಕಾಂಗ್ರೆಸ್ ಪ್ರಶ್ನಿಸಿದೆ. ಡಿನೋಟಿಫಿಕಷನ್ ಪ್ರಕರಣಗಳಲ್ಲಿ ಆರೋಪಗಳನ್ನು ಎದುರಿಸುತ್ತಿದ್ದೀರಿ. ಕಳಂಕಿತ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ಮುಜುಗರವಾಗುವುದಿಲ್ಲವೇ? ಎಂದು ಕೇಳಿದೆ. ಈ ಟ್ವೀಟ್ಗಳಲ್ಲಿ 'ಹ್ಯಾಪಿ ಬರ್ಥಡೇ ಬಿಎಸ್ವೈ' ಎಂಬ ಹ್ಯಾಶ್ಟ್ಯಾಗ್ಗಳನ್ನು ಬಳಸಿದೆ.
ಮುಜುಗರ ಎನಿಸುವುದಿಲ್ಲವೇ?
'ಯಡಿಯೂರಪ್ಪ ಅವರೆ, ನಿಮ್ಮ ಮೇಲೆ ಅಕ್ರಮ ಡಿನೋಟಿಫಿಕೇಷನ್ನಂತಹ ಗುರುತರವಾದ ಪ್ರಕರಣಗಳಿವೆ, "ನೀವೇ ಸಿಎಂ, ನಿಮ್ಮನ್ನ ಯಾರು ತನಿಖೆ ನಡೆಸುತ್ತಾರೆ" ಎನ್ನುವಂತ ಪ್ರಶ್ನೆ ಸುಪ್ರೀಂ ಕೋರ್ಟ್ ಕೇಳಿದೆ. ತನಿಖೆ ಹೇಗೆ ಎದುರಿಸುತ್ತೀರಿ? ಕಳಂಕಿತ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ಮುಜುಗರ ಎನಿಸುವುದಿಲ್ಲವೇ?' ಎಂದು ಪ್ರಶ್ನಿಸಿದೆ.
ಸಂಭ್ರಮಿಸುವ ಮನಸಾಗುತ್ತಿದೆಯೇ?
ಯಡಿಯೂರಪ್ಪ ಅವರೇ, ನಿಮ್ಮ 79ನೇ ಹುಟ್ಟುಹಬ್ಬ ಇಂದು, ನಿಮಗೆ ಒಳ್ಳೆಯದಾಗಲಿ.
* ವೇತನವಿಲ್ಲದ ನೌಕರರು,
* ಮಾಸಾಶನವಿಲ್ಲದ ವೃದ್ಧರು, ವಿಧವೆಯರು, ಅಂಗವಿಕಲರು,
* ಪರಿಹಾರವಿಲ್ಲದ ನೆರೆ ಸಂತ್ರಸ್ತರು
* ಅನುದಾನವಿಲ್ಲದ ಶಾಸಕರು
* ಸ್ಥಗಿತಗೊಂಡ ಯೋಜನೆಗಳು ಈ ಸ್ಥಿತಿಯನ್ನು ನೋಡಿಯೂ ಸಂಭ್ರಮಿಸುವ ಮನಸಾಗುತ್ತಿದೆಯೇ ನಿಮಗೆ? ಎಂದು ಸರಣಿ ಪ್ರಶ್ನೆಗಳನ್ನು ಮುಂದಿಟ್ಟಿದೆ.
ರೈತರ ಕಲ್ಯಾಣಕ್ಕಾಗಿ ಅರ್ಪಿಸಿಕೊಂಡವರು: ಜನ್ಮದಿನದಂದು ಯಡಿಯೂರಪ್ಪಗೆ ಮೋದಿ ಶುಭಾಶಯ
ಬಡಾಯಿ, ಲಡಾಯಿ, ಕಮಾಯಿ!
ಬಿಜೆಪಿ ಪಕ್ಷದ್ದು ಬಾಯಲ್ಲಿ ಬಡಾಯಿ, ಆಂತರಿಕ ಲಡಾಯಿ, ಭ್ರಷ್ಟಾಚಾರದ ಕಮಾಯಿ! ಇವುಗಳಲ್ಲೇ ಮುಳುಗಿದ ಸರ್ಕಾರ ವೃದ್ಧರು, ವಿಧವೆಯರು, ಅಂಗವಿಕಲರಿಗೆ ಆಸರೆಯಾದ ಮಾಸಾಶನ ನೀಡದೆ ಸಂಕಷ್ಟಕ್ಕೆ ದೂಡಿದೆ. ಅನಗತ್ಯ ಕಾರ್ ಖರೀದಿಗೆ ಹಣ ವ್ಯಯಿಸುವ ಸರ್ಕಾರಕ್ಕೆ ಅಸಹಾಯಕರ ನೆರವಿಗೆ ಹಣವಿಲ್ಲವೇ ಅಥವಾ ಕಾಳಜಿ ಇಲ್ಲವೇ ಎಂದು ಕಾಂಗ್ರೆಸ್ ಸಚಿವ ಆರ್ ಅಶೋಕ ಅವರನ್ನು ಪ್ರಶ್ನಿಸಿದೆ.
ಲೆಕ್ಕ ನೀಡದ ಬಿಜೆಪಿ
ಬಿಜೆಪಿ ಶಾಸಕರು, ಸಚಿವರು ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಕೋವಿಡ್ ಸಂಕಷ್ಟದ ವೇಳೆಯೂ ಬಿಜೆಪಿ ಸರ್ಕಾರ ವಿವಿಧ ರೀತಿಯ ತೆರಿಗೆ ಹೆಚ್ಚಿಸಿದೆ. ಕೇಂದ್ರ ಘೋಷಿಸಿದ ₹20 ಲಕ್ಷ ಕೋಟಿ ಯಾರಿಗೆ, ಎಷ್ಟು ತಲುಪಿದೆ ಎಂಬ ಲೆಕ್ಕವನ್ನೂ ಕೊಡುತ್ತಿಲ್ಲ. ಜನರ ಧ್ವನಿಯಾಗಿ ನಾವು ಎಂದಿಗೂ ಇದ್ದೇವೆ, ಇರುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
Recommended Video