ಕಾಂಗ್ರೆಸ್ ನಾಯಕರ ಹೈಡ್ರಾಮ, ಸಿದ್ದರಾಮಯ್ಯ ರಾಜೀನಾಮೆ
ಬೆಂಗಳೂರು, ಡಿಸೆಂಬರ್ 09: ಕರ್ನಾಟಕ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿರುವುದರಿಂದ ನೈತಿಕ ಹೊಣೆ ಹೊತ್ತು ಶಾಸಕಾಂಗ ಪಕ್ಷ ನಾಯಕನ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ್ದಾರೆ. ಜೊತೆಗೆ ವಿಪಕ್ಷ ನಾಯಕನ ಸ್ಥಾನವನ್ನು ತೊರೆದಿದ್ದಾರೆ. ಸಂಜೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿಯಲ್ಲಿ ತಾವೂ ಕೂಡಾ ರಾಜೀನಾಮೆ ನೀಡುತ್ತೇನೆ ಎನ್ನುತ್ತಿದ್ದಾರೆ. ಸದ್ಯಕ್ಕೆ ಕಾಂಗ್ರೆಸ್ ನಾಯಕರ ಹೈಡ್ರಾಮಾ ಹೈಕಮಾಂಡ್ ತಲುಪಿದೆ.
"ಮತದಾರರು ನೀಡಿದ ತೀರ್ಪಿಗೆ ತಲೆ ಬಾಗಲೇಬೇಕು, 15 ಕ್ಷೇತ್ರಗಳಲ್ಲಿ ಯಾವ ರೀತಿ ಫಲಿತಾಂಶ ಬಂದರೂ ಸ್ವೀಕರಿಸಲು ಸಿದ್ಧವಾಗಿದ್ದೇವೆ. ಅನರ್ಹರಂದು ಜನರು ಒಪ್ಪಿಕೊಂಡು ಆಶೀರ್ವದಿಸಿದರೆ, ನಾವು ನಮ್ಮ ಸೋಲೊಪ್ಪಿಕೊಳ್ಳಬೇಕಾಗುತ್ತದೆ. ಇದರಿಂದ ಹಿನ್ನಡೆಯಾಗಿದೆ ಎನ್ನಲಾಗುವುದಿಲ್ಲ, ರಾಜಕೀಯ ಸ್ಥಿತ್ಯಂತರ ಒಪ್ಪಿಕೊಳ್ಳಬೇಕು'' ಎಂದು ಡಿಕೆ ಶಿವಕುಮಾರ್ ಹೇಳಿ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.
" ನಮ್ಮ ನಿರೀಕ್ಷೆ ಹುಸಿಯಾಗಿದೆ. ಜನರು ಕೊಟ್ಟಂತ ತೀರ್ಪನ್ನು ಒಪ್ಪಿಕೊಂಡಿದ್ದೇವೆ. ನಾನು ಶಾಸಕಾಂಗ ಪಕ್ಷದ ನಾಯಕನಾಗಿ, ಪ್ರಜಾತಂತ್ರಾತ್ಮಕ ಮೌಲ್ಯ ಎತ್ತಿಹಿಡಿಯಲು, ಪಕ್ಷದ ಹಿತದೃಷ್ಟಿಯಿಂದ ನನ್ನ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ" ಎಂದು ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು.
ಸಿದ್ದರಾಮಯ್ಯ ಸುದ್ದಿಗೋಷ್ಠಿ ವಿವರ ಮುಂದೆ ಓದಿ...
ಉಪ ಚುನಾವಣೆ ಸೋಲಿನ ಹೊಣೆ
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದೇನೆ. ಉಪ ಚುನಾವಣೆ ಸೋಲಿನ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದಾರೆ. ಬಳಿಕ ಮಾತನಾಡಿದ ಅವರು, 15 ಉಪಚುನಾವಣೆಗಳಲ್ಲಿ ತೀರ್ಪು ಇವತ್ತು ಪ್ರಕಟವಾಗಿದೆ. ನಾನು ಪ್ರಜಾಪ್ರಭುತ್ವದಲ್ಲಿ ಬಲವಾಗಿ ನಂಬಿಕೆ ಇಟ್ಟುಕೊಂಡಿರುವವನು. 15 ಕ್ಷೇತ್ರದಲ್ಲಿ ಮತದಾರರು ಕೊಟ್ಟಿರುವ ತೀರ್ಪುನ್ನು ಸ್ವಾಗತ ಮಾಡುತ್ತೇನೆ. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರಿಗೆ ರಾಜೀನಾಮೆ ಪ್ರತಿಯನ್ನ ಕಳುಹಿಸುತ್ತೇನೆ, ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷರಿಗೂ ರಾಜೀನಾಮೆ ಪತ್ರ ತಲುಪಿಸುತ್ತೇನೆ ಎಂದರು.
ವೇಣುಗೋಪಾಲ್ ಜೊತೆ ಸಿದ್ದರಾಮಯ್ಯ ಚರ್ಚೆ
ಉಪಚುನಾವಣೆ ಫಲಿತಾಂಶ ಹಿನ್ನಡೆ ಹೈಕಮಾಂಡ್ ನಿಂದ ರಾಜ್ಯ ನಾಯಕರಿಗೆ ಕರೆ ಬಂದಿದೆ, ಸಿದ್ದರಾಮಯ್ಯ, ದಿನೇಶ್ ಗೆ ವೇಣುಗೋಪಾಲ್ ಕರೆ ಹೋಗಿದೆ. ಫಲಿತಾಂಶ ಹಿನ್ನಡೆ ಬಗ್ಗೆ ಹೈಕಮಾಂಡ್ ಕಾರಣ ಕೇಳಿದೆ. ಈ ನಡುವೆ ಫಲಿತಾಂಶದ ಬಗ್ಗೆ ನನ್ನನ್ನ ಮಾತ್ರ ಕೇಳಿದರೆ ಹೇಗೆ, ಎಲ್ಲರನ್ನೂ ಕೂರಿಸಿಕೊಂಡು ಕೇಳಿ ಎಂದು ವೇಣುಗೋಪಾಲ್ ಜೊತೆ ಸಿದ್ದರಾಮಯ್ಯ ವಾಗ್ವಾದ ಮಾಡಿದ್ದಾರೆ ಎಂಬ ಸುದ್ದಿ ಸಿಕ್ಕಿದೆ.
ಮೂಲ ಕಾಂಗ್ರೆಸಿಗರು ಅಂತ ಚುನಾವಣೆ ಸಂದರ್ಭದಲ್ಲಿ ಗಲಾಟೆ ಮಾಡಿದವರನ್ನು ಕೇಳಿ, ಪ್ರಚಾರಕ್ಕೆ ಕರೆದರೆ ಯಾರು ಸರಿಯಾಗಿ ಬಂದಿಲ್ಲ ನಾನು ಒಬ್ಬನೇ ಬಾಯಿ ಬಡಿದುಕೊಳ್ಳಲ್ಲ, ನಾನು ರಾಜೀನಾಮೆ ನೀಡುತ್ತೇನೆ ಮುಂದಿನದ್ದು ನಿಮಗೆ ಬಿಟ್ಟದು ಎಂದ ಸಿದ್ದರಾಮಯ್ಯ ಗುಡುಗಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಬಲ ಕುಗ್ಗಿದೆ
ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ 105 ಸದಸ್ಯ ಬಲ ಹೊಂದಿದೆ. ವಿಧಾನಸಭೆ ಸದಸ್ಯ ಬಲ 112 ಆಗಲು ಬಿಜೆಪಿ 7 ಸ್ಥಾನವನ್ನು ಗೆಲ್ಲಲೇಬೇಕಾಗಿತ್ತು. ಆದರೆ, ಈಗ 12 ಸ್ಥಾನ ಗೆಲ್ಲುವ ಖಾತ್ರಿಯಾಗಿದೆ. ಹೀಗಾಗಿ ಸರ್ಕಾರ ಬಹುಮತ ಪಡೆದುಕೊಂಡಿದ್ದು, ಸೇಫ್ ಆಗಿದೆ.ಇನ್ನೂ 2 ಕ್ಷೇತ್ರದ ಉಪ ಚುನಾವಣೆ ನಡೆಯಬೇಕು. ಆದ್ದರಿಂದ, ಸೋಮವಾರ ಫಲಿತಾಂಶ ಪ್ರಕಟಗೊಂಡ ಬಳಿಕ ಸದನದ ಬಲ 222ಕ್ಕೆ ಏರಿಕೆಯಾಗಿದೆ.
|
ಸಿದ್ದರಾಮಯ್ಯ ರಾಜೀನಾಮೆ ಪತ್ರ
ಮತದಾರರು ನೀಡಿದ ತೀರ್ಪನ್ನು ನಾನು ಗೌರವಿಸಿ, ಕರ್ನಾಟಕ ಉಪ ಚುನಾವಣೆಯ ಸೋಲಿನ ಹೊಣೆ ಹೊರುತ್ತೇನೆ. ಆಪರೇಷನ್ ಕಮಲ ಬಳಸಿದ ಬಿಜೆಪಿ ನಾಯಕರಿಗೆ ಮತದಾರರು ತಕ್ಕಪಾಠ ಕಲಿಸುತ್ತಾರೆ ಎಂದು ನಿರೀಕ್ಷಿಸಿದ್ದೆ.
ನಾನು ಶಾಸಕಾಂಗ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.