ರಾಜ್ಯ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ, ಏನೂ ಸರಿಯಿಲ್ಲ: ಲೇಟೆಸ್ಟ್ ಉದಾಹರಣೆ
ಬೆಂಗಳೂರು, ಫೆ 27: ಕೆಪಿಸಿಸಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನೇಮಕವಾಗದೇ ಕಾಂಗ್ರೆಸ್ ಒಡೆದ ಮನೆಯಂತಾಗಿದೆ. ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಮತ್ತೊಂದು ಘಟನೆ ಸೇರ್ಪಡೆಯಾಗಿದೆ.
ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಪಕ್ಷದ ಹಿರಿಯ ಮುಖಂಡ ಮಾಜಿ ಸ್ಪೀಕರ್ ಕೂಡಾ ಆಗಿರುವ ರಮೇಶ್ ಕುಮಾರ್ ವಿರುದ್ದ ಕಿಡಿಕಾರಿದ್ದಾರೆ. "ಮುಲಾಜಿಲ್ಲದೇ ಪಕ್ಷದಿಂದ ಹೊರಹಾಕಬೇಕು" ಎಂದು ಹೇಳಿದ್ದಾರೆ.
ಕೈಸನ್ನೆಯಲ್ಲಿ ಕಾಂಗ್ರೆಸ್ ಅನ್ನು 'ತಿನ್ನೋ ಕಾಂಗ್ರೆಸ್' ಅಂದ ರಮೇಶ್ ಕುಮಾರ್
"ಪಕ್ಷ ಮತ್ತು ಪಕ್ಷದ ಹಿರಿಯ ಮುಖಂಡರ ವಿರುದ್ದ ಹೇಳಿಕೆ ನೀಡುವವರು, ಯಾವತ್ತೂ ಪಕ್ಷಕ್ಕೆ ನಿಯತ್ತಾಗಿ ಇರುವುದಿಲ್ಲ. ಕಾಂಗ್ರೆಸ್ ಬಗ್ಗೆ ರಮೇಶ್ ಕುಮಾರ್ ಆಡಿರುವ ಮಾತಿಗೆ ನನ್ನ ಆಕ್ಷೇಪವಿದೆ. ಕಾಂಗ್ರೆಸ್ಸಿಗರಾಗಿ ಅವರು ಆಡಿರುವ ಮಾತು ತಪ್ಪು" ಎಂದು ಕೋಳಿವಾಡ ಹೇಳಿದ್ದಾರೆ.
"ಕಳೆದ ಲೋಕಸಭಾ ಚುನಾವಣೆಯ ವೇಳೆಯೂ ಪಕ್ಷ ವಿರೋಧಿ ಚಟುವಟಿಕೆಯನ್ನು ಅವರು ನಡೆಸಿದ್ದರು. ತಪ್ಪನ್ನು ತಿದ್ದಿಕೊಳ್ಳುತ್ತಾರೆ ಎಂದು ನಾವೆಲ್ಲಾ ಭಾವಿಸಿದ್ದೆವು. ಈಗ ನೆಹರೂ ಕಾಂಗ್ರೆಸ್ ಬೇರೆ, ಈಗಿನ ಕಾಂಗ್ರೆಸ್ ಬೇರೆ ಎನ್ನುವ ಮಾತನ್ನು ಆಡುತ್ತಿದ್ದಾರೆ. ಹೈಕಮಾಂಡ್ ಇಂತವರನ್ನು ಮುಲಾಜಿಲ್ಲದೇ ಪಕ್ಷದಿಂದ ಉಚ್ಚಾಟಿಸಬೇಕು" ಎಂದು ಕೋಳಿವಾಡ, ರಮೇಶ್ ಕುಮಾರ್ ವಿರುದ್ದ ಕಿಡಿಕಾರಿದ್ದಾರೆ.
"ಆಗಿನ ಕಾಂಗ್ರೆಸ್ಸೇ ಬೇರೆ, ಈಗಿನ ಕಾಂಗ್ರೆಸ್ಸೇ ಬೇರೆ. ಆಗಿನ ಕಾಂಗ್ರೆಸ್ಸಿಗೂ, ಈಗಿನ ಕಾಂಗ್ರೆಸ್ಸಿಗೂ ನಾನು ಹೋಲಿಕೆ ಮಾಡುವುದಿಲ್ಲ. ಈಗಿನ ಕಾಂಗ್ರೆಸ್ ತಿನ್ನೋ ಕಾಂಗ್ರೆಸ್" ಎಂದು ರಮೇಶ್ ಕುಮಾರ್ ಬಾದಾಮಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.
"ನಾನು ಆಗಿನ ಕಾಲದ, ಆ ಸಿದ್ದಾಂತದ ಕಾಂಗ್ರೆಸ್ಸಿಗ ಎಂದು ಹೇಳುವುದಿಲ್ಲ. ಆ ಪ್ರಯತ್ನವನ್ನೂ ಮಾಡುವುದಿಲ್ಲ. ಈಗ ಇರುವ ಕಾಂಗ್ರೆಸ್ ತಿನ್ನೋ ಪಕ್ಷ" ಎಂದು ಕೈಸನ್ನೆಯಲ್ಲಿ ರಮೇಶ್ ಕುಮಾರ್ ಹೇಳಿದ್ದರು. ಇದನ್ನು ಉಲ್ಲೇಖಿಸಿ, ಕೋಳಿವಾಡ, ರಮೇಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.