ಸುಮಲತಾ ನಾಮಪತ್ರ ಸಲ್ಲಿಕೆ ಎಫೆಕ್ಟ್: ಸಿದ್ದರಾಮಯ್ಯಗೆ ಹೈಕಮಾಂಡ್ ತುರ್ತು ಬುಲಾವ್?
ಬೆಂಗಳೂರು, ಮಾರ್ಚ್ 21: ಶುಕ್ರವಾರ ದೆಹಲಿಗೆ ತೆರಳಬೇಕಾಗಿದ್ದ ಮಾಜಿ ಸಿಎಂ, ಸಮನ್ವಯ ಸಮಿತಿಯ ಮುಖ್ಯಸ್ಥ ಸಿದ್ದರಾಮಯ್ಯ, ಹೈಕಮಾಂಡ್ ತುರ್ತು ಬುಲಾವ್ ಹಿನ್ನಲೆಯಲ್ಲಿ ಗುರುವಾರ ಮಧ್ಯಾಹ್ನವೇ ದೆಹಲಿಗೆ ಹೊರಟಿದ್ದಾರೆ.
ಇಂದು ನಡೆಯಬೇಕಾಗಿದ್ದ, ಹಾಸನ ಜಿಲ್ಲಾ ಕಾಂಗ್ರೆಸ್ ಮುಖಂಡರ ಸಭೆಯನ್ನು ಸಿದ್ದರಾಮಯ್ಯ ಶನಿವಾರಕ್ಕೆ ಮುಂದೂಡಿದ್ದಾರೆ. ಗುರುವಾರ ಸಂಜೆ, ಸ್ಕ್ರೀನಿಂಗ್ ಕಮಿಟಿ ಸಭೆಯನ್ನು ಕಾಂಗ್ರೆಸ್ ಹೈಕಮಾಂಡ್ ಕರೆದಿದೆ.
ಮೊದಲ ಭಾಷಣದಲ್ಲೇ ಸುಮಲತಾ ಸಿಕ್ಸರ್, ಎದುರಾಳಿಗಳಿಗೆ ಬೌನ್ಸರ್!
ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದಿಂದ ಸುಮಲತಾ ಅಂಬರೀಶ್ ಕಣಕ್ಕಿಳಿಯುತ್ತಿದ್ದು, ಬುಧವಾರ (ಮಾ 20) ನಾಮಪತ್ರವನ್ನು ಸಲ್ಲಿಸಿದ್ದರು. ಕಣ್ಣು ಹಾಯಿಸಿದಷ್ಟು ದೂರ ಸೇರಿದ್ದ ಜನಸಾಗರದ ನಡುವೆ ಸುಮಲತಾ ನಾಮಪತ್ರ ಸಲ್ಲಿಸುವ ಮುನ್ನ ನಡೆದ ಮೆರವಣಿಗೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಜರಾಗಿದ್ದರು.
ಇದಾದ ನಂತರ ನಡೆದ ಸಭೆಯಲ್ಲಿ ಕಾಂಗ್ರೆಸ್ ಸ್ಥಳೀಯ ಮುಖಂಡರೂ ವೇದಿಕೆಯನ್ನು ಹಂಚಿಕೊಂಡಿದ್ದರು. ಇದು ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಕೋಪಕ್ಕೆ ಕಾರಣವಾಗಿತ್ತು. ಈ ವಿಚಾರದ ಬಗ್ಗೆ ಚರ್ಚಿಸಲು ಹೈಕಮಾಂಡ್ ತುರ್ತಾಗಿ ಸಿದ್ದರಾಮಯ್ಯನವರನ್ನು ದೆಹಲಿಗೆ ಕರೆಸಿಕೊಂಡಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಮಂಡ್ಯದಲ್ಲಿ ಬುಧವಾರ ನಡೆದ ಬೆಳವಣಿಗೆಯನ್ನು ದೇವೇಗೌಡ್ರು, ಕಾಂಗ್ರೆಸ್ ಹೈಕಮಾಂಡ್ ಬಳಿ ಹೇಳಿಕೊಂಡಿದ್ದರು. ಇದು ಚುನಾವಣೆಯ ವೇಳೆ ಎರಡೂ ಪಕ್ಷಕ್ಕೆ ಹಿನ್ನಡೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಸಿದ್ದರಾಮಯ್ಯನವರನ್ನು ಒಂದು ದಿನದ ಮುಂಚೆಯೇ ಕರೆಸಿಕೊಳ್ಳಲಾಗಿದೆ.
ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ನಾಮಪತ್ರ ಸಲ್ಲಿಕೆ
ಸುಮಲತಾ ನಾಮಪತ್ರ ಸಲ್ಲಿಕೆಯ ನಂತರ, ಮುಖ್ಯಮಂತ್ರಿಗಳು ತುರ್ತಾಗಿ ಸಚಿವ ಡಿ ಕೆ ಶಿವಕುಮಾರ್ ಅವರನ್ನು ಕರೆಸಿಕೊಂಡಿದ್ದರು. ಇದಾದ ನಂತರ, ಮಂಡ್ಯ ಮತ್ತು ಹಾಸನ ಭಾಗದ ಕಾಂಗ್ರೆಸ್ ಮುಖಂಡರನ್ನು ಡಿಕೆಶಿ ಭೇಟಿಯಾಗಿದ್ದರು.