ಅತೃಪ್ತ ಶಾಸಕರಿಗೆ ಮತ್ತೊಂದು ನೋಟಿಸ್ ನೀಡಲಿದೆ ಕಾಂಗ್ರೆಸ್
ಬೆಂಗಳೂರು, ಜನವರಿ 29: ಎಚ್ಚರಿಕೆಯ ಬಳಿಕವೂ ಕಾಂಗ್ರೆಸ್ ಪಕ್ಷ ಶಾಸಕಾಂಗ ಸಭೆಗೆ ಗೈರಾಗಿದ್ದ ನಾಲ್ವರು ಶಾಸಕರಿಗೆ ಈಗಾಗಲೇ ಒಂದು ನೊಟೀಸ್ ನೀಡಲಾಗಿದೆ. ಆದರೆ ಈಗ ಮತ್ತೊಂದು ನೊಟೀಸ್ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮೊದಲಿಗೆ ನೀಡಿದ್ದ ನೊಟೀಸ್ಗೆ ಕೇವಲ ಪತ್ರ ಮೂಲಕವಷ್ಟೆ ಶಾಸಕರು ಉತ್ತರಿಸಿದ್ದಾರೆ. ಆದರೆ ಅವರು ಸಿಎಲ್ಪಿ ನಾಯಕರ ಮುಂದೆ ಹಾಜರಾಗಿ ತಮ್ಮ ಗೈರು ಹಾಜರಿಗೆ ಕಾರಣ ಹೇಳಬೇಕು ಹಾಗಾಗಿಯೇ ಮತ್ತೊಂದು ನೊಟೀಸ್ ಅನ್ನು ಅತೃಪ್ತ ಶಾಸಕರಿಗೆ ರವಾನಿಸಲಾಗುವುದು ಎಂದು ಅವರು ಹೇಳಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಕ್ತಾಯ, ಶಾಸಕರು ರೆಸಾರ್ಟ್ಗೆ
ಜನವರಿ 18 ರಂದು ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ನಡೆದಿತ್ತು. ಎಲ್ಲ ಶಾಸಕರು ಕಡ್ಡಾಯವಾಗಿ ಸಭೆಯಲ್ಲಿ ಹಾಜರಾಗಬೇಕು ಎಂದು ಫರ್ಮಾನು ಹೊರಡಿಸಲಾಗಿತ್ತು. ಆದರೆ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಶಾಸಕ ಉಮೇಶ್ ಜಾಧವ್ ಮತ್ತು ಬಿ.ನಾಗೇಂದ್ರ ಅವರುಗಳು ಶಾಸಕಾಂಗ ಸಭೆಗೆ ಗೈರಾಗಿದ್ದರು.
ಈ ಶಾಸಕರು ಬಿಜೆಪಿಯ ಸಂಪರ್ಕದಲ್ಲಿದ್ದರು, ಮುಂಬೈನ ಹೊಟೆಲ್ ಒಂದರಲ್ಲಿ ವಾಸ್ಥವ್ಯ ಹೂಡಿದ್ದರು ಎನ್ನಲಾಗಿತ್ತು. ಕೆಪಿಸಿಸಿಯು ಈ ನಾಲ್ಕು ಶಾಸಕರಿಗೆ ನೊಟೀಸ್ ಜಾರಿ ಮಾಡಿತು. ನೊಟೀಸ್ಗೆ ಬಹುತೇಕ ಎಲ್ಲರೂ ಲಿಖಿತ ಉತ್ತರ ನೀಡಿದರು. ತಾವು ಪಕ್ಷ ಬಿಡುವುದಿಲ್ಲ ಎಂದು ಸಹ ಹೇಳಿದರು. ಆದರೆ ಇದು ಕೆಪಿಸಿಸಿ ಅಧ್ಯಕ್ಷರಿಗೆ ತೃಪ್ತಿ ತಂದಿಲ್ಲ.
ಕಾಂಗ್ರೆಸ್ ಖಡಕ್ ನೋಟಿಸ್ಗೆ ತಣ್ಣಗಾಗಿ ಉತ್ತರಿಸಿದ ಅತೃಪ್ತ ಶಾಸಕರು
ಕೇವಲ ಲಿಖಿತ ಉತ್ತರ ಬರೆದರಷ್ಟೆ ಸಾಲದು ಶಾಸಕರು ಖುದ್ದಾಗಿ ಶಾಸಕಾಂಗ ಪಕ್ಷದ ಮುಖಂಡರ ಎದುರು ಹಾಜರಾಗಿ ಕಾರಣವನ್ನು ತಿಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದು, ಮತ್ತೊಂದು ನೊಟೀಸ್ ಅನ್ನು ನಾಲ್ಕೂ ಶಾಸಕರಿಗೆ ನೀಡಲಾಗುವುದು ಎಂದಿದ್ದಾರೆ.