ವಿಶ್ವ ಹಿಂದೂ ಪರಿಷತ್ತನ್ನು ನಿಷೇಧಿಸಬಾರದೇಕೆ? ಕಾಂಗ್ರೆಸ್ ಪ್ರಶ್ನೆ
ಬೆಂಗಳೂರು, ಅ.23: 'ಕತ್ತಿ ಹಿಡಿದರೆ ಶವ ಹೂಳಲು ಜಾಗವೂ ಸಿಗುವುದಿಲ್ಲ' ಎಂದು ವಿಶ್ವ ಹಿಂದು ಪರಿಷತ್ ಮುಖಂಡ ತುಮಕೂರಿನಲ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಮುಗಿಬಿದ್ದಿದ್ದಾರೆ.
ಬಜರಂಗದಳದ ಕಾರ್ಯಕರ್ತರ ಮೇಲೆ ಹಲ್ಲೆ ಖಂಡಿಸಿ ಗುರವಾರ ತುಮಕೂರು ಬಂದ್ ಕರೆ ನೀಡಲಾಗಿತ್ತು. ಈ ವೇಳೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ರಾಜ್ಯ ಸಂಚಾಲಕ ಬಸವರಾಜ್, "ಹಿಂದೂಗಳ ಮೇಲೆ ನಡೆಯುವ ಹಲ್ಲೆಗೆ ಪ್ರತಿಯಾಗಿ ಕತ್ತಿ ಹಿಡಿದರೆ ನಿಮಗೆ ಶವ ಹೂಳಲೂ ಜಾಗ ಸಿಗುವುದಿಲ್ಲ" ಎಂದು ಹೇಳಿದ್ದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ?
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ? ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪ್ರಶ್ನಿಸಿದ್ದಾರೆ.
ವಿಎಚ್ಪಿ ನಾಯಕರು ಗೋಹತ್ಯೆ, ಲವ್ ಜಿಹಾದ್ ವಿರುದ್ಧ ತಾವು ಕತ್ತಿ ಹಿಡಿದರೆ ಶವ ಹೂಳೂವುದಕ್ಕೂ ಜಾಗ ಸಿಗದು ಎನ್ನುವ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ಪಕ್ಷದವರು ಪೊಲೀಸ್ ನೈತಿಕಗಿರಿಗೆ ಬೆಂಬಲ ಕೊಡುತ್ತಿದ್ದಾರೆ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.
"ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಏಕೆ ಕೈಕಟ್ಟಿ ಕುಳಿತಿದೆ? ಅಲ್ಪಸಂಖ್ಯಾತರಿಗೆ ರಕ್ಞಣೆ ಇಲ್ಲದಂತೆ ಆಗಿದೆ. ಜೀವನವನ್ನು ಕೈಯಲ್ಲಿ ಹಿಡಿದುಕೊಂಡು ಭಯದಿಂದ ಬದುಕುವಂತಹ ಸ್ಥಿತಿ ಬಂದಿದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಬಸವರಾಜ ಬೊಮ್ಮಾಯಿ ಅವರೇ ಇದು ಸರ್ಕಾರ ನಡೆಸುವ ರೀತಿಯೇ? ಏಕೆ ಇಂತಹ ಸಂಘಟನೆಯನ್ನು ನಿಷೇಧಿಸುವುದಿಲ್ಲ? ಮುಖ್ಯಮಂತ್ರಿಯನ್ನು ಈಶ್ವರ ಖಂಡ್ರೆ ಪ್ರಶ್ನಿಸಿದ್ದಾರೆ.
ಮತ್ತೊಂದೆಡೆ ವಿಎಚ್ಪಿ ಮುಖಂಡರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
"ನೈತಿಕ ಪೊಲೀಸ್ಗಿರಿಯನ್ನು ಸಮರ್ಥಿಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ವಿಎಚ್ಪಿ ಹೇಳಿಕೆ ಕುರಿತ ನಿಮ್ಮ ನಿಲುವು ಏನು? ದೇಶದ ಜನ ಇದನ್ನು ತಿಳಯಬಯಸಿದ್ದಾರೆ" ಎಂದು ಮುಖ್ಯಮಂತ್ರಿಯನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
ವಿಠಲ ಮಲೆಕುಡಿಯ ಕುಟುಂಬಕ್ಕೆ ಶುಭ ಹಾರೈಕೆ:
ನಕ್ಸಲರ ಜೊತೆ ನಂಟು ಹೊಂದಿದ್ದಾರೆ ಎಂಬ ಆರೋಪದಿಂದ ವಿಠಲ ಮಲೆಕುಡಿಯ ಆತನ ತಂದೆ ಮುಕ್ತರಾಗಿರುವುದಕ್ಕೆ ಡಿ.ಕೆ. ಶಿವಕುಮಾರ್ ಸಂತಸ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.
"ಬಡವರು, ದಮನಿತರು ಪ್ರಭುತ್ವವನ್ನು ಯಾವಾಗಲೂ ಪ್ರಶ್ನಿಸಕೂಡದು. ಹಾಗೆ ಮಾಡಿದರೆ ದೇಶದ್ರೋಹದಂತಹ ಕಠಿಣ ಕಾನೂನುಗಳ ಮೂಲಕ ಜೈಲಿಗಟ್ಟುತ್ತಾರೆ. ಅಮಾಯಕರನ್ನು ಕಾನೂನಿನ ಹೆಸರಿನಲ್ಲಿ ಹೇಗೆ ನಾಶ ಮಾಡಬಹುದು ಎಂಬುದಕ್ಕೆ ವಿಠಲ್ ಮಲೆಕುಡಿಯ ಪ್ರಕರಣ ಜೀವಂತ ಸಾಕ್ಷಿ. ಅವರ ಕುಟುಂಬವು ಹೊಸ ಬದುಕು ಆರಂಭಿಸಲಿ" ಎಂದು ಶಿವಕುಮಾರ್ ಹಾರೈಸಿದ್ದಾರೆ.