ಕರ್ನಾಟಕದಲ್ಲಿ ಪ್ರತಿಪಕ್ಷವಾಗಿಯೂ ಕಾಂಗ್ರೆಸ್ ವೈಫಲ್ಯ: ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು, ಫೆಬ್ರವರಿ 16: ಕರ್ನಾಟಕದಲ್ಲಿ ಕಾಂಗ್ರೆಸ್ ಒಂದು ಜವಾಬ್ದಾರಿಯುತ ವಿರೋಧಪಕ್ಷವಾಗಿ ಕೆಲಸ ಮಾಡುವಲ್ಲಿ ವಿಫಲವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿ ಕಾರಿದ್ದಾರೆ. ಬುಧವಾರ ಸದನದಲ್ಲಿ ತ್ರಿವರ್ಣ ಧ್ವಜ ಪ್ರದರ್ಶನದ ಮೂಲಕ ರಾಷ್ಟ್ರಧ್ವಜ ಸಂಹಿತೆಯನ್ನು ಉಲ್ಲಂಘನೆ ಮಾಡಿದೆ ಎಂದು ಬಸವರಾಜ ಬೊಮ್ಮಾಯಿ ದೂಷಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಷ್ಟ್ರಧ್ವಜವನ್ನು ಹೇಗೆ ಬಳಕೆ ಮಾಡಬೇಕು ಎನ್ನುವ ಬಗ್ಗೆ ಸಂಹಿತೆಯಿದೆ. ರಾಷ್ಟ್ರಧ್ವಜದ ವಿಷಯ ಎಲ್ಲಿಯೂ ದುರುಪಯೋಗ ಆಗಬಾರದು ಎನ್ನುವುದು ಸಂಹಿತೆಯಲ್ಲಿ ಉಲ್ಲೇಖವಾಗಿದೆ. ಆದರೆ ವಿರೋಧ ಪಕ್ಷದವರು ರಾಜಕೀಯ ಪ್ರೇರಿತವಾಗಿ ಸದನದಲ್ಲಿ ಈ ವಿಷಯವನ್ನು ದುರುಪಯೋಗ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ.
ವಿಧಾನಮಂಡಲದಲ್ಲಿ ರಾಷ್ಟ್ರಧ್ವಜ ಗಲಾಟೆ: ಕಲಾಪ ಮುಂದೂಡಿಕೆ
ರಾಜ್ಯದ ಜನರು ಎಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ. ಸಚಿವ ಕೆ ಎಸ್ ಈಶ್ವರಪ್ಪನವರ ಹೇಳಿಕೆಯಾಗಲಿ ಅಥವಾ ಇನ್ನಾವುದೇ ವಿಚಾರಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡಲು ಹಾಗೂ ಉತ್ತರ ನೀಡಲು ನಾನು ಸಿದ್ಧವಾಗಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕಾಂಗ್ರೆಸ್ಸಿಗರ ವರ್ತನೆ ಪಕ್ಷಕ್ಕೆ ಶೋಭೆಯಲ್ಲ:
ಕರ್ನಾಟಕದಲ್ಲಿ ಜವಾಬ್ದಾರಿಯುತ ವಿರೋಧಪಕ್ಷವಾಗಿರುವ ಕಾಂಗ್ರೆಸ್ ನಾಯಕರು ಸದನದಲ್ಲಿ ನಡೆದುಕೊಂಡ ರೀತಿ ಸರಿಯಾಗಿಲ್ಲ. 100 ವರ್ಷಗಳ ಇತಿಹಾಸವಿದೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷಕ್ಕೆ ನಾಯಕರ ವರ್ತನೆಯು ಶೋಭೆ ತರುವಂಥದ್ದಲ್ಲ. ತಮ್ಮ ನಿಲುವು ಹಾಗೂ ವರ್ತನೆಗಳಿಂದ ಇಡೀ ದೇಶದಲ್ಲಿ ನೆಲಕಚ್ಚುತ್ತಿದ್ದು, ಜನರಿಂದ ದೂರವಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ದಾರಿ ತಪ್ಪಿಸುವ ಯತ್ನ ಎಂದ ಸಿಎಂ ಬೊಮ್ಮಾಯಿ:
ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡುವುದರ ಜೊತೆಗೆ ಜನರ ಸಮಸ್ಯೆಗಳ ಕುರಿತು ವಿರೋಧ ಪಕ್ಷದವರು ಚರ್ಚಿಸಬಹುದಿತ್ತು. ಕೇಸರಿ ಧ್ವಜವನ್ನು ಮುಂದಿನ 300-400 ವರ್ಷಗಳ ನಂತರ ಹಾರಿಸಲು ಸಾಧ್ಯವಾಗಬಹುದು ಎಂದು ಹೇಳುವ ಜೊತೆಗೆ ರಾಷ್ಟ್ರ ಧ್ವಜವನ್ನು ಒಪ್ಪಿಕೊಂಡಿದ್ದು, ಎಲ್ಲರೂ ಗೌರವ ನೀಡಬೇಕು. ಸಚಿವರು ಈಗಾಗಲೇ ಅದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆದರೆ ಸಚಿವರ ಹೇಳಿಕೆಯ ಆಯ್ದ ಭಾಗಗಳನ್ನು ಮಾತ್ರ ಉಲ್ಲೇಖಿಸಿ ಜನರ ಹಾಗೂ ಸದನದ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಆರೋಪಿಸಿದರು.
ರಾಜಕೀಯ ದಿವಾಳಿತನದ ಪ್ರದರ್ಶನ:
ಕೇಸರಿ ಧ್ವಜ ಹಾರಿಸುವುದಕ್ಕೆ ಸಂಬಂಧಿಸಿದಂತೆ ಸಚಿವರು ನೀಡಿರುವ ಹೇಳಿಕೆಯಲ್ಲಿ ಯಾವುದೇ ರೀತಿಯ ಕಾನೂನಾತ್ಮಕ ಉಲ್ಲಂಘನೆ ಆಗಿಲ್ಲ. ಅದಾಗ್ಯೂ, ಇಲ್ಲಸಲ್ಲದ ವಿಷಯಗಳನ್ನು ಎತ್ತಿಕೊಂಡು ಕಾಂಗ್ರೆಸ್ ಮಾತನಾಡುತ್ತಿದೆ. ಇದು ಕಾಂಗ್ರೆಸ್ಸಿನವರ ರಾಜಕೀಯ ದಿವಾಳಿತನವನ್ನು ಪ್ರದರ್ಶಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗುರುವಾರ ಬೆಳಗ್ಗೆ 11ಕ್ಕೆ ಕಲಾಪ ಮುಂದೂಡಿಕೆ:
'ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ದೇಶದ್ರೋಹಿ ಈಶ್ವರಪ್ಪ ಅವರನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕು' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು. ಈ ಸಂದರ್ಭದಲ್ಲಿ ಸರ್ಕಾರದ ಕಡೆಯಿಂದ ಮುಖ್ಯಮಂತ್ರಿ ಆದಿಯಾಗಿ ಎಲ್ಲ ಸಚಿವರು ಕಾಂಗ್ರೆಸ್ ವಿರುದ್ಧ ಮುಗಿಬಿದ್ದರು. ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು ರಾಷ್ಟ್ರಧ್ವಜದ ಸಮೇತ ಸದನದ ಬಾವಿಗೆ ಬಂದು ಪ್ರತಿಭಟನೆಗೆ ಇಳಿದರು. ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜ ಬದಲಿಗೆ ಕೇಸರಿ ಧ್ವಜ ಹಾರಿಸಲಾಗುವುದು ಎಂದು ಹೇಳಿಕೆ ನೀಡಿದ್ದ ಕೆ.ಎಸ್. ಈಶ್ವರಪ್ಪ ವಿರುದ್ಧ ಸದನದಲ್ಲಿ ಪ್ರತಿಭಟಿಸಿದ ಕಾಂಗ್ರೆಸ್ ನಾಯಕರು ಕೈಯಲ್ಲಿ ರಾಷ್ಟ್ರಧ್ವಜ ಬಳಸಿದ್ದು, ಪರಸ್ಪರ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿ ಸದನವನ್ನು ಗುರುವಾರ ಬೆಳಗ್ಗೆ 11 ಗಂಟೆಗೆ ಮುಂದೂಡಲಾಯಿತು.
Recommended Video