ಕಾಂಗ್ರೆಸ್ ಹಿಂದುತ್ವ ಪಾಲಿಸಲ್ಲ, ಹಿಂದೂ ಧರ್ಮ ಪಾಲಿಸುತ್ತದೆ: ಬ್ರಿಜೇಷ್ ಕಾಳಪ್ಪ
ಬೆಂಗಳೂರು, ಜನವರಿ 25: ಕರ್ನಾಟಕ ವಿಧಾನಸಭೆ ಚುನಾವಣೆ 2018ಕ್ಕೆ ಅಖಾಡ ಸಿದ್ದವಾಗಿದ್ದು ಹಿಂದುತ್ವ, ಸಾಫ್ಟ್ ಹಿಂದುತ್ವ, ಹಿಂದುಯಿಸಂ.. ಹೀಗೆ ತರವಹೇವಾರಿ ಹಿಂದು ಪದಗಳು ಕೇಳ ಬರುತ್ತಿವೆ.
ಕರ್ನಾಟಕ ಚುನಾವಣೆಯನ್ನು ನೂರಕ್ಕೆ ನೂರರಷ್ಟು ಗೆದ್ದೇ ಗೆಲ್ಲುತ್ತೇವೆ ಎಂಬ ನಂಬಿಕೆಯಲ್ಲಿ ಕಾಂಗ್ರೆಸ್ ಇದೆ. ಬಿಜೆಪಿ ನಾವು ಮತ್ತೆ ಅಧಿಕಾರ ಹಿಡಿಯುತ್ತೇವೆ ಎಂದು ಹೇಳಿಕೊಳ್ಳುತ್ತಿದೆ.
ಈ ಸಂದರ್ಭದಲ್ಲಿ 'ಒನ್ಇಂಡಿಯಾ'ಗೆ ಸಂದರ್ಶನ ನೀಡಿರುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಬ್ರಿಜೇಶ್ ಕಾಳಪ್ಪ, "ಕಾಂಗ್ರೆಸ್ ಯಾವತ್ತೂ ಹಿಂದುತ್ವ ರಾಜಕಾರಣ ಮಾಡುವುದಿಲ್ಲ. ಕಾಂಗ್ರೆಸ್ ನದ್ದು ಏನಿದ್ದರೂ ಹಿಂದೂ ಧರ್ಮದ ರಾಜಕಾರಣ," ಎಂದು ಹೇಳಿದ್ದಾರೆ. ಅವರ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ..
ಲಿಂಗಾಯತರ ಬೇಡಿಕೆ ಕರ್ನಾಟಕದಲ್ಲಿ ದೊಡ್ಡ ವಿಷಯವೇ?
ನಿಜವಾಗಿಯೂ; ಕಾಂಗ್ರೆಸ್ ಇದನ್ನು ಚುನಾವಣಾ ವಸ್ತು ಎಂದು ಅಂದುಕೊಂಡಿಲ್ಲ. ಕಾಂಗ್ರೆಸ್ ಅವರ ಬೇಡಿಕೆಗೆ ಕಿವಿಯಾಗಿದೆ ಅಷ್ಟೇ. ಹೆಚ್ಚಿನ ಲಿಂಗಾಯತರು ಅಲ್ಪಸಂಖ್ಯಾತರಾಗುವುದರಿಂದ ಅವರಿಗೆ ಲಾಭವಾಗಲಿದೆ ಎಂದು ನನ್ನ ಬಳಿ ಹೇಳಿಕೊಂಡಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದೆಯಾ?
ನಾವು ಸದ್ಯದ ಸ್ಥಾನಗಳನ್ನು ಉಳಿಸಿಕೊಳ್ಳುತ್ತೇವೆ; ಸಂಶಯಬೇಡ. 2013ರಲ್ಲಿ ನಾವು ಗೆದ್ದಿದ್ದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ.
ಈ ವಿಶ್ವಾಸಕ್ಕೆ ಕಾರಣವೇನು?
ನಾವು ಚುನಾವಣೆಗೆ ಮೊದಲು ನೀಡಿದ ಶೇಕಡಾ 98 ಭರವಸೆಗಳನ್ನು ಇಡೇರಿಸಿದ್ದೇವೆ. ಒಳ್ಳೆಯ ಕೆಲಸಗಾರರಾಗಿ ನಾವು ನಮ್ಮ ಪಾಲಿನದನ್ನು ಪಡೆಯುತ್ತಿದ್ದೇವೆ. ನಾವು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ, ಮತದಾರರು ನಮಗೆ ಪ್ರತಿಯಾಗಿ ಉಡುಗೊರೆ ಕೊಟ್ಟೇ ಕೊಡುತ್ತಾರೆ.
ರಾಹುಲ್ ಗಾಂಧಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಸಿದ್ದರಾಮಯ್ಯ ತಮ್ಮ ಹೆಸರಿನಲ್ಲಿ ರಾಮ ಇದ್ದಾನೆ ಎನ್ನುತ್ತಾರೆ. ಇವೆಲ್ಲಾ ಕಾಂಗ್ರೆಸ್ ಪಾಲಿಸುತ್ತಿರುವ ಮೃದು ಹಿಂದುತ್ವದ ಸಂಕೇತಗಳಾ?
ಕಾಂಗ್ರೆಸ್ ಯಾವತ್ತೂ ಹಿಂದುತ್ವ ಪಾಲಿಸುವುದಿಲ್ಲ. ನಾವು ಏನಿದ್ದರೂ ಹಿಂದೂಯಿಸಂ ಮಾಡುತ್ತೇವೆ. ಹಿಂದುತ್ವ ಮತಗಳಿಗಾಗಿ; ಬಿಜೆಪಿ ಮಾಡುತ್ತಿದೆಯಲ್ಲಾ ಹಾಗೆ. ಹಿಂದುತ್ವ ಪದವನ್ನು ಹುಟ್ಟುಹಾಕಿದವರು ಸಾವರ್ಕರ್. ತಮ್ಮ ರಾಜಕೀಯ ಉನ್ನತಿಗಾಗಿ ಅವರ ಹೀಗೆ ಮಾಡಿದರು. ಜಾತ್ಯಾತೀತ ರಾಜ್ಯವೊಂದರಲ್ಲಿ ಧರ್ಮ ಮತ್ತು ರಾಜಕಾರಣವನ್ನು ಪ್ರತ್ಯೇಕವಾಗಿ ಪ್ರತ್ಯೇಕವಾಗಿಡಬೇಕು.
ಕೋಮು ರಾಜಕೀಯದ ಆರೋಪಗಳು ಮತ್ತು ಪ್ರತ್ಯಾರೋಪಗಳ ಬಗ್ಗೆ ನೀವು ಆಲೋಚಿಸುತ್ತೀದ್ದೀರಾ?
ಕರ್ನಾಟಕದಲ್ಲಿ ಕೋಮು ವಿವಾದಗಳು ಯಾವತ್ತೂ ಶಕ್ತಿಯಾಗಿ ಹೊರಹೊಮ್ಮುತ್ತದೆ ಎಂದು ನಾನು ಭಾವಿಸುವುದಿಲ್ಲ. ಜೆಡಿಎಸ್ ನಿಂದ ಸೃಷ್ಟಿಯಾದ ಅನುಕಂಪದ ಮೇಲೆ 2008 ಬಿಜೆಪಿ ಅಧಿಕಾರಕ್ಕೆ ಬಂತು. ಅದು ಕೋಮುವಾದದ ಅಂಶವಲ್ಲ. ಕೋಮುವಾದಿ ವಿವಾದಗಳು ಕರ್ನಾಟಕದಲ್ಲಿ ಮಾತ್ರವಲ್ಲ, ದಕ್ಷಿಣದ ಯಾವ ರಾಜ್ಯಗಳಲ್ಲಿಯೂ ಕೆಲಸ ಮಾಡುವುದಿಲ್ಲ.
ಸಿಎಂ ಅಭ್ಯರ್ಥಿಗಾಗಿ ಪರಮೇಶ್ವರ್ ಮತ್ತು ಸಿದ್ದರಾಮಯ್ಯ ನಡುವಿನ ವೈಮನಸ್ಸು ಏನು?
ಯಾವಾಗೆಲ್ಲಾ ಹಾಲಿ ಸಿಎಂಗಳು ಇರುತ್ತಾರೋ ಆಗ ಅವರನ್ನು ಮುಂದಿನ ಸಿಎಂ ಅಭ್ಯರ್ಥಿ ಎಂದೇ ಪರಿಗಣಿಸಲಾಗುತ್ತದೆ. ಇಲ್ಲಿ ವೈಮನಸ್ಸು ಏನಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಇತ್ತೀಚೆಗೆ ಪರಮೇಶ್ವರ್ ಅವರೇ ನೇರವಾಗಿ ಹೇಳಿದ್ದಾರೆ. ಈ ವಿಷಯದಲ್ಲಿ ಹುರುಳಿದೆ ಎಂದು ನನಗೆ ಭಾವಿಸುವುದಿಲ್ಲ.
ನಿಮ್ಮ ವಿಷಯ ಏನು? ನೀವು ಕೊಡಗಿನಿಂದ ಸ್ಪರ್ಧಿಸುತ್ತೀರಿ ಎಂದು ಕೇಳಿದ್ದೇವೆ?
ಕೊಡಗಿನಿಂದ ನಿಲ್ಲುವಂತೆ ನನ್ನ ಮೇಲೆ ಒತ್ತಡವಿದೆ. ಈ ನಿರ್ಧಾರ ನನಗೇ ಬಿಡುವುದಾದರೆ ನನಗೆ ಲೋಕಸಭೆ ಚುನಾವಣೆಗೆ ನಿಂತರೆ ಒಳ್ಳೆಯದು ಎಂದು ಅನಿಸುತ್ತಿದೆ.