ಸಿಡಿ ವಿವಾದ, ಎಸ್ಐಟಿ ತನಿಖೆಯಲ್ಲಿ ನಂಬಿಕೆ ಇಲ್ಲ; ಸಿದ್ದರಾಮಯ್ಯ
ಬೆಂಗಳೂರು, ಮಾರ್ಚ್ 23: ರಮೇಶ್ ಜಾರಕಿಹೊಳಿ ಸಿಡಿ ವಿಚಾರದಲ್ಲಿ ವಿಧಾನಸಭೆಯಲ್ಲಿ ಗದ್ದಲ ಉಂಟಾಗಿದ್ದು, ವಿಧಾನಸಭೆ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಗಿದೆ. ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದು, ಸ್ಪೀಕರ್ ಮನವೊಲಿಕೆ ಯತ್ನವೂ ವಿಫಲವಾಗಿದೆ.
ಮಂಗಳವಾರದ ಕಲಾಪ ಆರಂಭವಾಗುತ್ತಿದ್ದಂತೆ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರರಕರಣ ದಾಖಲು ಮಾಡಬೇಕು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ಸ್ವತಂತ್ರ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು.
ಸದನದಲ್ಲಿ ಸಿಡಿ ಗದ್ದಲ; ಸಿಡಿ ಹಿಡಿದು ಕಾಂಗ್ರೆಸ್ ಪ್ರತಿಭಟನೆ
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಡಿದ ಮನವಿಗೆ ಕಾಂಗ್ರೆಸ್ ಸದಸ್ಯರು ಸ್ಪಂದಿಸಲಿಲ್ಲ. ತಮ್ಮ ಬಿಗಿಪಟ್ಟನ್ನು ಮುಂದುವರೆಸಿದ ಹಿನ್ನಲೆಯಲ್ಲಿ ಮೊದಲು ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು. ಸ್ಪೀಕರ್ ಕೊಠಡಿಯಲ್ಲಿ ನಡೆದ ಸಂಧಾನ ಸಭೆ ಸಹ ವಿಫಲವಾಯಿತು.
ಸಿಡಿ ಕೇಸ್: ಕೋರ್ಟ್ಗೆ ಹೋಗುವುದೇ ಮಹಾಪರಾಧವೇ, ಡಾ. ಸುಧಾಕರ್ ಪ್ರಶ್ನೆ
ಪುನಃ ಕಲಾಪ ಆರಂಭವಾದಾಗ ಪ್ರಶ್ನೋತ್ತರ ಕಲಾಪವನ್ನು ನಡೆಸಲು ಅವಕಾಶ ನೀಡಬೇಕು ಎಂದು ಸ್ಪೀಕರ್ ಮನವಿ ಮಾಡಿದರು. ಆದರೆ, ಕಾಂಗ್ರೆಸ್ ಸದಸ್ಯರು ಸಿಡಿ, ಸಿಡಿ ಎಂದು ಸದನದಲ್ಲಿ ಬಾವಿಯಲ್ಲಿ ಕೈಯಲ್ಲಿ ಸಿಡಿ ಹಿಡಿದು ಪ್ರತಿಭಟನೆ ಮುಂದುವರೆಸಿದರು. ಇದರಿಂದಾಗಿ ಕಲಾಪವನ್ನು 3 ಗಂಟೆಗೆ ಮುಂದೂಡಲಾಯಿತು.
'ಸಿಡಿ' ಪ್ರಕರಣ: ವಿಪಕ್ಷ ನಾಯಕ ಸಿದ್ದರಾಮಯ್ಯ ಬಾಯಿ ಮುಚ್ಚಿಸಿದ ಬಸವರಾಜ್ ಬೊಮ್ಮಾಯಿ!
ನಮಗೆ ನಂಬಿಕೆ ಇಲ್ಲ; ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, "ಎಸ್ಐಟಿ ತನಿಖೆಯಲ್ಲಿ ನಮಗೆ ನಂಬಿಕೆ ಇಲ್ಲ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿ ಸ್ವತಂತ್ರ ತನಿಖೆ ನಡೆಸಬೇಕು. ಸದನದಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ" ಎಂದರು.
"20 ದಿನವಾದರೂ ಎಫ್ಐಆರ್ ದಾಖಲು ಮಾಡಿಲ್ಲ. ಎಫ್ಐಆರ್ ಇಲ್ಲದೇ ತನಿಖೆ ಹೇಗೆ ಮಾಡುತ್ತಾರೆ?. ಹೆಣ್ಣು ಮಗಳನ್ನು ಪತ್ತೆ ಹಚ್ಚಿ ಆಕೆಗೆ ಸರ್ಕಾರ ರಕ್ಷಣೆ ಕೊಡಬೇಕು, ಆಕೆಯ ಹೇಳಿಕೆ ಪಡೆಯಬೇಕು. ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದ ಮೇಲೆ ಸದನಕ್ಕೆ ಏಕೆ ಬರಬೇಕು?" ಎಂದು ಪ್ರಶ್ನಿಸಿದರು.
"ಕೇಸ್ ಮುಚ್ಚಿ ಹಾಕುವ ಯತ್ನವನ್ನು ಮಾಡಲಾಗುತ್ತಿದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಉಸ್ತುವಾರಿಯಲ್ಲಿಯೇ ಸ್ವತಂತ್ರ ತನಿಖೆ ನಡೆಸಬೇಕು. ಅಲ್ಲಿಯ ತನಕ ಸದನದಲ್ಲಿ ಹೋರಾಟ ಮುಂದುವರೆಸುತ್ತೇವೆ" ಎಂದು ಹೇಳಿದರು.
Recommended Video
ಎಸ್ಐಟಿ ತಂಡದ ಜೊತೆ ಸಭೆ; ಕಾಂಗ್ರೆಸ್ ಸದಸ್ಯರ ಪ್ರತಿಭಟನೆ ಹಿನ್ನಲೆಯಲ್ಲಿ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಗಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಧಾನಸೌಧದಲ್ಲಿ ಸಿಡಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡದ ಜೊತೆ ಸಭೆಯನ್ನು ನಡೆಸುತ್ತಿದ್ದಾರೆ.