ರಮೇಶ್ ಜಾರಕಿಹೊಳಿಯನ್ನು ಬಂಧಿಸಲು ಸರ್ಕಾರಕ್ಕೆ ಭಯವೇ?: ಕಾಂಗ್ರೆಸ್ ವ್ಯಂಗ್ಯ
ಬೆಂಗಳೂರು, ಮಾರ್ಚ್ 27: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕೆಸರೆರಚಾಟ ತೀವ್ರವಾಗಿದೆ. ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಾಗಿ ಇಷ್ಟು ಸಮಯವಾದರೂ ಅವರನ್ನು ಬಂಧಿಸದೆ ಇರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಸಾಮಾಜಿಕ ಜಾಲತಾಣದಲ್ಲಿ #ArrestRapistRamesh ಎಂಬ ಅಭಿಯಾನ ನಡೆಸಿರುವ ಕಾಂಗ್ರೆಸ್, ರಮೇಶ್ ಜಾರಕಿಹೊಳಿ ಅವರನ್ನು ಬಿಜೆಪಿ ರಕ್ಷಿಸುತ್ತಿದೆ ಎಂದು ಆರೋಪಿಸಿದೆ.
'ದೂರು ದಾಖಲಾಗಿದೆ, FIR ಹಾಕಲಾಗಿದೆ, ಇನ್ನೂ ಏಕೆ ಅತ್ಯಾಚಾರವೆಸಗಿದ ರಮೇಶ್ ಜಾರಕಿಹೊಳಿಯವರನ್ನು ಬಂಧಿಸಿಲ್ಲ? ಸರ್ಕಾರಕ್ಕೆ ಭಯವೇ? ಮಾಜಿ ಸಚಿವರೆಂದ ಮಾತ್ರಕ್ಕೆ ಕಾನೂನಿಗೆ ಅತೀತರೇ? #BuildupBommai ಅವರೇ ಈ ರಕ್ಷಣಾತ್ಮಕ ಆಟ ಸಾಕು, ಕೂಡಲೇ ಬಂಧಿಸಿ, ರಾಜ್ಯದ ಮಾನ ಉಳಿಸಿ' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ರಮೇಶ್ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯುತ್ತೇನೆ: ಯುವತಿಯ ಮತ್ತೊಂದು ವಿಡಿಯೋ
ಲಂಚ, ಮಂಚದ ಸರ್ಕಾರದಿಂದ ಈಗಾಗಲೇ ಕರ್ನಾಟಕದ ಮರ್ಯಾದೆ ದೇಶದೆದುರು ಹರಾಜಾಗಿದೆ, ದೂರು ದಾಖಲಾದರೂ, FIR ಹಾಕಿದ್ದರೂ ಅತ್ಯಾಚಾರ ಮಾಡಿದ ಪ್ರಭಾವಿ ವ್ಯಕ್ತಿಯನ್ನು ರಕ್ಷಿಸಲಾಗುತ್ತಿದೆ ಎಂಬ ಕಳಂಕ, ಕರ್ನಾಟಕಕ್ಕೆ ಬೇಡ, ಅದೇನಿದ್ದರೂ ಯುಪಿಯ ಯೋಗಿ ಆಡಳಿತಕ್ಕಿರಲಿ. ಸರ್ಕಾರ ಕೂಡಲೇ ಅತ್ಯಾಚಾರಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದೆ. ಮುಂದೆ ಓದಿ.
ಮತ್ತಷ್ಟು ಮರ್ಯಾದೆ ಕಳೆಯಬೇಡಿ
ರಮೇಶ್ ಜಾರಕಿಹೊಳಿ ಪ್ರಭಾವ ಬೀರುವ ಎಲ್ಲಾ ಸಾಧ್ಯತೆಗಳು ಅವರ ಮಾತಿನಿಂದಲೇ ತಿಳಿಯುತ್ತಿದೆ. ಈ ಪ್ರಕರಣ ದೇಶದ ಗಮನ ಸೆಳೆದಿದ್ದು ರಾಜ್ಯದ ಘನತೆಗೆ, ಜನಪ್ರತಿನಿಧಿಗಳ ಗೌರವಕ್ಕೆ ಧಕ್ಕೆ ತಂದಿದ್ದಾಗಿದೆ. ಸರ್ಕಾರ ಆರೋಪಿಯ ರಕ್ಷಣೆಗೆ ನಿಂತು ಮತ್ತಷ್ಟು ರಾಜ್ಯದ ಮರ್ಯಾದೆ ಕಳೆಯದೆ, ಕೂಡಲೇ ಬಂಧಿಸುವ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.
ಏನು ಬೇಕಾದರೂ ಮಾಡಬಲ್ಲರು
"ಅಂತಹ ಸರ್ಕಾರವನ್ನೇ ಬೀಳಿಸಿದ್ದೇನೆ ಇದ್ಯಾವ ಲೆಕ್ಕ" "ನಾಳೆಯಿಂದ ನನ್ನ ಆಟ ಶುರು ಮಾಡುತ್ತೇನೆ" ಇದು ರಮೇಶ್ ಜಾರಕಿಹೊಳಿಯವರ ಇವತ್ತಿನ ಹೇಳಿಕೆಗಳು ಪ್ರಕರಣದ ಮೇಲೆ ಯಾವ ಮಟ್ಟಿನ ಪ್ರಭಾವ ಬೀರಬಲ್ಲರು, ದಿಕ್ಕುತಪ್ಪಿಸಲು ಏನನ್ನೂ ಮಾಡಬಲ್ಲರು ಎನ್ನುವುದಕ್ಕೆ ಈ ಹೇಳಿಕೆಗಳು ಸಾಕ್ಷಿ. ಬೊಮ್ಮಾಯಿ ಅವರೇ ಇದಕ್ಕೆ ಅವಕಾಶ ನೀಡದಂತೆ ಕೂಡಲೇ ಬಂಧಿಸಿ ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಇಡಿಯಿಂದ ಜೈಲಲ್ಲಿ ಮುದ್ದೆ ಮುರಿದಿದ್ದ ಡಿಕೆಶಿಯನ್ನು ಸಿಡಿ ಪ್ರಕರಣದಲ್ಲೂ ತಿಹಾರ್ಗೆ ಕಳುಹಿಸಬೇಕು: ಬಿಜೆಪಿ
ಕೂಡಲೇ ಬಂಧಿಸಿ
ಬೊಮ್ಮಾಯಿ ಅವರೇ, ಯಡಿಯೂರಪ್ಪ ಅವರೇ, ಬೆಂಗಳೂರು ಪೊಲೀಸ್ ಆಯುಕ್ತರೇ, ದೂರು ಬರುವವರೆಗೂ ದೂರು ಬರಲಿ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದಿರಿ, ಈಗ ದೂರು ಬಂದಿದೆ ಇನ್ನೂ ಏಕೆ ತಡಮಾಡುತ್ತಿದ್ದೀರಿ? ಯುವತಿಯ ದೂರಿನ ಪ್ರಕಾರ ಕ್ರಮ ಕೈಗೊಂಡು, ಅತ್ಯಾಚಾರದ ಪ್ರಕರಣ ದಾಖಲಿಸಿ, ಆರೋಪಿ ರಮೇಶ್ ಜಾರಕಿಹೊಳಿಯವರನ್ನು ಕೂಡಲೇ ಬಂಧಿಸಿ ಎಂದು ಟ್ವೀಟ್ ಮಾಡಿದೆ.
ಅನಾಚಾರಿಗಳ ರಕ್ಷಣೆಯೇ ಧ್ಯೇಯ
ಸಿಡಿ ಪ್ರಕರಣ ಹೊರಬಂದು ಒಂದು ತಿಂಗಳಾಗುತ್ತಾ ಬಂದಿದೆ, ಇದುವರೆಗೂ ಯುವತಿಯನ್ನು ಪತ್ತೆ ಹಚ್ಚುವುದರಲ್ಲಿ, ಆಕೆಗೆ ರಕ್ಷಣೆ ಸಿಗುವ ಭರವಸೆ ಮೂಡಿಸುವುದರಲ್ಲಿ ಈ ಸರ್ಕಾರ ಸೋತಿದೆ. ಈ ಪ್ರಕರಣ #BuildupBommai ಅವರ ಕಳಪೆ ಕಾರ್ಯಕ್ಷಮತೆಗೆ ನಿದರ್ಶನ. ಬಿಜೆಪಿ ಸರ್ಕಾರಕ್ಕೆ ಅನಾಚಾರಿಗಳ ರಕ್ಷಣೆಯೇ ಪ್ರಮುಖ ಧ್ಯೇಯ ಎಂದು ಆರೋಪಿಸಿದೆ.
Recommended Video
ಮಹಿಳೆಯರಿಗೆ ರಕ್ಷಣೆ, ಗೌರವವಿಲ್ಲ
ಇದುವರೆಗೂ ಸಿಡಿಯಲ್ಲಿರುವ ಯುವತಿಗೆ ಸೂಕ್ತ ರಕ್ಷಣೆ ನೀಡುವುದಾಗಿ ಧೈರ್ಯ ತುಂಬುವ ಮಾತನ್ನು ಆಡಲೇ ಇಲ್ಲ ಈ ಸರ್ಕಾರ. ಬಿಜೆಪಿ ಸರ್ಕಾರದಲ್ಲಿ ಮಹಿಳೆಯರಿಗೆ ಗೌರವ, ರಕ್ಷಣೆ ಇಲ್ಲ ಎನ್ನುವುದನ್ನ ಪದೇ ಪದೇ ನಿರೂಪಿಸುತ್ತಿದ್ದಾರೆ ಎಂದು ಟೀಕಿಸಿದೆ.