ಪರಿಷತ್ ಸಭಾಪತಿ ಸ್ಥಾನ : ಜೆಡಿಎಸ್, ಕಾಂಗ್ರೆಸ್ನಲ್ಲಿ ಮೂಡದ ಒಮ್ಮತ!
ಬೆಂಗಳೂರು, ಡಿಸೆಂಬರ್ 06 : ಮೈತ್ರಿ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಒಮ್ಮತ ಮೂಡಿದೆ. ಆದರೆ, ವಿಧಾನ ಪರಿಷತ್ ಸಭಾಪತಿ ಆಯ್ಕೆ ವಿಚಾರದಲ್ಲಿ ಹಗ್ಗ-ಜಗ್ಗಾಟ ಮುಂದುವರೆದಿದೆ. ಕಾಂಗ್ರೆಸ್ ಸಭಾಪತಿ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದೆ.
ರಾಜ್ಯಪಾಲರ ಆದೇಶದಂತೆ ಹಿರಿಯ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್ತಿನ ಹಂಗಾಮಿ ಸಭಾಪತಿಯಾಗಿದ್ದಾರೆ. ಅವರನ್ನು ಮುಂದುವರೆಸಬೇಕು ಎಂದು ಪಕ್ಷ ಬಯಸಿದೆ. ಆದರೆ, ಕಾಂಗ್ರೆಸ್ ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ.
ಪರಿಷತ್ ಸಭಾಪತಿ ಸ್ಥಾನಕ್ಕಾಗಿ ಕಾಂಗ್ರೆಸ್-ಜೆಡಿಎಸ್ ಹಗ್ಗಜಗ್ಗಾಟ
ಡಿಸೆಂಬರ್ 10ರಂದು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಅಧಿವೇಶನದ ಆರಂಭದ ದಿನ ಪರಿಷತ್ನ ನೂತನ ಸಭಾಪತಿ ಆಯ್ಕೆಯಾಗಬೇಕಿದೆ. ಆದರೆ, ಸಭಾಪತಿ ಸ್ಥಾನ ಯಾರ ಪಾಲಾಗಲಿದೆ? ಎಂದು ಕಾದು ನೋಡಬೇಕಿದೆ.
ಪರಿಷತ್ ಸಭಾಪತಿ ಸ್ಥಾನ: ಹೊರಟ್ಟಿ vs ಎಸ್ ಆರ್ ಪಾಟೀಲ್
ಕಾಂಗ್ರೆಸ್ ಹಲವು ನಾಯಕರ ಹೆಸರು ಸಭಾಪತಿ ಹುದ್ದೆಗೆ ಕೇಳಿಬರುತ್ತಿದೆ. ಆದರೆ, ಎಸ್.ಆರ್.ಪಾಟೀಲ್ ಅವರ ಹೆಸರು ಮುಂಚೂಣಿಯಲ್ಲಿದೆ. ಪರಿಷತ್ನಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಹೊಂದಿದೆ. ಆದ್ದರಿಂದ, ಸಭಾಪತಿ ಸ್ಥಾನ ತನಗೆ ಬೇಕು ಎಂದು ಕಾಂಗ್ರೆಸ್ ಬೇಡಿಕೆ ಇಟ್ಟಿದೆ....
ಚಿಂತಕರ ಚಾವಡಿ ಬಿಟ್ಟು ಹೊರಟ ಡಿ.ಎಚ್.ಶಂಕರಮೂರ್ತಿ
ಸಮನ್ವಯ ಸಮಿತಿ ಸಭೆ
ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ಸಮನ್ವಯ ಸಮಿತಿ ಸಭೆ ನಡೆಯಿತು. ಆದರೆ, ಸಭೆಯಲ್ಲಿ ಸಭಾಪತಿ ಆಯ್ಕೆ ವಿಚಾರದಲ್ಲಿ ಯಾವುದೇ ಒಮ್ಮತ ಮೂಡಲಿಲ್ಲ. ಸಭೆಯಲ್ಲಿ ಪಾಲ್ಗೊಂಡಿದ್ದ ಪರಮೇಶ್ವರ ಅವರು ಸಭಾಪತಿ ಸ್ಥಾನ ನಮಗೆ ಬೇಕು ಎಂದು ಬೇಡಿಕೆ ಮುಂದಿಟ್ಟರು. ಆದ್ದರಿಂದ, ಈ ವಿಚಾರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲಿಲ್ಲ.
ಕಾಂಗ್ರೆಸ್ ಹೆಚ್ಚಿನ ಸದಸ್ಯ ಬಲ
ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಹೆಚ್ಚು ಸದಸ್ಯ ಬಲ ಹೊಂದಿದೆ. ಆದ್ದರಿಂದ, ಸಭಾಪತಿ ಸ್ಥಾನ ನಮಗೆ ಬೇಕು ಎಂಬುದು ಬೇಡಿಕೆಯಾಗಿದೆ. ಕಾಂಗ್ರೆಸ್ 33, ಬಿಜೆಪಿ 20, ಜೆಡಿಎಸ್ 14 ಮತ್ತು ಇಬ್ಬರು ಪಕ್ಷೇತರ ಸದಸ್ಯರು ವಿಧಾನ ಪರಿಷತ್ತಿನಲ್ಲಿ ಇದ್ದಾರೆ.
ಸಭಾಪತಿ ಹುದ್ದೆ ಯಾರಿಗೆ?
ಜೆಡಿಎಸ್ ಪಕ್ಷ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿಯಾಗಿ ಮುಂದುವರೆಸಲು ಬಯಸಿದೆ. ಆದರೆ, ಕಾಂಗ್ರೆಸ್ನಲ್ಲಿ ಎಸ್.ಆರ್.ಪಾಟೀಲ್, ಬೋಸರಾಜು, ಪ್ರತಾಪ್ ಚಂದ್ರ ಶೆಟ್ಟಿ, ಕೆ.ಸಿ.ಕೊಂಡಯ್ಯ ಹೆಸರು ಕೇಳಿಬರುತ್ತಿದೆ.
ಹೊರಟ್ಟಿಗೆ ಸಚಿವ ಸ್ಥಾನ?
ಒಂದು ವೇಳೆ ಸಭಾಪತಿ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಟ್ಟರೆ ಬಸವರಾಜ ಹೊರಟ್ಟಿ ಅವರನ್ನು ಸಚಿವರನ್ನಾಗಿ ಮಾಡಲು ಜೆಡಿಎಸ್ ಚಿಂತನೆ ನಡೆಸಿದೆ. ಎನ್.ಮಹೇಶ್ ಅವರ ರಾಜೀನಾಮೆಯಿಂದ ತೆರವಾದ ಪ್ರಾಥಮಿಕ ಶಿಕ್ಷಣ ಖಾತೆಯನ್ನು ಬಸವರಾಜ ಹೊರಟ್ಟಿ ಅವರಿಗೆ ನೀಡಬಹುದು ಎಂಬ ಲೆಕ್ಕಾಚಾರದಲ್ಲಿ ಪಕ್ಷ ಇದೆ. ಕುಮಾರಸ್ವಾಮಿ ಸಂಪುಟದಲ್ಲಿ 8 ಸಚಿವ ಸ್ಥಾನಗಳು ಖಾಲಿ ಇದ್ದು, 2 ಸ್ಥಾನ ಜೆಡಿಎಸ್ ಪಕ್ಷಕ್ಕೆ ಸಿಗಲಿದೆ.