ಇಂದಿನಿಂದ ಮಳೆಗಾಲದ ಅಧಿವೇಶನ ಕಾಂಗ್ರೆಸ್ ಪಕ್ಷದ ರಣತಂತ್ರ ಏನು ಗೊತ್ತಾ?
ಬೆಂಗಳೂರು, ಸೆ. 21: ಇಂದಿನಿಂದ ಬಹುಮಹತ್ವದ ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿದೆ. 10 ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಎಲ್ಲ ರಾಜಕೀಯ ಪಕ್ಷಗಳು ತಮ್ಮದೇ ಆದ ರಣತಂತ್ರ ರೂಪಿಸಿಕೊಂಡಿವೆ. ವಿಧಾನ ಸಭೆ ಕಲಾಪ ಎಂದರೆ ಬರೀ ಗದ್ದಲ, ಕೂಗಾಟ, ಧರಣಿ, ಕೋಲಾಹಲ ಎಂಬ ವಿಚಾರಗಳು ಕಣ್ಮುಂದೆ ಬರುವುದು ಸಹಜ. ಅದರಲ್ಲೂ ಅಧಿವೇಶನದ ಆರಂಭದ ಎರಡ್ಮೂರು ದಿನಗಳ ಕಾಲವಂತೂ ಸದನದಲ್ಲಿ ಚರ್ಚೆ ನಡೆಯುವುದೇ ಕಡಿಮೆ ಎಂಬಷ್ಟರ ಮಟ್ಟಿಗೆ ವಿರೋಧ ಪಕ್ಷದ ಸ್ಥಾನದಲ್ಲಿರುವವರು ಧರಣಿ ಮಾಡುತ್ತಾರೆ. ಧರಣಿ ಸತ್ಯಾಗ್ರಹ ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಇರುವ ಬಹುದೊಡ್ಡ ಕೊಡುಗೆ ಎಂಬುದು ನಿಜ.
ಆದರೆ ಈ ಬಾರಿ ವಿಧಾನ ಮಂಡಲ ಅಧಿವೇಶನದಲ್ಲಿ ಅನುಸರಿಸಬೇಕಾದ ರಾಜಕೀಯ ತಂತ್ರವನ್ನು ಕಾಂಗ್ರೆಸ್ ಪಕ್ಷ ಬದಲಿಸಿಕೊಂಡಿದೆ. ಈ ಬಾರಿ ಸದನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡುವುದಕ್ಕಿಂತ ಸದನದಲ್ಲಿಯೇ ಚರ್ಚಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ನಿರ್ಧರಿಸಿದೆ.
ಕಾಂಗ್ರೆಸ್ನಿಂದ 1200 ಪ್ರಶ್ನೆಗಳು
ಪ್ರಮುಖವಾಗಿ ಕಾಂಗ್ರೆಸ್ ಮೊದಲ ಬಾರಿಗೆ ವ್ಯವಸ್ಥಿತವಾದ ಪ್ರಶ್ನೆಗಳ ಬ್ಯಾಂಕ್ ಮಾಡಿಕೊಂಡಿದ್ದು, ಸುಮಾರು 1200 ಪ್ರಶ್ನೆಗಳನ್ನು ಸರ್ಕಾರಕ್ಕೆ ವಿವಿಧ ವಿಷಯಗಳ ಮೇಲೆ ಕೇಳಿದ್ದು, ಪ್ರತಿಯೊಂದು ಸರ್ಕಾರದಿಂದ ಉತ್ತರ ಪಡೆಯುವ ಪ್ರಯತ್ನಕ್ಕೆ ಕಾಂಗ್ರೆಸ್ ಮುಂದಾಗಿದೆ. ಶಾಸಕರಿಗೆ ವಿಭಾಗವಾರು ಹಾಗೂ ವಿಷಯವಾರು ಚರ್ಚೆಗೆ ನಿರ್ದೇಶನ ನೀಡಲಾಗಿದ್ದು ಎಲ್ಲ ಶಾಸಕರು ಸಕ್ರಿಯವಾಗಿ ಕಲಾಪದಲ್ಲಿ ಪಾಲ್ಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.
ಕೊರೊನಾ ಸಂಕಷ್ಟದ ಮಧ್ಯೆ ಬಿಜೆಪಿಗೆ ಮತ್ತೊಂದು ಏಟು ಕೊಟ್ಟ ಡಿಕೆಶಿ!
ಸುಗ್ರೀವಾಜ್ಞೆ ಹಿಂದಕ್ಕೆ ಪಡೆಯಲು ಒತ್ತಡ
ರಾಜ್ಯ ಸರ್ಕಾರ ಸುಮಾರು 19 ಸುಗ್ರೀವಾಜ್ಞೆಗಳನ್ನು ಹೊರಡಿಸಿದ್ದು ಅವೆಲ್ಲವುಗಳಿಗೆ ಈ ಅಧಿವೇಶನದಲ್ಲಿ ಒಪ್ಪಿಗೆ ಪಡೆಯಲು ಸರ್ಕಾರ ನಿರ್ಧರಿಸಿದೆ. ಆದರೆ, ಅವುಗಳಲ್ಲಿ ಭೂ ಸುಧಾರಣೆ ತಿದ್ದುಪಡಿ, ಎಪಿಎಂಸಿ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ, ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿಯ ಬಗ್ಗೆ ಕಾಂಗ್ರೆಸ್ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದು, ಈ ವಿವಾದಾತ್ಮಕ ಸುಗ್ರೀವಾಜ್ಞೆಗಳನ್ನು ವಾಪಸ್ ಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ.
ಭೂ ಸುಧಾರಣೆ ಕಾಯ್ದೆಗೆ ಭಾರಿ ವಿರೋಧ
ಭೂ ಸುಧಾರಣೆ ಕಾಯ್ದೆ ಜಾರಿಯಿಂದ ಸಣ್ಣ ಮತ್ತು ಅತಿ ಸಣ್ಣ ರೈತರು ಭೂಮಿ ಕಳೆದುಕೊಂಡು ಭೂ ರಹಿತ ಕಾರ್ಮಿಕರಾಗುವ ಆತಂಕ ಇದೆ. ಅಲ್ಲದೆ ಕೃಷಿ ಭೂಮಿ ಬಂಡವಾಳ ಶಾಹಿಗಳ ಪಾಲಾಗುವುದರಿಂದ ಆಹಾರ ಉತ್ಪಾದನೆಯ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಈ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸದಂತೆ ಸರ್ಕಾರದ ಮೇಲೆ ಒತ್ತಡ ತರಲು ಎಲ್ಲ ರೀತಿಯ ಪ್ರಯತ್ನ ನಡೆಸಲು ಮುಂದಾಗಿದೆ.
ಎಲ್ಲಿಗೆ ಹೋಯ್ತು 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಹಣ?
ನಿಲುವಳಿ ಸೂಚನೆ, ನಿಯಮ 330 ರಡಿ ಚರ್ಚೆ, ಗಮನ ಸೆಳೆಯುವ ಸೂಚನೆಗಳು, ಶೂನ್ಯ ವೇಳೆ ಎಲ್ಲ ಸಂದರ್ಭವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್ ಸಿದ್ಧವಾಗಿದ್ದು, ಪಕ್ಷದ ಎಲ್ಲ ಶಾಸಕರೂ ಗಂಭೀರವಾಗಿ ಪಾಲ್ಗೊಳ್ಳುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಅಧಿವೇಶನದ ಅವಧಿ ಹೆಚ್ಚಿಸಲು ಒತ್ತಾಯ
ರಾಜ್ಯ ಸರ್ಕಾರ ಕೇವಲ 8 ದಿನ ಅಧಿವೇಶನ ಕರೆದು ಸುಮಾರು 30 ಕ್ಕೂ ಹೆಚ್ಚು ವಿಧೇಯಕಗಳ ಮಂಡನೆಗೆ ಸಿದ್ಧತೆ ಮಾಡಿಕೊಂಡಿದ್ದು, ಅಲ್ಲದೇ ಪ್ರಶ್ನೋತ್ತರ ಕಲಾಪ ಸೇರಿದಂತೆ ಎಲ್ಲ ಕಾರ್ಯಕಲಾಪಗಳನ್ನು ನಡೆಸಲು ತೀರ್ಮಾನಿಸಿರುವುದರಿಂದ ಇಷ್ಟು ಕಡಿಮೆ ಅವಧಿಯಲ್ಲಿ ಎಲ್ಲವನ್ನು ವಿವರವಾಗಿ ಚರ್ಚಿಸಲು ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕೆ ಇನ್ನೂ ಕನಿಷ್ಠ ಎರಡು ವಾರಗಳ ಕಾಲ ಅಧಿವೇಶನ ವಿಸ್ತರಿಸುವಂತೆ ಸರ್ಕಾರವನ್ನು ಕೋರಿಕೊಳ್ಳಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ
Recommended Video