ಅಗ್ನಿಪಥ್ ಯೋಜನೆಗೆ ಪ್ರತಿಭಟನೆ: ಕಾಂಗ್ರೆಸ್ನಿಂದ ಬೆಂಕಿಗೆ ತುಪ್ಪ ಹಾಕುವ ಕೆಲಸ- ಸಿಎಂ
ಬೆಂಗಳೂರು, ಜೂನ್ 19: ಕಾಂಗ್ರೆಸ್ ಬೆಂಕಿಗೆ ತುಪ್ಪ ಹಾಕುವ ಕೆಲಸವನ್ನು ಇಡೀ ದೇಶದಲ್ಲಿ ಮಾಡುತ್ತಿದೆ ಎನ್ನುವುದಕ್ಕೆ ಖಾನಾಪುರ ಶಾಸಕರು ಧರಣಿ ಮಾಡುತ್ತಿರುವುದು ಸಾಕ್ಷಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅಗ್ನಿಪಥ್ ಒಂದು ವಿನೂತನ ಕಾರ್ಯಕ್ರಮ. ಇಡೀ ಜಗತ್ತಿನಲ್ಲಿ ಯುವಕರಿಗೆ ಮಿಲಿಟರಿ ತರಬೇತಿ ನೀಡುವ ವ್ಯವಸ್ಥೆ ಇದೆ. 17 - 21 ವರ್ಷ ಉತ್ತಮ ತರಬೇತಿ ಪಡೆದರೆ, ಬೇರೆ ಅವಕಾಶಗಳು ಸಿಗುತ್ತವೆ. ಮಿಲಿಟರಿ ಹಾಗೂ ಅರೆಮಿಲಿಟರಿ ಪಡೆಗಳಲ್ಲಿ ಅವಕಾಶ ಸಿಗಲಿದೆ. ಸಶಕ್ತ ಯುವಕರ ಜನಸಂಖ್ಯೆ ಯನ್ನು ಸಿದ್ದ ಮಾಡುವ ದೃಷ್ಟಿಯಿಂದ ಹಾಗೂ ಸಶಸ್ತ್ರ ಪಡೆಗಳಲ್ಲಿ ಯುವಶಕ್ತಿ ಯನ್ನು ತುಂಬುವ ಮಹತ್ವಾಕಾಂಕ್ಷೆ ಇದೆ ಎಂದು ಅವರು ತಮ್ಮ ನಿವಾಸದಲ್ಲಿ ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಪರೀಕ್ಷೆ ಬರೆದವರಿಗೆ ಆತಂಕ ಇದೆ. ಅದನ್ನು ಕೇಂದ್ರ ಸರ್ಕಾರ ಗಮನಿಸಿ ಪರಿಹಾರ ನೀಡುವ ವಿಶ್ವಾಸವಿದೆ. ಆದರೆ ಈ ನೆಪದಲ್ಲಿ ರೈಲುಗಳಿಗೆ ಬೆಂಕಿ ಹಚ್ಚುವುದು, ಖಂಡಿತವಾಗಿಯೂ ಕ್ಷಮಿಸಲಾಗದ ಅಪರಾಧ. ಪ್ರಯಾಣಿಕರಿಗೆ ತೊಂದರೆ, ಆಸ್ತಿಪಾಸ್ತಿ ನಷ್ಟವಾಗಿದೆ. ಜವಾಬ್ದಾರಿ ಇರುವವರು ಯಾರೂ ಈ ರೀತಿ ಮಾಡುವುದಿಲ್ಲ. ಇದೊಂದು ರಾಜಕೀಯ ಪ್ರೇರಿತ ಕೃತ್ಯ. ಜನ ಸ್ವಲ್ಪ ದಿನಗಳಲ್ಲಿಯೇ ಅರ್ಥ ಮಾಡಿಕೊಳ್ಳುತ್ತಾರೆ ಎಂದರು.
ಪಠ್ಯಪುಸ್ತಕ ಪರಿಷ್ಕರಣೆ:
ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ, "ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಸ್ವಾಮೀಜಿ ಗಳು ನೀಡಿರುವ ಮನವಿಯನ್ನು ತರಿಸಿಕೊಂಡು ಏನೆಲ್ಲಾ ಬದಲಾವಣೆ ಮಾಡಬೇಕೋ ಅದನ್ನು ಮುಕ್ತ ಮನಸ್ಸಿನಿಂದ ಕೈಗೊಳ್ಳಲಾಗುವುದು. ಇದನ್ನು ಪ್ರತಿಷ್ಠೆ ಎಂದು ಪರಿಗಣಿಸಿಲ್ಲ. ಪಠ್ಯದ ಕುರಿತು ಆಕ್ಷೇಪವಿದ್ದರೆ, ಅದನ್ನು ನಿವಾರಿಸಲು ಸಿದ್ಧರಿದ್ದೇವೆ," ಎಂದು ಹೇಳಿದರು.
ಭಾರತ ಹಾಗೂ ಕರ್ನಾಟಕ ಕಟ್ಟಲು ಶ್ರಮಿಸಿರುವ ಹಿರಿಯರು, ರಾಜಮಹಾರಾಜರು, ಸಾಹಿತಿಗಳು, ಕಲಾಕಾರರು, ಜ್ಞಾನಪೀಠ ವಿಜೇತರ ಬಗ್ಗೆ ಅಪಾರ ಗೌರವವಿದೆ. ಯಾವುದೇ ಕಾರಣಕ್ಕಾಗಿ ಅವರಿಗೆ ನೀಡುವ ಗೌರವದಲ್ಲಿ ರಾಜಿ ಮಾಡಿಕೊಳ್ಳಲು ಸರ್ಕಾರ ಸಿದ್ದವಿಲ್ಲ. ಅವರ ಗೌರವ ಉಳಿಸಲು ಹಾಗೂ ಮುಂದಿನ ಜನಾಂಗಕ್ಕೆ ಅವರ ಬಗ್ಗೆ ತಿಳಿಸಲು ಯಾವುದೇ ಮಟ್ಟಕ್ಕೊ ಹೋಗಲು ತಯಾರು ಎಂದರು.
ಪ್ರಧಾನಿ ಭೇಟಿಗೆ ಸಕಲ ಸಿದ್ಧತೆ
ಪ್ರಧಾನಮಂತ್ರಿಗಳ ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.