8 ಶಾಸಕರ ಅನರ್ಹತೆಗೆ ಸ್ಪೀಕರ್ಗೆ ಕಾಂಗ್ರೆಸ್ನಿಂದ ದೂರು
ಬೆಂಗಳೂರು, ಜುಲೈ 09 : ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ಅನರ್ಹತೆ ಅಸ್ತ್ರವನ್ನು ಕಾಂಗ್ರೆಸ್ ಪ್ರಯೋಗಿಸಿದೆ. 10 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದು, 8 ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್ಗೆ ಮನವಿ ಮಾಡಲಾಗಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮಂಗಳವಾರ ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರಿಗೆ ದೂರು ನೀಡಿದರು. ಆನಂದ್ ಸಿಂಗ್ (ವಿಜಯನಗರ), ರಾಮಲಿಂಗಾ ರೆಡ್ಡಿ (ಬಿ.ಟಿ.ಎಂ.ಲೇಔಟ್) ಅವರನ್ನು ಹೊರತುಪಡಿಸಿ ಉಳಿದ ಶಾಸಕರ ವಿರುದ್ಧ ದೂರು ನೀಡಲಾಗಿದೆ.
ರಾಜೀನಾಮೆ ನೀಡಿರುವ ಶಾಸಕರಿಗೆ ಕೊನೆ ಎಚ್ಚರಿಕೆ ಕೊಟ್ಟ ಸಿದ್ದರಾಮಯ್ಯ
ಶಾಸಕರ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಪ್ರಜಾಪ್ರತಿನಿಧಿ ಕಾಯ್ದೆ 164-1ಬಿ ಅನ್ವಯ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಕಾಂಗ್ರೆಸ್ ಸ್ಪೀಕರ್ಗೆ ಮನವಿ ಮಾಡಿದೆ. ಸ್ಪೀಕರ್ ತೆಗೆದುಕೊಳ್ಳುವ ಮುಂದಿನ ತೀರ್ಮಾನ ಕುತೂಹಲಕ್ಕೆ ಕಾರಣವಾಗಿದೆ.
ಇನ್ನಷ್ಟು ಶಾಸಕರು ರಾಜೀನಾಮೆ ಸಾಧ್ಯತೆ: ಇಲ್ಲಿದೆ ಪಟ್ಟಿ
ಶನಿವಾರ 9 ಕಾಂಗ್ರೆಸ್ ಶಾಸಕರು, 3 ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ್ದರು. ಸ್ಪೀಕರ್ ಇಂದು ರಾಜೀನಾಮೆ ಪತ್ರವನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಮಂಗಳವಾರ ರಾಜೀನಾಮೆ ನೀಡಿದರು.
ಅತೃಪ್ತ ಶಾಸಕರಿಗೆ ಕೊನೆಯ ಆಫರ್ ಕೊಟ್ಟ ಸಿದ್ದರಾಮಯ್ಯ!
ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ
ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರನ್ನು ಅನರ್ಹಗೊಳಿಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಪ್ರಜಾಪ್ರತಿನಿಧಿ ಕಾಯ್ದೆ 164-1ಬಿ ಅನ್ವಯ ಶಾಸಕರನ್ನು ಅನರ್ಹಗೊಳಿಸಲು ದೂರು ನೀಡುವುದಾಗಿ ಸಭೆಯ ಬಳಿಕ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದರು.
ದೂರು ನೀಡಿದ ಕೆಪಿಸಿಸಿ ಅಧ್ಯಕ್ಷರು
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕೆ.ಜೆ.ಜಾರ್ಜ್, ಕೃಷ್ಣ ಬೈರೇಗೌಡ ಅವರ ಜೊತೆ ಸ್ಪೀಕರ್ ರಮೇಶ್ ಕುಮಾರ್ ಅವರ ಕಚೇರಿಗೆ ತೆರಳಿ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ದೂರು ನೀಡಿದರು. 10 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದು, 8 ಶಾಸಕರ ಅನರ್ಹತೆಗೆ ದೂರು ನೀಡಲಾಗಿದೆ.
2 ಶಾಸಕರ ವಿರುದ್ಧ ದೂರು ನೀಡಿಲ್ಲ
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಬಿ.ಟಿ.ಎಂ.ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ, ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಅವರನ್ನು ಅನರ್ಹಗೊಳಿಸಬೇಕು ಎಂದು ಸ್ಪೀಕರ್ಗೆ ದೂರು ನೀಡಿಲ್ಲ. ರಾಮಲಿಂಗಾ ರೆಡ್ಡಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಬೆಂಗಳೂರಿನಲ್ಲಿಯೇ ಇದ್ದಾರೆ. ಆನಂದ್ ಸಿಂಗ್ ವಿಜಯನಗರದಲ್ಲಿದ್ದಾರೆ. ಇಬ್ಬರೂ ಸಹ ಮುಂಬೈಗೆ ಹೋಗಿಲ್ಲ.
ಯಾವ-ಯಾವ ಶಾಸಕರು
ರಮೇಶ್ ಜಾರಕಿಹೊಳಿ (ಗೋಕಾಕ್), ಮಹೇಶ್ ಕಮಟಳ್ಳಿ (ಅಥಣಿ), ಬಿ.ಸಿ.ಪಾಟೀಲ್ (ಹಿರೇಕೆರೂರು), ಶಿವರಾಂ ಹೆಬ್ಬಾರ್ (ಯಲ್ಲಾಪುರ), ಪ್ರತಾಪಗೌಡ ಪಾಟೀಲ್ (ಮಸ್ಕಿ), ಬೈರತಿ ಬಸವರಾಜ್ (ಕೆ.ಆರ್.ಪುರ), ಎಸ್.ಟಿ.ಸೋಮಶೇಖರ್ (ಯಶವಂತಪುರ), ಮುನಿರತ್ನ (ರಾಜರಾಜೇಶ್ವರಿ ನಗರ) ವಿರುದ್ಧ ಸ್ಪೀಕರ್ಗೆ ದೂರು ನೀಡಲಾಗಿದೆ.