ಆಡಳಿತ ವಿರೋಧಿ ಅಲೆಯನ್ನು ಕಾಂಗ್ರೆಸ್ ಕಡೆಗಣಿಸುವಂತಿಲ್ಲ: ಸಮೀಕ್ಷೆ
ಬೆಂಗಳೂರು, ಏಪ್ರಿಲ್ 24: ಸೋಮವಾರ ಎಬಿಪಿ-ಸಿಎಸ್ ಡಿಎಸ್ ಜನಾಭಿಪ್ರಾಯ ಸಂಗ್ರಹದ ವರದಿ ಹೊರ ಬಿದ್ದಿದೆ. ಇದರಲ್ಲಿ ಕಾಂಗ್ರೆಸ್ ಗೆ ತಲೆನೋವಾಗುವ ಹಲವು ಸಂಗತಿಗಳು ಬಹಿರಂಗವಾಗಿವೆ.
ಒಂದೆಡೆ ಎಬಿಪಿ-ಸಿಎಸ್ ಡಿಎಸ್ ಸಮೀಕ್ಷೆ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಅಂದಾಜಿಸಿದ್ದರೆ, ಇನ್ನೊಂದು ಕಡೆ ಆಡಳಿತ ವಿರೋಧಿ ಅಲೆ ಇದೆ ಎಂಬುದನ್ನು ತೋರಿಸಿದೆ.
ಎಬಿಪಿ ನ್ಯೂಸ್ ಸಮೀಕ್ಷೆ: ಬಿಜೆಪಿ ಅತಿ ದೊಡ್ಡ ಪಕ್ಷ- ಸರ್ಕಾರ ಅತಂತ್ರ
ಸಮೀಕ್ಷೆಯಲ್ಲಿ ಭಾಗವಹಿಸಿದ ಶೇಕಡಾ 51ರಷ್ಟು ಜನರು ಕರ್ನಾಟಕ ಸರಕಾರದಲ್ಲಿ ಬದಲಾವಣೆ ನೋಡಲು ಇಚ್ಛಿಸಿದ್ದಾರೆ. ಇದು ಸಿದ್ದರಾಮಯ್ಯನವರಿಗೆ ಚಿಂತೆ ಹೆಚ್ಚಿಸಲಿದೆ.
ಇಲ್ಲಿಯವರೆ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಆಡಳಿತ ವಿರೋಧಿ, ಪ್ರಭುತ್ವ ವಿರೋಧಿ ಅಲೆ ಇಲ್ಲ ಎಂದು ವಾದಿಸುತ್ತಲೇ ಬಂದಿದ್ದರು. ಆದರೆ ಇದೇ ಮೊದಲ ಬಾರಿಗೆ ಸಮೀಕ್ಷೆಯಲ್ಲಿ ಆಡಳಿತ ವಿರೋಧಿ ಅಲೆ ಇರುವುದು ಸ್ಪಷ್ಟವಾಗಿದೆ.
ಟೈಮ್ಸ್ ನೌ ಸಮೀಕ್ಷೆ: ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ
ಅದರಲ್ಲೂ ಕರ್ನಾಟಕದಲ್ಲಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿ ಕೆಲಸ ಮಾಡುತ್ತದೆ. ಈ ಹಿಂದೆ ಸತತವಾಗಿ ಎರಡನೇ ಬಾರಿಗೆ ಯಾವುದೇ ಸರಕಾರವನ್ನು ಇಲ್ಲಿನ ಜನರು ಆಯ್ಕೆ ಮಾಡಿ ಕಳುಹಿಸಿದ ಉದಾಹರಣೆಗಳಿಲ್ಲ. ಹೀಗಿರುವಾಗಿ ಶೇಕಡಾ 51 ಜನರು ಸರಕಾರದಲ್ಲಿ ಬದಲಾವಣೆ ಬಯಸುತ್ತಿರುವುದು ಸಿದ್ದರಾಮಯ್ಯ ಪಾಲಿಗೆ ನುಂಗಲಾರದ ತುತ್ತಾಗಲಿದೆ.