ಕರ್ನಾಟಕದಲ್ಲಿ ಬಿಜೆಪಿ ಓಟ ತಡೆಯಲು ಕಾಂಗ್ರೆಸ್ಗೆ ಆಗಲ್ಲ: ಅರುಣ್ ಸಿಂಗ್
ಬೆಂಗಳೂರು, ಅ.7: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮರಳಿ ಅಧಿಕಾರ ಹಿಡಿಯುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿನ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯ ಸಮಾರೋಪ ಭಾಷಣ ಮಾಡಿದ ಅವರು, ಕರ್ನಾಟಕದ ಬಿಜೆಪಿ ವಿಜಯರಥವನ್ನು ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಂದ ತಡೆಯಲು ಸಾಧ್ಯವೇ? ಎಂದು ಪ್ರಶ್ನಿಸಿದರು. ಗೋವಾ ಮತ್ತು ಮಣಿಪುರ ಮಾದರಿಯಲ್ಲಿ ಹಿಂದಿಗಿಂತ ಹೆಚ್ಚು ಸ್ಥಾನದೊಂದಿಗೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದರು.
ಭಾರತ್ ಜೋಡೋ ಯಾತ್ರೆ: ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕಿದ ಇಂದಿರಾ, ಕವಿತಾ ಲಂಕೇಶ್
ದೇಶದ ಅತಿ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಇದೆ. ಉತ್ತರಾಖಂಡ, ಉತ್ತರಪ್ರದೇಶ, ಮಣಿಪುರ ಸೇರಿ ಅನೇಕ ರಾಜ್ಯಗಳಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ರಚಿಸಿದ್ದೇವೆ. ಕರ್ನಾಟಕದಲ್ಲಿಯೂ ವಿಜಯರಥ ಮುಂದುವರಿಯಲಿದೆ. ಹಿಮಾಚಲ ಪ್ರದೇಶ, ಗುಜರಾತ್ನಲ್ಲೂ ನಮ್ಮ ಸರಕಾರ ರಚನೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅತ್ಯಂತ ಸಂಘಟಿತ ಪಕ್ಷ. ನಮ್ಮ ಕಾರ್ಯಕರ್ತರು ಯಶಸ್ವಿಯಾಗಿ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುತ್ತಾರೆ. ಆದ್ದರಿಂದ ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ 150ಕ್ಕೂ ಹೆಚ್ಚು ಸ್ಥಾನಗಳು ಲಭಿಸಲಿವೆ ಎಂದು ಅವರು ಹೇಳಿದರು.
ಬಡವರಿಗಾಗಿ, ರೈತರು ಮತ್ತು ಮಹಿಳೆಯರಿಗಾಗಿ ನರೇಂದ್ರ ಮೋದಿ ಅವರು ಗರಿಷ್ಠ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಹಿಂದಿನ ಆರು ದಶಕಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ದೇಶಕ್ಕಾಗಿ ಮಾಡಿದ್ದಕ್ಕಿಂತ ಹೆಚ್ಚು ಅಭಿವೃದ್ಧಿ ಕಾರ್ಯಗಳು ಮೋದಿ ಅವರ ಅವಧಿಯಲ್ಲಿ ನಡೆದಿವೆ ಎಂದ ಅರುಣ್ ಸಿಂಗ್, ರಾಜ್ಯದಲ್ಲೂ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು ನಮ್ಮ ಗೆಲುವಿಗೆ ಪೂರಕ ಎಂದರು.
ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮತ್ತು ನಳಿನ್ಕುಮಾರ್ ಕಟೀಲ್ ಸೇರಿದಂತೆ ಅನೇಕ ನಾಯಕರು ನಮ್ಮಲ್ಲಿದ್ದಾರೆ. ಕೇಂದ್ರದಲ್ಲೂ ಅನೇಕ ಮುಖಂಡರು ನಮ್ಮ ಪಕ್ಷದಲ್ಲಿದ್ದಾರೆ. ಅವರೆಲ್ಲರ ಶ್ರಮದಿಂದ ಪಕ್ಷವು 150ಕ್ಕೂ ಹೆಚ್ಚು ಶಾಸಕರ ಸ್ಥಾನಗಳನ್ನು ಗೆಲ್ಲಲಿದೆ ಎಂದ ಅವರು, ಕಾಂಗ್ರೆಸ್ ಪಕ್ಷವು ನಾಯಕರಿಲ್ಲದೆ ಸೊರಗಿದೆ ಎಂದು ಟೀಕಿಸಿದರು.
ಕಾರ್ಯಕರ್ತರು ಸಮರ ಸನ್ನದ್ಧರಾಗಬೇಕು
ಕಾರ್ಯಕರ್ತರು ಸಮರ ಸನ್ನದ್ಧರಾಗಬೇಕು. ಅಸ್ತ್ರ, ಶಸ್ತ್ರ ನಮ್ಮಲ್ಲಿದೆ. ನಾಯಕರೂ ಇದ್ದಾರೆ. ಹಗಲಿರುಳೆನ್ನದೆ ನಮ್ಮ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಹೆಚ್ಚಿನ ಶ್ರಮ ವಹಿಸಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಬಿಜೆಪಿ ನಿರಂತರವಾಗಿ ಎಸ್ಸಿ ಎಸ್ಟಿ, ದಲಿತರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಒಳಿತಿಗಾಗಿ ಶ್ರಮಿಸುತ್ತಿದೆ. ಎಸ್ಸಿ ಎಸ್ಟಿ ಸಮುದಾಯಗಳಿಗಾಗಿ ಶ್ರಮಿಸುವ ವಿಚಾರದಲ್ಲಿ ಕಾಂಗ್ರೆಸ್ ಮತ್ತಿತರ ಯಾವುದೇ ಪಕ್ಷಗಳು ಬಿಜೆಪಿಗೆ ಸರಿಸಾಟಿಯಲ್ಲ. ಆದಿವಾಸಿ ಸಮುದಾಯಕ್ಕೆ ಗೌರವ ನೀಡುವ ದೃಷ್ಟಿಯಿಂದ ಈ ಬಾರಿ ಗೌರವಾನ್ವಿತ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ಈ ಕುರಿತ ಮಹತ್ವದ ನಿರ್ಣಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡಿದ್ದಾರೆ ಎಂದು ಅರುಣ್ ಸಿಂಗ್ ಮೆಚ್ಚುಗೆ ಸೂಚಿಸಿದರು.
ಬಿಜೆಪಿ ಕಾರ್ಯಕರ್ತರು ಕೋವಿಡ್ನಂಥ ಸಂಕಷ್ಟ ಕಾಲ ಸೇರಿ ನಿರಂತರವಾಗಿ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಕೊಂಡಿದ್ದಾರೆ. ಎಸ್ಸಿ ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಳಕ್ಕೆ ಕೋರ್ ಕಮಿಟಿ ಸಭೆಯಲ್ಲಿ ಸರ್ವಾನುಮತದ ನಿರ್ಧಾರ ಮಾಡಿದ್ದೇವೆ ಎಂದ ಅವರು, ರಾಹುಲ್ ಗಾಂಧಿಯವರು ದಲಿತರ ಮನೆಯಲ್ಲಿ ಊಟ ಮಾಡಿದ್ದರಿಂದ ಏನೂ ಸಾಧನೆ ಆಗುವುದಿಲ್ಲ. ಮನಸ್ಸಿನಲ್ಲಿ ಕೆಲಸದ ಬಗ್ಗೆ ಶ್ರದ್ಧೆ ಅಗತ್ಯ ಎಂದು ನುಡಿದರು.
ರಾಜ್ಯ ಸರ್ಕಾರಿ ನೌಕರರಿಗೆ ಶುಭ ಸುದ್ದಿ ಕೊಟ್ಟ ಬೊಮ್ಮಾಯಿ ಸರ್ಕಾರ
ಭಾರತ್ ಜೋಡೋ ಯಾತ್ರೆಗೆ ಟೀಕೆ
ಭಾರತ್ ಜೋಡೋ ಯಾತ್ರೆಯಲ್ಲಿ ದೇಶವಿರೋಧಿ ಶಕ್ತಿಗಳು ಕೈ ಜೋಡಿಸಿವೆ. ಪಾಕಿಸ್ತಾನ್ ಜಿಂದಾಬಾದ್ ಕೂಗುವವರು ಅವರ ಜೊತೆಗಿದ್ದಾರೆ. ಕಾಂಗ್ರೆಸ್ ಪಕ್ಷವು ತುಷ್ಟೀಕರಣ ನೀತಿಯನ್ನು ತನ್ನದಾಗಿಸಿಕೊಂಡಿದೆ. ಸಿದ್ದರಾಮಯ್ಯ ಅವರ ಸರಕಾರವು ಪಿಎಫ್ಐ ಸಂಘಟನೆ ಮೇಲಿದ್ದ ಪ್ರಕರಣಗಳನ್ನು ರದ್ದು ಮಾಡಿ ಇಲ್ಲಿ ಗಲಭೆಗಳು ಹೆಚ್ಚಲು ಕಾರಣವಾಗಿತ್ತು ಎಂದು ಆಕ್ಷೇಪಿಸಿದರು.
ಕೋವಿಡ್ ನಿಯಂತ್ರಣಕ್ಕಾಗಿ ಉಚಿತ ಲಸಿಕೆ, ಉಚಿತ ಪಡಿತರ ನೀಡಿದ್ದು ಮಹತ್ತರ ಸಾಧನೆ. ದೇಶದ ಖಜಾನೆ ಮೇಲೆ ಬಡವರು ಮತ್ತು ರೈತರ ಹಕ್ಕು ಅತ್ಯಂತ ಹೆಚ್ಚಿನದು ಎಂದು ಮೋದಿ ಹೇಳಿದ್ದರು. ಆದರೆ, ದೇಶದ ಖಜಾನೆ ಮೇಲೆ ಅಲ್ಪಸಂಖ್ಯಾತರ ಅಧಿಕಾರವಿದೆ ಎಂಬ ಚಿಂತನೆ ಕಾಂಗ್ರೆಸ್ನದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಟೀಕಿಸಿದರು.
ಕಾಂಗ್ರೆಸ್ ಏನು ಮಾಡಿದೆ?
ರಾಮಮಂದಿರಕ್ಕೆ ಕಾಂಗ್ರೆಸ್ ಯಾಕೆ ವಿರೋಧ ವ್ಯಕ್ತಪಡಿಸಿತ್ತು? ಸಿಎಎಗೆ ಯಾಕೆ ವಿರೋಧ ಮಾಡಿದ್ದೀರಿ? ವಿರೋಧ- ಟೀಕೆ ಹೊರತುಪಡಿಸಿದರೆ ನೀವೇನು ಮಾಡಿದ್ದೀರಿ? ಇಲ್ಲಿಂದ ಕಳವಾಗಿದ್ದ ಪುರಾತನ ವಿಗ್ರಹಗಳನ್ನು ವಿದೇಶಗಳಿಂದ ವಾಪಸ್ ತರಲು ಕಾಂಗ್ರೆಸ್ ಏನು ಮಾಡಿತ್ತು? ಎಂದು ಕೇಳಿದ ಅವರು, ಕಾಂಗ್ರೆಸ್ ಸರಕಾರವು 6 ದಶಕಗಳ ಕಾಲ ದೇಶ ಆಳ್ವಿಕೆ ವೇಳೆ 13 ವಿಗ್ರಹ ತರಿಸಿಕೊಂಡರೆ, ಮೋದಿಜಿ ಅವರು ವಿದೇಶಗಳಿಂದ 228ಕ್ಕೂ ಹೆಚ್ಚು ಪುರಾತನ ವಿಗ್ರಹಗಳನ್ನು ತರಿಸಿಕೊಂಡಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ತೆರೆ ಮರೆಯ ಹೋರಾಟ ಮಾಡಿದವರನ್ನೂ ಬಿಜೆಪಿ ನೆನಪಿಸಿ ಗೌರವಿಸುತ್ತಿದೆ. ಆದರೆ, ಕಾಂಗ್ರೆಸ್ ಯಾವತ್ತೂ ಇಂಥ ಕಾರ್ಯ ಮಾಡಿಲ್ಲ ಎಂದರು.
ಕಾಂಗ್ರೆಸ್ ಪಕ್ಷದವರು ಕಿಸಾನ್ ಸಮ್ಮಾನ್ ಮಾದರಿಯಲ್ಲಿ ರೈತರ ಖಾತೆಗೆ ಯಾಕೆ ಹಣ ಹಾಕಲಿಲ್ಲ? ಕರ್ನಾಟಕದಲ್ಲಿ ಬಿಜೆಪಿ ಸರಕಾರವು ರೈತರಿಗೆ ಪ್ರತಿವರ್ಷ ಒಟ್ಟು 10 ಸಾವಿರ ಮೊತ್ತವನ್ನು ಖಾತೆಗೆ ವರ್ಗಾವಣೆ ಮಾಡುತ್ತಿದೆ. ರೈತ ವಿದ್ಯಾನಿಧಿ ನೀಡುವ ಕಾರ್ಯವನ್ನು ಬೊಮ್ಮಾಯಿಯವರ ಸರಕಾರ ಮಾಡಿದೆ. ರಾಹುಲ್ ಗಾಂಧಿಯವರಿಗೆ ಇದು ಕಾಣುವುದಿಲ್ಲವೇ? ಕಿಸಾನ್ ರೈಲು ಸೇರಿದಂತೆ ರೈತರಿಗಾಗಿ ಅನೇಕ ಯೋಜನೆಗಳು ಜಾರಿಗೊಂಡಿವೆ ಎಂದು ಬಿಜೆಪಿ ನಾಯಕರು ಮಾಹಿತಿ ನೀಡಿದರು.
ಜನಧನ್ ಮಾದರಿಯ ಯೋಜನೆ ಜಾರಿ, ಶೌಚಾಲಯ ನಿರ್ಮಾಣ ಮಾಡದ ಕಾಂಗ್ರೆಸ್ ಭ್ರಷ್ಟರ ಪಕ್ಷವಾಗಿತ್ತು. ದೇಶದಲ್ಲಿ ಬಡತನ ಹಾಗೇ ಉಳಿಯಲು ಕಾಂಗ್ರೆಸ್ ಪಕ್ಷವೇ ಕಾರಣ. ಆರು ದಶಕಗಳ ಕಾಲ ಆಡಳಿತ ಮಾಡಿದ್ದ ಕಾಂಗ್ರೆಸ್ ಪಕ್ಷವು ನೇರ ಸೌಲಭ್ಯ ವರ್ಗಾವಣೆ (ಡಿಬಿಟಿ) ಮಾಡಿದ್ದರೆ ದೇಶದಲ್ಲಿ ಬಡತನ ಇರುತ್ತಿರಲಿಲ್ಲ ಎಂದು ವಿಶ್ಲೇಷಿಸಿದ ಅವರು, ಬಿಜೆಪಿ ಸರ್ವತೋಮುಖ ಅಭಿವೃದ್ಧಿಗೆ ಬದ್ಧತೆ ತೋರಿದೆ ಎಂದು ಅಭಿಪ್ರಾಯಪಟ್ಟರು.
ಬೊಮ್ಮಾಯಿಗೆ ಅವಮಾನ; ಜನತೆ ಸಹಿಸದು
ರಾಜ್ಯದ ಅಭಿವೃದ್ಧಿಗೆ ನಿರಂತರ ಕೆಲಸ ಮಾಡುತ್ತಿರುವ ಕಾಮನ್ ಮ್ಯಾನ್ ಸಿಎಂ ಬೊಮ್ಮಾಯಿಯವರಿಗೆ ಅವಮಾನ ಮಾಡಿದ ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಕಿಡಿಕಾರಿದ ಅರುಣ್ ಸಿಂಗ್, ಆಲೂಗಡ್ಡೆ ಹೇಗೆ ಬೆಳೆಯುತ್ತದೆ ಎಂದು ತಿಳಿಯದ ನಾಯಕ ದೇಶದ ಆಡಳಿತ ನಡೆಸಲು ಸಾಧ್ಯವೇ ಎಂದು ಲೇವಡಿ ಮಾಡಿದರು.
ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಮೋದಿ ಅವರ ಕಾರ್ಯಕ್ರಮಗಳು ಮತ್ತು ರಾಜ್ಯದಲ್ಲೂ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಬೇಕು. ಮೂಲಸೌಕರ್ಯ ಕ್ಷೇತ್ರ, ಮನೆಮನೆಗೂ ಜಲ, ತಂತ್ರಜ್ಞಾನ ಕ್ಷೇತ್ರದಲ್ಲಿ ಸೇರಿ ಸರ್ವತೋಮುಖ ಅಭಿವೃದ್ಧಿ ಆಗಿರುವುದನ್ನು ಜನರಿಗೆ ನಿರಂತರವಾಗಿ ತಿಳಿಸಬೇಕು. ಸಕಾರಾತ್ಮಕ ಚಿಂತನೆ ನಮ್ಮದಾಗಲಿ; ವಿಜಯದ ಸಂಕಲ್ಪವನ್ನು ಸ್ವೀಕರಿಸಬೇಕು ಎಂದು ಕಾರ್ಯಕರ್ತರು ಮತ್ತು ಮುಖಂಡರಿಗೆ ಅರುಣ್ ಸಿಂಗ್ ಅವರು ಸಲಹೆ ನೀಡಿದರು.
(ಒನ್ಇಂಡಿಯಾ ಸುದ್ದಿ)