ಕಾಂಗ್ರೆಸ್ ನಾಯಕರ ನಡುವೆ ತಿಕ್ಕಾಟ, ಅಂತಿಮಗೊಳ್ಳದ ಅಭ್ಯರ್ಥಿಗಳ ಪಟ್ಟಿ
ಕಾಂಗ್ರೆಸ್ನ ರಾಜ್ಯ ಮಟ್ಟದ ನಾಯಕರ ನಡುವಿನ ತಿಕ್ಕಾಟದಿಂದಾಗಿ ಕಾಂಗ್ರೆಸ್ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ತಡವಾಗುತ್ತಿದೆ.
ಕಳೆದ ನಾಲ್ಕು ದಿನಗಳಿಂದಲೂ ಕಾಂಗ್ರೆಸ್ ಪಕ್ಷದ ಟಿಕೆಟ್ ಕುರಿತಂತೆ ಸತತ ಸಭೆಗಳು ನಡೆಯುತ್ತಿದ್ದರೂ ಸಹ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗದೇ ಇರುವುದಕ್ಕೆ ಕಾಂಗ್ರೆಸ್ ಪ್ರಮುಖ ನಾಯಕರುಗಳ 'ಸ್ವ-ಬೆಂಬಲಿಗರ ಪಕ್ಷಪಾತವೇ' ಕಾರಣ ಎನ್ನಲಾಗಿದೆ. ಪ್ರತಿ ಮುಂಖಂಡರು ತಮ್ಮ ನಿಷ್ಠ ಅನುಯಾಯಿಗಳಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತಿರುವುದರಿಂದ ಪಟ್ಟಿ ಅಂತಿಮವಾಗುತ್ತಿಲ್ಲ.
ನಿನ್ನೆ ದೆಹಲಿಯಲ್ಲಿ ನಡೆದ ಸ್ಕ್ರೀನಿಂಗ್ ಕಮಿಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಜಿ.ಪರಮೇಶ್ವರ್ ಮತ್ತು ವೀರಪ್ಪ ಮೊಯ್ಲಿ ಅವರುಗಳು ತಮ್ಮ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಮುಂದಾಗಿದ್ದರುವುದರಿಂದ ಚರ್ಚೆಗಳ ಮೇಲೆ ಚರ್ಚೆಗಳು ನಡೆದರೂ ಸಹಿತ ಅಭ್ಯರ್ಥಿಗಳ ಪಟ್ಟಿ ಅಂತಿಮವೇ ಆಗುತ್ತಿಲ್ಲ.
ಏಪ್ರಿಲ್ 17ಕ್ಕೆ ನಾಮಪತ್ರ ಸಲ್ಲಿಕೆ ಆರಂಭ
ಸುದ್ದಿ ಪ್ರಕಾರ ನಿನ್ನೆಯೇ (ಏಪ್ರಿಲ್ 13)ರಂದೇ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಬೇಕಿತ್ತು, ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲು ಇನ್ನು ಎರಡು ದಿನ ಮಾತ್ರವೇ ಉಳಿದಿದ್ದು (ಏಪ್ರಿಲ್ 17) ಈಗಾಗಲೇ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿವೆ.
ಸ್ಕ್ರೀನಿಂಗ್ ಕಮಿಟಿಯಲ್ಲಿ ಮೂಡದ ಒಮ್ಮತ
ಕೆಲವು ಹೊಸ ಅಭ್ಯರ್ಥಿಗಳಿಗೆ ಈಗಾಗಲೇ ಕಾಂಗ್ರೆಸ್ ಶಾಸಕರೇ ಇರುವ ಕ್ಷೇತ್ರದಿಂದ ಟಿಕೆಟ್ ನೀಡುವ ಬಗ್ಗೆ ವಾಗ್ವಾದಗಳು ಹೆಚ್ಚಾಗಿ ಕಾಂಗ್ರೆಸ್ ಮುಖಂಡರು ಒಂದು ಒಮ್ಮತದ ನಿರ್ಧಾರಕ್ಕೆ ಬರಲು ವಿಫಲರಾದ ಕಾರಣ ಸ್ಕ್ರೀನಿಂಗ್ ಕಮಿಟಿ ಸಭೆಯನ್ನು ಶನಿವಾರಕ್ಕೆ ಮೂಂದೂಡಲಾಗಿದೆ.
ಪಕ್ಷಾಂತರಿಗಳಿಗೆ ಟಿಕೆಟ್ ಕೊಡಬೇಕೊ, ಇಲ್ಲವೊ?
ಪಕ್ಷಾಂತರ ಮಾಡಿ ಕಾಂಗ್ರೆಸ್ಗೆ ಬಂದಿರುವ ಶಾಕಸರ ಟಕೆಟ್ ಸೇರಿದಂತೆ ಅಶೋಕ್ ಖೇಣಿ ಟಿಕೆಟ್ಗೆ ಸಂಬಂಧಿಸಿದಂತೆ ಏರು ಧ್ವನಿಯ ಚರ್ಚೆ ನಡೆದಿದೆ ಎನ್ನಲಾಗಿದೆ. ಎಲ್ಲಾ ಹಾಲಿ ಶಾಸಕರಿಗೆ ಟಿಕೆಟ್ ನೀಡಬೇಕು ಎಂಬುದು ಸಿದ್ದರಾಮಯ್ಯ ಅವರ ವಾದವಾದರೆ, ಹೊಸಬರಿಗೆ ಟಿಕೆಟ್ ನೀಡಬೇಕು ಎಂಬುದು ಪರಮೇಶ್ವರ್ ವಾದವಂತೆ. ಖರ್ಗೆ ಮತ್ತು ಮೊಯ್ಲಿ ಅವರು ಪಕ್ಷದ ನಿಷ್ಠರಿಗೆ ಮಾತ್ರವೇ ಟಿಕೆಟ್ ನೀಡಲು ಒತ್ತಾಯಿಸಿದ್ದಾರಂತೆ.
ವೇಣುಗೋಪಾಲ್ ಸಂಧಾನ ಸೂತ್ರ
ಸ್ಕ್ರೀನಿಂಗ್ ಕಮಿಟಿ ಮುಖ್ಯಸ್ಥ ಮಧುಸೂದನ ಮಿಸ್ತ್ರಿ ಮತ್ತು ರಾಜ್ಯ ಉಸ್ತುವಾರಿ ಕೆ.ವೇಣುಗೋಪಾಲ್ ಅವರುಗಳು ಇಂದಾದರೂ ಕಾಂಗ್ರೆಸ್ ಮೂಖಮಡರ ನಡುವೆ ಏರ್ಪಟ್ಟಿರುವ ಭಿನ್ನಾಭಿಪ್ರಾಯ ಶಮನಗೊಳಿಸಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಾರೆಯೊ ಕಾದು ನೋಡಬೇಕಿದೆ.
ಸಭೆಯಲ್ಲಿ ಸೋನಿಯಾ, ರಾಹುಲ್ ಹಾಜರಿ
ಇಂದು ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ರಾಹುಲ್ ಗಾಂಧಿ ಮತ್ತು ಸೊನಿಯಾ ಗಾಂಧಿ ಸಹಿತ ಹಾಜರಿರಲಿದ್ದಾರೆ. ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗುವ ಸಂಭವ ಹೆಚ್ಚಿಗಿದೆ.
ಕೊನೆ ಹಂತದ ಪ್ರಯತ್ನ
ಟಿಕೆಟ್ ಆಕಾಂಕ್ಷಿಗಳು ತಮಗೇ ಟಿಕೆಟ್ ದಕ್ಕಿಸಿಕೊಳ್ಳಲು ಕೊನೆಯ ಹಂತದ ಪ್ರಯತ್ನವಾಗಿ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲಿ ತಮ್ಮ ಬೆಂಬಲಿಗರು ಸ್ಥಳೀಯ ನಾಯಕರೊಂದಿಗೆ ರಾಜ್ಯ ನಾಯಕರು, ಹೈಕಮಾಂಡ್ ಅನ್ನು ಭೇಟಿ ಆಗಿ ಟಿಕೆಟ್ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಕರ್ನಾಟಕ ಕಾಂಗ್ರೆಸ್ ಬಹುತೇಕ ಈಗ ದೆಹಲಿಗೆ ಶಿಫ್ಟ್ ಆಗಿದೆ.