ಒಂದು ದಿನವಾದ್ರೂ ಪ್ರಚಾರಕ್ಕೆ ಬನ್ನಿ: ಕಾಂಗ್ರೆಸ್ ಅಭ್ಯರ್ಥಿ ಡಿಕೆಶಿಗೆ ದುಂಬಾಲು
ಬೆಂಗಳೂರು, ಡಿಸೆಂಬರ್ 3: ಕರ್ನಾಟಕದ 15 ಕ್ಷೇತ್ರಗಳ ಉಪ ಚುನಾವಣೆ ಪ್ರಚಾರ ಅಂತಿಮ ಘಟ್ಟ ತಲುಪಿದ್ದು ಇಂದು ಪ್ರಚಾರಕ್ಕೆ ತೆರೆ ಬೀಳಲಿದೆ.
ಆದರೆ ಇದುವರೆಗೂ ಕಾಂಗ್ರೆಸ್ನ ಪ್ರಭಾವಿ ನಾಯಕರಾರೂ ಕೂಡ ಯಶವಂತಪುರ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡದೆ ಇರುವುದು ಕಾಂಗ್ರೆಸ್ ಅಭ್ಯರ್ಥಿಯ ಆತಂಕಕ್ಕೆ ಕಾರಣವಾಗಿದೆ.
ಕರವೇ ಅಧ್ಯಕ್ಷರನ್ನು ಭೇಟಿ ಮಾಡಿದ ಯಶವಂತಪುರ ಜೆಡಿಎಸ್ ಅಭ್ಯರ್ಥಿ
ಈ ಮೊದಲು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಸ್ಟಿ ಸೋಮಶೇಖರ್ ಇದೀಗ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಅವರೇ ಗೆಲ್ಲುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಯಾರೂ ಕೂಡ ಪ್ರಚಾರ ಮಾಡಿಲ್ಲ. ಇವತ್ತೊಂದು ದಿನವಾದರೂ ನನ್ನ ಪರ ಪ್ರಚಾರ ಮಾಡಿ ಎಂದು ಯಶವಂತಪುರ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ್ ಡಿಕೆ ಶಿವಕುಮಾರ್ ಅವರ ಮನೆಗೆ ತೆರಳಿ ಮನವಿ ಮಾಡಿದ್ದಾರೆ.
ಮಾಜಿ ಸಚಿವ ಡಿ.ಕೆ ಶಿವಕುಮಾರ್ ತನ್ನ ಪ್ರಚಾರಕ್ಕೆ ಬರಲೇಬೇಕೆಂದು ಪಿ. ನಾಗರಾಜ್ ಪಟ್ಟು ಹಿಡಿದಿದ್ದಾರೆ. ಯಶವಂತಪುರದಲ್ಲಿ ತನ್ನ ಪರ ಪ್ರಚಾರ ನಡೆಸುವಂತೆ ಮನವಿ ಮಾಡಿದ್ದಾರೆ. ಇಂದು ಸದಾಶಿವನಗರದ ಡಿಕೆಶಿ ಮನೆಗೆ ಭೇಟಿ ನೀಡಿದ್ದ ಪಿ ನಾಗರಾಜ್, ತನ್ನ ಅಳಲು ತೋಡಿಕೊಂಡಿದ್ದಾರೆ.
ಉಪ ಚುನಾವಣೆ: ಯುದ್ಧಕ್ಕೂ ಮೊದಲೇ ಕಾಂಗ್ರೆಸ್ ಶಸ್ತ್ರ ತ್ಯಾಗ?
ಉಪಚುನಾವಣೆ ಸಿದ್ಧತೆ ಭರದಿಂದ ಸಾಗಿದೆ. ಎಲ್ಲಾ ಪಕ್ಷಗಳ ಮುಖಂಡರು ತಮ್ಮ ಅಭ್ಯರ್ಥಿ ವಿರುದ್ಧ ಪ್ರಚಾರದಲ್ಲಿ ಮುಳುಗಿದ್ದಾರೆ. ಆದರೆ ಯಶವಂತಪುರದಲ್ಲಿ ಮಾತ್ರ ಯುದ್ಧಕ್ಕೂ ಮೊದಲೇ ಕಾಂಗ್ರೆಸ್ ಶಸ್ತ್ರಾಸ್ತ್ರ ತ್ಯಾಗ ಮಾಡಿದಂತೆ ಕಾಣುತ್ತಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಸ್ಟಿ ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು ಅವರೇ ಜಯ ಗಳಿಸಿದ್ದರು. ಆದರೆ ಈ ಅನರ್ಹತೆ ಎನ್ನುವ ಬಿಸಿ ಅವರನ್ನು ಬಿಜೆಪಿಗೆ ಹೋಗುವಂತೆ ಮಾಡಿದ್ದು ಈಗ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.
ಹಾಗಾಗಿ ಹೇಗೂ ಸೋಮಶೇಖರ್ ಅವರೇ ಗೆಲುವು ಸಾಧಿಸುತ್ತಾರೆ ಎನ್ನುವ ನಂಬಿಕೆಯೋ ಏನೋ ಕಾಂಗ್ರೆಸ್ ನಾಯಕರು ಅತ್ತ ಪ್ರಚಾರಕ್ಕೆ ತೆರಳುತ್ತಿಲ್ಲ.
ಯಶವಂತಪುರಕ್ಕೆ ನಾಗರಾಜ್ ಕಾಂಗ್ರೆಸ್ ಅಭ್ಯರ್ಥಿ
ಬೆಂಗಳೂರು ಉತ್ತರ ವ್ಯಾಪ್ತಿಗೆ ಸೇರುವ ಯಶವಂತಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಿ. ನಾಗರಾಜ್ ಕಣಕ್ಕಿಳಿದಿದ್ದಾರೆ. ಮೊದಲಿಗೆ ಬಿಜೆಪಿ ಅಭ್ಯರ್ಥಿ ಅನರ್ಹ ಶಾಸಕ ಎಸ್.ಟಿ ಸೋಮಶೇಖರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ರಾಜಕುಮಾರ್ ಎಂಬುವರು ಹಿಂದೇಟು ಹಾಕಿದರು. ಹಾಗಾಗಿ ಕಾಂಗ್ರೆಸ್ನಿಂದ ಪಿ. ನಾಗರಾಜ್ಗೆ ಟಿಕೆಟ್ ನೀಡಲಾಗಿತ್ತು. ಆದರೀಗ ಟಿಕೆಟ್ ನೀಡಿದ ಕಾಂಗ್ರೆಸ್ ನಾಯಕರೇ ಪಿ. ನಾಗರಾಜ್ ಬೆಂಬಲಕ್ಕೆ ನಿಂತಿಲ್ಲ ಎನ್ನಲಾಗುತ್ತಿದೆ.
ನಾಗರಾಜ್ ಪರ ಪ್ರಚಾರಕ್ಕೆ ಕಾಂಗ್ರೆಸ್ ನಾಯಕರ ನಿರಾಸಕ್ತಿ
ಹೌದು, ಪಿ. ನಾಗರಾಜ್ ಪರವಾಗಿ ಪ್ರಚಾರಕ್ಕೆ ಕಾಂಗ್ರೆಸ್ ನಾಯಕರು ನಿರಾಸಕ್ತಿ ತೋರುತ್ತಿದ್ದಾರೆ. ಆದ್ದರಿಂದ ಪಿ. ನಾಗರಾಜ್ ಬಿಜೆಪಿ ಅಭ್ಯರ್ಥಿ ಎಸ್.ಟಿ ಸೋಮಶೇಖರ್ಗೆ ಹರಕೆಯ ಕುರಿಯೇ ಎಂಬ ಅನುಮಾನ ಶುರುವಾಗಿದೆ. ತನಗೇ ಟಿಕೆಟ್ ಕೊಡಿಸಿದ ಕಾಂಗ್ರೆಸ್ ನಾಯಕರೇ ತನ್ನ ಪರ ಪ್ರಚಾರಕ್ಕೆ ಬಾರದ ಕಾರಣದಿಂದಾಗಿ ಪಿ. ನಾಗರಾಜ್ ಕಂಗಾಲಾಗಿದ್ದಾರೆ.
ಉಪ ಚುನಾವಣೆ ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನ
ಕರ್ನಾಟಕ ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನ. ಕಾಂಗ್ರೆಸ್ ನಾಯಕರು ಪ್ರಚಾರಕ್ಕೆ ಬಾರದ್ದರಿಂದ ಆತಂಕಕ್ಕೀಡಾಗಿದ್ದ ಪಿ. ನಾಗರಾಜ್ ಕನಕಪುರದ ಬಂಡೆ ಡಿ.ಕೆ ಶಿವಕುಮಾರ್ ಬೆನ್ನ ಹಿಂದೆ ಬಿದ್ದಿದ್ದಾರೆನ್ನಲಾಗುತ್ತಿದೆ.
ಸಿದ್ದರಾಮಯ್ಯ ಒಂದು ದಿನದ ಪ್ರಚಾರ
ಸಿದ್ದರಾಮಯ್ಯ ಕೇವಲ ಒಂದು ದಿನ ಬಂದು ಪ್ರಚಾರ ಮಾಡಿದ್ದರು, ಇನ್ನುಳಿದ ಯಾವ ರಾಜ್ಯ ನಾಯಕರೂ ಯಶವಂತಪುರ ಕ್ಷೇತ್ರದತ್ತ ತಲೆ ಹಾಕಲೇ ಇಲ್ಲ. ಸ್ವತಃ ಉಪ ಚುನಾವಣೆ ಉಸ್ತುವಾರಿ ಹೊತ್ತ ಎಂ ಕೃಷ್ಣಪ್ಪ ಕೂಡ ಕಾಂಗ್ರೆಸ್ ಅಭ್ಯರ್ಥಿ ಪಾಳ್ಯ ನಾಗರಾಜ್ ಪರ ಪ್ರಚಾರಕ್ಕೆ ಬಂದಿಲ್ಲ.