ಕಾಂಗ್ರೆಸ್ ತಿಪ್ಪರಲಾಗ ಹಾಕಿದರೂ ಬಿಜೆಪಿಯನ್ನ ಅಲುಗಾಡಿಸಲು ಸಾಧ್ಯವಿಲ್ಲ: ಬಸವರಾಜ ಬೊಮ್ಮಾಯಿ
ಕಾಂಗ್ರೆಸ್ ಪಕ್ಷಕ್ಕೆ ಸೋಲು ಗ್ಯಾರಂಟಿಯಾಗಿ ಅವರು ಹತಾಶರಾಗಿದ್ದಾರೆ. ಸ್ವಜನಪಕ್ಷಪಾತದಿಂದ ಕೂಡಿ, ದೌರ್ಭಾಗ್ಯದ ಯೋಜನೆಗಳನ್ನು ನೀಡಿದ ಕಾರಣ ಅವರನ್ನು ಮನೆಗೆ ಕಳುಹಿಸಲಾಗಿತ್ತು ಎಂದು ಕಾಂಗ್ರೆಸ್ ವಿರುದ್ದ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.
ಹಾವೇರಿ, ಜನವರಿ 25: ಬಿಜೆಪಿ ಇಡೀ ಕರ್ನಾಟಕದಲ್ಲಿ ಅತ್ಯಂತ ಆಳವಾಗಿ ಬೇರೂರಿರುವ ಪಕ್ಷ. ಕಾಂಗ್ರೆಸ್ ತಿಪ್ಪರಲಾಗ ಹಾಕಿದರೂ ಬಿಜೆಪಿಯ ಸಣ್ಣ ಎಲೆಯನ್ನೂ, ನಮ್ಮ ಗಟ್ಟಿ ಬೇರುಗಳನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಜನಸಂಕಲ್ಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಶ್ವದಲ್ಲಿಯೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಕ್ಷ. ಬೂತಿನಿಂದ ಹಿಡಿದು ರಾಜ್ಯ ಮಟ್ಟದವರೆಗೂ ಸಂಘಟಿತವಾಗಿರುವ ಪಕ್ಷ. ಭಾಜಪಕ್ಕೆ ವಿಶ್ವಮಾನ್ಯ ನಾಯಕ ನರೇಂದ್ರ ಮೋದಿಯವರ ನಾಯಕತ್ವವಿದೆ. ಬಿಜೆಪಿ ಡಬಲ್ ಇಂಜಿನ್ ಸರ್ಕಾರವಿದೆ. ಯು.ಬಿ.ಬಣಕಾರ್ ಕಾಂಗ್ರೆಸ್ ಸೇರಿದ್ದಾರೆ. ಅವರ ಸಮಯ ಸರಿಯಿಲ್ಲ. ಯಡಿಯೂರಪ್ಪ ನವರು ರಾಜಕೀಯ ಬೆಂಬಲ ನೀಡಿದವರು.
ಅಧಿಕಾರವಿಲ್ಲದಾಗಲೂ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ನೀಡಿ ಸಚಿವ ಸಂಪುಟದ ಸ್ಥಾನ ನೀಡಿ ಗೌರವ ನೀಡಿದ್ದರು. ಭಾಜಪದಿಂದ ಇದೆಲ್ಲವನ್ನೂ ಮಾಡಲು ಸಾಧ್ಯವಾಗಿದೆ. ಆದರೆ ಯಾವ ಪಕ್ಷ ಅವರಿಗೆ ಸ್ಥಾನಮಾನ ಕೊಟ್ಟಿತ್ತೋ, ಆ ಪಕ್ಷವನ್ನು ಬಿಟ್ಟು, ಯಾವ ಪಕ್ಷವನ್ನು ನಿರಂತರವಾಗಿ ವಿರೋಧ ಮಾಡಿಕೊಂಡು ಬಂದಿದ್ದರೋ ಅದೇ ಪಕ್ಷವನ್ನು ಸೇರಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಆದರೆ ಜನ ಈ ಬಗ್ಗೆ ತೀರ್ಮಾನ ಮಾಡಲಿ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಸೋಲು ಗ್ಯಾರಂಟಿಯಾಗಿ ಅವರು ಹತಾಶರಾಗಿದ್ದಾರೆ. ಸ್ವಜನಪಕ್ಷಪಾತದಿಂದ ಕೂಡಿ, ದೌರ್ಭಾಗ್ಯದ ಯೋಜನೆಗಳನ್ನು ನೀಡಿದ ಕಾರಣ ಅವರನ್ನು ಮನೆಗೆ ಕಳುಹಿಸಲಾಗಿತ್ತು. ಅನ್ನಭಾಗ್ಯ ಯೋಜನೆಯಲ್ಲಿ 30 ರೂ. ನರೇಂದ್ರ ಮೋದಿಯವರ ಅಕ್ಕಿ, 3 ರೂ.ಗಳ ಚೀಲದಲ್ಲಿ ಇವರ ಫೋಟೋ ಹಾಕಿದ್ದಾರೆ. ಇವರು ಮುನ್ನವೂ ಪ್ರತಿ ಕುಟುಂಬಕ್ಕೆ 30 ಕೆ,ಜಿ ಅಕ್ಕಿ ಸಿಗುತ್ತಿತ್ತು. ಅದನ್ನು 7 ಕೆ.ಜಿಗೆ ಇಳಿಸಿದರು. ಒಂದೇ ವರ್ಷ 7 ಕೆಜಿ ಕೊಟ್ಟು ಆಮೇಲೆ 4 ಕೆಜಿ ಅಕ್ಕಿ ನೀಡಿದರು. ಚುನಾವಣೆ ಹತ್ತಿರ ಬಂದಾಗ ಪುನ: 7 ಕೆ.ಜಿಗೆ ಏರಿಸಿದರು. ಈ ರೀತುಯ ಮೋಸ ಮಾಡುವ ಸರ್ಕಾರ ಎಮದೂ ನೋಡಿರಲಿಲ್ಲ. ಜನರಿಗೆ ಮೋಸ ಮಾಡಿ ದಾರಿ ತಪ್ಪಿಸುವ ಇವರಿಗೆ ನಾಚಿಕೆಯಾಗಬೇಕು.ಅನ್ನದಲ್ಲಿ ಕನ್ನ ಹಾಕಿದರು. ಇದನ್ನು ತನಿಖೆ ಮಾಡುತ್ತಿದ್ದ ಹಿರಿಯ ಅಧಿಕಾರಿಯೊಬ್ಬರು ಉತ್ತರ ಪ್ರದೇಶದಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ಧರು ಎಂದರು.
ಈ ಸಂಕಲ್ಪ ಯಾತ್ರೆ 2023 ರ ಚುನಾವಣೆಯ ವಿಜಯ ಸಂಕಲ್ಪ ಯಾತ್ರೆ. ಸಚಿವ ಬಿ.ಸಿ.ಪಾಟೀಲರು ಶಾಸಕರಿದ್ದಾಗ ಈ ತಾಲ್ಲೂಕಿನ ಅಭಿವೃದ್ಧಿ ಹೇಗಿತ್ತು. ಅವರು ಇಲ್ಲದಿದ್ದಾಗ ಅಭಿವೃದ್ಧಿ ಹೇಗಿದೆ ಎಂದು ಯೋಚಿಸಿದರೆ ಈ ತಾಲ್ಲೂಕಿನ ಅಭಿವೃದ್ಧಿಯಲ್ಲಿ ಸಿಂಹಪಾಲು ಬಿ.ಸಿ.ಪಾಟೀಲರದ್ದು. ಅವರಿಗೆ ರೈತರ ಮೇಲೆ ಅಪಾರವಾದ ಪ್ರೀತಿ ವಿಶ್ವಾಸವಿದೆ. ಅವರು ವಿರೋಧಪಕ್ಷದಲ್ಲಿ ಇದ್ದಾಗ ರೈತರ ಪರವಾಗಿ ಹೋರಾಟ ಮಾಡಿ ರೈತರಿಗೆ ನ್ಯಾಯಸಮ್ಮತವಾದ ಪರಿಹಾರ ದೊರಕಿಸಲು ಒಂದು ತಿಂಗಳು ಬೆಳಗಾವಿ ಜೈಲಿನಲ್ಲಿದ್ದರು. ಅವರೊಂದಿಗೆ ಜೈಲಿಗೆ ಹೋದವರ ಮನೆ ಮನೆಗೆ ತೆರಳಿ ಆತ್ಮಸ್ಥೈರ್ಯ ತುಂಬಿ ರೈತಯೋಗ ಎಂದು ಹೆಸರಿಟ್ಟಿದ್ದರು ಎಂದರು.
ಈ ತಾಲ್ಲೂಕಿನಲ್ಲಿ ಯಾವುದೇ ಅಭಿವೃದ್ಧಿಗೆ ಕಲ್ಲುಹಾಕುವ ಕೆಲಸ ಮಾಡುವ ಇನ್ನೊಂದು ವರ್ಗವಿದೆ. ಸಕ್ಕರೆ ಕಾರ್ಖಾನೆ ಮಾಡಲು, ರಸ್ತಗಳ ಅಭಿವೃದ್ದಿಗೆ ಕ್ಯಾತೆ, ರೈತರಿಗೆ ನ್ಯಾಯ ಕೊಡಿಸಬೇಕೆಂದರೆ ಕ್ಯಾತೆ ತೆಗೆದು. ಅಭಿವೃದ್ಧಿಗೆ ವಿರೋಧವಾದ ಶಕ್ತಿ. ಅಭಿವೃದ್ಧಿಯ ಪರ ಮತ್ತು ವಿರೋಧ ಶಕ್ತಿಗಳ ನಡವೆ ಸಂಘರ್ಷ ಆಗುತ್ತದೆ. ತಾವೆಲ್ಲರೂ ನಿಮ್ಮ ಮಕ್ಕಳು ಹಾಗೂ ತಾಲ್ಲೂಕಿನ ಭವಿಷ್ಯಕ್ಕಾಗಿ ಅಭಿವೃದ್ಧಿ ಪರವಾಗಿ ಅಂದರೆ ಬಿಜೆಪಿಗೆ ಮತ ಹಾಕಬೇಕು ಎಂದರು.