ಉಪಚುನಾವಣೆ ಫಲಿತಾಂಶ: ಎಸ್ ಎಂ ಕೃಷ್ಣ ಅವರನ್ನು ಮಾತಿನಲ್ಲಿ ಚುಚ್ಚಿದ ಕಾಂಗ್ರೆಸ್
ಎಸ್ ಎಂ ಕೃಷ್ಣ ಬಿಜೆಪಿಗೆ ಸೇರಿ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಜಯಕ್ಕೆ ಪರೋಕ್ಷವಾಗಿ ಕಾರಣರಾಗಿದ್ದಾರೆ. ಹಾಗಾಗಿ ಪಕ್ಷದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆಂದು ದಿನೇಶ್ ಗುಂಡೂರಾವ್ ವ್ಯಂಗ್ಯ.
ಬೆಂಗಳೂರು, ಏ 13: ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಿದ್ದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಇತ್ತೀಚೆಗೆ ಬಿಜೆಪಿ ಸೇರಿದ ಎಸ್ ಎಂ ಕೃಷ್ಣ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ನಮ್ಮ ಪಕ್ಷದ ಹಿರಿಯ ಮುಖಂಡರಾಗಿದ್ದ ಎಸ್ ಎಂ ಕೃಷ್ಣ ಅವರು ಬಿಜೆಪಿಗೆ ಸೇರಿ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಜಯಕ್ಕೆ ಪರೋಕ್ಷವಾಗಿ ಕಾರಣರಾಗಿದ್ದಾರೆ. ಹಾಗಾಗಿ ಪಕ್ಷದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆಂದು ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ. (ಬಯ್ದಾಡಿ ಸೋತ ಪ್ರಸಾದ್, ಸುಮ್ಮನಿದ್ದು ಗೆದ್ದ ಸಿದ್ದು)
ಕಾಂಗ್ರೆಸ್ ನಲ್ಲಿ ಎಲ್ಲಾ ಹುದ್ದೆಗಳನ್ನು ಅನುಭವಿಸಿ ಎಸ್ ಎಂ ಕೃಷ್ಣ ಪಕ್ಷ ಬಿಡುವ ತೀರ್ಮಾನಕ್ಕೆ ಬಂದರು. ಪಕ್ಷಾಂತರಿಗಳಿಗೆ ಕರ್ನಾಟಕದ ಮತದಾರ ಯಾವತ್ತೂ ಮಣೆಹಾಕುವುದಿಲ್ಲ ಎನ್ನುವುದು ಉಪಚುನಾವಣೆಯ ಫಲಿತಾಂಶ ತೋರಿಸಿಕೊಟ್ಟಿದೆ.
ಎಸ್ ಎಂ ಕೃಷ್ಣ, ಕುಮಾರ್ ಬಂಗಾರಪ್ಪ ಪಕ್ಷಕ್ಕೆ ಸೇರ್ಪಡೆಯಾದ ನಂತರ ಬಿಜೆಪಿ ಅತಿಯಾದ ಗೆಲುವಿನ ಆತ್ಮವಿಶ್ವಾಸದಲ್ಲಿತ್ತು. ಈ ಉಪಚುನಾವಣೆಯ ಫಲಿತಾಂಶ ಪಕ್ಷಾಂತರಿಗಳಿಗೆ ಹೊಸ ಪಾಠವಾಗಲಿ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಉಪಚುನಾವಣೆಯ ಫಲಿತಾಂಶದ ನಂತರ ಪಕ್ಷದ ಕಚೇರಿಯಲ್ಲಿ ವಿಜಯೋತ್ಸವ ಆಚರಿಸಿ ಮಾತನಾಡುತ್ತಿದ್ದ ದಿನೇಶ್, ಬಣ್ಣದ ಮಾತುಗಳಿಗೆ ಮತದಾರ ಸೋಲುವುದಿಲ್ಲ, ಜಾತಿ ಆಧಾರದ ಮೇಲೆ ಮತಯಾಚಿಸಿದರೆ ಜನಾದೇಶ ಹೇಗಿರುತ್ತದೆ ಎನ್ನುವುದಕ್ಕೆ ಈ ಉಪಚುನಾವಣೆಯ ಫಲಿತಾಂಶವೇ ಸಾಕ್ಷಿ ಎಂದು ದಿನೇಶ್ ಅಭಿಪ್ರಾಯ ಪಟ್ಟಿದ್ದಾರೆ.
ನಮ್ಮ ಸರಕಾರದ ಸಾಧನೆ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಪ್ರಮುಖ ಕಾರಣ. ಈ ಫಲಿತಾಂಶ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ನಮ್ಮದು ನಿಜವಾದ ಜಾತ್ಯಾತೀತ ಪಕ್ಷ ಎನ್ನುವುದನ್ನು ಮತದಾರರೂ ಒಪ್ಪಿಕೊಂಡಿದ್ದಾರೆಂದು ದಿನೇಶ್ ಗುಂಡೂರಾವ್ ಅಭಿಪ್ರಾಯ ಪಟ್ಟಿದ್ದಾರೆ.