ಡಿಕೆಶಿ, ಸಿದ್ದರಾಮಯ್ಯ ಜಂಟಿ ರಿವರ್ಸ್ ಆಪರೇಶನ್ ಕಮಲ!
ಬೆಂಗಳೂರು, ನ. 06: ಆರ್ ಆರ್ ನಗರ ಹಾಗೂ ಶಿರಾ ಉಪ ಚುನಾವಣೆ ಮುಗಿಯುತ್ತಿದ್ದಂತೆ ಮತ್ತೊಂದು ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ. ಉಪ ಚುನಾವಣೆ ನಡೆದ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸದಲ್ಲಿರುವ ಕೈ ನಾಯಕರು ಮತ್ತೊಂದು ಉಪ ಚುನಾವಣೆಗೆ ಮೊದಲೇ ಆ ಕ್ಷೇತ್ರದ ಅಭ್ಯರ್ಥಿ ಘೋಷಣೆಗೆ ರಾಜಕೀಯ ತಂತ್ರ ಮಾಡಿಕೊಂಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಭಾರಿ ಬೆಳವಣಿಗೆ ನಡೆದಿದೆ. ಕಳೆದ ಉಪ ಚುನಾವಣೆಯಲ್ಲಿ ಮುಂದಿನ ಮುಖ್ಯಮಂತ್ರಿ ಚರ್ಚೆ ಮೂಲಕ ಮತ ವಿಭಜನೆ ತಂತ್ರ ಮಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಸಿದ್ದರಾಮಯ್ಯ ಅವರು, ಈ ಉಪ ಚುನಾವಣೆಗೆ ಜೊತೆಯಾಗಿ ನಿಂತಿದ್ದಾರೆ. ಹೀಗಾಗಿ ಆಪರೇಶನ್ ಕಮಲದ ಮೂಲಕ ಕಾಂಗ್ರೆಸ್ ಶಾಸಕರನ್ನು ಸೆಳೆದಿದ್ದ ಬಿಜೆಪಿಗೆ ರಿವರ್ಸ್ ಆಪರೇಶನ್ ಮಾಡುವಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರು ಸಫಲರಾಗಿದ್ದಾರೆ.
ಆ ಕ್ಷೇತ್ರ ಯಾವುದು? ಅಲ್ಲಿ ರಿವರ್ಸ್ ಆಪರೇಶನ್ಗೆ ಒಳಗಾಗಿರುವ ನಾಯ ಯಾರು? ಮುಂದಿದೆ ಸಂಪೂರ್ಣ ಮಾಹಿತಿ!
ಬಿಜೆಪಿ ಅಭ್ಯರ್ಥಿಯಾಗಿ ಪ್ರತಾಪಗೌಡ ಕಣಕ್ಕೆ
vvಆಪರೇಶನ್ ಕಮಲದ ಮೂಲಕ ರಾಯಚೂರು ಜಿಲ್ಲೆ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಅವರನ್ನು ಬಿಜೆಪಿ ಸೆಳೆದಿತ್ತು. ಪ್ರತಾಪಗೌಡ ಪಾಟೀಲ್ ಆವರು ಕಳೆದ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲವು ಸಾಧಿಸಿದ್ದರು. ನಂತರ ಶಾಸಕಸ್ಥಾನಕ್ಕೆ ರಾಜೀನಾಮೆ ಕೊಡುವ ಮೂಲಕ ಬಿಜೆಪಿ ಸೇರಿ ಅನರ್ಹ ಶಾಸಕರಾಗಿದ್ದಾರೆ.
ಮಸ್ಕಿ ಕ್ಷೇತ್ರದ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ಮತದಾನ ಮೂಲಕ ಗೆಲವು ಸಾಧಿಸಿದ್ದಾರೆಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಹೀಗಾಗಿ ಮಸ್ಕಿ ಉಪಚುನಾವಣೆ ಎದುರಾಗಿದ್ದ ಅಡ್ಡಿ ನಿವಾರಣೆಯಾದಂತಾಗಿದೆ. ಇದೀಗ ಪ್ರತಾಪಗೌಡ ಪಾಟೀಲ್ ಅವರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಖಚಿತವಾಗಿದೆ.
ಕಾಂಗ್ರೆಸ್ ರಿವರ್ಸ್ ಆಪರೇಶ್ ಕಮಲ
ಇದೀಗ ರಿವರ್ಸ್ ಆಪರೇಶನ್ ಕಲಮ ಮಾಡಿರುವ ಕಾಂಗ್ರೆಸ್ ನಾಯಕರು ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಸನಗೌಡ ಪಾಟೀಲ್ ತುರವಿಹಾಳ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವಲ್ಲಿ ಸಫಲರಾಗಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ತುರವಿಹಾಳ್ ಅವರು ಕೇವಲ 218 ಮತಗಳಿಂದ ಪ್ರತಾಪಗೌಡ ಪಾಟೀಲ್ ಅವರ ಎದುರು ಸೋತಿದ್ದರು.
ಹೀಗಾಗಿ ಈಗಿನ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತೆ ಕಾಂಗ್ರೆಸ್ ನಾಯಕರು ಬಸನಗೌಡ ಪಾಟೀಲ್ ತುರವಿಹಾಳ್ ಅವರನ್ನು ಒಪ್ಪಿಸಿದ್ದಾರೆ. ಉಪ ಚುನಾವಣೆ ಘೋಷಣೆಗೂ ಮೊದಲೇ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೊಷಣೆ ಮಾಡಲು ತೀರ್ಮಾನ ಮಾಡಿದೆ.
ಸಿದ್ದರಾಮಯ್ಯ ಹೆಗಲಿಗೆ ಮಹತ್ವದ ಜವಾಬ್ದಾರಿ
ಬಸನಗೌಡ ಪಾಟೀಲ್ ತುರವಿಹಾಳ್ ಅವರು ಕಾಂಗ್ರೆಸ್ ಸೇರ್ಪಡೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು ಮಾತುಕತೆ ನಡೆಸಿ ಒಪ್ಪಿಸಿದ್ದಾರೆ. ಜೊತೆಗೆ ತುರವಿಹಾಳ್ ಅವರ ಕಾಂಗ್ರೆಸ್ ಸೇರ್ಪಡೆಗೆ ಸ್ಥಳೀಯ ನಾಯಕರಿಂದ ಎದುರಾಗಬಹುದಾದ ವಿರೋಧವನ್ನು ಶಮನ ಮಾಡುವ ಜವಾಬ್ದಾರಿಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಹಿಸಿಕೊಂಡಿದ್ದಾರೆ. ಹೀಗಾಗಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರು ಜಂಟಿಯಾಗಿ ಪ್ರಯತ್ನ ನಡೆಸಿರುವುದು ಬಿಜೆಪಿಗೆ ಆತಂಕವನ್ನು ಸೃಷ್ಟಿಸಿದೆ. ಹೀಗಾಗಿ ಬಿಜೆಪಿ ನಾಯಕರು ಕೈಕಟ್ಟಿ ಕೂತಿಲ್ಲ.
Recommended Video
ಬಿಜೆಪಿ ಮನವೊಲಿಕೆ ಪ್ರಯತ್ನ
ಬಸನಗೌಡ ಪಾಟೀಲ್ ತುರವಿಹಾಳ್ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವುದನ್ನು ತಡೆಯಲು ಬಿಜೆಪಿ ನಾಯಕರು ಪ್ರಯತ್ನ ಆರಂಭಿಸಿದ್ದಾರೆ. ಈಗಾಗಲೇ ಬಸನಗೌಡ ಪಾಟೀಲ್ ತುರವಿಹಾಳ ಅವರನ್ನು ಕಾಡಾ ಅಧ್ಯಕ್ಷರನ್ನಾಗಿ ಬಿಜೆಪಿ ಸರ್ಕಾರ ನೇಮಕ ಮಾಡಿದೆ. ಅದಕ್ಕೆ ರಾಜೀನಾಮೆ ಕೊಡಲು ಅವರು ಮುಂದಾಗಿದ್ದಾರೆ ಎನ್ನಲಾಗಿದೆ.
ಹೀಗಾಗಿ ಅವರೊಂದಿಗೆ ನಾಳೆ ಶನಿವಾರ (ನ.07) ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿಗೆ ಬರುವಂತೆ ತುರವಿಹಾಳ ಅವರನ್ನು ಆಹ್ವಾನಿಸಿದ್ದಾರೆ. ಯಡಿಯೂರಪ್ಪ ಅವರ ಸಮ್ಮುಖದಲ್ಲಿಯೇ ಸಂಧಾನ ಸಭೆ ನಡೆಸಲು ಬಿಜೆಪಿ ನಾಯಕರು ತೀರ್ಮಾನ ಮಾಡಿದ್ದರು. ಆದರೆ ಯಡಿಯೂರಪ್ಪ ಅವರ ಆಹ್ವಾನವನ್ನು ಬಸನಗೌಡ ಪಾಟೀಲ್ ತುರವಿಹಾಳ್ ಅವರು ನಿರಾಕರಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ
ಬಸನಗೌಡ ಪಾಟೀಲ್ ತುರವಿಹಾಳ್ ಅವರು ಕಾಂಗ್ರೆಸ್ ಸೇರ್ಪಡೆ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ಪ್ರಭಾವಿ ನಾಯಕರುಗಳ ಸಭೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕರೆದಿದ್ದಾರೆ. ತುರವಿಹಾಳ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಲು ಸಹಮತ ವ್ಯಕ್ತಪಡಿಸಿರುವ ಕುರಿತು ಸಭೆಯಲ್ಲಿ ಸಿದ್ದರಾಮಯ್ಯ ಅವರು ಮಸ್ಕಿ ಸ್ಥಳಿಯ ನಾಯಕರೊಂದಿಗೆ ಚರ್ಚೆ ಮಾಡಲಿದ್ದಾರೆ.
ಹೀಗಾಗಿ ಇದೇ ಭಾನುವಾರ (ನ.08) ಇಲ್ಲವೇ ಸೋಮವಾರ (ನ.09) ಬಸನಗೌಡ ಪಾಟೀಲ್ ತುರವಿಹಾಳ್ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ ಎನ್ನಲಾಗಿದೆ.