ಕಾಂಗ್ರೆಸ್ - ಎಸ್.ಡಿ.ಪಿ.ಐ ದೋಸ್ತಿ: ಪರಮೇಶ್ವರ್ ಹೇಳಿದ್ದೇನು?
ಬೆಂಗಳೂರು, ಡಿಸೆಂಬರ್ 20: 2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎಸ್.ಡಿ.ಪಿ.ಐ (ಪ್ಯಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜಕೀಯ ಸಂಘಟನೆ) ಬೆಂಬಲ ನೀಡಲಿದೆಯಾ? ಹೀಗೊಂದು ಪ್ರಶ್ನೆಯ ಸುತ್ತ ರಾಷ್ಟ್ರ ಮಟ್ಟದಲ್ಲಿ ಚರ್ಚೆ ಹುಟ್ಟಿಕೊಂಡಿದೆ.
ಈ ಚರ್ಚೆಗೆ ನಾಂದಿ ಹಾಡಿದವರು ಮತ್ತು ಇವತ್ತು ಸ್ಪಷ್ಟನೆ ನೀಡುತ್ತಿರುವವರು ಒಬ್ಬರೇ. ಅವರೇ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್.
ಆಂಗ್ಲ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದ ಪರಮೇಶ್ವರ್, "ಇಲ್ಲಿಯವರೆಗೆ ಎಸ್.ಡಿ.ಪಿ.ಐ ಜತೆ ಏನನ್ನೂ ನೇರವಾಗಿ ಚರ್ಚೆ ನಡೆಸಿಲ್ಲ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ ಎನ್ನುವ ಬಗ್ಗೆ ಪರೋಕ್ಷ ಚರ್ಚೆಗಳು ನಡೆಯುತ್ತಿವೆ. ನಮ್ಮ ಮನವಿ ಏನೆಂದರೆ ಅಲ್ಪಸಂಖ್ಯಾತರು ತಮ್ಮ ಮತಗಳನ್ನು ವಿಭಜಿಸದೆ ಸಂಪೂರ್ಣವಾಗಿ ನಮಗೆ ಬೆಂಬಲ ನೀಡಬೇಕು ಎನ್ನುವುದು. ಕಾಂಗ್ರೆಸ್ ನ ಜಾತ್ಯಾತೀತತೆಯನ್ನು ಉಳಿಸಲು ಈ ರೀತಿ ಮಾಡಬೇಕು.ಇದನ್ನು ನಾವು ಅವರ ಬಳಿ ಕೇಳುತ್ತಿದ್ದೇವೆ. ಅವರು ಕಾಂಗ್ರೆಸ್ ವಿರುದ್ಧ ಅಭ್ಯರ್ಥಿಗಳನ್ನು ನಿಲ್ಲಿಸುವುದಿಲ್ಲ ಎಂಬ ಭರವಸೆ ಇದೆ," ಎಂದು ಹೇಳಿದ್ದರು.
ಮುಂದುವರಿದು ಮಾತನಾಡಿದ್ದ ಅವರು, "ಅವರು (ಎಸ್.ಡಿ.ಪಿ.ಐ) ನಮಗೆ ಬೆಂಬಲ ನೀಡಲೂಬಹುದು. ಆದರೆ ಈ ಸಂದರ್ಭದಲ್ಲಿ ನನಗೆ ಈ ಬಗ್ಗೆ ಏನೂ ಗೊತ್ತಿಲ್ಲ. ಏಕೆಂದರೆ ನನ್ನ ಬಳಿಯಲ್ಲಾಗಲಿ ಮುಖ್ಯಮಂತ್ರಿಗಳ ಬಳಿಯಲ್ಲಾಗಲಿ ಅವರು ಈ ಬಗ್ಗೆ ಚರ್ಚೆ ನಡೆಸಿಲ್ಲ. ಒಮ್ಮೆ ಚರ್ಚೆ ನಡೆಸಿದ ನಂತರ ಹೇಗೆ ಬೆಂಬಲ ಪಡೆಯಬೇಕು, ಹೇಗೆ ಜತೆಯಾಗಿ ಹೋಗಬೇಕು ಎಂಬುದನ್ನು ನಿರ್ಧರಿಸುತ್ತೇವೆ," ಎಂದಿದ್ದರು.
"ಮಾತ್ರವಲ್ಲ ನಾವು ಇದನ್ನು ನಮ್ಮ ಕಾರ್ಯಕಾರಿ ಸಮಿತಿಯಲ್ಲಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ವೈಯಕ್ತಿಕವಾಗಿ ಈ ರೀತಿಯ ತೀರ್ಮಾನ ತೆಗೆದುಕೊಳ್ಳಲಾಗುವುದಿಲ್ಲ," ಎಂದು ಸ್ಪಷ್ಟಪಡಿಸಿದ್ದರು.
ಹೀಗಿದ್ದು ಆಂಗ್ಲವಾಹಿನಿ ಈ ವಿಚಾರವನ್ನು ಚರ್ಚೆಗೆ ತೆಗೆದುಕೊಂಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಕಾಂಗ್ರೆಸ್, "ಯಾರೊಂದಿಗೂ ಒಪ್ಪಂದದ ಬಗ್ಗೆ ಮಾತುಕತೆ ನಡೆದಿಲ್ಲ," ಎಂದು ಸ್ಪಷ್ಟಪಡಿಸಿದೆ.
There have been no talks of an alliance with anyone. @TimesNow is peddling lies. @INCKarnataka is against communal elements of all hues. https://t.co/sghIxCsewU
— Karnataka Congress (@INCKarnataka) December 20, 2017
ಈ ಬಗ್ಗೆ ಸ್ವತಃ ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಕೂಡಾ, "ಎಸ್.ಡಿ.ಪಿ.ಐ ಆಗಲಿ ಯಾವುದೇ ರಾಜಕೀಯ ಪಕ್ಷಗಳ ಜತೆ ಯಾವುದೇ ಮೈತ್ರಿ ಇಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಇದು ಕರ್ನಾಟಕದಲ್ಲಿ ಪ್ರಬಲವಾಗಿ ನೆಲೆಯೂರಿರುವ ಕಾಂಗ್ರೆಸ್ ಗೆ ತೊಂದರೆ ನೀಡುವ ಸ್ಪಷ್ಟ ಪ್ರಯತ್ನ," ಎಂದು ವಾಹಿನಿ ವಿರುದ್ಧ ಕಿಡಿಕಾರಿದ್ದಾರೆ.
I would like to clarify that there has been no alliance whatsoever with SDPI or any other political organisation. @TimesNow has been spewing lies. This is a clear attempt to disrupt Congress' political stronghold in Karnataka. https://t.co/LngAPrACkl
— Dr. G Parameshwara (@DrParameshwara) December 20, 2017