ಮೆಡಿಕಲ್ ಕಿಟ್ ಖರೀದಿಯಲ್ಲಿ ಹಗರಣ ನಡೆಸಿತಾ ರಾಜ್ಯ ಸರ್ಕಾರ?
ಬೆಂಗಳೂರು, ಜುಲೈ.19: ಕೊರೊನಾವೈರಸ್ ಅಟ್ಟಹಾಸ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹದ್ದುಮೀರಿ ಹೋಗುತ್ತಿದೆ. ಕೊವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುವ ವಿಚಾರದಲ್ಲೂ ಸರ್ಕಾರ ಭಾರಿ ಹಗರಣವನ್ನೇ ಎಸಗಿರುವ ಬಗ್ಗೆ ಕಾಂಗ್ರೆಸ್ ಆರೋಪಿಸುತ್ತಿದೆ.
Recommended Video
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕರ ಸಭೆ ಕರೆಯಲಾಗಿದೆ. ಸೋಮವಾರ ನಡೆಯುವ ಕಾಂಗ್ರೆಸ್ ಸಭೆಯಲ್ಲಿ ಪಕ್ಷದ ಎಲ್ಲಾ ಹಿರಿಯ ನಾಯಕರು ಭಾಗಿಯಾಗುವ ಸಾಧ್ಯತೆಯಿದೆ. ಈ ಮೊದಲು ಕ್ವಾರಂಟೈನ್ ನಿಂದಾಗಿ ಎರಡು ಸಭೆಗೆ ಹಿರಿಯ ನಾಯಕರು ಗೈರು ಹಾಜರಾಗಿದ್ದರು.
60 ವರ್ಷಗಳಲ್ಲಿ ಮಾನವೀಯ ವಿಚಾರದ ಅತಿ ದೊಡ್ಡ ಭ್ರಷ್ಟಾಚಾರ ಇದು: ಡಿಕೆಶಿ
ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ವೈದ್ಯರಿಗೆ ನೀಡಿದ ಮೆಡಿಕಲ್ ಕಿಟ್ ಗಳನ್ನು ದುಪ್ಪಟ್ಟು ಬೆಲೆಗೆ ಖರೀದಿಸಿರುವುದು, ಸೆಕೆಂಡ್ ಹ್ಯಾಂಡಲ್ ವೆಂಟಿಲೇಟರ್ ಗೆ ಮೂರು ಪಟ್ಟು ದರದಲ್ಲಿ ಖರೀದಿಸಿದ್ದು ಹಾಗೂ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗದ ಹಿನ್ನೆಲೆ ಈ ಬಗ್ಗೆ ಇಂದಿನ ಸಭೆಯಲ್ಲಿ ಪ್ರಮುಖ ಚರ್ಚೆಯಾಗಲಿದೆ.
ಕೊರೊನಾವೈರಸ್ ಮೆಡಿಕಲ್ ಕಿಟ್ ಖರೀದಿ ಹಗರಣ
ರಾಜ್ಯದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ನಿಯಂತ್ರಿಸಲು ಸರ್ಕಾರವು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಈ ಕ್ರಮಗಳಲ್ಲೇ ಭಾರಿ ಹಗರಣ ನಡೆಸಿರುವ ಆರೋಪ ಇದೀಗ ಎದುರಾಗಿದೆ. ಅದರಲ್ಲೂ ಮೆಡಿಕಲ್ ಕಿಟ್ ಖರೀದಿ ಹಗರಣದ ಬಗ್ಗೆ ತೀವ್ರ ಚರ್ಚೆಯಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷರಿಗೆ ಎಂ.ಬಿ.ಪಾಟೀಲ್ ಮಾಹಿತಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಮಾಜಿ ಸಚಿವ ಎಂ.ಬಿ.ಪಾಟೀಲ್ ಭೇಟಿ ಮಾಡಿದರು. ಈ ವೇಳೆ ರಾಜ್ಯ ಸರ್ಕಾರವು ಹೆಚ್ಚಿನ ದರದಲ್ಲಿ ಮೆಡಿಕಲ್ ಕಿಟ್ ಗಳನ್ನು ಖರೀದಿ ಮಾಡಿರುವ ಬಗ್ಗೆ ಮಾಹಿತಿ ನೀಡಿದರು. ರಾಜ್ಯ ಸರ್ಕಾರದ ನಡೆಯ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು.
ರಾಜ್ಯದಲ್ಲಿನ ಖಾಸಗಿ ಆಸ್ಪತ್ರೆಯಲ್ಲೂ ವೆಂಟಿಲೇಟರ್ ಕೊರತೆ
ಕೊರೊನಾವೈರಸ್ ಸೋಂಕಿನಿಂದ ಬಳಲುತ್ತಿರುವ ಜನರಿಗೆ ಚಿಕಿತ್ಸೆ ನೀಡುವುದಕ್ಕೆ ವೆಂಟಿಲೇಟರ್ ಗಳ ಅಭಾವ ಎದುರಾಗಿದೆ. ಸರ್ಕಾರಿ ಆಸ್ಪತ್ರೆಗಳು ಅಷ್ಟೇ ಅಲ್ಲ ಖಾಸಗಿ ಆಸ್ಪತ್ರೆಗಳಲ್ಲಿಯೂ ಸಹ ವೆಂಟಿಲೇಟರ್ ಗಳ ಕೊರತೆ ಎದ್ದು ಕಾಣುತ್ತಿದೆ. ಸರ್ಕಾರದ ಇದನ್ನೆಲ್ಲ ಕಂಡೂ ಕಾಣದಂತೆ ಕಣ್ಮುಚ್ಚಿ ಕುಳಿತಿದೆ. ರಾಜ್ಯ ಸರ್ಕಾರವು ವೆಂಟಿಲೇಟರ್ ಗಳನ್ನು ಒದಗಿಸುವ ನಿಟ್ಟಿನಲ್ಲಿ ಯಾವುದೇ ರೀತಿ ಪ್ರಯತ್ನವನ್ನು ಮಾಡುತ್ತಿಲ್ಲ ಎಂದು ಎಂ.ಬಿ.ಪಾಟೀಲ್ ಕೆಪಿಸಿಸಿ ಅಧ್ಯಕ್ಷರಿಗೆ ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳತ್ತ ಬೊಟ್ಟು ಮಾಡುತ್ತಿರುವ ಸರ್ಕಾರ
ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಬೆಡ್ ಗಳ ವ್ಯವಸ್ಥೆ ಮಾಡುವುದಕ್ಕೆ ಸರ್ಕಾರ ಲಕ್ಷ್ಯ ವಹಿಸಿದೆ. ಆದರೆ ವೆಂಟಿಲೇಟರ್ ಮತ್ತು ಆಕ್ಸಿಜನ್ ಇಲ್ಲದೇ ಅತಿಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ. ಇಂದಿಗೂ ಪ್ರಾಣ ಬಿಡುತ್ತಿದ್ದಾರೆ. ಕೊವಿಡ್-19 ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಸೌಲಭ್ಯಗಳು ಮತ್ತು ಸಿಬ್ಬಂದಿಯು ಖಾಸಗಿ ಆಸ್ಪತ್ರೆಗಳಲ್ಲಿಯೂ ಇಲ್ಲ. ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೇ ಸರ್ಕಾರವು ಸುಖಾಸುಮ್ಮನೆ ಖಾಸಗಿ ಆಸ್ಪತ್ರೆಗಳತ್ತ ಬೊಟ್ಟು ಮಾಡಿ ತೋರಿಸುತ್ತಿದೆ ಎಂದು ದೂರಿದ್ದಾರೆ.