ಪರಿಷತ್ ಚುನಾವಣೆ ಅಭ್ಯರ್ಥಿ: ಕಾಂಗ್ರೆಸ್ ಪಡಶಾಲೆಯಲ್ಲಿ ಮತ್ತೆ 'ಘರ್ಜಿಸಿದ್ದು' ಇವರೇ?
ಮುಂಬರುವ ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ತನ್ನ ಇಬ್ಬರು ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದೆ. ಬಿಜೆಪಿ ಕೂಡಾ ತನ್ನ ನಾಲ್ಕು ಅಭ್ಯರ್ಥಿಯ ಪಟ್ಟಿಯನ್ನು ಘೋಷಿಸಿದೆ. ಜೆಡಿಎಸ್ ಅಭ್ಯರ್ಥಿಯ ಹೆಸರು ಇನ್ನೂ ಸಸ್ಪೆನ್ಸ್ ಆಗಿದೆ.
ಕೆಪಿಸಿಸಿಗೆ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ನಿಯೋಜಿತರಾದ ಮೇಲೆ ನಡೆಯುತ್ತಿರುವ ಎರಡನೇ ಶಕ್ತಿ ಪ್ರದರ್ಶನದ ಚುನಾವಣೆ ಇದಾಗಿದೆ. ಒಂದು, ರಾಜ್ಯಸಭೆಗೆ, ಇನ್ನೊಂದು ವಿಧಾನ ಪರಿಷತ್ತಿಗೆ.
ವಿಧಾನ ಪರಿಷತ್ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿಗಳು ಘೋಷಣೆ
ರಾಜ್ಯಸಭೆಗೆ ಅಭ್ಯರ್ಥಿಯಾರು ಎಂದು ಕೆಪಿಸಿಸಿ ಶಿಫಾರಸು ಮಾಡುವ ಮೊದಲೇ, ಸೋನಿಯಾ ಗಾಂಧಿ, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಭ್ಯರ್ಥಿಯೆಂದು ಘೋಷಿಸಿಯಾಗಿತ್ತು. ಒಂದು ಲೆಕ್ಕದಲ್ಲಿ, ಕರ್ನಾಟಕ ಬಿಜೆಪಿ ಈ ವಿಚಾರದಲ್ಲಿ ಮುಖಭಂಗ ಅನುಭವಿಸಿದ ಹಾಗೇ, ಕೆಪಿಸಿಸಿ ಅನುಭವಿಸಲಿಲ್ಲ.
ಖರ್ಗೆಯವರನ್ನು ರಾಜ್ಯಸಭೆಗೆ ಕಳುಹಿಸುವ ವಿಚಾರದಲ್ಲಿ ಕರ್ನಾಟಕ ಕಾಂಗ್ರೆಸ್ಸಿನ ಎರಡು ಶಕ್ತಿಕೇಂದ್ರ ಎಂದು ಹೇಳಲಾಗುವ ಇಬ್ಬರ ನಡುವೆ ಅಷ್ಟೇನೂ ಭಿನ್ನಾಭಿಪ್ರಾಯವಿರಲಿಲ್ಲ. ಆದರೆ, ಪರಿಷತ್ ಚುನಾವಣೆಯಲ್ಲಿ ಹಾಗಲ್ಲ. ಇಲ್ಲಿ, ಮೇಲುಗೈ ಸಾಧಿಸಿದ್ದು ಯಾರು?
ಪರಿಷತ್ ಟಿಕೆಟ್ ಘೋಷಣೆ; ಸಿದ್ದರಾಮಯ್ಯ ಮನೆಗೆ ನಾಯಕರ ದಂಡು!
ಕಾಂಗ್ರೆಸ್ ಹೈಕಮಾಂಡ್
ಕಾಂಗ್ರೆಸ್ ನಿರಾಯಾಸವಾಗಿ ಗೆಲ್ಲಬಹುದಾದ ಎರಡು ವಿಧಾನ ಪರಿಷತ್ ಚುನಾವಣೆಗೆ ಆಕಾಂಕ್ಷಿಗಳು ನೂರೆಂಟು ಇದ್ದರು. ಕಾಂಗ್ರೆಸ್ ಹಿರಿಯ ಮುಖಂಡರೇ ಇದನ್ನು ಒಪ್ಪಿಕೊಂಡಿದ್ದರು, ಮತ್ತು ಟಿಕೆಟ್ ಬಯಸುವುದೂ ತಪ್ಪಲ್ಲ ಎನ್ನುವುದು ಅವರೆಲ್ಲರ ನಿಲುವಾಗಿತ್ತು. ಆದರೆ, ಕಾಂಗ್ರೆಸ್ ಹೈಕಮಾಂಡ್ ಯಾರ ಮಾತಿಗೆ ಮನ್ನಣೆ ನೀಡಿತು ಎನ್ನುವುದಿಲ್ಲಿ ವಿಚಾರ.
ಅಭ್ಯರ್ಥಿಗಳಲ್ಲಿ ಒಬ್ಬರಾದ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್
ಅಭ್ಯರ್ಥಿಗಳಲ್ಲಿ ಒಬ್ಬರಾದ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ನೇರವಾಗಿ ಹೈಕಮಾಂಡ್ ಆಯ್ಕೆ ಎನ್ನುವುದು ಕಾಂಗ್ರೆಸ್ ವಲಯದಲ್ಲಿ ಗೊತ್ತಿರುವ ವಿಚಾರ. ಹರಿಪ್ರಸಾದ್ ಅಭ್ಯರ್ಥಿಯಾಗುತ್ತಾರೆ ಎನ್ನುವ ಸುಳಿವು ರಾಜ್ಯ ಕಾಂಗ್ರೆಸ್ ಮುಖಂಡರಿಗೆ ಅರಿವು ಇರದೇ ಇರಲಾರದು. ಕಳೆದ ಲೋಕಸಭಾ ಚುನಾವಣೆಯಲ್ಲಿ ಹರಿಪ್ರಸಾದ್, ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ದ ಸೋಲು ಅನುಭವಿಸಿದ್ದರು.
ಸಿದ್ದರಾಮಯ್ಯ, ಡಿಕೆಶಿ ಶಿಫಾರಸು ಬೇರೆ ಬೇರೆ
ಆದರೆ, ಇನ್ನೊಂದು ಸ್ಥಾನಕ್ಕೆ ಸಿದ್ದರಾಮಯ್ಯನವರ ಮತ್ತು ಡಿ.ಕೆ.ಶಿವಕುಮಾರ್ ಅವರ ಶಿಫಾರಸು ಬೇರೆ ಬೇರೆ ಇತ್ತು ಎಂದು ಹೇಳಲಾಗುತ್ತಿದೆ. ಹೈಕಮಾಂಡ್ ಯಾರನ್ನು ಅಭ್ಯರ್ಥಿಯನ್ನಾಗಿ ಘೋಷಿಸುತ್ತೋ ಅದಕ್ಕೆ ನಮ್ಮ ತಕರಾರು ಇಲ್ಲ ಎಂದು ಡಿಕೆಶಿ ಹೇಳಿದ್ದರೂ, ಅವರ ರೆಕಮೆಂಡೇಶನ್ ಬೇರೆ ಇತ್ತು ಎನ್ನುವ ಸುದ್ದಿಯಿದೆ.
ನಸೀರ್ ಅಹಮದ್ ಹೆಚ್ಚಾಗಿ ಗುರುತಿಸಿಕೊಂಡಿದ್ದು ಸಿದ್ದರಾಮಯ್ಯನವರ ಕಡೆ
ಘೋಷಣೆಯಾದ ಕಾಂಗ್ರೆಸ್ಸಿನ ಇನ್ನೊಂದು ಅಭ್ಯರ್ಥಿ ನಸೀರ್ ಅಹಮದ್. ಅವರಿಗೆ ಟಿಕೆಟ್ ನೀಡಬಾರದೆಂದು, ಕಾಂಗ್ರೆಸ್ಸಿನ ಹಿರಿಯ ಮುಖಂಡ ಕೆ.ಎಚ್.ಮುನಿಯಪ್ಪ ಬಹಿರಂಗವಾಗಿಯೇ ಹೇಳಿಕೆಯನ್ನು ನೀಡಿದ್ದರು. ಯಾಕೆಂದರೆ, ನಸೀರ್ ಅಹಮದ್ ತಮ್ಮನ್ನು ಹೆಚ್ಚಾಗಿ ಗುರುತಿಸಿಕೊಂಡಿದ್ದು ಸಿದ್ದರಾಮಯ್ಯನವರ ಕಡೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಪರಿಷತ್ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತೆ ತಮ್ಮ ಟವೆಲ್ ಕೊಡವಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.