'ಜೆಡಿಎಸ್ ಅನ್ನು ಕಾಂಗ್ರೆಸ್ ನವರು ಮೂರನೇ ದರ್ಜೆ ನಾಗರಿಕರಂತೆ ನೋಡಬಾರದು'
ಕಾಂಗ್ರೆಸ್ ನವರು ಜೆಡಿಎಸ್ ಅನ್ನು ಮೂರನೇ ದರ್ಜೆ ನಾಗರಿಕರನ್ನಾಗಿ ನೋಡಬಾರದು. ಬಿಜೆಪಿ ವಿರುದ್ಧ ಒಟ್ಟಾಗಿ ಹೋರಾಡಲು ಮೈತ್ರಿ ಪಕ್ಷಗಳು 'ಕೊಟ್ಟು ಪಡೆಯುವ ನೀತಿ' ಅನುಸರಿಸಬೇಕು ಎಂದು ಕರ್ನಾಟಕ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಅವರು ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಆಡಳಿತವಿರೋಧಿ ಅಲೆಯ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರ ಚರಿಷ್ಮಾ ಕಳೆಗುಂದುತ್ತಿದೆ. ಇನ್ನು ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ಬಿಜೆಪಿ ವಿರೋಧಿ ಒಕ್ಕೂಟದಲ್ಲಿ ಒಮ್ಮತ ಇಲ್ಲ. ಕರ್ನಾಟಕ ರಾಜ್ಯ ಸರಕಾರದ ವಿಚಾರಕ್ಕೆ ಬಂದರೆ ಎಲ್ಲ ಸಮಸ್ಯೆಗಳಿಂದ ಹೊರಬಂದು ಸರಾಗವಾಗಿ ಆಡಳಿತ ನಡೆಸುಕೊಂಡು ಹೋಗಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಸ್ಲಿಮರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ: ಕುಮಾರಸ್ವಾಮಿ
ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ವಿಚಾರದಲ್ಲಿ ಮಾತುಕತೆ ವಿಫಲವಾದರೆ ಏನು ಮಾಡ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಲೋಕಸಭೆ ಚುನಾವಣೆಗೆ ನಾವು (ಜೆಡಿಎಸ್-ಕಾಂಗ್ರೆಸ್) ಒಟ್ಟಿಗೆ ಹೋಗಬೇಕು. ಇದು ನಮ್ಮ ಅಭಿಪ್ರಾಯ. ಅಧಿಕಾರದಿಂದ ಬಿಜೆಪಿಯನ್ನು ದೂರ ಇಡಬೇಕು ಹಾಗೂ ದೇಶದಲ್ಲಿ ವಾತಾವರಣ ಸುಧಾರಣೆ ಆಗಬೇಕು ಎಂಬ ಕಾರಣಕ್ಕೆ ಕರ್ನಾಟಕದಲ್ಲಿ ಮೈತ್ರಿ ಸರಕಾರ ರಚನೆ ಮಾಡಿದ್ದೇವೆ ಎಂದಿದ್ದಾರೆ.
ಕಾಂಗ್ರೆಸ್ ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು
ದಕ್ಷಿಣದ ರಾಜ್ಯದಲ್ಲಿ ಮೈತ್ರಿ ಸರಕಾರ ರಚನೆ ಆದ ಮೇಲೆ ದೇಶದ ರಾಜಕೀಯ ರೂಪುರೇಖೆಯಲ್ಲೇ ಬದಲಾವಣೆ ಆಗಿದೆ. ಬಿಜೆಪಿ ಕುಸಿಯುತ್ತಿದೆ ಹಾಗೂ ಕೆಲವು ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯಿಸಿದ್ದು, ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ನನ್ನ ಪ್ರಕಾರ, ಕಾಂಗ್ರೆಸ್ ತನ್ನ ದಾರಿ ಬದಲಿಸಿಕೊಂಡರೆ ಹಾಗೂ ಅತಿಯಾದ ವಿಶ್ವಾಸದಿಂದ ಮುಂದುವರಿದರೆ ಏನಾಗುತ್ತದೆ ಎಂಬುದು ಅವರಿಗೆ ಈ ಹಿಂದಿನ ಅನುಭವಗಳಿಂದ ತಿಳಿದಿದೆ. ಅವರು ಅವುಗಳನ್ನು ಮರೆಯುವುದಿಲ್ಲ ಅಂದುಕೊಂಡಿದ್ದೀನಿ. ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ನಮ್ಮನ್ನು ಮೂರನೇ ದರ್ಜೆ ನಾಗರಿಕರ ರೀತಿ ನೋಡಬಾರದು. ಕೊಟ್ಟು-ತೆಗೆದುಕೊಳ್ಳುವ ನೀತಿ ಇರಬೇಕು ಎಂದಿದ್ದಾರೆ.
ಮಾತುಕತೆ ನಡೆಸಿ ಅಂತಿಮ ತೀರ್ಮಾನಕ್ಕೆ
ಅಂದಹಾಗೆ ಕರ್ನಾಟಕದ ಇಪ್ಪತ್ತೆಂಟು ಕ್ಷೇತ್ರಗಳಲ್ಲಿ ಹನ್ನೆರಡನ್ನು ಬಿಟ್ಟುಕೊಡುವಂತೆ ಜೆಡಿಎಸ್ ಕೇಳಿದೆ. ಆದರೆ ಅದಕ್ಕೆ ಕಾಂಗ್ರೆಸ್ ಇನ್ನೂ ಒಪ್ಪಿಲ್ಲ್. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟದಲ್ಲಿ ಬಿಜೆಪಿ ಹದಿನೇಳು, ಕಾಂಗ್ರೆಸ್ ಒಂಬತ್ತು ಹಾಗೂ ಜೆಡಿಎಸ್ ಎರಡು ಸ್ಥಾನಗಳಲ್ಲಿ ಜಯ ಗಳಿಸಿದ್ದವು. ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳಿಗೂ ಸೀಟು ಹಂಚಿಕೆ ಎಂಬುದು ಅಗ್ನಿಪರೀಕ್ಷೆ ಆಗಿದೆ. ಜೆಡಿಎಸ್ ಪ್ರಬಲವಾಗಿರುವ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಸಂಖ್ಯೆ ಹೆಚ್ಚಿದ್ದು, ಆ ಭಾಗದಲ್ಲಿ ಕಾಂಗ್ರೆಸ್ ನ ಹಾಲಿ ಸಂಸದರು ಇದ್ದಾರೆ. ಈ ತಿಂಗಳ ಕೊನೆಗೆ ಎರಡೂ ಪಕ್ಷಗಳ ಮುಖಂಡರು ಮಾತು ಕತೆ ನಡೆಸಿ, ಅಂತಿಮ ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ.
ಸಂಪುಟ, ನಿಗಮ-ಮಂಡಳಿ ನೇಮಕಾತಿಗೆ ಪ್ರಮಾಣ ಹೀಗಿದೆ
ಈ ಮೈತ್ರಿ ಸರಕಾರ ರಚನೆ ಆದ ಮೇಲೆ ಮೂರನೇ ಎರಡು ಭಾಗದಷ್ಟು ಸ್ಥಾನ ಕಾಂಗ್ರೆಸ್ ಗೆ ಹಾಗೂ ಮೂರನೇ ಒಂದು ಭಾಗದಷ್ಟು ಜೆಡಿಎಸ್ ಗೆ ಎಂಬ ನಿಯಮ ಅನುಸರಿಸಿಕೊಂಡು ಬಂದಿದ್ದೇವೆ. ಅದು ಸಚಿವ ಸಂಪುಟ ಇರಬಹುದು ಅಥವಾ ನಿಗಮ ಮಂಡಳಿಗಳ ನೇಮಕಾತಿ ಇರಬಹುದು. ಆದ್ದರಿಂದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಮೂರನೇ ಎರಡು ಭಾಗ ಹಾಗೂ ಜೆಡಿಎಸ್ ಗೆ ಮೂರನೇ ಒಂದು ಭಾಗದಷ್ಟು ಸ್ಥಾನ ಹಂಚಿಕೊಳ್ಳಬಹುದು ಎಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಭಾವಿಸಿದ್ದಾರೆ ಎಂದ ಆದರೆ ಹನ್ನೆರಡು ಸ್ಥಾನಗಳಿಗೆ ಜೆಡಿಎಸ್ ಬೇಡಿಕೆ ಇಟ್ಟಿರುವುದು ನಿಜವೇ ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸದೆ, ಈಗಾಗಲೇ ಅನುಸರಿಸುವುದಾಗಿ ಹೇಳಿದ್ದಾರೆ.
ಸುರಕ್ಷಿತವಾಗಿ ಮುಂದುವರಿಯಲಿದೆ ಸರಕಾರ
ಕೆಲವರ ಪ್ರಕಾರ ಈ ಮೈತ್ರಿ ಸರಕಾರವು ಸಂಸತ್ ಚುನಾವಣೆ ತನಕ ಮಾತ್ರ. ಆದರೆ ಸಂಸತ್ ಚುನಾವಣೆ ನಂತರ ದೆಹಲಿಯಲ್ಲಿ ರಚನೆಯಾಗುವ ಸರಕಾರ ಹಾಗೂ ಸೃಷ್ಟಿಯಾಗುವ ವಾತಾವರಣದಿಂದ ಕರ್ನಾಟಕದಲ್ಲಿ ಸರಕಾರ ಸುರಕ್ಷಿತವಾಗಿ ಮುಂದುವರಿಯಲಿದೆ. ಮೈತ್ರಿ ಪಕ್ಷದ ಶಾಸಕರನ್ನು ಸೆಳೆಯಲು ಯತ್ನಿಸುವ ಮೂಲಕ ಬಿಜೆಪಿಯು ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಬಿಜೆಪಿಯವರು ಯಾರನ್ನು ಸಂಪರ್ಕಿಸುತ್ತಿದ್ದಾರೆ, ಶಾಸಕರಿಗೆ ಯಾವ ಆಮಿಷ ಒಡ್ಡುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ನಾನು ಎಲ್ಲ ಸುದ್ದಿಯನ್ನು ಕಲೆ ಹಾಕಿದ್ದೇನೆ ಹಾಗೂ ಬಿಜೆಪಿ ಕಡೆಯಿಂದ ಸರಕಾರಕ್ಕೆ ಯಾವುದೇ ತೊಂದರೆ ಆಗದಂತೆ ಏನು ಮಾಡಬೇಕೋ ಅದನ್ನು ನನ್ನ ಕಡೆಯಿಂದ ಮಾಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ತಡೆ ಬೀಳಲಿದೆ
ರಾಷ್ಟ್ರ ರಾಜಕಾರಣದ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ, ಬಿಎಸ್ ಪಿಯ ಮಾಯಾವತಿ ಹಾಗೂ ಎಸ್.ಪಿ.ಯ ಅಖಿಲೇಶ್ ಯಾದವ್ ಉತ್ತರಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡಿರುವುದು ಬಹಳ ಗಟ್ಟಿಯಾದದ್ದು. ಇದರಿಂದ ಆ ರಾಜ್ಯದಲ್ಲಿ ಬಿಜೆಪಿಯ ವೇಗಕ್ಕೆ ತಡೆ ಬೀಳುತ್ತದೆ. ಇನ್ನು ಬಿಹಾರದಲ್ಲಿ ನಿತೀಶ್ ಕುಮಾರ್ ವರ್ಚಸ್ಸು ಕ್ಷೀಣಿಸುತ್ತಿದೆ. ಲಾಲೂ ಪ್ರಸಾದ್ ರ ರಾಷ್ಟ್ರೀಯ ಜನತಾ ದಳಕ್ಕೆ ಜನರ ಅನುಕಂಪ ಇದೆ. ರಾಜಸ್ತಾನ ಹಾಗೂ ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯಲ್ಲೇ ಬಿಜೆಪಿ ಒಳ್ಳೆ ಪ್ರದರ್ಶನ ತೋರಿಸಿಲ್ಲ. ಇನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಪರ್ಯಾಯವಾಗಿ ರೂಪುಗೊಳ್ಳುತ್ತಿರುವ ಮಹಾಘಟ್ ಬಂಧನ್ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಮೀಸಲಾತಿ ಎಂಬುದು ಚುನಾವಣೆ ಗಿಮಿಕ್
ಬಿಜೆಪಿಗೆ ವಿರುದ್ಧವಾಗಿ ತಲೆ ಎತ್ತಲಿರುವ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಬಿಂಬಿಸುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಚುನಾವಣೆ ಫಲಿತಾಂಶ ಬಂದ ನಂತರ ಎಲ್ಲರೂ ವ್ಯತ್ಯಾಸಗಳನ್ನು ಬದಿಗಿಟ್ಟು, ಒಬ್ಬರ ನಾಯಕತ್ವಕ್ಕೆ ಒಪ್ಪಬಹುದು ಎಂಬ ವಿಶ್ವಾಸ ನನಗಿದೆ ಎಂದಿರುವ ಕುಮಾರಸ್ವಾಮಿ, ಈಚೆಗೆ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗವರಿಗೆ ಕೇಂದ್ರ ಸರಕಾರದಿಂದ ಘೋಷಣೆ ಮಾಡಿರುವ ಹತ್ತು ಪರ್ಸೆಂಟ್ ಮೀಸಲಾತಿಯನ್ನು, ಲೋಕಸಭೆ ಚುನಾವಣೆಯನ್ನು ಎದುರಿಗೆ ಇಟ್ಟುಕೊಂಡು ಹತಾಶ ಮನಸ್ಥಿತಿಯಲ್ಲಿ ತೆಗೆದುಕೊಂಡು ನಡೆ ಇದು ಎಂದಿದ್ದಾರೆ.