'ಅನಂತ್ ಕುಮಾರ್ ಹೆಗಡೆಗೆ ಹುಚ್ಚು ಹಿಡಿದಿದ್ದರೆ ಚಿಕಿತ್ಸೆ ಕೊಡಿಸಿ'
ಬೆಂಗಳೂರು, ಫೆಬ್ರವರಿ 3: ಮನಬಂದಂತೆ ಹೇಳಿಕೆ ನೀಡುತ್ತಿರುವ ಸಂಸದ ಅನಂತಕುಮಾರ್ ಹೆಗಡೆ ಅವರಿಗೆ ಹುಚ್ಚು ಹಿಡಿದಿದ್ದರೆ ಮನೋವೈದ್ಯರಿಂದ ಚಿಕಿತ್ಸೆ ಕೊಡಿಸಿ ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಆಗ್ರಹಿಸಿದ್ದಾರೆ.
ಅನಂತಕುಮಾರ್ ಹೆಗಡೆ ಅವರ ಮಾತುಗಳನ್ನು ಗಮನಿಸಿದರೆ ಅವರ ಮಾನಸಿಕ ಆರೋಗ್ಯ ಸರಿ ಇದ್ದಂತೆ ಕಾಣಿಸುವುದಿಲ್ಲ.ಅದು ಸತ್ಯವೇ ಆಗಿದ್ದರೆ, ಸಂವಿಧಾನದ ಕಾನೂನಿನ ಪ್ರಕಾರ ಅವರು ಸಂಸದರಾಗಿ ಮುಂದುವರಿಯುವಂತಿಲ್ಲ ಎಂಬುದಾಗಿ ಬ್ರಿಜೇಶ್ ಕಾಳಪ್ಪ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬರೆದಿರುವ ಪತ್ರದಲ್ಲಿ ಖಾರವಾಗಿ ಹೇಳಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಗಾಂಧೀಜಿ ಅವರ ನಿರಶನ ಮತ್ತು ಸತ್ಯಾಗ್ರಹ ಕಾರಣ ಎಂದು ಬಿಂಬಿಸಲಾಗಿದೆ. ಆದರೆ ಇದು ನಿಜವಾದ ಸ್ವಾತಂತ್ರ್ಯ ಹೋರಾಟವೇ ಅಲ್ಲ. ಬ್ರಿಟಿಷರ ಅನುಮತಿಯೊಂದಿಗೆ ಮಾಡಿರುವ ಹೋರಾಟದ ನಾಟಕ ಎಂದು ಅನಂತ್ ಕುಮಾರ್ ಹೆಗಡೆ ಟೀಕಿಸಿದ್ದರು.
ಬ್ರಿಟಿಷರ ಅನುಮತಿಯೊಂದಿಗೆ ಹೋರಾಟ
'ಭಾರತದ ಸಂಪೂರ್ಣ ಸ್ವಾತಂತ್ರ್ಯ ಹೋರಾಟವನ್ನು ಬ್ರಿಟಿಷರ ಸಹಮತ ಮತ್ತು ಅವರ ಬೆಂಬಲದೊಂದಿಗೆ ಮಾಡಲಾಗಿದೆ ಎಂದು ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ. ನಾಯಕನೆಂದು ಹೇಳುವ ಯಾವೊಬ್ಬ ಹೋರಾಟಗಾರನೂ ಪೊಲೀಸರಿಂದ ಒಮ್ಮೆಯೂ ಒಂದು ಏಟು ಕೂಡ ತಿಂದಿಲ್ಲ. ಸ್ವಾತಂತ್ರ್ಯ ಸಂಗ್ರಾಮವೇ ದೊಡ್ಡ ನಾಟಕ. ಬ್ರಿಟಿಷರ ಅನುಮತಿಯೊಂದಿಗೆ ನಡೆದಿರುವ ನಾಟಕವಿದು. ಇದು ನಿಜವಾದ ಹೋರಾಟವಾಗಿರಲಿಲ್ಲ ಮತ್ತು ಅದು ಹೊಂದಾಣಿಕೆಯ ಸ್ವಾತಂತ್ರ್ಯ ಹೋರಾಟ ಎಂಬ ಹೇಳಿಕೆ ನೀಡಿದ್ದಾರೆ ಎಂದು ಬ್ರಿಜೇಶ್ ಕಾಳಪ್ಪ ಪತ್ರದಲ್ಲಿ ಆರೋಪಿಸಿದ್ದಾರೆ.
ಸತ್ಯಾಗ್ರಹ ದೊಡ್ಡ ನಾಟಕ
'ಮಹಾತ್ಮ ಗಾಂಧಿ ಅವರ ಸತ್ಯಾಗ್ರಹ ಮತ್ತು ಉಪವಾಸ ದೊಡ್ಡ ನಾಟಕ. ಭಾರತಕ್ಕೆ ಆಮರಣಾಂತ ಉಪವಾಸ ಅಥವಾ ಸತ್ಯಾಗ್ರಹದಿಂದ ಸ್ವಾತಂತ್ರ್ಯ ಬಂದಿಲ್ಲ. ಬ್ರಿಟಿಷರು ಹತಾಶೆ ತಾಳಲಾರದೇ ಸ್ವಾತಂತ್ರ್ಯ ನೀಡಿದರು. ಯಾರಾದರೂ ಗಾಂಧೀಜಿ ಅವರನ್ನು ಪಿತಾಮಹ ಎಂದರೆ ತಮ್ಮ ರಕ್ತ ಕುದಿಯುತ್ತದೆ ಎಂಬುದಾಗಿ ಹೆಗಡೆ ಭಾಷಣ ಮಾಡಿದ್ದಾರೆ' ಎಂದು ವಿವರಿಸಿದ್ದಾರೆ.
2019ರ ಮೇ 17ರಂದು ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿ, ಹಲವು ದಶಕಗಳ ಬಳಿಕ ಇಂದಿನ ಪೀಳಿಗೆಯವರು ಬದಲಾದ ಗ್ರಹಿಕೆಯ ಪರಿಸರದಲ್ಲಿ ಚರ್ಚಿಸುತ್ತಾ, ಆಲಿಸಬೇಕಾದ ಸಂಗತಿ ಕುರಿತು ಉತ್ತಮ ಸಂವಾದ ಮಾಡುತ್ತಿರುವುದು ಖುಷಿ ನೀಡಿದೆ. ಈ ಚರ್ಚೆಯೊಂದಿಗೆ ಕೊನೆಗೂ ನಾಥೂರಾಮ್ ಗೋಡ್ಸೆ ಸಂತಸ ಪಡುತ್ತಿರಬಹುದು ಎಂದು ಹೇಳಿದ್ದರು ಎಂದು ಬ್ರಿಜೇಶ್ ಆರೋಪಿಸಿದ್ದಾರೆ.
ಗೋಡ್ಸೆಗೆ ಸಂತಸ
2019ರ ಮೇ 17ರಂದು ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿ, ಹಲವು ದಶಕಗಳ ಬಳಿಕ ಇಂದಿನ ಪೀಳಿಗೆಯವರು ಬದಲಾದ ಗ್ರಹಿಕೆಯ ಪರಿಸರದಲ್ಲಿ ಚರ್ಚಿಸುತ್ತಾ, ಆಲಿಸಬೇಕಾದ ಸಂಗತಿ ಕುರಿತು ಉತ್ತಮ ಸಂವಾದ ಮಾಡುತ್ತಿರುವುದು ಖುಷಿ ನೀಡಿದೆ. ಈ ಚರ್ಚೆಯೊಂದಿಗೆ ಕೊನೆಗೂ ನಾಥೂರಾಮ್ ಗೋಡ್ಸೆ ಸಂತಸ ಪಡುತ್ತಿರಬಹುದು ಎಂದು ಹೇಳಿದ್ದರು ಎಂದು ಬ್ರಿಜೇಶ್ ಆರೋಪಿಸಿದ್ದಾರೆ.
ಸಂಸದರಾಗಿ ಇರುವಂತಿಲ್ಲ
ಆದರೆ ತಮ್ಮ ಟ್ವೀಟ್ಅನ್ನು ಅಳಿಸಿಹಾಕಿದ್ದ ಅನಂತಕುಮಾರ್ ಹೆಗಡೆ, 'ವಾರದಲ್ಲಿ ಎರಡು ಬಾರಿ ತಮ್ಮ ಟ್ವಿಟ್ಟರ್ಅನ್ನು ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿದ್ದರು. ನನ್ನ ಟೈಮ್ಲೈನ್ನಲ್ಲಿ ಪ್ರಕಟವಾಗಿದ್ದ ಟ್ವೀಟ್ಗಳನ್ನು ಡಿಲೀಟ್ ಮಾಡಲಾಗಿದೆ. ಇದಕ್ಕಾಗಿ ವಿಷಾದಿಸುತ್ತೇನೆ' ಎಂದು ತಿಳಿಸಿದ್ದರು. ಸಂವಿಧಾನದ 102ನೇ ವಿಧಿ ಪ್ರಕಾರ ಮಾನಸಿಕ ಅಸ್ವಸ್ಥತೆಯುಳ್ಳವರು ಲೋಕಸಭೆಯ ಸದಸ್ಯರಾಗಿ ಮುಂದುವರಿಯುವಂತಿಲ್ಲ ಎಂದು ಹೇಳಿದ್ದಾರೆ.
ಸೂಕ್ತ ತಪಾಸಣೆ ನಡೆಸಿ ಚಿಕಿತ್ಸೆ ನೀಡಿ
'ಈ ಪರಿಸ್ಥಿತಿಯಲ್ಲಿ ಅನಂತಕುಮಾರ್ ಹೆಗಡೆ ಅವರ ಮಾನಸಿಕ ಸ್ವಾಸ್ಥ್ಯದ ಬಗ್ಗೆ ವೈದ್ಯಕೀಯ ತಪಾಸಣೆ ನಡೆಸಿ. ಅವರು ಮಾನಸಿಕವಾಗಿ ಆರೋಗ್ಯವಾಗಿದ್ದಾರೆ ಎನ್ನುವುದು ಕಂಡುಬಂದರೆ ಹುಚ್ಚುತನದ ಸೋಗುಹಾಕಿದ್ದಕ್ಕೆ ಸಂವಿಧಾನದ ಚೌಕಟ್ಟಿನಲ್ಲಿ ಅವರಿಗೆ ಶಿಕ್ಷೆ ವಿಧಿಸಿ. ಇಲ್ಲದಿದ್ದರೆ ಯಾರಾದರೂ ಉತ್ತಮ ಮನೋವೈದ್ಯರ ಬಳಿ ಚಿಕಿತ್ಸೆ ನೀಡಿ. ಇದರಿಂದ ಅವರ ಕಾರವಾರ ಕ್ಷೇತ್ರದ ಸೀಟು ಚುನಾವಣೆಗೆ ಖಾಲಿಯಾಗಿದೆ ಎಂದು ಘೋಷಿಸಬೇಕಾಗುತ್ತದೆ' ಎಂದು ಹೇಳಿದ್ದಾರೆ.