ಮಾಜಿ ಸಿಎಂ ಧರಂ ಸಿಂಗ್ ಅವರ ನಿಧನಕ್ಕೆ ಗಣ್ಯರ ಕಂಬನಿ
ಬೆಂಗಳೂರು, ಜುಲೈ 27 : ಹೃದಯ ಸ್ತಂಭನದಿಂದ ಇಂದು(ಜುಲೈ 27) ಇಹಲೋಕ ತ್ಯಜಿಸಿದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎನ್. ಧರಂ ಸಿಂಗ್ (80) ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಶಾಯರಿ, ತಾಳ್ಮೆಯ ನೆನಪು ತರುವ ಅಜಾತಶತ್ರು ಧರಂ ಸಿಂಗ್
ಉಸಿರಾಟದ ತೊಂದರೆ ಸಂಬಂಧಿಸಿದಂತೆ ಹಲವು ದಿನಗಳ ಹಿಂದೆ ಧರಂ ಸಿಂಗ್ ಅವರು ಬೆಂಗಳೂರಿನ ಎಂ. ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ, ಇಂದು ಅವರು ಕೊನೆಯುಸಿರೆಳದರು.
ಮಾಜಿ ಮುಖ್ಯಮಂತ್ರಿ ಅಜಾತಶತ್ರು ಧರಂ ಸಿಂಗ್ ವ್ಯಕ್ತಿಚಿತ್ರ
ಇವರ ಅಂತಿಮ ಸಂಸ್ಕಾರ ನಾಳೆ (28) ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ನಡೆಯಲಿದೆ ಎಂದು ಪುತ್ರ ಅಜಯ್ ಸಿಂಗ್ ತಿಳಿಸಿದ್ದಾರೆ.
ಟ್ವೀಟ್ ನಲ್ಲಿ ಸದಾನಂದಗೌಡ ಸಂತಾಪ
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಅಜಾತಶತ್ರು ಶ್ರೀ ಧರಂಸಿಂಗ್ ರವರು ದೈವಾಧೀನರಾದ ಸುದ್ದಿ ಕೇಳಿ ದುಃಖವಾಯಿತು ಅವರ ದಿವ್ಯಾತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಕೇಂದ್ರ ಸಚಿವ ಸದಾನಂದಗೌಡ ಅವರು ಟ್ವೀಟ್ ಮಾಡಿದ್ದಾರೆ.
ಸಂತಾಪ ಸೂಚಿಸಿದ ಯಡಿಯೂರಪ್ಪ
ಸರಳ, ಸೌಮ್ಯ ಸ್ವಭಾವರಾಗಿದ್ದ ಶ್ರೀ ಧರಂಸಿಂಗ್ ಅವರು ಮರೆಯಲಾಗದ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಈ ಸಂಕಟಮಯ ಸನ್ನಿವೇಶದಲ್ಲಿ ಅವರ ಮಕ್ಕಳು, ಬಂಧುಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.
ಸ್ನೇಹಿತನನ್ನು ಕಳೆದುಕೊಂಡು ಕಣ್ಣೀರಿಟ್ಟ ಖರ್ಗೆ
ಸತತ ಐವತ್ತು ವರ್ಷಗಳ ಕಾಲ ಒಂದೇ ಪಕ್ಷದಲ್ಲಿ ಒಡಹುಟ್ಟಿದ ಅಣ್ಣ-ತಮ್ಮಂದಿರಂತೆ ಇದ್ದು ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೇಂದ್ರ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜನ್ ಖರ್ಗೆ ಅವರು ಹೇಳಿ ಕಣ್ಣೀರಿಟ್ಟರು.
ಕಂಬನಿ ಮಿಡಿದ ಕುಮಾರಸ್ವಾಮಿ
ಇವತ್ತಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದ ಧರಂಸಿಗ್ ಅವರನ್ನು ಕಳೆದುಕೊಂಡಿರುವುದು ನೋವು ತಂದಿದೆ. ಅವರ ನಿಧನ ಕಾಂಗ್ರೆಸ್ ಅಷ್ಟೇ ಅಲ್ಲ ಕರ್ನಾಟಕ ರಾಜಕರಣ ಒಬ್ಬ ಅಜಾತ ಶತ್ರುವನ್ನು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಂಬನಿ ಮಿಡಿದರು.
ಪ್ರಧಾನಿ ನರೇಂದ್ರ ಮೋದಿ
ಧರಂ ಸಿಂಗ್ ಅವರ ನಿಧನದ ವಾರ್ತೆ ಕೇಳಿ ನಿಜಕ್ಕೂ ಆಘಾತವಾಯಿತು. ಅವರ ಸಾವು ನೋವು ತಂದಿದ್ದು, ಅವರ ಕುಟುಂಬಕ್ಕೆ ನೋವು ತಡೆಯುವ ಶಕ್ತಿಯನ್ನು ದೇವರು ಕರುಣಿಸಲಿ. ಅವರ ಕುಟುಂಬದೊಂದಿಗೆ ನಾವಿದ್ದು, ದುಃಖದಲ್ಲಿ ಭಾಗಿಯಾಗುತ್ತೇವೆ. ಧರಂ ಸಿಂಗ್ ಅವರು ರಾಜಕೀಯದಲ್ಲಿ ಸಾಕಷ್ಟು ಅನುಭವ ಹೊಂದಿದವರಾಗಿದ್ದರು. ರಾಷ್ಟ್ರ ರಾಜಕಾರಣದಲ್ಲೂ ಸಾಕಷ್ಟು ಅನುಭವ ಹೊಂದಿದ್ದರು. ಸಮಾಜಕ್ಕೆ ಅವರು ನೀಡಿದ್ದ ಕೊಡುಗೆಗಳು ಶಾಶ್ವತವಾಗಿ ನೆನಪಿನಲ್ಲಿರುವತ್ತವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ..
ಐಷಾರಾಮಿ ಜೀವನ ನಡೆಸದ ಸರಳ ವ್ಯಕ್ತಿ ಧರಂ ಸಿಂಗ್
ಧರಂ ಸಿಂಗ್ ಅವರು ನನ್ನ ತಂದೆ ಇದ್ದಹಾಗೆ. ಅವರು ರಜಪೂತ ಸಮಾಜದ ಹಿರಿಯರಾಗಿದ್ದರು. ಅವರ ನಿಧನದಿಂದ ಬಹಳ ದುಃಖ ಆಗ್ತಿದೆ. ಬೀದರ್-ಗುಲ್ಬರ್ಗ -ರಾಯಚೂರು ಜಿಲ್ಲೆಗಳಲ್ಲಿ ತುಂಬ ಒಳ್ಳೆ ಕೆಲಸ ಮಾಡಿದ್ದರು. ನನ್ನ ಮಾವ ಅವರ ತಮ್ಮ ಧರಂ ಸಿಂಗ್ ಅವರು. ನನ್ನ ಮದುವೆ ಮಾಡಿಸಿದವರು ಅವರೇ. ಕೆಲ ಕಾಲ ಅವರು ನಮ್ಮ ಮಾವ ಅವರ ಮನೇಲಿ ಇದ್ದರು. ತುಂಬ ಕಷ್ಟಪಟ್ಟ ಮುಂದೆ ಬಂದಿದ್ದರು. ಧರಂ ಸಿಂಗ್ ಅವರು ಎಂದಿಗೂ ಐಷಾರಾಮಿ ಜೀವನ ನಡೆಸಿದವರಲ್ಲ. ಉತ್ತರ ಕರ್ನಾಟಕದಲ್ಲಿ ಅವರಿಗೆ ಲಕ್ಷಾಂತರ ಮಂದಿ ಅಭಿಮಾನಿಗಳಿದ್ದಾರೆ. -ಸಂಗ್ರಾಮ್ ಸಿಂಗ್, ನಿವೃತ್ತ ಎಸಿಪಿ.