ರಾಣೆಬೆನ್ನೂರು ಶಾಸಕ ಆರ್.ಶಂಕರ್ ವಿರುದ್ಧ ಸ್ಫೀಕರ್ಗೆ ದೂರು
ಬೆಂಗಳೂರು, ಜುಲೈ 16 : ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಆರ್. ಶಂಕರ್ ವಿರುದ್ಧ ಸ್ಪೀಕರ್ಗೆ ದೂರು ನೀಡಲಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಶಂಕರ್ ವಾಪಸ್ ಪಡೆದಿದ್ದಾರೆ.
ರಾಣೆಬೆನ್ನೂರು ಕ್ಷೇತ್ರದಿಂದ ಕೆಪಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆರ್. ಶಂಕರ್ ಗೆಲುವು ಸಾಧಿಸಿದ್ದರು. ಮೈತ್ರಿ ಸರ್ಕಾರ ರಚನೆಗೆ ಅವರು ಬೆಂಬಲ ನೀಡಿದ್ದರು. ಎಚ್. ಡಿ. ಕುಮಾರಸ್ವಾಮಿ ಸಂಪುಟಕ್ಕೆ 2ನೇ ಬಾರಿ ಸೇರುವ ಮೊದಲು ಪಕ್ಷವನ್ನು ಕಾಂಗ್ರೆಸ್ನಲ್ಲಿ ವಿಲೀನಗೊಳಿಸಿದ್ದರು.
ಕೆಪಿಜೆಪಿ ಕಾಂಗ್ರೆಸ್ನಲ್ಲಿ ವಿಲೀನ, ಪುನಃ ಸಂಪುಟ ಸೇರಿದ ಆರ್.ಶಂಕರ್
ಕೆಪಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸ್ಥಾಪಕ ಮಹೇಶ್ ಗೌಡ ಮಂಗಳವಾರ ಸ್ಪೀಕರ್ ರಮೇಶ್ ಕುಮಾರ್ಗೆ ಆರ್. ಶಂಕರ್ ವಿರುದ್ಧ ದೂರು ನೀಡಿದ್ದಾರೆ. ಪಕ್ಷದ ನಿಯಮವನ್ನು ಶಂಕರ್ ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕೆಪಿಜೆಪಿ ಪಕ್ಷ ಶಾಸಕ ಶಂಕರ್ ಯೂ-ಟರ್ನ್, ಕಾಂಗ್ರೆಸ್ಗೆ ಕೊಡ್ತಾರಂತೆ ಬೆಂಬಲ
ಮಾಧ್ಯಮಗಳ ಜೊತೆ ಮಾತನಾಡಿದ ಮಹೇಶ್ ಗೌಡ, "ಪಕ್ಷದ ಗಮನಕ್ಕೆ ತರದೆ ಶಂಕರ್ ಕಾಂಗ್ರೆಸ್ ಜೊತೆ ಪಕ್ಷವನ್ನು ವಿಲೀನ ಮಾಡಿದ್ದಾರೆ. ವೀಲಿನ ಕುರಿತಂತೆ ಸ್ಪೀಕರ್ಗೆ ಪತ್ರ ಬರೆದಿರುವುದು ಸರಿಯಲ್ಲ. ಇದನ್ನು ಮಾನ್ಯ ಮಾಡಬಾರದು ಎಂದು ಸ್ಪೀಕರ್ಗೆ ಮನವಿ ಮಾಡಿದ್ದೇವೆ" ಎಂದರು.
"ಜಿಲ್ಲಾ, ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಿ ಆನಂತರ ಪಕ್ಷವನ್ನು ವಿಲೀನ ಮಾಡಬೇಕು. ಆದರೆ, ಆರ್. ಶಂಕರ್ ಯಾವುದೇ ರೀತಿ ಚರ್ಚೆ ನಡೆಸದೇ ವಿಲೀನ ಮಾಡಲು ಮುಂದಾಗಿರುವುದು ಸರಿಯಲ್ಲ. ವಿಲೀನದ ಬಗ್ಗೆ ಶಂಕರ್ ಕೊಟ್ಟಿರುವ ಪತ್ರವನ್ನು ಮಾನ್ಯ ಮಾಡಬಾರದು ಎಂದು ಸ್ಪೀಕರ್ ಅವರಿಗೆ ದೂರು ನೀಡಲಾಗಿದೆ" ಎಂದು ಮಹೇಶ್ ಗೌಡ ಹೇಳಿದರು.
"ಶಂಕರ್ ಸರ್ಕಾರ ರಚನೆಗೆ ಬಾಹ್ಯ ಬೆಂಬಲ ನೀಡಿದ್ದರೂ ಅದು ಅವರ ವೈಯುಕ್ತಿಕ ವಿಚಾರ. ವಿಲೀನ ಕುರಿತಂತೆ ಪಕ್ಷ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎನ್ನುವ ಬಗ್ಗೆ ಇನ್ನೂ ಚರ್ಚೆ ನಡೆದಿಲ್ಲ. ರಾಜ್ಯ ಕಾರ್ಯಕಾರಿಣಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ" ಎಂದರು.