'ಸಿಡಿ' ಬಿಡುಗಡೆ ಮಾಡಿದ್ದ ದಿನೇಶ್ ಕಲ್ಲಹಳ್ಳಿ ಮೇಲೆ ಕೊನೆಗೂ ದೂರು ದಾಖಲು!
ಬೆಂಗಳೂರು, ಮಾ. 06: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ 'ಸಿಡಿ' ಬಿಡಗಡೆ ಬಳಿಕ ರಾಜ್ಯ ಬಿಜೆಪಿಯಲ್ಲಿ ಬಹಳಷ್ಟು ಬೆಳವಣಿಗೆಗಳು ಆಗುತ್ತಿವೆ. ರಮೇಶ್ ಜಾರಕಿಹೊಳಿ ಅವರ ಸಿಡಿ ಬಿಡುಗಡೆ ಬಳಿಕ ರಾಜ್ಯ ಬಿಜೆಪಿ ಸರ್ಕಾರ ಅಧೀರವಾಗುತ್ತಿದೆ. ಅದರಲ್ಲೂ ಮುಂಬೈ ಫ್ರೆಂಡ್ಸ್ ಪತರಗುಟ್ಟಿ ಹೋಗಿದ್ದಾರೆ.
ಸಿಡಿ ಬಿಡುಗಡೆಯ ಬಳಿಕ ರಮೇಶ್ ಜಾರಕಿಹೊಳಿ ಅವರ ಪರವಾಗಿ ಹಲವು ಬಿಜೆಪಿ ನಾಯಕರು ನಿಂತಿದ್ದಾರೆ. ರಮೇಶ್ ಜಾರಕಿಹೊಳಿ ಅವರನ್ನು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಶಾಸಕರಾದ ರೇಣುಕಾಚಾರ್ಯ, ಮಹೇಶ್ ಕುಮಟಳ್ಳಿ ಸೇರಿದಂತೆ ಹಲವರು ತಮ್ಮ ಹೇಳಿಕೆಯಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ದಿನೇಶ್ ಕಲ್ಲಹಳ್ಳಿ ಹಾಗೂ ರಾಜಶೇಖರ್ ಮುಲಾಲಿ ಅವರು ಇನ್ನೂ ಹಲವರ ಸಿಡಿಗಳಿವೆ, ಸೂಕ್ತ ಕಾನೂನು ಸಲಹೆ ಪಡೆದ ಬಳಿಕ ಅವುಗಳನ್ನೂ ಬಿಡುಗಡೆ ಮಾಡುತ್ತೇವೆ ಎಂಬ ಸಂಚಲನ ಮೂಡಿಸುವ ಹೇಳಿಕೆ ನೀಡಿದ್ದಾರೆ. ಇದೀಗ ಆ ಹೇಳಿಕೆಯೇ ಅವರಿಗೆ ಸಂಕಷ್ಟ ತರುವಂತೆ ಕಾಣುತ್ತಿದೆ.
ರಾಜಶೇಖರ ಮುಲಾಲಿ ಹಾಗೂ ದಿನೇಶ್ ಕಲ್ಲಹಳ್ಳಿ ಅವರು ಹನಿಟ್ರ್ಯಾಪ್ ಹೆಸರಲ್ಲಿ ಹಣ ಮಾಡುವ ದಂದೆ ಮಾಡುತ್ತಾರೆಂದು ದೂರು ದಾಖಲಾಗಿದೆ. ಈ ಕುರಿತು ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದ್ದು, 'ಸಿಡಿ' ಸ್ಫೋಟ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ.
'ಸಿಡಿ' ಬಾಂಬ್ ಸ್ಫೋಟಿಸಿದ್ದವರಿಗೆ ಶುರುವಾಯ್ತು ಸಂಕಷ್ಟ
ಇನ್ನೂ 19 ಜನರ 'ಸಿಡಿ'ಗಳು ಸಿಡಿಯಲಿವೆ ಎಂದು ಹೇಳಿಕೆ ನೀಡಿದ್ದ ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ರಾಜಶೇಖರ್ ಮುಲಾಲಿ ಹಾಗೂ ದಿನೇಶ್ ಕಲ್ಲಹಳ್ಳಿ ಇಬ್ಬರನ್ನೂ ಬಂಧಿಸಿ ಕಾನೂನು ಕ್ರಮಕೈಗೊಳ್ಳುವಂತೆ ಮಂಡ್ಯದ ಮಾನವ ಹಕ್ಕುಗಳ ಸೇವಾ ಸಮಿತಿ ಜಿಲ್ಲಾಧ್ಯಕ್ಷೆ ಕೆ.ಹೆಚ್. ಇಂದಿರಾ ದೂರು ಸಲ್ಲಿಸಿದ್ದಾರೆ.
ಈ ಕುರಿತು ಮಾನವ ಹಕ್ಕುಗಳ ಆಯೋಗ ಹಾಗೂ ಮಹಿಳಾ ಆಯೋಗ ಸೇರಿದಂತೆ ರಾಜ್ಯಪಾಲರಿಗೆ ದೂರು ಸಲ್ಲಿಸಿರುವ ಇಂದಿರಾ ಅವರು, ಇಬ್ಬರನ್ನು ತಕ್ಷಣ ಬಂಧಿಸುವಂತೆ ಮನವಿ ಮಾಡಿದ್ದಾರೆ.
ಹನಿಟ್ರ್ಯಾಪ್ ಮೂಲಕ ಹಣ ಮಾಡುವ ದಂಧೆ
ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣದ ಹಿಂದೆ ಹನಿಟ್ರ್ಯಾಪ್ ಶಂಕೆಯನ್ನು ಇಂದಿರಾ ಅವರು ವ್ಯಕ್ತಪಡಿಸಿದ್ದಾರೆ. ಹನಿಟ್ರ್ಯಾಪ್ ಹೆಸರಲ್ಲಿ ಹಣ ಮಾಡುವ ದಂಧೆ ಆರೋಪವನ್ನು ದೂರಿನಲ್ಲಿ ಮಾಡಿದ್ದಾರೆ. ಜೊತೆಗೆ ಹಲವು ಪ್ರಶ್ನೆಗಳನ್ನು ಇಂದಿರಾ ಅವರು ಎತ್ತಿದ್ದದಾರೆ. ಪ್ರಮುಖವಾಗಿ ಇವರಿಗೆ ಸಿಡಿ ಕೊಟ್ಟವರು ಯಾರು? ಸಿಡಿಯಲ್ಲಿರುವ ದೃಶ್ಯ ಸೆರೆ ಹಿಡಿದವರು ಯಾರು? ಇದರ ಹಿಂದಿರುವ ವ್ಯಕ್ತಿಗಳ ಪತ್ತೆ ಮಾಡಿ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಸಿಡಿಯಲ್ಲಿ ಬೆತ್ತಲಾದವರ ತೇಜೋವಧೆ
ಅವರೇನೊ (ಕಲ್ಲಹಳ್ಳಿ) ಸಿಡಿ ಬಿಡುಗಡೆ ಮಾಡಿದ್ದಾರೆ. ಆದರೆ ಆ ಪ್ರಕರಣದಿಂದ ಮಹಿಳಾ ಕುಲಕ್ಕೆ ಕಳಂಕ ಉಂಟಾಗಿದೆ. ಸಿಡಿಯಲ್ಲಿ ಬೆತ್ತಲಾದವರ ತೇಜೋವಧೆ ಆಗಿದೆ. ಹೀಗಾಗಿ ಕೂಡಲೇ ಮುಲಾಲಿ ಹಾಗೂ ಕಲ್ಲಹಳ್ಳಿ ಇಬ್ಬರನ್ನೂ ಬಂಧಿಸಿ, ತಪ್ಪಿತಸ್ಥರ ವಿರುದ್ಧ ಲೈಂಗಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯಕ್ಕೆ ಪ್ರಚೋದನೆ, ವ್ಯಕ್ತಿಗಳ ಖಾಸಗಿತನ ಬಯಲು ಮಾಡಿ ಮಾನಹಾನಿ ಮಾಡಿರುವ ಪ್ರಕರಣಗಳನ್ನು ದಾಖಲಿಸುವಂತೆ ಇಂದಿರಾ ಅವರು ಮನವಿ ಮಾಡಿದ್ದಾರೆ. ಆ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವಂತೆ ಮನವಿಯನ್ನು ಅವರು ಮಾಡಿದ್ದಾರೆ.
ಎದುರಾಗುತ್ತಾ ಕಾನೂನು ಸಂಕಷ್ಟ
ದಿನೇಶ್ ಕಲ್ಲಹಳ್ಳಿ ಅವರು ದೂರು ಸಲ್ಲಿಸಿದ ಬಳಿಕ ಇನ್ನು ತಾಂತ್ರಿಕ ಕಾರಣಗಳಿಂದ ದೂರು ದಾಖಲಾಗಿಲ್ಲ, ಸ್ವೀಕೃತವಾಗಿದೆ. ಜೊತೆಗೆ ಇನ್ನೂ ಎಫ್ಐಆರ್ ಕೂಡ ಆಗಿಲ್ಲ. ಸಂತ್ರಸ್ತ ಯುವತಿ ಅಥವಾ ಅವಳ ಹತ್ತಿರದ ಸಂಬಂಧಿಕರು ದೂರು ಸಲ್ಲಿಸಬೇಕು. ಆದರೆ ಈ ಪ್ರಕರಣದಲ್ಲಿ ದೂರು ಕೊಟ್ಟಿರುವುದು ಮೂರನೇ ವ್ಯಕ್ತಿ. ಹೀಗಾಗಿ ಇಲ್ಲ ಹನಿಟ್ರ್ಯಾಪ್ ದಂಧೆ ಆಗಿರಬಹುದು ಎಂದು ಇಂದಿರಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹೀಗಾಗಿ ಇದೀಗ ದೂರುದಾರ ದಿನೇಶ್ ಕಲ್ಲಹಳ್ಳಿ ಹಾಗೂ ಸಿಡಿಗಳಿವೆ ಎಂದಿರುವ ರಾಜಶೇಖರ್ ಮುಲಾಲಿ ಅವರಿಗೆ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ.