ಡಿಸಿಗಳ ನಡುವೆ ಕಮ್ಯೂನಿಕೇಶನ್ ಗ್ಯಾಪ್: ಶಿರಾಡಿ ಘಾಟ್ ಪ್ರಯಾಣಿಕ ಸುಸ್ತೋಸುಸ್ತು
ಅಂತೂ ಇಂತೂ ಶಿರಾಡಿ ಘಾಟ್ ಲಘು ವಾಹನ ಸಂಚಾರಕ್ಕೆ ಮುಕ್ತವಾಗಿದೆ. ರಾಜಧಾನಿಯಿಂದ ಕರಾವಳಿ ತಲುಪಲು ಹರಸಾಹಸ ಪಡುತ್ತಿದ್ದ ಪ್ರಯಾಣಿಕ ಈಗ ಸ್ವಲ್ಪಮಟ್ಟಿಗೆ ನಿರಾಳನಾಗಿದ್ದಾನೆ. ಆದರೆ, ಬಸ್ ಸಂಚಾರಕ್ಕೆ ಇನ್ನೂ ಅನುವು ಮಾಡಿಕೊಡದೇ ಇರುವುದರಿಂದ, ಮುಂದಿನ ವಾರದ ಹಬ್ಬದ ಸೀಸನ್ ವೇಳೆ ಏನಪ್ಪಾ ಕಥೆಯೆಂದು ಚಿಂತಿಸುವಂತಾಗಿದೆ.
ಶಿರಾಡಿ ಘಾಟ್ ಸಂಚಾರಕ್ಕೆ ದಕ್ಷಿಣಕನ್ನಡ ಮತ್ತು ಹಾಸನ ಜಿಲ್ಲಾಡಳಿತ ಬುಧವಾರ (ಸೆ 5) ಮುಕ್ತಗೊಳಿಸಿತ್ತು. ಆದರೆ, ಇಬ್ಬರು ಡಿಸಿಗಳಾದ ಸಸಿಕಾಂಥ್ ಸೆಂಥಿಲ್ (ದ.ಕ) ಮತ್ತು ರೋಹಿಣಿ ಸಿಂಧೂರಿ (ಹಾಸನ) ನಡುವೆ ಸಂವಹನದ ಕೊರತೆಯೇ ಅಥವಾ ಪ್ರತಿಷ್ಠೆಯೋ ಇದರಲ್ಲಿ ಸ್ಪಷ್ಟವಾಗಿ ಕಾಡುತ್ತಿತ್ತು. ಇಬ್ಬರ ನಡುವೆ ಹೇಳಿಕೆಗಳು ಒಂದಕ್ಕೊಂದು ತಾಳೆಯಾಗುತ್ತಿರಲಿಲ್ಲ, ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು.
ಈಗ ಶಿರಾಡಿ ಘಾಟ್ ಪರಿಸ್ಥಿತಿ ಹೇಗಿದೆ? ಇಲ್ಲಿದೆ ಸಂಪೂರ್ಣ ವಿವರ
ಶಿರಾಡಿ ಘಾಟ್ ಭಾಗದ ಚೌಡೇಶ್ವರಿ ದೇವಾಲಯದ ವರೆಗೆ ಹಾಸನ ಜಿಲ್ಲಾಡಳಿತಕ್ಕೆ, ನಂತರ ದಕ್ಷಿಣಕನ್ನಡಕ್ಕೆ ಬರುವುದರಿಂದ, ಎರಡೂ ಜಿಲ್ಲಾಡಳಿತ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಲಬೇಕಾಗುತ್ತದೆ. ಇದರಿಂದಾಗಿ ಬುಧವಾರ ಹಲವು ತಾಸು ಪ್ರಯಾಣಿಕರು ತ್ರಿಶಂಕು ಸ್ಥಿತಿ ಅನುಭವಿಸಬೇಕಾಗಿ ಬಂತು..
ಬುಧವಾರ ಹನ್ನೆರಡು ಗಂಟೆ ಸುಮಾರಿಗೆ ಹಾಸನ ಜಿಲ್ಲಾಡಳಿತ ಶಿರಾಡಿ ಘಾಟ್ ಸಂಚಾರಕ್ಕೆ ಮುಕ್ತ ಎಂದು ಘೋಷಿಸಿತ್ತು. ಹಾಗಾಗಿ, ಪೊಲೀಸರು ಸಕಲೇಶಪುರದ ಕಡೆಯಿಂದ (ಮಾರನಹಳ್ಳಿ ಚೆಕ್ ಪೋಸ್ಟ್) ವಾಹನವನ್ನು ಬಿಡಲಾರಂಭಿಸಿದರು. ಆದರೆ, ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳಿಂದ ಯಾವುದೇ ಸೂಚನೆ ನಮಗೆ ಬಂದಿಲ್ಲವೆಂದು ಹಾಸನ-ದಕ್ಷಿಣಕನ್ನಡ ಗಡಿಯಲ್ಲಿ ಪೊಲೀಸರು ವಾಹನಗಳಿಗೆ ತಡೆಯೊಡ್ಡಿದರು.
ಲಘು ವಾಹನಗಳ ಸಂಚಾರಕ್ಕೆ ಶಿರಾಡಿ ಘಾಟ್ ರಸ್ತೆ ಮುಕ್ತ
ಎರಡು ಜಿಲ್ಲಾಡಳಿತದ ಸಂವಹನದ ಕೊರತೆಯಿಂದ, ಸುಮಾರು ಇನ್ನೂರಕ್ಕೂ ಹೆಚ್ಚು ವಾಹನಗಳು ಘಾಟ್ ನಲ್ಲೇ ಪರದಾಡುವಂತಾಯಿತು. ಅತ್ತ, ಗುಂಡ್ಯ ಚೆಕ್ ಪೋಸ್ಟ್ ನಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಯಿತು. ಒಂದು ಹಂತದಲ್ಲಿ ಪರಿಸ್ಥಿತಿ ಕೈಮೀರಿ ಹೋಗುವ ಮಟ್ಟಕ್ಕೆ ಬಂದಿತ್ತು.
ಲಘುವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ನಿರ್ಧಾರ
ಹಾಸನ ಎಸಿ ಲಕ್ಷ್ಮೀಕಾಂತ್ ರೆಡ್ಡಿ ಮತ್ತು ಪುತ್ತೂರು ಎಸಿ ಕೃಷ್ಣಮೂರ್ತಿ ಸ್ಥಳಗಳನ್ನು ಪರಿಶೀಲಿಸಿ ಸರಕಾರಕ್ಕೆ ವರದಿ ನೀಡಿದ್ದರು. ಈ ವರದಿಯನ್ನು ಆಧರಿಸಿ, ಲಘುವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ನಿರ್ಧಾರಕ್ಕೆ ಬರಲಾಗಿತ್ತು. 11 ಪ್ರದೇಶಗಳನ್ನು ಡೇಂಜರ್ ಝೋನ್ ಎಂದು ಗುರುತಿಸಿ, ಅಲ್ಲಿ ಪೊಲೀಸ್ ಭದ್ರತೆಯೊಂದಿಗೆ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಹೆದ್ದಾರಿಯಲ್ಲಿ ಅಗತ್ಯ ಕ್ರಮ ಕೈಗೊಂಡು ವಾಹನಗಳ ದಟ್ಟಣೆ ನಿಯಂತ್ರಿಸುವಂತೆ ಎಸ್ ಪಿ ರಾಹುಲ್ ಕುಮಾರ್ ಅವರಿಗೆ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ನೀಡಿದ್ದರು.
ಎರಡೂ ಕಡೆ ಭಾರೀ ಟ್ರಾಫಿಕ್ ಜಾಂಗೆ ಕಾರಣವಾಯಿತು
ಆದರೆ, ಹಾಸನ ಜಿಲ್ಲಾಡಳಿತ ಆದೇಶ ಹೊರಡಿಸಿದ ಕೆಲವು ಗಂಟೆಗಳ ನಂತರ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದು, ಎರಡೂ ಕಡೆ ಭಾರೀ ಟ್ರಾಫಿಕ್ ಜಾಂಗೆ ಕಾರಣವಾಯಿತು. ಹಾಸನ ಜಿಲ್ಲಾಡಳಿತದ ಆದೇಶ ಹೊರಬೀಳುತ್ತಿದ್ದಂತೇ, ಗುಂಡ್ಯ ಚೆಕ್ ಪೋಸ್ಟ್ ನಲ್ಲಿ ಒಂದೇ ಸಮನೆ ವಾಹನ ದಟ್ಟಣೆ ಆರಂಭವಾಯಿತು. ಚೆಕ್ ಪೋಸ್ಟ್ ನಿಯಂತ್ರಿಸುತ್ತಿದ್ದ ಉಪ್ಪಿನಂಗಡಿ ಪೊಲೀಸರು ವಾಹನ ಸವಾರರನ್ನು ಸಮಾಧಾನಪಡಿಸಲು ಹರಸಾಹಸ ಪಡಬೇಕಾಯಿತು. ಕೊನೆಗೂ, ದಕ್ಷಿಣಕನ್ನಡ ಜಿಲ್ಲಾಡಳಿತದ ಅಧಿಸೂಚನೆ ಹೊರಬಿದ್ದ ನಂತರ ಎರಡೂ ಕಡೆ ಲಘವಾಹನ ಸಂಚಾರ ಆರಂಭವಾಯಿತು.
ಶಿರಾಡಿ ಘಾಟ್: ತಜ್ಞ ಇಂಜಿನಿಯರ್ಸ್ ಸಿಎಂಗೆ ನೀಡಿದ ವರದಿಯಲ್ಲೇನಿದೆ?
ಮ್ಯಾಕ್ಸ್ ಕ್ಯಾಬ್, 6-12 ಪ್ರಯಾಣಿಕರ ಟೆಂಪೋ ಟ್ರಾವೆಲ್ ಗಳಿಗೆ ಅನುವು
ಕಾರು, ಜೀಪು, ದ್ವಿಚಕ್ರ ವಾಹನಗಳು, ಮ್ಯಾಕ್ಸ್ ಕ್ಯಾಬ್, 6-12 ಪ್ರಯಾಣಿಕರನ್ನು ಕರೆದುಕೊಂಡು ಹೋಗಬಹುದಾದ ಟೆಂಪೋ ಟ್ರಾವೆಲ್ ಗಳಿಗೆ ಅನುವು. ಸಾಮಾನ್ಯ ಬಸ್, ರಾಹಸಂಸ, ಐರಾವತ, ಖಾಸಗಿ ಲಕ್ಸುರಿ ಬಸ್, ಟ್ಯಾಂಕರ್ಸ್, ಷಿಪ್ ಕಾರ್ಗೋ ಕಂಟೈನರ್ಸ್ ಮತ್ತು ಲಾಂಗ್ ಚಾಸೀಸ್ ವಾಹನಗಳ ಸಂಚಾರಕ್ಕೆ ಮುಂದಿನ ಆದೇಶದವರೆಗೆ ನಿರ್ಬಂಧ ಹೇರಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿಗಳ ಅಧಿಸೂಚನೆಯಲ್ಲಿ ಹೇಳಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಗಳೇ ಹೊಣೆ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಶಿರಾಡಿ ಘಾಟ್ನಲ್ಲಿ ಲಘು ವಾಹನ ಸಂಚಾರ ಆರಂಭಿಸಬಹುದು ಎಂದು ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು. ಪತ್ರವನ್ನು ಆಧರಿಸಿ ವಾಹನ ಸಂಚಾರ ಆರಂಭಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ವಾಹನ ಸಂಚಾರ ಅನುಮತಿ ನೀಡಲಾಗಿದೆ. ವಾಹನ ಸಂಚಾರದ ವೇಳೆ ಯಾವುದೇ ಅನಾಹುತ ಸಂಭವಿಸಿದರೆ ಅದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಗಳೇ ಹೊಣೆ ಎಂದು ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಎಚ್ಚರಿಸಿದ್ದಾರೆ.
ಸಾಗಾಟ ವಾಹನಗಳನ್ನು ಪಾರ್ಕ್ ಮಾಡದಂತೆ ನಿರ್ಬಂಧಿಸುವುದು
ಶಿರಾಡಿ ಘಾಟ್ ಆರಂಭದಿಂದ ಅಂತ್ಯದವರೆಗೂ ರಸ್ತೆಯ ಎರಡೂ ಬದಿಗಳಲ್ಲಿ ಯಾವುದೇ ಘನ ಮತ್ತು ಮಧ್ಯಮ ಸಾಮರ್ಥ್ಯದ ಸರಕು ಸಾಗಾಟ ವಾಹನಗಳನ್ನು ಪಾರ್ಕ್ ಮಾಡದಂತೆ ನಿರ್ಬಂಧಿಸುವುದು. ಭೂಕುಸಿತ ಉಂಟಾದ ಅರ್ಧಭಾಗದಲ್ಲಿ ವಾಹನ ಸಂಚರಿಸಿದರೆ ತೊಂದರೆಗಳಾಗುವ ಸಾಧ್ಯತೆ ಇರುವುದರಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಮುಖಾಂತರ ಘನ ಮತ್ತು ಮಧ್ಯಮ ಸಾಮರ್ಥ್ಯದ ಸರಕು ಸಾಗಟು ವಾಹನಗಳನ್ನು ಹೊರತು ಪಡಿಸಿ ಇತರ ಎಲ್ಲಾ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬಹುದು ಎಂದು ತಜ್ಞ ಇಂಜಿನಿಯರ್ಸ್ ತಂಡ ಸಿಎಂಗೆ ವರದಿ ನೀಡಿತ್ತು.