ಕೋಮು ಗಲಭೆಗಳಲ್ಲಿ ಕರ್ನಾಟಕ ದಕ್ಷಿಣದ ನಂ.1
ಬೆಂಗಳೂರು, ಅ. 26 : ಆಡಳಿತ ನಡೆಸುತ್ತಿರುವ ಪಕ್ಷ ಯಾವುದೇ ಇರಲಿ, ಪೊಲೀಸ್ ವರಿಷ್ಠಾಧಿಕಾರಿ ಯಾರೇ ಇರಲಿ ಕರ್ನಾಟಕದಲ್ಲಿ ಕೋಮು ಗಲಭೆಗಳನ್ನು ಹತ್ತಿಕ್ಕಲು, ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡಲು ಯಾರಿಂದಲೂ ಸಾಧ್ಯವಾಗಿಲ್ಲ ಎನ್ನುವುದಕ್ಕೆ ಕೇಂದ್ರ ಗೃಹ ಮಂತ್ರಾಲಯ ನೀಡಿರುವ ಅಂಕಿಅಂಶಗಳು ಕನ್ನಡಿ ಹಿಡಿದಿವೆ.
ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ಒಟ್ಟು 222 ಕೋಮು ಗಲಭೆಗಳು ನಡೆದಿದ್ದು, ದಕ್ಷಿಣ ಭಾರತದಲ್ಲಿ ಕರ್ನಾಟಕ ಮೊದಲನೇ ಸ್ಥಾನ ಕಬಳಿಸಿದೆ ಮತ್ತು ಇಡೀ ಭಾರತದಲ್ಲಿ ನಾಲ್ಕನೇ ಸ್ಥಾನ ಆಕ್ರಮಿಸಿಕೊಂಡಿದೆ. ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ನಂತರ ಅತಿ ಹೆಚ್ಚು ಕೋಮು ಗಲಭೆಗಳಾಗಿರುವುವುದು ನಮ್ಮ ಕರ್ನಾಟಕದಲ್ಲೇ.
2010ರ ಜನವರಿಯಿಂದ 2013ರ ಮಾರ್ಚ್ ಒಳಗೆ ರಾಜ್ಯದಲ್ಲಿ ಒಟ್ಟು 22 ಕೋಮು ಗಲಭೆಗಳಾಗಿವೆ ಎಂದು ಸಚಿವಾಲಯದ ವರದಿ ಹೇಳಿದೆ. ಕೇರಳ (126), ಆಂಧ್ರಪ್ರದೇಶ (114) ಮತ್ತು ತಮಿಳುನಾಡು (86) ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲಿ 2010ರಲ್ಲಿ 71, 2011ರಲ್ಲಿ 70, 2012ರಲ್ಲಿ 69 ಪ್ರಕರಣಗಳು ದಾಖಲಾಗಿದ್ದರೆ 2013ರ ಮೊದಲ ಮೂರು ತಿಂಗಳಲ್ಲಿ 12 ಕೋಮು ಗಲಭೆಗಳು ನಡೆದಿವೆ.
ಯಾವ ಪ್ರದೇಶಗಳಲ್ಲಿ ಹೆಚ್ಚು ಕೋಮು ಗಲಭೆಗಳು ನಡೆದಿವೆ ಎಂದು, ವರದಿ ಸಿದ್ಧಪಡಿಸುವ ಜವಾಬ್ದಾರಿ ಹೊತ್ತಿದ್ದ ಆಲ್ಟರ್ನೇಟಿವ್ ಲಾ ಫೋರಂನ ಕ್ಲಿಫ್ಟನ್ ರೋಜಾರಿಯೋ ಸ್ಪಷ್ಟವಾಗಿ ತಿಳಿಸಿಲ್ಲ. ಆದರೆ, ರಾಜ್ಯದ ಕರಾವಳಿಯಲ್ಲಿ ಹೆಚ್ಚು ಪ್ರಕರಣಗಳು (ಹೆಚ್ಚಾಗಿ ಚರ್ಚ್ ದಾಳಿಗಳು) ದಾಖಲಾಗಿವೆ ಎಂದು ತಿಳಿಸಿದ್ದಾರೆ.
"ಬರೀ ಪ್ರಕರಣ ದಾಖಲಾಗುವುದರಿಂದ ಶಿಕ್ಷೆ ಆಗುತ್ತದೆಂದು ಹೇಳಲಾಗುವುದಿಲ್ಲ. ಹಿಂದಿನ (ಬಿಜೆಪಿ) ಸರಕಾರವನ್ನೇ ನೋಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷತ್ ಮತ್ತು ಶ್ರೀರಾಮ ಸೇನೆ ವಿರುದ್ಧ ಹಾಕಿದ್ದ ಕೋಮು ಗಲಭೆ ಪ್ರಕರಣಗಳನ್ನು ಹಿಂತೆಗೆದುಕೊಂಡಿದೆ" ಎಂದು ಕ್ಲಿಫ್ಟನ್ ರೋಜಾರಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಮು ಗಲಭೆಗಳಲ್ಲಿ ದಾಖಲಾಗಿರುವ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿಯೊಬ್ಬರು, "ಹೆಚ್ಚು ಪ್ರಕರಣ ದಾಖಲಾಗಿರುವುದು ರಾಜ್ಯ ಪೊಲೀಸ್ ಇಲಾಖೆ ಎಷ್ಟು ಕ್ಷಮತೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ತೋರಿಸುತ್ತದೆ. ಇತರ ರಾಜ್ಯಗಳಲ್ಲಿ ಕಡಿಮೆ ಕೇಸುಗಳು ದಾಖಲಾಗಿವೆಯೆಂದರೆ ಅಲ್ಲಿ ಕಡಿಮೆ ಗಲಭೆ ನಡೆದಿದೆ ಎಂದು ಅರ್ಥವಲ್ಲ. ಆದರೆ, ರಾಜ್ಯ ಪೊಲೀಸರು ಹೆಚ್ಚು ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ" ಎಂದು ಹೇಳಿದ್ದಾರೆ.
ರಾಜ್ಯ ಪೊಲೀಸ್ ವರಿಷ್ಠಾಧಿಕಾರಿ ಪಚಾವೋ ಅವರು, "ಇತ್ತೀಚೆಗೆ ಜರುಗಿದ ದಸರಾ, ಬಕ್ರೀದ್ ಉತ್ಸವ ಸಂದರ್ಭದಲ್ಲಿ ರಾಜ್ಯ ಪೊಲೀಸರು ಯಾವುದೇ ಗಲಭೆಗಳಾಗದಂತೆ ಎಚ್ಚರದಿಂದ ಕಾರ್ಯ ನಿರ್ವಹಿಸಿದ್ದಾರೆ. ಕೇಂದ್ರ ಇಂಟೆಲಿಜೆನ್ಸ್ ನೀಡುವ ವರದಿಯ ಆಧಾರದ ಮೇಲೆ ಕ್ರಮ ತೆಗೆದುಕೊಂಡು ಕೋಮು ಗಲಭೆಗಳನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದೇವೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.