ಜಟಾಪಟಿಗೆ ಸಾಕ್ಷಿಯಾದ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಮೊದಲ ಸಭೆ!
ಬೆಂಗಳೂರು, ಜೂನ್ 21 : ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದೆ. ಎರಡೂ ಪಕ್ಷಗಳ ಪ್ರಣಾಳಿಕೆಯಿಂದ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸಲು ಸಮಿತಿಯನ್ನು ರಚನೆ ಮಾಡಲಾಗಿದೆ. ಸಮಿತಿ ತನ್ನ ಮೊದಲ ಸಭೆ ನಡೆಸಿದೆ.
ಹಿರಿಯ ಕಾಂಗ್ರೆಸ್ ಮುಖಂಡ ಎಂ.ವೀರಪ್ಪ ಮೊಯ್ಲಿ ಅವರು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಬುಧವಾರ ಸಮಿತಿಯ ಮೊದಲ ಸಭೆ ನಡೆಯಿತು. ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಕರಡನ್ನು ಸಿದ್ಧಪಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಮಿತಿ ರಚನೆ, ಡಿಕೆಶಿಗೆ ಸ್ಥಾನ
ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಮಿತಿಯಲ್ಲಿ ಕಾಂಗ್ರೆಸ್ನ ಮೂವರು, ಜೆಡಿಎಸ್ನ ಇಬ್ಬರು ಸದಸ್ಯರಿದ್ದಾರೆ. ಸಭೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ಎಚ್.ಡಿ.ರೇವಣ್ಣ, ಬಂಡೆಪ್ಪ ಕಾಶೆಂಪೂರ ಪಾಲ್ಗೊಂಡಿದ್ದರು.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ : ಸಮನ್ವಯ ಸಮಿತಿ ಸಭೆ ನಿರ್ಣಯಗಳು
ರೈತರ ಸಾಲ ಮನ್ನಾ ವಿಚಾರದ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. 'ಪಂಜಾಬ್ನಲ್ಲಿ ಸಾಲ ಮನ್ನಾ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಅಲ್ಲಿಂದಲೂ ಮಾಹಿತಿ ಪಡೆಯುತ್ತೇವೆ' ಎಂದು ಎಂ.ವೀರಪ್ಪ ಮೊಯ್ಲಿ ಹೇಳಿದರು. ಸಭೆಯಲ್ಲಿ ಪ್ರಾಣಾಳಿಕೆ ಅಂಶಗಳ ಬಗ್ಗೆ ಜಟಾಪಟಿಯೂ ನಡೆದಿದೆ. ಸಭೆಯ ವಿವರಗಳು ಇಲ್ಲಿವೆ...
ಸಮಿತಿಯ ಒಮ್ಮತದ ನಿರ್ಣಯ
ಕರ್ನಾಟಕ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್ಚು ಚರ್ಚೆ ಆಗುತ್ತಿರುವ ವಿಚಾರ ರೈತರ ಸಂಪೂರ್ಣ ಸಾಲ ಮನ್ನಾ. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಮಿತಿ ಸಭೆಯಲ್ಲಿ ರೈತರ ಸಾಲ ಮನ್ನಾ ವಿಚಾರಕ್ಕೆ ಹೆಚ್ಚಿನ ಆದ್ಯತೆ ನೀಡಲು ಜೆಡಿಎಸ್-ಕಾಂಗ್ರೆಸ್ ನಾಯಕರು ನಿರ್ಧರಿಸಿದರು.
ಚುನಾವಣೆ ಸಂದರ್ಭದಲ್ಲಿ ಎರಡೂ ಪಕ್ಷಗಳು ನೀಡಿದ ಭರವಸೆಗಳ ಅಂಶಗಳನ್ನು ಸೇರಿಸಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಕರಡನ್ನು ರಚನೆ ಮಾಡಲು ಎ.ವೀರಪ್ಪ ಮೊಯ್ಲಿ ಅಧ್ಯಕ್ಷತೆಯ ಸಭೆ ತೀರ್ಮಾನ ಕೈಗೊಂಡಿತು.
ವೀರಪ್ಪ ಮೊಯ್ಲಿ ಹೇಳಿದ್ದೇನು?
'ರೈತರ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ರೂಪುರೇಷೆ ಸಿದ್ಧಪಡಿಸುತ್ತಿದ್ದೇವೆ. ಪಂಜಾಬ್ನಲ್ಲಿ ಸಂಪೂರ್ಣ ಸಾಲ ಮನ್ನಾ ಕಾರ್ಯಕ್ರಮ ಯಶಸ್ವಿಯಾಗಿದೆ. ಅಲ್ಲಿಂದ ಮಾಹಿತಿ ತರಿಸಿಕೊಳ್ಳುತ್ತೇವೆ' ಎಂದು ಎಂ.ವೀರಪ್ಪ ಮೊಯ್ಲಿ ಹೇಳಿದರು.
ಸಹಕಾರ ವಲಯದಲ್ಲಿ ರೈತರ 9000 ಕೋಟಿ ಸಾಲವನ್ನು ಮೊದಲ ಹಂತದಲ್ಲಿಯೇ ಮನ್ನಾ ಮಾಡಿದರೆ 40 ಲಕ್ಷ ರೈತರಿಗೆ ಸಹಾಯಕವಾಗಲಿದೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು. ಸಮಿತಿ ಶೀಘ್ರದಲ್ಲಿಯೇ ಕರಡನ್ನು ರಚನೆ ಮಾಡುವ ಸಾಧ್ಯತೆ ಇದೆ.
ಪ್ರಣಾಳಿಕೆಯ ಅಂಶಗಳು
ಜೆಡಿಎಸ್ ಪಕ್ಷದಿಂದ ಎಚ್.ಡಿ.ರೇವಣ್ಣ ಮತ್ತು ಬಂಡೆಪ್ಪ ಕಾಶೆಂಪೂರ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಹಿರಿಯ ನಾಗರಿಕರಿಗೆ 6 ಸಾವಿರ ರೂ. ಮಾಶಾಸನ, ಗೃರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ 6 ಸಾವಿರ ರೂ. ಭತ್ಯೆ ನೀಡುವ ಬಗ್ಗೆ ಜೆಡಿಎಸ್ ನಾಯಕರು ವಿಷಯ ಪ್ರಸ್ತಾಪಿಸಿದರು.
ಜೆಡಿಎಸ್ ನಾಯಕರು ತಮ್ಮ ಬೇಡಿಕೆಯನ್ನು ಮುಂದಿಟ್ಟಾಗ ಕಾಂಗ್ರೆಸ್ನ ಸದಸ್ಯರು ಸಹ ಹಿಂದಿನ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಮುಂದುವರೆಸಬೇಕು ಎಂದು ಪಟ್ಟು ಹಿಡಿದರು.
ಡಿಕೆಶಿ, ರೇವಣ್ಣ ಮುನಿಸು
ಎಂ.ವೀರಪ್ಪ ಮೊಯ್ಲಿ ಸಭೆಯ ವಿವರ ನೀಡುತ್ತಿದ್ದಾಗ ಜೆಡಿಎಸ್ ಕಾರ್ಯಕ್ರಮಗಳ ಬಗ್ಗೆಯೂ ಹೇಳುವಂತೆ ಎಚ್.ಡಿ.ರೇವಣ್ಣ ಒತ್ತಾಯಿಸಿದರು. ಈ ವಿಚಾರಕ್ಕೆ ಡಿ.ಕೆ.ಶಿವಕುಮಾರ್, ಎಚ್.ಡಿ.ರೇವಣ್ಣ ನಡುವೆ ಮಾತುಕತೆ ನಡೆಯಿತು. ಡಿ.ಕೆ.ಶಿವಕುಮಾರ್ ಅಸಮಾಧಾನಗೊಂಡು ಹೊರಟರು. ಆಗ ವೀರಪ್ಪ ಮೊಯ್ಲಿ ಅವರ ಕೈ ಹಿಡಿದಿ ಕೂರಿಸಿದರು.
25ಕ್ಕೆ ಮತ್ತೆ ಸಭೆ
ಎರಡೂ ಪಕ್ಷಗಳು ನೀಡಿದ ಭರವಸೆಗಳ ಅಂಶಗಳನ್ನು ಸೇರಿಸಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಕರಡನ್ನು ರಚನೆ ಮಾಡಲು ಎ.ವೀರಪ್ಪ ಮೊಯ್ಲಿ ಅಧ್ಯಕ್ಷತೆಯ ಸಭೆ ತೀರ್ಮಾನ ಕೈಗೊಂಡಿತು. ಜೂನ್ 25ರಂದು ಮತ್ತೊಮ್ಮೆ ಸಮಿತಿ ಸಭೆ ಸೇರಲಿದೆ.