ದೊರೆಗಂತೂ ಮನಸಿಲ್ಲ, ನಾವೂ ಹೃದಯ ಕಳ್ಕೊಂಡರೆ ಗೋವು ಬದ್ಕೋದು ಹೇಗೆ
ಈ ಬಾರಿ ಅಮ್ಮಂದಿರ ದಿನಕ್ಕೆ ಗೋಮಾತೆಯನ್ನು ಉಳಿಸಿಕೊಳ್ಳಲು ಅಮ್ಮನ ಕೈಯಿಂದಲೇ ಒಂದಿಷ್ಟು ನೆರವು ಕೊಡಿಸೋಣ. ನೀವು ಮನಸ್ಸು ಮಾಡಿದರೆ ಈ ಎಪ್ಪತ್ತು ಸಾವಿರ ಹಸುಗಳನ್ನು ಉಳಿಸಿಕೊಳ್ಳುವುದು ಕಷ್ಟವಲ್ಲ.
ಇದೊಂದು ಅಭಿಯಾನ ನಡೆಯುತ್ತಿದೆ. ಗೋವುಗಳನ್ನು ಬದುಕಿಸಿಕೊಳ್ಳಲು ಒಂದಷ್ಟು ಮಂದಿ ಶ್ರಮಿಸುತ್ತಿದ್ದಾರೆ. ಇಡೀ ರಾಜ್ಯದ ಎಲ್ಲ ಹಸುಗಳನ್ನು ಉಳಿಸಿಕೊಂಡು ಬಿಡಬೇಕು ಎಂಬುದು ಅವರ ಉದ್ದೇಶ ಇರಬಹುದು. ಆದರೆ ಈ ಬರಗಾಲದಲ್ಲಿ ಮೇವು ಹೊಂದಿಸುವುದು ಸಲೀಸಲ್ಲ. ಆ ಗುಂಪು ಟ್ವಿಟ್ಟರ್ ಮೂಲಕ ಮಲೆಮಹದೇಶ್ವರ ಬೆಟ್ಟ ಹಾಗೂ ಸುತ್ತಮುತ್ತಲ ಸ್ಥಿತಿಯನ್ನು ತೆರೆದಿಟ್ಟಿದೆ.
ಗೃಹಪ್ರವೇಶ ನಡೆಯುವಾಗ ಗೋವನ್ನು ಮನೆಯೊಳಗೆ ಕರೆತಂದು ಅದಕ್ಕೆ ಪೂಜೆ ಮಾಡುವುದು ಯಾವುದೋ ಕಾಲದಿಂದಲೂ ನಡೆದು ಬಂದ ಪದ್ಧತಿ. ಅಷ್ಟೇ ಯಾಕೆ, ಯುಗಗಳ ಇತಿಹಾಸ ಇರುವ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಬಾರಿ ಪರಿಹಾರ ಎಂಬಂತೆ ಹಸುವಿಗೆ ಬಾಳೇಹಣ್ಣು ನೀಡಿ ಎಂದು ಸೂಚಿಸಿರುವುದನ್ನು ಕೂಡ ನೀವು ಓದಿರುತ್ತೀರಿ ಅಥವಾ ಕೇಳಿರುತ್ತೀರಿ.[ಕಾಮಧೇನು ರಕ್ಷಣೆಗೆ ನೀವು ಹೇಗೆ ಕೈಜೋಡಿಸಬಹುದು?]
ನಮ್ಮ ಮನೆಗಳೊಳಗೆ, ಮನಸುಗಳೊಳಗೆ ಗೋವಿನ ಪ್ರವೇಶ ಶುಭಸೂಚಕ ಎಂಬುದು ಗಟ್ಟಿಯಾಗಿ ಕೂತಿದೆ. ಅಂಥ ಗೋವುಗಳ ಸ್ಥಿತಿ ಹೇಗಾಗಿದೆ ಎಂಬುದರ ಮಾಹಿತಿ ನೀಡುವ ಪ್ರಯತ್ನವಿದು. ಮಲೆಮಹದೇಶ್ವರ ಬೆಟ್ಟದ ಸುತ್ತ ರಾಜ್ಯ ಸರಕಾರ ಬೇಲಿ ಸುತ್ತಿದೆ. ಇದರ ಜತೆಗೆ ಬರಗಾಲ ಬೇರೆ. ಈ ಎರಡೂ ಕಾರಣದಿಂದ ಎಪ್ಪತ್ತು ಸಾವಿರಕ್ಕೂ ಹೆಚ್ಚು ಗೋವು ಉಪವಾಸದಿಂದ ಸಾಯುವ ಸ್ಥಿತಿ ತಲುಪಿವೆ ಎಂಬ ಮಾಹಿತಿ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ.
ಇನ್ನೇನು ಅಮ್ಮಂದಿರ ದಿನ ಹತ್ತಿರ ಬರುತ್ತಿದೆ. ಆ ದಿನವನ್ನು ಗೋ ಮಾತೆ ದಿನವನ್ನಾಗಿ ಆಚರಿಸುವ ಮನಸ್ಸು ಮಾಡೋಣ. ನಮ್ಮ ಕೈಲಾದಷ್ಟು ನೆರವನ್ನು ಅಮ್ಮನ ಕೈಯಿಂದಲೇ ಕೊಡಿಸೋಣ. ಅಮ್ಮನಿಗೊಂದು ಮಾತು ಕೇಳಿ, ಆ ತಾಯಿ ಖಂಡಿತಾ ಬೇಡ ಅನ್ನಲಾರಳು.[ಮಹದೇಶ್ವರ ತಪ್ಪಲಿನ ಕಾಮಧೇನುಗಳ ಸೇವೆಯಲ್ಲಿ ರಾಮಚಂದ್ರಾಪುರ ಮಠ]
|
ಮೂರು ತಿಂಗಳಲ್ಲಿ ನೂರು ಹಸು ಕಳೆದುಕೊಂಡ ಹಳ್ಳಿಗರು
ಕೆಲವು ಹಳ್ಳಿಗರು ಕಳೆದ ಮೂರು ತಿಂಗಳಲ್ಲಿ ನೂರು ಹಸುಗಳನ್ನು ಕಳೆದುಕೊಂಡಿದ್ದಾರೆ. ಒಂದು ಹೊತ್ತಿನ ಊಟಕ್ಕೆ ಖರ್ಚು ಮಾಡುವಷ್ಟು ಹಣ ಕೊಡಿ, ಉಳಿದಿರುವ ಹಸುಗಳನ್ನಾದರೂ ಬದುಕಿಸಿಕೊಳ್ಳೋಣ ಎಂಬ ಮನವಿಗೆ ಮನಸುಗಳು ಸ್ಪಂದಿಸಿದರಿಂದ 1010 ಟನ್ ಮೇವು ಪೂರೈಸಲು ಸಾಧ್ಯವಾಗಿದೆ.
|
ಇನ್ನೆರಡು ತಿಂಗಳು ಉಳಿಸಿಕೊಳ್ಳಬೇಕು
ಅಂದಹಾಗೆ, ಮೇವು ಪೂರೈಸುವ ಈ ಕೈಂಕರ್ಯ ಕನಿಷ್ಠ ಇನ್ನೆರಡು ತಿಂಗಳಾದರೂ ಮುಂದುವರಿಯಬೇಕಿದೆ. ಸ್ವಯಂ ಸೇವಕರು ಹಲವು ಕಡೆ ಇದಕ್ಕಾಗಿ ಭಿಕ್ಷಾಟನೆ ನಡೆಸುತ್ತಿದ್ದಾರೆ. ಹೂವು ಮಾರುವ ಮಹಿಳೆಯೊಬ್ಬರಿಗೆ ವೈಕಲ್ಯ ಇರುವ ಹೆಣ್ಣುಮಗುವೊಂದು ಎಲ್ಲಿಂದಲೋ ಓಡಿಬಂದು ತನ್ನ ಬಳಿ ಇದ್ದುದ್ದನ್ನೇ ನೀಡಿತು. ಆ ಹೆಣ್ಣುಮಗುವಿಗೆ ನಮಸ್ಕಾರ.
|
ಯಾವ ಹೆಚ್ಚುಗಾರಿಕೆ?
ರಾಜ್ಯ ಸರಕಾರಕ್ಕೆ ಈ ಗೋವುಗಳೆಲ್ಲ ಕಸಾಯಿ ಖಾನೆಯ ಕತ್ತಿಗೆ ತಲೆಯೊಡ್ಡಲು ಸೂಕ್ತವಾದವು ಅನಿಸುತ್ತದೆ. ನಾವೆಲ್ಲ ಸೇರಿ ಪಣ ತೊಡೋಣ. ಇವುಗಳನ್ನು ಉಳಿಸಿಕೊಳ್ಳೋಣ. ಮೂಳೆ-ಚಕ್ಕಳ ಕಾಣುತ್ತಿರುವ ಈ ಗೋವುಗಳ ರಕ್ಷಣೆಗೆ ಒಂದು ಹೊತ್ತಿನ ಊಟ ಬಿಡುವುದು ಯಾವ ಹೆಚ್ಚುಗಾರಿಕೆ ಹೇಳಿ.
|
ಅರ್ತನಾದ ತಲುಪಿಲ್ಲವಾ ದೊರೆಗಳೆ
ಸಿದ್ದರಾಮಯ್ಯ ಅವರಿಗೆ ಇನ್ನೂ ನಮ್ಮ ಧ್ವನಿ ಏಕೆ ಕೇಳಿಸ್ತಿಲ್ಲ? ಹಸುಗಳ ಆರ್ತನಾದ ನಿಮ್ಮ ಸಾಮ್ರಾಜ್ಯದವರೆಗೆ ತಲುಪಿಲ್ಲವಾ ದೊರೆಗಳೆ? ಏಕೆ ಈ ವರೆಗೆ ಕ್ರಮ ಕೈಗೊಂಡಿಲ್ಲ? ಮನುಷ್ಯತ್ವ ಇನ್ನೂ ಸ್ವಲ್ಪ ಎಲ್ಲಾದರೂ ಬಾಕಿ ಉಳಿದಿದ್ದರೆ...? ಇನ್ನೆರಡು ತಿಂಗಳ ಕಾಲ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಈ ಎಪ್ಪತ್ತು ಸಾವಿರ ಹಸುಗಳನ್ನು ಬದುಕಿಸಿಕೊಳ್ಳಬೇಕು.
|
ಯಾವ ಸ್ಪಂದನೆಯೂ ಇಲ್ಲ
ಉಸಿರು ಚೆಲ್ಲುತ್ತಿರುವ ಹಸುಗಳಿಗೆ, ಕಣ್ಣೀರಿಡುತ್ತಿರುವ ಹಳ್ಳಿಗರಿಗೆ ಸರಕಾರದಿಂದ ಯಾವ ಸ್ಪಂದನೆಯೂ ಇಲ್ಲ. ಇದ್ಯಾವ ನ್ಯಾಯ? ಇಂಥ ಸನ್ನಿವೇಶದಲ್ಲಿ ಸಾಮಾನ್ಯ ಜನರಾದ ನಾವು ಸುಮ್ಮನಿರಬಾರದು. ಅವುಗಳಿಗಾಗಿ ನಮ್ಮ ಒಂದು ಹೊತ್ತಿನ ಊಟದ ಹಣ ಮೀಸಲು ಇಡೋಣ.
|
ಹಳ್ಳಿಗಳಿಗೆ ಬನ್ನಿ, ಅವರ ಸ್ಥಿತಿ ನೋಡಿ
ಒಂದು ಸಲ ಈ ಹಳ್ಳಿಗಳಿಗೆ ಭೇಟಿ ಕೊಡಿ. ಗ್ರಾಮಸ್ಥರ ಜತೆ ಮಾತಾಡಿ. ತಮ್ಮ ಮಕ್ಕಳನ್ನು ಪ್ರೀತಿಸುವಂತೆ ಅವರು ಈ ಗೋವುಗಳನ್ನು ಪ್ರೀತಿಸುತ್ತಾರೆ. ಅವುಗಳ ಸ್ಥಿತಿಗೆ ಕಣ್ಣೀರಿಡುತ್ತಿದ್ದಾರೆ. ಸರಕಾರ ಹೀಗೆ ನಡೆದುಕೊಳ್ಳುತ್ತಿದೆ ಅಂದರೆ ನಾವೂ ಹೃದಯಹೀನರಾಗಬಾರದು.
|
ಮೇ 17ಕ್ಕೆ ಯಡಿಯೂರಪ್ಪ ಭೇಟಿ
ಒಂದು ಹೊತ್ತಿನ ಊಟ ಬಿಡಿ, ಗೋ ರಕ್ಷಣೆಗೆ ಸಹಾಯ ಮಾಡಿ ಅಭಿಯನ ಕೈಗೊಂಡಿರುವ ತಂಡವನ್ನು ಮೇ 17ರಂದು ಭೇಟಿಯಾಗುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.