ಮುಗಿಯದ ಶೀತಲ ಸಮರ: ರಮೇಶ್ ಜಾರಕಿಹೊಳಿಗೆ ಡಿಕೆಶಿ ಪರೋಕ್ಷ ಟಾಂಗ್
ಮುಗಿಯದ ಕೋಲ್ಡ್ ವಾರ್: ರಮೇಶ್ ಜಾರಕಿಹೊಳಿಗೆ ಡಿಕೆಶಿ ಕೊಟ್ಟ ಟಾಂಗ್
ಬೆಂಗಳೂರು, ಜ 19: ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ಮುಗಿದ ನಂತರ, ಸಭೆಗೆ ಗೈರಾಗಿದ್ದ ರಮೇಶ್ ಜಾರಕಿಹೊಳಿಗೆ ಜಲಸಂಪನ್ಮೂಲ ಖಾತೆಯ ಸಚಿವ ಡಿ ಕೆ ಶಿವಕುಮಾರ್ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ನಾನೇನಿದ್ದರೂ ಪಕ್ಷದ ಶಿಸ್ತಿನ ಸಿಪಾಯಿ, ಸಚಿವ ಸ್ಥಾನದ ಹಿಂದೆ ಬೀಳುವವನಲ್ಲ. ನಮ್ಮ ಹೈಕಮಾಂಡ್ ಏನು ಆದೇಶ ನೀಡುತ್ತೋ, ಅದನ್ನು ಪಾಲಿಸಲು ಸಿದ್ದನಿದ್ದೇನೆಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಶನಿವಾರ (ಜ 19) ಈಗಲ್ ಟನ್ ರೆಸಾರ್ಟಿನಿಂದ ವಿಧಾನಸೌಧಕ್ಕೆ ತೆರಳುವ ಮುನ್ನ ಮಾತನಾಡುತ್ತಿದ್ದ ಡಿಕೆಶಿ, ಕೆಲವೊಂದು ಫಂಡ್ಸ್ ಗಳನ್ನು ವಿಲೇವಾರಿ ಮಾಡಬೇಕು. ಹಾಗಾಗಿ, ಇಲಾಖೆಯ ಸಭೆಯಲ್ಲಿ ಭಾಗವಹಿಸಲು ಹೋಗುತ್ತಿದ್ದೇನೆಂದು ಸಚಿವರು ಹೇಳಿದ್ದಾರೆ.
ಈಗಿರುವ ಗೊಂದಲಕ್ಕೆ ಕಾರಣಕರ್ತರು ಎಂದೇ ಹೇಳಲಾಗುತ್ತಿರುವ ರಮೇಶ್ ಜಾರಕಿಹೊಳಿಗೆ, ಸಚಿವ ಡಿ ಕೆ ಶಿವಕುಮಾರ್ ನಡುವೆ ಮನಸ್ತಾಪ ಇರುವುದರಿಂದಲೇ ಸಮ್ಮಿಶ್ರ ಸರಕಾರಕ್ಕೆ ಕಂಟಕ ಉಂಟಾಗಿರುವುದು ಎನ್ನುವ ಸುದ್ದಿಯ ನಡುವೆ, ಡಿಕೆಶಿ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಧರಂಸಿಂಗ್ ಅವರ ಸರಕಾರದಲ್ಲೂ ನಾನು ಸಚಿವನಾಗಿರಲಿಲ್ಲ
ಹಿಂದಿನ ಸಿದ್ದರಾಮಯ್ಯನವರ ಸರಕಾರದಲ್ಲಿ ಮೊದಲು ನನಗೆ ಸಚಿವ ಸ್ಥಾನ ಕೊಟ್ಟಿರಲಿಲ್ಲ. ಅದಾದ ನಂತರ, ಹೈಕಮಾಂಡ್ ನನ್ನ ಪಕ್ಷ ನಿಷ್ಠೆಯನ್ನು ನೋಡಿ ಸಚಿವ ಸ್ಥಾನ ನೀಡಿತ್ತು. ನಾನೆಂದೂ ಸಚಿವ ಸ್ಥಾನದ ಹಿಂದೆ ಬಿದ್ದವನಲ್ಲ ಎನ್ನುವುದನ್ನು ಕೆಲವರು ಅರ್ಥ ಮಾಡಿಕೊಳ್ಲಬೇಕು. ಧರಂಸಿಂಗ್ ಅವರ ಸರಕಾರದಲ್ಲೂ ನಾನು ಸಚಿವನಾಗಿರಲಿಲ್ಲ - ಡಿ ಕೆ ಶಿವಕುಮಾರ್.
ಸಾಮಾನ್ಯ ಕಾರ್ಯಕರ್ತನಾಗಿ ನಾನು ಕೆಲಸ ಮಾಡಲು ಸಿದ್ದನಿದ್ದೇನೆ
ಸಚಿವ ಸ್ಥಾನ ಇರಲಿ, ಬಿಡಲಿ, ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ನಾನು ಕೆಲಸ ಮಾಡಲು ಸಿದ್ದನಿದ್ದೇನೆ. ಈಗಲೂ, ಪಕ್ಷ ಬಯಸಿದರೆ ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ದನಿದ್ದೇನೆ. ನಾನೊಬ್ಬನೇ ಅಲ್ಲ, ಪಕ್ಷದ ಹಿರಿಯ ಮುಖಂಡರೆಲ್ಲಾ ಸಚಿವ ಸ್ಥಾನ ಬಿಡಲು ಸಿದ್ದರಿದ್ದಾರೆ. ಯಾವುದೂ ಶಾಸ್ವತವಲ್ಲ ಎನ್ನುವುದು ನಮಗೆ ಅರಿತಿದೆ - ಡಿ ಕೆ ಶಿವಕುಮಾರ್.
ಪರೋಕ್ಷವಾಗಿ ರಮೇಶ್ ಜಾರಕಿಹೊಳಿಗೆ ನೀಡಿದ ಟಾಂಗ್
ಡಿ ಕೆ ಶಿವಕುಮಾರ್ ನೀಡಿರುವ ಹೇಳಿಕೆ, ಪರೋಕ್ಷವಾಗಿ ರಮೇಶ್ ಜಾರಕಿಹೊಳಿಗೆ ನೀಡಿದ ಟಾಂಗ್ ಎಂದೇ ಹೇಳಲಾಗುತ್ತಿದೆ. ಕೆಲವು ಭಿನ್ನಮತೀಯ ಮುಖಂಡರಿಗೆ ಸಚಿವ ಸ್ಥಾನ ನೀಡಲು ಕೆಲವು ಮೂಲ ಕಾಂಗ್ರೆಸ್ಸಿಗರು ಸಚಿವ ಸ್ಥಾನ ಬಿಡಲು ಸಿದ್ದರಿದ್ದರು ಎಂದು ಹೇಳಲಾಗಿತ್ತು. ಅದರಲ್ಲಿ ಡಿಕೆಶಿ, ಪ್ರಿಯಾಂಕ ಖರ್ಗೆ, ಜಮೀರ್ ಅಹಮದ್ ಕೂಡಾ ಇದ್ದರು.
ಸಿದ್ದರಾಮಯ್ಯನವರ ಆಪ್ತ ರಮೇಶ್ ಜಾರಕಿಹೊಳಿ
ಭಿನ್ನಮತೀಯರ ಕ್ಯಾಂಪಿನಲ್ಲಿ ಗುರುತಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ ಎಂಡ್ ಟೀಮ್, ಪಕ್ಷದ ಯಾವುದೇ ಎಚ್ಚರಿಕೆಗೆ ಕ್ಯಾರೇ ಅನ್ನದೇ ಕಾಂಗ್ರೆಸ್ ಶಾಸಕಾಂಗ ಸಭೆಯಿಂದ ದೂರ ಉಳಿದಿತ್ತು. ಆ ಮೂಲಕ ಕಾಂಗ್ರೆಸ್ ಪಕ್ಷದ ವಿರುದ್ದ ತೊಡೆತಟ್ಟಿದ್ದರು. ಶಾಸಕಾಂಗ ಸಭೆಗೆ ಮುನ್ನ ರಮೇಶ್ ಜಾರಕಿಹೊಳಿಯವರನ್ನು ಸಂಪರ್ಕಿಸಲು ಸಿದ್ದರಾಮಯ್ಯ ಬಹಳ ಪ್ರಯತ್ನಿಸಿದ್ದರು. ಒಮ್ಮೆ ಸಂಪರ್ಕಕ್ಕೆ ಸಿಕ್ಕ ರಮೇಶ್, ಸರ್ ನಿಮ್ಮ ಬಳಿ ತುಂಬಾ ಮಾತನಾಡುವುದಿದೆ. ಈಗ ಬೇಡ ಎಂದು ಫೋನ್ ಕಟ್ ಮಾಡಿದ್ದರು. ರಮೇಶ್ ಅವರು ಯಾವುದೇ ಸಚಿವ ಸ್ಥಾನದ ಬೇಡಿಕೆಯನ್ನು ಇಟ್ಟಿರಲಿಲ್ಲ ಎನ್ನುವ ಮಾಹಿತಿಯಿದೆ.
ಸಚಿವ ಸ್ಥಾನ ಅಥವಾ ಇನ್ನಿತರ ಹುದ್ದೆಯ ಆಕಾಂಕ್ಷಿಗಳು ನಾವಲ್ಲ
ಕೆಲವೊಂದು ಮೂಲಗಳ ಪ್ರಕಾರ, ನಾವು ಸ್ವಾಭಿಮಾನಿಗಳು, ನಿಮ್ಮ ಸಚಿವ ಸ್ಥಾನ ಅಥವಾ ಇನ್ನಿತರ ಹುದ್ದೆಯ ಆಕಾಂಕ್ಷಿಗಳು ನಾವಲ್ಲ. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಸೇಫ್ ಆಗಿರಬೇಕೆಂದರೆ, ಡಿ ಕೆ ಶಿವಕುಮಾರ್ ಅವರನ್ನು ಸಂಪುಟದಿಂದ ಕೈಬಿಡಿ. ಹಾಗೆ ಮಾಡಿದರೆ, ನಮ್ಮಿಂದ ನಿಮಗೆ ಯಾವುದೇ ತೊಂದರೆ ಬರುವುದಿಲ್ಲ ಎಂದು ರಮೇಶ್, ಸಿದ್ದರಾಮಯ್ಯನವರಿಗೆ ತಿಳಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು.
RECOMMENDED STORIES