ಕರ್ನಾಟಕದ ಉತ್ತರ ಒಳನಾಡಿನಲ್ಲಿ ಮಾರ್ಚ್ವರೆಗೂ ಚಳಿ, ಒಣಹವೆ
ಬೆಂಗಳೂರು, ನವೆಂಬರ್ 14: ಕರ್ನಾಟಕದ ಉತ್ತರ ಒಳನಾಡಿನಲ್ಲಿ ಮಾರ್ಚ್ ವರೆಗೂ ಚಳಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಹಿಂಗಾರು ದುರ್ಬಲ ಇರುವ ಉತ್ತರ ಒಳನಾಡು ಭಾಗದ ಜಿಲ್ಲೆಗಳಲ್ಲಿ 2021ರ ಮುಂಗಾರು ಆರಂಭದವರೆಗೂ ಹೆಚ್ಚು ಒಣಹವೆ ಅತಿಯಾದ ಚಳಿಯ ವಾತಾವರಣ ಕಂಡುಬರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಿಂದ ಹೆಚ್ಚು ದೂರವಿರುವ ಉತ್ತರ ಒಳನಾಡಿನಲ್ಲಿ ನವೆಂಬರ್ ಆರಂಭದ ದಿನದಿಂದ ಬೆಳಗ್ಗೆ ಮಂಜು ಕವಿದು ಅತೀ ಚಳಿ, ಮಧ್ಯಾಹ್ನದ ಹೊತ್ತಿಗೆ ಹೆಚ್ಚು ಒಣಹವೆ ವಾತಾವರಣ ಇರಲಿದೆ.
ಚೆನ್ನೈನಲ್ಲಿ ಪ್ರಬಲ ಹಿಂಗಾರು: ಕರ್ನಾಟಕದ ಮೇಲೂ ಪ್ರಭಾವ
ಬೀದರ್, ಕಲಬುರಗಿ, ರಾಯಚೂರು, ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿ 11 ಜಿಲ್ಲೆಗಳನ್ನು ಒಳಗೊಂಡ ಉತ್ತರ ಒಳನಾಡಿನ ಭಾಗಕ್ಕೆ ಹಿಂಗಾರು ವೇಳೆ ಭಾರತದ ಮಾರ್ಗವಾಗಿ ಶೀತದ ಗಾಳಿ ಬೀಸುತ್ತದೆ. ಈ ಶೀತಗಾಳಿ ಮಧ್ಯಪ್ರದೇಶ ಮಾರ್ಗವಾಗಿ ಕರ್ನಾಟಕ ಪ್ರವೇಶ ಮಾಡುತ್ತದೆ.
ಇದರಿಂದ ಉತ್ತರ ಒಳನಾಡಿನ ಭಾಗದಲ್ಲಿ ಬೆಳಗ್ಗೆ ಅತಿ ಚಳಿ, ಮಧ್ಯಾಹ್ನ ಹೆಚ್ಚು ಒಣಹವೆ ವಾತಾವರಣ ಸೃಷ್ಟಿಯಾಗುತ್ತಿದೆ. ಇಲ್ಲಿನ ಈ ವಾತಾವರಣ ಮುಂಗಾರುವರೆಗೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಉತ್ತರ ಒಳನಾಡಿನಲ್ಲಿ ತಂಪಿನ ವಾತಾವರಣ
ಉತ್ತರ ಒಳನಾಡಿನಲ್ಲಿ ತಡರಾತ್ರಿಯಿಂದ ಬೆಳಗ್ಗೆಯವರೆಗೂ ತಂಪಿನ ಪ್ರಮಾಣ ವೇಗವಾಗಿ ಹೆಚ್ಚಾಗುತ್ತಿದೆ. ನಂತರ ಮಧ್ಯಾಹ್ನದ ಹೊತ್ತಿಗೆ ತಂಪಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿ ತಾಪಮಾನವು ಕೂಡ ಅಷ್ಟೇ ವೇಗವಾಗಿ ಹೆಚ್ಚಾಗುತ್ತದೆ.
ಬೆಂಗಳೂರಿನಲ್ಲಿ ಮೋಡಮುಸುಕಿದ ವಾತಾವರಣ, ಮಳೆ
ನಗರದಲ್ಲಿ ಹಿಂಗಾರು ಚುರುಕಾಗಿದ್ದು, ಶುಕ್ರವಾರ ನಗರದ ಬಹುತೇಕ ಕಡೆಗಳಲ್ಲಿ ಸಾಧಾರಣ ಮಳೆ ಸುರಿದಿದೆ. ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಇಡೀ ದಿನ ಮೋಡ ಮುಸುಕಿದ ವಾತಾವರಣವಿತ್ತು. ಬೆಳಗ್ಗೆಯಿಂದ ಸಂಜೆಯವರೆಗೆ ಕೆಲವು ಪ್ರದೇಶಗಳಲ್ಲಿ ತುಂತುರು ಮಳೆ ಸುರಿದಿದೆ.
ಬೆಂಗಳೂರಿನ ಯಾವ್ಯಾವ ಭಾಗಗಳಲ್ಲಿ ಮಳೆ
ಕೆಆರ್ ಪುರಂ, ಅಮೃತಹಳ್ಳಿ, ಯಲಹಂಕ, ತುಮಕೂರು ರಸ್ತೆ, ಚೋಳನಾಯಕನಹಳ್ಳಿ, ಕಾಡುಗೋಡಿ, ಕಲ್ಯಾಣನಗರ, ನಾಗರಬಾವಿ, ವಿಜಯನಗರ, ಮೈಸೂರು ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮಳೆಯಾಗಿದೆ. ನಗರದಲ್ಲಿ ನವೆಂಬರ್ 17ರವರೆಗೂ ಇದೇ ವಾತಾವರಣ ಮುಂದುವರೆಯಲಿದೆ. ರಾತ್ರಿ 8.30ರ ವೇಳೆಗೆ ನಗರದಲ್ಲಿ ಸರಾಸರಿ 3.24 ಮಿ.ಮೀ ಮಳೆಯಾಗಿದೆ.
Recommended Video
ಗಾಳಿಯ ತೇವಾಂಶ ಕಡಿಮೆ
ಉತ್ತರ ಒಳನಾಡಿನಲ್ಲಿ ಪ್ರದೇಶಗಳು ಸಮುದ್ರ ಮಟ್ಟದಿಂದ ದೂರವಿರುವ ಕಾರಣ ಗಾಳಿಯಲ್ಲಿ ತೇವಾಂಶ ಕಡಿಮೆ ಇರುತ್ತದೆ. ಈ ಕಾರಣಗಳಿಂದ ಉತ್ತರ ಒಳನಾಡಿನಲ್ಲಿ ಚಳಿ, ಉಷ್ಣಾಂಶ ಹೆಚ್ಚು ಕಂಡು ಬಂದಿದೆ. ಆದರೆ ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡು ಸಮುದ್ರಕ್ಕೆ ಹತ್ತಿರ ಇರುವುದರಿಂದ ಗಾಳಿಯಲ್ಲಿ ತೇವಾಂಶ ಹೆಚ್ಚಿರುತ್ತದೆ. ಹೀಗಾಗಿ ಇಲ್ಲಿ ವಾತಾವರಣ ಸಾಮಾನ್ಯದಂತೆ ಇರಲಿದೆ.