ಬಜೆಟಿನಲ್ಲಿ ಕರಾವಳಿ ನಿರ್ಲಕ್ಷ್ಯ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಕಾದಿದೆ ಭಾರೀ ಹಿನ್ನಡೆ?
Recommended Video
ಬಜೆಟ್ ಅಧಿವೇಶನದ ವೇಳೆ, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುತೇಕ ಶಾಸಕರನ್ನು ಸಂದರ್ಶಿಸಿದಾಗ, ಅವರೆಲ್ಲರ ಒಕ್ಕೂರಿಲಿನ ಧ್ವನಿ, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ, ಬಜೆಟ್ ನಲ್ಲಿ ಕರಾವಳಿಯನ್ನು ನೆಗ್ಲೆಕ್ಟ್ ಮಾಡಿದೆ ಎನ್ನುವುದು.
ಬಜೆಟ್ ಮಂಡಿಸಿದ ಮರುದಿನವೇ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಬಳಿ, ಅವಳಿ ಜಿಲ್ಲೆಯ ಶಾಸಕರು ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ, ಸಿದ್ದರಾಮಯ್ಯನವರ ಬಜೆಟಿನಲ್ಲಿದ್ದ ಅಂಶವನ್ನೆಲ್ಲಾ ಮುಂದುವರಿಸಿಕೊಂಡು ಹೋಗುವುದಾಗಿ ಹೇಳಿದ್ದರೂ, ಪ್ರತಿಭಟನೆ ನಡೆಸುತ್ತಿದ್ದಾರೆ, ಅವರಿಗೇನು ಕನ್ನಡ ಬರುವುದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದ್ದರು.
ನಮಗೆ ಕನ್ನಡ ಚೆನ್ನಾಗಿಯೇ ಬರುತ್ತೆ, ಸಿದ್ದರಾಮಯ್ಯನವರ ಬಜೆಟಿನ ಪ್ರತಿಯನ್ನು ಮೊದಲು ಕುಮಾರಸ್ವಾಮಿಯವರು ಸರಿಯಾಗಿ ಒಮ್ಮೆ ಓದಿಕೊಳ್ಳಲಿ. ನಿಯೋಗದೊಂದಿಗೆ ಹೋಗಿ ಸಿಎಂ ಅವರಲ್ಲಿ ನಾವು ಮಾಡಿದ ಮನವಿಯ ಕಥೆಯೇನಾಯಿತು, ಕರಾವಳಿ ಎನ್ನುವ ಪದವನ್ನು ಮುಖ್ಯಮಂತ್ರಿಗಳು ಒಮ್ಮೆಯಾದರೂ ಉಚ್ಚರಿಸಿದ್ದಾರಾ ಎಂದು ಕರಾವಳಿಯ ಬಿಜೆಪಿ ಶಾಸಕರು ತಿರುಗೇಟು ನೀಡಿದ್ದರು.
ಬಜೆಟ್ ನಲ್ಲಿ ಕರಾವಳಿಯನ್ನು ನಿರ್ಲಕ್ಷಿಸಿಲ್ಲ: ಯು.ಟಿ. ಖಾದರ್
ಮೀನುಗಾರರಿಗೆ ಕೊಡುತ್ತಿದ್ದ ಸಬ್ಸಿಡಿ ಡೀಸೆಲ್ ಅನ್ನು ಏರಿಸುವುದು, ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವುದು, ಆಳಸಮುದ್ರದಲ್ಲಿ ಮೀನುಗಾರಿಕೆ ಮಾಡುವವರಿಗೆ ವಿಶೇಷ ಸೌಲಭ್ಯ ನೀಡಬೇಕು ಈ ರೀತಿಯ ಹಲವು ಮನವಿಯನ್ನು ಕರಾವಳಿ ಶಾಸಕರು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದರು. ಆದರೆ, ಇದ್ಯಾವುದರ ಗೋಜಿಗೆ ಸಿಎಂ ಹೋಗಿಲ್ಲ ಎನ್ನುವುದು ಆ ಭಾಗದ ಶಾಸಕರು ಕೂಗು.
ಸಿದ್ದು ಸರಕಾರದ ಅನ್ಯಾಯಗಳನ್ನು ಜನ ಹತ್ತಿರದಿಂದ ನೋಡಿದ್ದಾರೆ: ಶಾಸಕ ವೇದವ್ಯಾಸ ಕಾಮತ್ ಸಂದರ್ಶನ
ಬಜೆಟಿನಲ್ಲಿ ಕರಾವಳಿಯನ್ನು ಕಡೆಗಣಿಸಲಾಗಿದೆ ಎನ್ನುವುದನ್ನು ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಭಾಗದ ಜನರ ಮನಸಿನಲ್ಲಿ ಬೇರೂರಿಸುವಲ್ಲಿ ಬಿಜೆಪಿ ಸದ್ಯದ ಮಟ್ಟಿಗೆ ಯಶಸ್ವಿಯಾಗಿದೆ. ಇದು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ, ಕಾಂಗ್ರೆಸ್ಸಿಗೆ ತೀವ್ರ ಹಿನ್ನಡೆ ತಂದೊಡ್ಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಮೂರು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ನೆಲೆಯೇ ಇಲ್ಲ
ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಭಾಗದಲ್ಲಿ ಜೆಡಿಎಸ್ ಪಕ್ಷಕ್ಕೆ ನೆಲೆಯೇ ಇಲ್ಲ. ಪಕ್ಷದ ಅಭ್ಯರ್ಥಿಗಳು ಜಯಗಳಿಸುವುದು ಆಮೇಲಿನ ಮಾತು, ಎರಡನೇ ಸ್ಥಾನ ಬರುವುದೂ ದೂರದ ಮಾತು,ಕಾರವಾರ ಕ್ಷೇತ್ರವೊಂದನ್ನು ಹೊರತು ಪಡಿಸಿ, ಜೆಡಿಎಸ್ ಅಭ್ಯರ್ಥಿಗಳು ಅಸೆಂಬ್ಲಿ ಚುನಾವಣೆಯಲ್ಲಿ ಠೇವಣಿಯನ್ನೇ ಕಳೆದುಕೊಂಡಿದ್ದರು. ಕಾರವಾರದಲ್ಲಿ ಮಾತ್ರ, ಬಿಜೆಪಿಯಿಂದ ಜೆಡಿಎಸ್ ಸೇರಿದ್ದ ಆನಂದ್ ಅಸ್ನೋಟಿಕರ್ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು.
ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಡಾ. ಭರತ್ ಶೆಟ್ಟಿ ಸಂದರ್ಶನ
19 ಅಸೆಂಬ್ಲಿ ಕ್ಷೇತ್ರಗಳಲ್ಲಿ ನೇರಾನೇರ ಹಣಾಹಣಿ ಕಾಂಗ್ರೆಸ್, ಬಿಜೆಪಿಯ ನಡುವೆ
ದಕ್ಷಿಣಕನ್ನಡ (8), ಉಡುಪಿ (5) ಮತ್ತು ಉತ್ತರಕನ್ನಡದ (6) ಒಟ್ಟು 19 ಅಸೆಂಬ್ಲಿ ಕ್ಷೇತ್ರಗಳಲ್ಲಿ ಏನಿದ್ದರೂ ನೇರಾನೇರ ಹಣಾಹಣಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ. ಹಾಗಾಗಿ, ಕುಮಾರಸ್ವಾಮಿ ಮಂಡಿಸಿದ್ದ ಬಜೆಟಿನಲ್ಲಿ ಕರಾವಳಿಯನ್ನು ನಿರ್ಲಕ್ಷ್ಯ ಮಾಡಲಾಗಿದೆ ಎನ್ನುವ ಬಿಜೆಪಿಯ ಕೂಗು, ನೇರವಾಗಿ ಎಫೆಕ್ಟ್ ಆಗುವುದು ಕಾಂಗ್ರೆಸ್ಸಿಗೇ ಹೊರತು, ರಾಜಕೀಯ ಲೆಕ್ಕಾಚಾರದ ಪ್ರಕಾರ ಜೆಡಿಎಸ್ಸಿಗೆ ಇದರಿಂದ ಏನೂ ಆಗಬೇಕಾಗಿಲ್ಲ.
ಕಾಂಗ್ರೆಸ್ಸಿಗೆ ನಷ್ಟವೇ ಹೊರತು, ಜೆಡಿಎಸ್ ಪಕ್ಷಕ್ಕಲ್ಲ
ದಕ್ಷಿಣಕನ್ನಡ, ಉಡುಪಿ - ಚಿಕ್ಕಮಗಳೂರು ಮತ್ತು ಉತ್ತರಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ 2014ರ ಚುನಾವಣೆಯಲ್ಲಿ ಮೂರಕ್ಕೆ ಮೂರನ್ನು ಬಿಜೆಪಿ ಗೆದ್ದಿತ್ತು. ಮೂರೂ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಇಲ್ಲಿ ನೇರ ಹಣಾಹಣಿಯೇ ಹೊರತು, ಜೆಡಿಎಸ್ ಇಲ್ಲಿ ಬೋರ್ಡಿಗಿಲ್ಲ. ಸಮ್ಮಿಶ್ರ ಸರಕಾರ ಅಧಿಕಾರದಲ್ಲಿ ಇರುವುದರಿಂದ, ಸೀಟು ಹೊಂದಾಣಿಕೆ ಮಾಡಿಕೊಂಡರೂ, ಇದರಿಂದ ಕಾಂಗ್ರೆಸ್ಸಿಗೆ ನಷ್ಟವೇ ಹೊರತು, ಜೆಡಿಎಸ್ ಪಕ್ಷಕ್ಕಲ್ಲ.
ಬಿಜೆಪಿ 18 ಕ್ಷೇತ್ರದಲ್ಲಿ ಗೆದ್ದಿದ್ದರೆ, ಕಾಂಗ್ರೆಸ್ 4ಸ್ಥಾನವನ್ನು ಗೆದ್ದಿದೆ
ದಕ್ಷಿಣಕನ್ನಡದ ಎಂಟರಲ್ಲಿ ಏಳು, ಉಡುಪಿಯ ನಾಲ್ಕರಲ್ಲಿ ನಾಲ್ಕೂ, ಉತ್ತರಕನ್ನಡದ ಆರರಲ್ಲಿ ನಾಲ್ಕು, ಚಿಕ್ಕಮಗಳೂರಿನ ನಾಲ್ಕರಲ್ಲಿ ಮೂರು ಅಸೆಂಬ್ಲಿ ಕ್ಷೇತ್ರವನ್ನು ಬಿಜೆಪಿ ಗೆದ್ದಿತ್ತು (ಲೋಕಸಭಾ ವ್ಯಾಪ್ತಿಗೆ ಬರುವಂತಹ ಕ್ಷೇತ್ರಗಳು). ಅಂದರೆ ಒಟ್ಟು ಈ ಮೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 22 ಕ್ಷೇತ್ರಗಳಲ್ಲಿ ಬಿಜೆಪಿ 18 ಕ್ಷೇತ್ರದಲ್ಲಿ ಗೆದ್ದಿದ್ದರೆ, ಕಾಂಗ್ರೆಸ್ 4ಸ್ಥಾನವನ್ನು ಗೆದ್ದಿದೆ.
ಕಾಂಗ್ರೆಸ್ಸಿಗೆ ಲೋಕಸಭಾ ಚುನಾವಣೆಯಲ್ಲಿ ನಷ್ಟವಾಗುವ ಸಾಧ್ಯತೆ
ಈ ಎಲ್ಲಾ ಲೆಕ್ಕಾಚಾರವನ್ನು ನೋಡಿದರೆ, ಸಮ್ಮಿಶ್ರ ಸರಕಾರದ ಬಜೆಟಿನಿಂದ ಕಾಂಗ್ರೆಸ್ಸಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಷ್ಟವಾಗುವ ಸಾಧ್ಯತೆಯೇ ಹೆಚ್ಚು. ಅಸೆಂಬ್ಲಿ ಚುನಾವಣೆಯ ವೇಳೆ, ಈ ಭಾಗದಲ್ಲಿ ಪ್ರಧಾನಿ ಮೋದಿಯವರ ಚುನಾವಣಾ ಪ್ರಚಾರವೂ ವರ್ಕೌಟ್ ಆಗಿರುವುದರಿಂದ, ಜೊತೆಗೆ, ಬಜೆಟಿನಲ್ಲಿ ಕರಾವಳಿಯನ್ನು ನಿರ್ಲಕ್ಷ್ಯ ಮಾಡಲಾಗಿದೆ ಎನ್ನುವ ಬಿಜೆಪಿಯ ಕೂಗು, ಕಾಂಗ್ರೆಸ್ಸಿಗೆ ಉಲ್ಟಾ ಹೊಡೆಯುವ ಸಾಧ್ಯತೆ ದಟ್ಟವಾಗಿದೆ.