ಸರ್ಕಾರಕ್ಕೆ ಎದುರಾಯ್ತಾ ಜಾತಿ ಗಣತಿ, ಸದಾಶಿವ ಆಯೋಗ ಬಿಕ್ಕಟ್ಟು
Recommended Video
ಬೆಂಗಳೂರು, ಅ.1: ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಈಗ ತಂಗಾಳಿ ಬೀಸುತ್ತಿದೆ, ಭಿನ್ನಮತೀಯರು ತಣ್ಣಗಾಗಿದ್ದಾರೆ ಹಾಗೂ ಸಚಿವ ಸಂಪುಟ ಇನ್ನೇನು ವಿಸ್ತರಣೆಯಾಗಲಿದೆ ಎಂಬ ಸಂತಸದ ನಡುವೆಯೇ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ ಹಾಗೂ ಮಾಜಿ ಸಚಿವ ಎಚ್ ಆಂಜನೇಯ ಮಾದಿಗರಿಗೆ ಅನ್ಯಾಯವಾಗುತ್ತಿದೆ ಎಂಬ ಅಪಸ್ವರ ಎತ್ತಿರುವುದು ಹಲವು ಅಡೆತಡೆಗಳನ್ನು ತಂದೊಡ್ಡುವ ಅಪಾಯಕ್ಕೆ ಮುನ್ಸೂಚನೆಯಂತೆ ಕಾಣುತ್ತಿದೆ.
ಈ ಹಿಂದೆ ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡರು ಸದಾಶಿವ ಆಯೋಗಕ್ಕೆ ಪೂರಕವಾಗಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಯವರು ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಅನಿವಾರ್ಯತೆ ಎದುರಾಗಿದೆ.
ಜಾತಿ ಗಣತಿಯನ್ನು ಕಸದ ಬುಟ್ಟಿಗೆ ಹಾಕಲಿದೆಯಾ ಎಚ್ಡಿಕೆ ಸರಕಾರ?
ಅದಕ್ಕೆ ಪೂರಕವಾಗಿ ರಾಜ್ಯ ಸಭಾ ಸದಸ್ಯ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಹನುಮಂತಯ್ಯ ಅವರು ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಸದಾಶಿವ ಆಯೋಗದ ವರದಿ ಕುರಿತಂತೆ ಧ್ವನಿ ಎತ್ತಿದ್ದಾರೆ.
ಸದಾಶಿವ ಆಯೋಗ ವರದಿ, ದಶಕದಿಂದ ಕಾಯುತ್ತದೆ
ಪರಿಶಿಷ್ಟ ಜಾತಿಯಲ್ಲಿ ಹಿಂದುಳಿದ ಹಾಗೂ ಎಡ ಸಮುದಾಯ ಎನಿಸಿಕೊಂಡಿರುವ ಮಾದಿಗರು ಸೇರಿದಂತೆ ಹಲವಾರು ಅಸ್ಪೃಶ್ಯ ಸಮುದಾಯಗಳಿಗೆ ಮೀಸಲಾತಿಯಲ್ಲಿ ಪ್ರತ್ಯೇಕ ಸ್ಥಾನ ಮಾನ ನೀಡಬೇಕು ಎಂಬ ಶಿಫಾರಸ್ಸನ್ನು ಒಳಗೊಂಡಿದೆ ಎನ್ನಲಾದ ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಕಳೆದ ಒಂದೂವರೆ ದಶಕದಿಂದ ಸರ್ಕಾರದ ಅಂಗಳದಲ್ಲಿ ಕೊಳೆಯುತ್ತಿದೆ.
5 ವರ್ಷದಿಂದ ಕಾಯುತ್ತಿದೆ ಜಾತಿ ಗಣತಿ, ಕುಮಾರಸ್ವಾಮಿ ನೀಡತ್ತಾರಾ ಮುಕ್ತಿ
ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಯವರಿಗೆ ಎದುರಾಗಬಹುದಾದ ಮತ್ತೊಂದು ಸವಾಲೆಂದರೆ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಜಾತಿ ಗಣತಿಯನ್ನು ನಡೆಸಿದ್ದರು. 2014ರಲ್ಲಿ ಜಾತಿ ಗಣತಿ ಘೋಷಣೆಯಾದರೂ 2015ರಲ್ಲಿ ಜಾತಿ ಗಣತಿ ನಡೆಸಿ 3 ತಿಂಗಳಲ್ಲಿ ವರದಿ ಸಿದ್ಧಪಡಿಸಿದ್ದರು. ಆದರೆ ವರದಿ ಸಿದ್ಧಗೊಂಡು ಐದು ವರ್ಷ ಕಳೆಯುತ್ತಾ ಬಂದರೂ ಅದನ್ನು ಬಹಿರಂಗಪಡಿಸುವ ಧೈರ್ಯವನ್ನು ಅಂದಿನ ಅಥವಾ ಇಂದಿನ ಮುಖ್ಯಮಂತ್ರಿಯಾಗಲಿ ಮಾಡುತ್ತಿಲ್ಲ. ಇದೀಗ ಮಾಜಿ ಸಚಿವ ಎಚ್ ಆಂಜನೇಯ ಅವರು ಮಾದಿಗರಿಗೆ ಅನ್ಯಾಯವಾಗುತ್ತಿದೆ ಎಂದು ಧ್ವನಿಯೆತ್ತಿದ್ದರಿಂದ ಜಾತಿ ಗಣತಿಯನ್ನು ಬಹಿರಂಗಪಡಿಸುವ ಅನಿವಾರ್ಯತೆ ರಾಜ್ಯ ಸಮ್ಮಿಶ್ರವ ಸರ್ಕಾರಕ್ಕೆ ಬಂದೊದಗುವ ಸಾಧ್ಯತೆ ಇದೆ.
ಕರ್ನಾಟಕ ಜಾತಿಗಣತಿ ವರದಿ: ಮುಸ್ಲಿಮರು ನಂ. 2?
ಬೂದಿ ಮುಚ್ಚಿದ ಕೆಂಡದಂತಿದೆ ಜಾತಿ ಗಣತಿ
ರಾಜ್ಯ ಸಮ್ಮಿಶ್ರ ಸರ್ಕಾರದ ಮುಂದಿರುವ ಎರಡು ಬಹುದೊಡ್ಡ ಸವಾಲುಗಳು ರಾಜ್ಯದಲ್ಲಿ ಅಲ್ಲೋಲ ಕಲ್ಲೋಲವನ್ನೇ ಉಂಟು ಮಾಡುವ ಸಾಧ್ಯತೆ ಇದೆ. ಒಂದೊಮ್ಮೆ ಜಾತಿ ಗಣತಿ ಬಹಿರಂಗಗೊಂಡರೆ ರಾಜ್ಯದಲ್ಲಿ ಪರಿಶಿಷ್ಟ ಜನಾಂಗದ ನಿಜವಾದ ಸಂಕಿ ಸಂಖ್ಯೆ ಹೊರಬರಲಿದೆ, ಅದರಿಂದ ಸದಾಶಿವ ಆಯೋಗ ಜಾರಿಗೆ ಪರೋಕ್ಷವಾಗಿ ಒತ್ತಡ ಉಂಟಾಗಲಿದ್ದು, ಜಾತಿ ಗಣತಿಯನ್ನು ಬಹಿರಂಗಪಡಿಸಿದರೆ ರಾಜ್ಯದಲ್ಲಿ ಸಮುದಾಯ ಸಮುದಾಯಗಳ ನಡುವೆ ಸಂಘರ್ಷಗಳು ಉಂಟಾಗುವ ಅಪಾಯವಿದೆ.
ಮತ್ತೊಂದೆಡೆ ಸದಾಶಿವ ಆಯೋಗ ವರದಿ ಜಾರಿಗೆ ಮುಂದಾದರೆ ಪರಿಶಿಷ್ಟರ ಪೈಕಿ ಬಲ ಸಮುದಾಯ ಎನಿಸಿಕೊಂಡಿರುವ ಛಲವಾದಿ ಮತ್ತಿತರೆ ಸಮುದಾಯಗಳು ಸದಾಶಿವ ಆಯೋಗದ ಶಿಫಾರಸ್ಸಿನ ವಿರುದ್ಧ ಈಗಾಗಲೇ ಹೋರಾಟ ಆರಂಭಿಸಿವೆ.
ಸಂಪುಟ ವಿಸ್ತರಣೆ ಬಳಿಕ ಭುಗಿಲೇಳಲಿದೆಯೇ ಪರಿಶಿಷ್ಟರ ಜಾತಿ ಸಂಘರ್ಷ
ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಕ್ಟೋಬರ್ 10 ರ ಆಸುಪಾಸಿನಲ್ಲಿ ನಡೆಯುವ ಎಲ್ಲಾ ಲಕ್ಷಣಗಳಿವೆ, ಈಗ ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿರುವ ಭಿನ್ನಮತ ಸಂಪುಟ ವಿಸ್ತರಣೆ ಬಳಿಕ ಶಮನಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ. ಹಾಗೊಂದು ವೇಳೆ ಶಮನಗೊಂಡರೂ ಮುಂದೆ ಜಾತಿ ಗಣತಿ ಹಾಗೂ ಸದಾಶಿವ ವರದಿ ಕಾರಣಗಳಿಗಾಗಿ ರಾಜ್ಯ ಸರ್ಕಾರದಲ್ಲಿ ಮತ್ತೆ ಸಚಿವ ಸಂಪುಟದ ಸದಸ್ಯರ ನಡುವೆಯೇ ಮನಸ್ತಾಪ ಉಂಟಾಗುವುದು ಗ್ರಾರಂಟಿ, ಹೀಗಾಗಿ ಕುಮಾರಸ್ವಾಮಿ ಜಾತಿ ಗಣತಿ ಹಾಗೂ ಸದಾಶಿವ ಆಯೋಗದ ಸಮಸ್ಯೆಯನ್ನು ಹೇಗೆ ಹದ್ದುಬಸ್ತಿನಲ್ಲಿಡುತ್ತಾರೆ ಎನ್ನುವುದರ ಮೇಲೆ ಸಮ್ಮಿಶ್ರ ಸರ್ಕಾರದ ಭವಿಷ್ಯ ನಿಂತಿದೆ ಎಂದು ಹೇಳಲಾಗುತ್ತಿದೆ.