ಪಂಚ ರಾಜ್ಯ ಚುನಾವಣೆ ಫಲಿತಾಂಶದ ಮೇಲೆ ನಿಂತಿದೆ ಮೈತ್ರಿ ಸರ್ಕಾರದ ಭವಿಷ್ಯ?
Recommended Video
ಬೆಂಗಳೂರು, ಡಿಸೆಂಬರ್ 07: ದೇಶವೇ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಕಡೆ ಕುತೂಹಲದ ದೃಷ್ಠಿಯಿಂದ ನೋಡುತ್ತಿದೆ. ಕರ್ನಾಟಕದ ಮೂರು ಪಕ್ಷದ ರಾಜಕೀಯ ನಾಯಕರು ಕೂಡ ಪಂಚ ರಾಜ್ಯ ಚುನಾವಣೆ ಫಲಿತಾಂಶದ ಬಗ್ಗೆ ಭಾರಿ ಕುತೂಹಲಿಗಳಾಗಿದ್ದಾರೆ.
ಈ ಪಂಚ ರಾಜ್ಯ ಚುನಾವಣೆ ಫಲಿತಾಂಶ ದೇಶದ ರಾಜಕೀಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎಂದು ಹಿರಿಯ ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಅದಕ್ಕೆ ಕಾರಣ ಈ ಚುನಾವಣೆ ನಡೆದ ಕೆಲವೇ ತಿಂಗಳುಗಳ ಅಂತರದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತದೆ.
ಮತ್ತೆ ಬದಲಾಗುವುದೇ ತೆಲಂಗಾಣ ರಾಜ್ಯ ರಾಜಕೀಯ ಇತಿಹಾಸ?
ಕರ್ನಾಟಕವು ಈ ಪಂಚ ರಾಜ್ಯ ಫಲಿತಾಂಶದ ಬಗ್ಗೆ ಕುತೂಹಲದಿಂದ ಕಾಯುತ್ತಿರುವುದಕ್ಕೆ ಕಾರಣ ಸ್ವಲ್ಪ ಭಿನ್ನ. ಈ ಚುನಾವಣೆ ಮೈತ್ರಿ ಸರ್ಕಾರದ ಅಳಿವು-ಉಳಿವು ಪ್ರಶ್ನೆಯಾಗಿಯೂ ಮಾರ್ಪಾಡಾಗುವ ಸಾಧ್ಯತೆ ಇದೆ.
ಮಧ್ಯಪ್ರದೇಶ, ಮಿಜೋರಂ, ಚತ್ತೀಸ್ಘಡ್ ರಾಜ್ಯಗಳಲ್ಲಿ ಈಗಾಗಲೇ ಮತದಾನ ಮುಗಿದಿದೆ, ತೆಲಂಗಾಣ, ರಾಜಸ್ಥಾನಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಇವುಗಳ ಫಲಿತಾಂಶ ಡಿಸೆಂಬರ್ 11 ರಂದು ಏಕಕಾಲಕ್ಕೆ ಹೊರಬೀಳಲಿದೆ. ಈ ಫಲಿತಾಂಶ ದೇಶದ ರಾಜಕೀಯದಲ್ಲಿ ಸ್ಥಿತ್ಯಂತರಕ್ಕೆ ಕಾರಣವಾಗುವ ಮುನ್ಸೂಚನೆ ದಟ್ಟವಾಗಿದೆ.
ಬಿಜೆಪಿ ಗೆದ್ದಲ್ಲಿ ದೋಸ್ತಿಗೆ ಸಂಕಷ್ಟ
ರಾಜಸ್ಥಾನ, ಮಧ್ಯಪ್ರದೇಶ, ಚತ್ತೀಸ್ಘಡ್ಗಳಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯಲು ಯಶಸ್ವಿಯಾಯಿತೆಂದರೆ ಮೈತ್ರಿ ಸರ್ಕಾರಕ್ಕೆ ದೊಡ್ಡ ಹೊಡೆತ ಬೀಳುವ ಎಲ್ಲಾ ಸಾಧ್ಯತೆಗಳೂ ಇವೆ. ತೆಲಂಗಾಣ ಮತ್ತು ಮಿಜೋರಂ ಗಳಲ್ಲಿ ಬಿಜೆಪಿ ಹೆಚ್ಚಿನ ಉಮೇದು ಹೊಂದಿಲ್ಲವಾದರೂ ಅಲ್ಲಿ ಕಿಂಗ್ ಮೇಕರ್ ಆಗುವ ಆಸೆಯನ್ನಂತೂ ಹೊಂದಿದೆ.
ಲೋಕಸಭೆ ಚುನಾವಣೆಯ ಸೆಮಿಫೈನಲ್
ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಕರೆಯಲಾಗುತ್ತಿರುವ ಈ ಚುನಾವಣೆಯ್ಲಿ ಒಂದು ವೇಳೆ ಬಿಜೆಪಿಯು ಉತ್ತಮ ಪ್ರದರ್ಶನ ತೋರಿದಲ್ಲಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸುವ ಕಾರ್ಯಕ್ಕೆ ಭಾರಿ ಬಿರುಸು ದೊರೆಯುತ್ತದೆ. ಇದೇ ರೀತಿಯ ಸೂಚನೆಯೂ ಸಹ ಹೈಕಮಾಂಡ್ನಿಂದ ಬಂದಿರುವ ಕಾರಣದಿಂದಲೇ ರಾಜ್ಯ ಬಿಜೆಪಿ ಸದ್ಯಕ್ಕೆ ಸದ್ದಿಲ್ಲದೇ ಇದೆ. ಅವಕಾಶಕ್ಕಾಗಿ ಹಾತೊರೆಯುತ್ತಿದೆ.
ಜಾತಿ, ಜಾತಿ, ಜಾತಿ... ರಾಜಸ್ಥಾನ ರಾಜಕೀಯದ ಮೂಲಮಂತ್ರ!
ಬಿಜೆಪಿ ಮುಗ್ಗರಿಸಿದರೆ ಮೈತ್ರಿಗೆ ಬಲ
ಬಿಜೆಪಿಯು ಒಂದು ವೇಳೆ ಮುಗ್ಗರಿಸಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದೇ ಆದಲ್ಲಿ ಅದು ಮೈತ್ರಿ ಸರ್ಕಾರಕ್ಕೆ ಬಲ ತುಂಬಲಿದೆ. ಬಿಜೆಪಿಯು ಆಗ ಲೋಕಸಭೆ ಚುನಾವಣೆ ಕಡೆಗೆ ಹೆಚ್ಚಿನ ಗಮನ ಹರಿಸುತ್ತದೆಯೇ ವಿನಃ ಸರ್ಕಾರ ಬೀಳಿಸುವ ಕಡೆಗಲ್ಲ. ಬಿಜೆಪಿ ಹೈಕಮಾಂಡ್ ಸಹ ರಾಜ್ಯದ ರಾಜಕಾರಣವನ್ನು ಮೇಲುಸ್ತುವಾರಿ ಮಾಡುವ ಜಂಜಡಕ್ಕೆ ಸಿಕ್ಕಿ ಹಾಕಿಕೊಳ್ಳುವುದಿಲ್ಲ.
ವಿಧಾನಸಭೆ ಚುನಾವಣೆ LIVE: ರಾಜಸ್ಥಾನ, ತೆಲಂಗಾಣದಲ್ಲಿ ಘಟಾನುಘಟಿಗಳಿಂದ ಮತದಾನ
ಬಿಜೆಪಿ ಸೋತರೆ ದೇವೇಗೌಡರ ಕೈಗೆ ಬಲ
ಕಾಂಗ್ರೆಸ್ ಗೆದ್ದರೆ ಲೋಕಸಭೆ ಚುನಾವಣೆಗೂ ಮೈತ್ರಿ ಸೂತ್ರವನ್ನು ಕಾಂಗ್ರೆಸ್ ಮುಂದುವರೆಸುತ್ತದೆ. ಲೋಕಸಭೆ ಚುನಾವಣೆಗೆ ಮೈತ್ರಿಗೆ ಶ್ರೀಕಾರ ಹಾಕಿದ್ದು ಕರ್ನಾಟಕವೇ ಆದಕಾರಣ, ಹಾಗೂ ಲೋಕಸಭೆ ಚುನಾವಣೆಯ ಮಹಾಘಟಬಂಧನ್ಗೆ ದೇವೇಗೌಡರೇ ಮುಖ್ಯ ಸಂಧಾನಕಾರರಾದ ಕಾರಣ ಕಾಂಗ್ರೆಸ್ ಹೈಕಮಾಂಡ್ ಮೈತ್ರಿ ಸರ್ಕಾರಕ್ಕೆ ಹೆಚ್ಚಿನ ಅಭಯ ನೀಡುತ್ತದೆ. ಹಾಗೂ ದೇವೇಗೌಡರ ಕೈ ಇಂದಿಗಿಂತ ಹೆಚ್ಚು ಬಲಗೊಳ್ಳುತ್ತದೆ.
ಪಂಚ ರಾಜ್ಯಗಳ ವಿಧಾನಸಭಾ ಫಲಿತಾಂಶದ ಬಗ್ಗೆ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ
ಶಾಸಕರಿಗೆ ಬಿಜೆಪಿ ಬಗ್ಗೆ ಅನುಮಾನ ಸಾಧ್ಯತೆ
ಬಿಜೆಪಿ ವಿರುದ್ಧ ಈ ಪಂಚ ರಾಜ್ಯ ಚುನಾವಣೆ ಫಲಿತಾಂಶ ಬಂದಾದಲ್ಲಿ, ದೇಶದಲ್ಲಿ ಬಿಜೆಪಿ ವಿರುದ್ಧವಾದ ಅಲೆ ಏಳುತ್ತಿದೆ ಎಂಬ ಭಾವನೆ ಶಾಸಕರುಗಳಲ್ಲಿ ಮೂಡಿ, ಬಿಜೆಪಿಗೆ ಸೇರಲು ಹಿಂದೇಟು ಹಾಕುವ ಸಾಧ್ಯತೆ ಇದೆ. ಸ್ವತಃ ಬಿಜೆಪಿಯ ಶಾಸಕರೇ ಉತ್ಸಾಹ ಕಳೆದುಕೊಳ್ಳುತ್ತಾರೆ. ಹಾಗಾಗಿ ಈ ಪಂಚ ರಾಜ್ಯ ಚುನಾವಣೆ ಮೈತ್ರಿ ಸರ್ಕಾರದ ಮೇಲೆ ಭಾರಿ ಪರಿಣಾಮ ಬೀರಲಿದೆ.