ಸಮನ್ವಯ ಸಮಿತಿ ಸಭೆ: ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕ್ಕೆ ಅಸ್ತು
Recommended Video
ಬೆಂಗಳೂರು, ಆಗಸ್ಟ್ 31: ಸಿದ್ದರಾಮಯ್ಯ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರದ ಮಹತ್ವದ 3ನೇ ಸಮನ್ವಯ ಸಮಿತಿ ಸಭೆ ಮುಗಿದಿದ್ದು, ಸಂಪುಟ ವಿಸ್ತರಣೆ ಸೇರಿದಂತೆ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಸಮನ್ವಯ ಸಮಿತಿಯು ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಸೆಪ್ಟೆಂಬರ್ ಮೂರನೇ ವಾರದಷ್ಟರಲ್ಲಿ ಕಾಂಗ್ರೆಸ್ನಲ್ಲಿ ಬಾಕಿ ಇರುವ ಆರು ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಅಲ್ಲಿಗೆ ಹೊಸದಾಗಿ ಆರು ಮಂದಿ ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ.
ಸಮನ್ವಯ ಸಮಿತಿ ಸಭೆಗೆ ಈ ಇಬ್ಬರು ಪ್ರಮುಖರಿಗೆ ಆಹ್ವಾನವಿಲ್ಲ!
ಸಿದ್ದರಾಮಯ್ಯ, ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ ಪರಮೇಶ್ವರ್, ಜೆಡಿಎಸ್ ರಾಷ್ಟ್ರೀಯ ಸಮನ್ವಯಕಾರ ಡಾನಿಷ್ ಅಲಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಸಭೆಯಲ್ಲಿ ಭಾಗವಹಿಸಿದ್ದರು.
ನಿಗಮ ಮಂಡಳಿ ಸ್ಥಾನ ಹಂಚಿಕೆ
ಬಹು ಚರ್ಚಿತ ನಿಗಮ ಮಂಡಳಿಗಳಿ ಹಂಚಿಕೆ ಬಗ್ಗೆಯೂ ಚರ್ಚೆ ನಡೆದಿದ್ದು, ಜೆಡಿಎಸ್-ಕಾಂಗ್ರೆಸ್ 70-30 ಅನುಪಾತದಲ್ಲಿ ನಿಗಮ ಮಂಡಳಿ ಸ್ಥಾನಗಳನ್ನು ಹಂಚಿಕೊಂಡಿದೆ. 20 ಕಾಂಗ್ರೆಸ್ ಶಾಸಕರಿಗೆ ಹಾಗೂ 10 ಜೆಡಿಎಸ್ ಶಾಸಕಗರಿಗೆ ನಿಗಮ ಮಂಡಳಿಗಳ ಸ್ಥಾನ ಸಿಗಲಿದೆ.
ವಿಧಾನಪರಿಷತ್ ಸ್ಥಾನದ ಚರ್ಚೆ ಇಲ್ಲ
ವಿಧಾನಪರಿಷತ್ಗೆ ಮೂರು ಸ್ಥಾನಗಳ ಅವಶ್ಯಕತೆ ಇದೆಯಾದರೂ ಈ ಸಭೆಯಲ್ಲಿ ಆ ಬಗ್ಗೆ ಚರ್ಚೆ ಮಾಡಲಾಗಿಲ್ಲ. ಕೇವಲ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕದ ಬಗ್ಗೆ ಚರ್ಚೆ ನಡೆದಿದೆ.
ಮೈತ್ರಿ ಸರ್ಕಾರದ ಪ್ರಥಮ ಸಂಪುಟ ಸಭೆಯ ಮಹತ್ವದ ನಿರ್ಣಯಗಳು
ಎಸ್ಸಿ, ಎಸ್ಟಿ ಬಡ್ತಿ ಮೀಸಲು ಚರ್ಚೆ
ಎಸ್ಎಸಿ, ಎಸ್ಟಿ ಬಡ್ತಿ ಮೀಸಲು ವಿಷಯದ ಬಗ್ಗೆಯೂ ಸಮನ್ವಯ ಸಮಿತಿಯಲ್ಲಿ ಚರ್ಚೆ ನಡೆದಿದ್ದು. ಸೆಪ್ಟೆಂಬರ್ 5ನೇ ತಾರೀಖು ನ್ಯಾಯಾಲಯದಲ್ಲಿ ವಿಚಾರಣೆ ಇದೆ ಆ ಬಳಿಕ ಮತ್ತೊಂದು ಸುತ್ತಿನ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಕೊಡಗು ಪರಿಸ್ಥಿತಿ ಬಗ್ಗೆ ಚರ್ಚೆ
ಕೊಡಗು ಪರಿಸ್ಥಿತಿ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿದ್ದು, ಸರ್ಕಾರದ ಪ್ರತಿನಿಧಿ ಆದ ಎಚ್ಡಿಕೆ ಮತ್ತು ಪರಮೇಶ್ವರ್ ಅವರು ಸಭೆಗೆ ಅಗತ್ಯ ಮಾಹಿತಿ ನೀಡಿದ್ದಾರೆ. ತ್ವರಿತ ಗತಿಯ ಪರಿಹಾರಕ್ಕೆ ಸಭೆಯು ಸೂಚಿಸಿದೆ ಅಲ್ಲದೆ ಕೇಂದ್ರದ ಮೇಲೆ ನೆರವಿಗೆ ಒತ್ತಡ ಹೇರುವಂತೆಯೂ ಸೂಚಿಸಲಾಗಿದೆ.
ಸಾಲಮನ್ನಾ ಎರಡೂ ಪಕ್ಷದ ನಿರ್ಣಯ
ಸಭೆಯ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ಸಾಲಮನ್ನಾ ನಿರ್ಣಯ ಎರಡೂ ಪಕ್ಷಗಳ ನಿರ್ಣಯವಾಗಿತ್ತು. ಅಷ್ಟೆ ಅಲ್ಲದೆ ಹಿಂದಿನ ಕಾಂಗ್ರೆಸ್ ಸರ್ಕಾರದ ಎಲ್ಲ ಯೋಜನೆಗಳನ್ನು ಮುಂದುವರೆಸಲಾಗುವುದು. ಅಕ್ಕಿ ಭಾಗ್ಯದಲ್ಲಿ ಕೊಡುವ ಅಕ್ಕಿಯ ಪ್ರಮಾಣವೂ ಕಡಿಮೆ ಆಗದು ಎಂದರು.