ಜಾತ್ಯಾತೀತರಿಂದಲೇ ದೇಶ ಉಳಿದಿರುವುದು: ಸೀತಾರಾಂ ಯೆಚೂರಿ
ಮೂಡಬಿದಿರೆ, ಜನವರಿ 02: ಜಾತ್ಯಾತೀತರಿಂದಲೇ ದೇಶ ಉಳಿದಿರುವುದು, ಕೋಮುವಾದಿಗಳು ದೇಶವನ್ನು ಹಾಳುಗೆಡವಬಲ್ಲರಷ್ಟೆ ಎಂದು ಸಿಪಿಎಂನ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ.
ಮೂಡುಬಿದಿರೆ ಯಲ್ಲಿ ಸಿಪಿಎಂ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ಧರ್ಮ, ಜಾತಿ, ಕುಲದ ಗುರುತನ್ನು ಮೀರಿ ಮೊದಲು ನಾನು ಭಾರತೀಯ ಎಂಬುವವರೇ ಜಾತ್ಯತೀತರು. ಅವರಿಂದಾಗಿಯೇ ದೇಶ ಉಳಿದಿದೆ ಎಂದರು.
ಸಂವಿಧಾನ ಕುರಿತು ಹೇಳಿಕೆ ನೀಡಿದ್ದ ಅನಂತ್ಕುಮಾರ್ ಹೆಗಡೆ ವಿರುದ್ಧ ಹರಿಹಾಯ್ದ ಅವರು 'ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಕೈಗೊಂಡ ಕೇಂದ್ರದ ಮಂತ್ರಿ ಅನಂತಕುಮಾರ್ ಹೆಗಡೆ ಈಗ ಸಂವಿಧಾನದ ಬದಲಾವಣೆ ಮಾತನಾಡುತ್ತಿದ್ದಾರೆ. ಜಾತ್ಯತೀತರಿಗೆ ಅಪ್ಪ, ಅಮ್ಮನ ಗುರುತಿಲ್ಲ ಎಂಬ ಕೀಳು ಹೇಳಿಕೆ ನೀಡಿದ್ದಾರೆ' ಎಂದರು.
ದೇಶ ಹಿಂದೆಂದೂ ಕಾಣದಂತಹ ಕೋಮುವಾದಿ ಧ್ರುವೀಕರಣದ ಅಪಾಯವನ್ನು ಈಗ ಕಾಣುತ್ತಿದೆ. ಅದರಿಂದ ಜನರ ನಿಜವಾದ ಸಮಸ್ಯೆಗಳು ಬದಿಗೆ ಸರಿಯುತ್ತಿವೆ. ಕೋಮುವಾದಿ ಕಾರ್ಯಸೂಚಿಯ ಮೂಲಕ ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಇದರಿಂದ ಬಂಡವಾಳ ಷಾಹಿಗಳ ಲಾಭ ಹೆಚ್ಚುತ್ತಿದೆ ಎಂದು ಟೀಕಿಸಿದರು.