ಪ್ರಧಾನಿ ಮೋದಿಗೆ ರಾಜ್ಯದಿಂದ ಹೋದ ಉಡುಗೊರೆ ಏನು ಗೊತ್ತಾ?
ಬೆಂಗಳೂರು, ಆ. 05: ಇಂದು ಅಯೋಧ್ಯೆಯಲ್ಲಿ ನಡೆದ ಶ್ರೀರಾಮಮಂದಿರ ನಿರ್ಮಾಣ ಭೂಮಿ ಪೂಜಾ ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ ಅವರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಉಡುಗೊರೆಯನ್ನು ಕೊಟ್ಟರು. ಆ ಉಡುಗೊರೆಯಲ್ಲಿ ಒಂದು ವಿಶೇಷತೆ ಇತ್ತು. ಯಾಕೆಂದರೆ ಆ ಉಡುಗೊರೆ ಕರ್ನಾಟಕದಿಂದಲೇ ಹೋಗಿತ್ತು. ಸಿಎಂ ಯೋಗಿ ಆದಿತ್ಯನಾಥ ಅವರು ಕೊಟ್ಟ ಉಡುಗೊರೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರೂ ಖುಷಿಯಾಗಿದ್ದರು.
Recommended Video
ಹೌದು, ರಾಜ್ಯದಲ್ಲಿ ತಯಾರಾಗಿರುವ ಉಡುಗೊರೆಯನ್ನು ಉತ್ತರ ಪ್ರದೇಶ ಸರ್ಕಾರದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯೋಗಿ ಆದಿತ್ಯನಾಥ ಅವರು ಕೊಟ್ಟಿದ್ದಾರೆ. ಅದು ಯಾವ ಉಡುಗೊರೆ? ಎಲ್ಲಿ ತಯಾರಿಸಲಾಗಿತ್ತು? ಯಾರು ನಿರ್ಮಾಣ ಮಾಡಿದ್ದು? ಎಲ್ಲ ವಿವರ ಇಲ್ಲಿದೆ.
ಪ್ರಧಾನಿಗೆ ಉಡುಗೊರೆ
ಇಂದು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾನ ಸಮಾರಂಭ ನಡೆಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಿದರು. ಶ್ರೀರಾಮಮಂದಿರ ನಿರ್ಮಾಣಕ್ಕೆ ಶ್ರಮಿಸಿದವರನ್ನು ಸ್ಮರಿಸಿದರು. ಅದಾದ ಬಳಿಕ ಸುಂದರವಾದ ಶ್ರೀ ಕೋದಂಡರಾಮ ಮೂರ್ತಿಯನ್ನು ಸಿಎಂ ಯೋಗಿ ಆದಿತ್ಯನಾಥ ಅವರು ಪ್ರಧಾನಿ ಮೋದಿ ಅವರಿಗೆ ಉಡುಗೊರೆ ನೀಡಿದರು.
ಟೆಂಟಿನಲ್ಲಿದ್ದ ರಾಮ ಭವ್ಯ ಮಂದಿರಕ್ಕೆ ಬಂದ: ಪ್ರಧಾನಿ ಮೋದಿ
ಕಟ್ಟಿಗೆಯಲ್ಲಿ ತಯಾರಿಸಲಾಗಿರುವ ಶ್ರೀ ಕೋದಂಡರಾಮನ ಮೂರ್ತಿಯನ್ನು ತಯಾರಿಸಲು ಶಿಲ್ಪಿ ಸುಮಾರು 6 ತಿಂಗಳುಗಳ ಶ್ರಮಿಸಿದ್ದಾರೆಂದು ವೇದಿಕೆಯಲ್ಲಿ ಘೋಷಣೆ ಮಾಡಲಾಯ್ತು. ನಂತರ ಕೋದಂಡರಾಮನ ಮೂರ್ತಿಯನ್ನು ಪ್ರಧಾನಿ ಮೋದಿ ಅವರಿಗೆ ಸಿಎಂ ಯೋಗಿ ಆದಿತ್ಯನಾಥ ಅವರು ನೀಡಿದರು.
ತೇಗದ ಕಟ್ಟಿಗೆ ಮೂರ್ತಿ
ಪ್ರಧಾನಿ ಮೋದಿ ಅವರಿಗೆ ಉಡುಗೊರೆ ಕೊಡಲಾದ ಕಟ್ಟಿಗೆ ಮೂರ್ತಿ ತಯಾರಾಗಿದ್ದು ತೇಗದ ಕಟ್ಟಿಗೆಯಲ್ಲಿ. ದಕ್ಷಿಣ ಭಾರತದ ಶೈಲಿಯಲ್ಲಿ ಮೂರ್ತಿಯನ್ನು ಕೆತ್ತನೆ ಮಾಡಲಾಗಿದೆ.
ಬೆಂಗಳೂರಿನ ನಿವಾಸಿ ಶಿಲ್ಪಿ ಪಿ. ರಾಮಮೂರ್ತಿ ಅವರು ಎರಡೂವರೆ ತಿಂಗಳುಗಳ ಅವಧಿಯಲ್ಲಿ 3 ಅಡಿಗಳ ಎತ್ತರದ ಶ್ರೀಕೋದಂಡರಾಮನ ಮೂರ್ತಿಯನ್ನು ಕೆತ್ತನೆ ಮಾಡಿದ್ದಾರೆ. ಈ ಮೊದಲು 7.5 ಅಡಿ ಎತ್ತರದ ಕೋದಂಡರಾಮನ ಮೂರ್ತಿಯನ್ನು ಕೆತ್ತನೆ ಮಾಡಿದ್ದರು. ಅದಕ್ಕಾಗಿ ರಾಷ್ಟ್ರಮಟ್ಟದ ಪ್ರಶಸ್ತಿಗೂ ಭಾಜನರಾಗಿದ್ದರು. ಆ ಕೊನೆಗೆ ಮೂರ್ತಿಯನ್ನು ಅಯೋಧ್ಯಾ ಸಂಸ್ಥಾನ ಖರೀದಿಸಿತ್ತು. ಹೀಗಾಗಿ ಪ್ರಧಾನಿ ಅವರಿಗೆ ಉಡುಗೊರೆ ಕೊಡಲು ಅಂಥದ್ದೆ ಮೂರ್ತಿ ಕೆತ್ತನೆ ಮಾಡಿಕೊಡಲು ಉತ್ತರ ಪ್ರದೇಶ ಸರ್ಕಾರ ಮನವಿ ಮಾಡಿಕೊಂಡಿತ್ತು.
ತುಂಬಾ ಖುಷಿಯಾಗಿದೆ
ನಾನು ಕೆತ್ತನೆ ಮಾಡಿರುವ ಶ್ರೀ ಕೋದಂಡರಾಮನ ಮೂರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆ ಕೊಟ್ಟಿರುವುದು ತುಂಬಾ ಖುಷಿಯಾಗಿದೆ ಎಂದು ಶಿಲ್ಪಿ ಪಿ. ರಾಮಮೂರ್ತಿ ಸಂತಸವನ್ನು ಹಂಚಿಕೊಂಡಿದ್ದಾರೆ.
ರಾಮಮಂದಿರ ಭೂಮಿ ಪೂಜೆ ಕರ್ನಾಟಕದ ಕೊಡುಗೆಯೇನು?
ಕಳೆದ 6 ತಿಂಗಳುಗಳ ಹಿಂದೆ ಒಟ್ಟು ಮೂರು ಮೂರ್ತಿಗಳನ್ನು ತಯಾರಿಸಿ ಕೊಡಲು ಉತ್ತರ ಪ್ರದೇಶ ಆರ್ಡರ್ ಕೊಟ್ಟಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರಿಗೆ ಉಡುಗೊರೆ ಕೊಡಲು ಮೂರ್ತಿಗಳು ಬೇಕು ಎಂದು ತಿಳಿಸಿದ್ದರು. ಪ್ರಧಾನಿಗಳಿಗೆ ಕೊಟ್ಟಿರುವ ಮೂರ್ತಿಯೂ ಸೇರಿದಂತೆ ಮೂರು ಮೂರ್ತಿಗಳನ್ನು ದಕ್ಷಿಣ ಭಾರತದ ಶೈಲಿಯಲ್ಲಿ ನಿರ್ಮಿಸಿ ಕಳುಹಿಸಿದ್ದರು.
ಮೊದಲೇ ಗೊತ್ತಿತ್ತು
ಆರ್ಡರ್ ಕೊಡುವಾಗ ಉಡುಗೊರೆಯನ್ನು ಯಾರಿಗೆ ಕೊಡಲು ಎಂದು ಅವರು ತಿಳಿಸಿರಲಿಲ್ಲ. ನಂತರ ಶ್ರೀ ಕೋದಂಡರಾಮನ ಮೂರ್ತಿಯನ್ನು ಪ್ರಧಾನಿ ಮಂತ್ರಿಗಳಿಗೆ ಉಡುಗೊರೆ ಕೊಡಲಾಗುವುದು ಎಂದು ನನಗೆ ತಿಳಿಸಲಾಗಿತ್ತು. ಆಗಷ್ಟ್ 5ಕ್ಕೆ ಪ್ರಧಾನಿಗಳಿಗೆ ಉಡುಗೊರೆ ಕೊಡಲು ಬೇಕು ಎಂದು ಆರ್ಡರ್ ಕೊಟ್ಟವರು ತಿಳಿಸಿದ್ದರು. ಆಗಷ್ಟ್ 1 ರಂದು ಅಯೋಧ್ಯೆಗೆ ಕೋದಂಡರಾಮನ ಮೂರ್ತಿಯನ್ನು ಕಳುಹಿಸಿದ್ದೆ ಎಂದು ಶಿಲ್ಪಿ ಪಿ. ರಾಮಮೂರ್ತಿ ಹೇಳಿದರು.
ಇಂದು ನಾನು ನಿರ್ಮಿಸಿದ್ದ ಮೂರ್ತಿಯನ್ನು ಪ್ರಧಾನಿಗಳಿಗೆ ಉಡುಗೊರೆ ರೂಪದಲ್ಲಿ ಕೊಟ್ಟಿರುವುದು ಖುಷಿಯಾಗಿದೆ ಎಂದರು.