ಯಡಿಯೂರಪ್ಪ ಕಾವೇರಿಗೆ ವಾಸ್ತವ್ಯ ಬದಲಿಸುತ್ತಿರುವುದೇಕೆ?
ಬೆಂಗಳೂರು, ಫೆ. 22: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಾಸ ಮಾಡಬೇಕು ಎಂದು ಕೊಂಡಿರುವ ಕಾವೇರಿ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮುಂದಿನ ಕೆಲವೇ ದಿನಗಳಲ್ಲಿ ಅಧಿಕೃತ ಕಾವೇರಿ ನಿವಾಸಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಈಗಿನ ಡಾಲರ್ಸ್ ಕಾಲನಿಯ ಖಾಸಗಿ ನಿವಾಸ 'ಧವಳಗಿರಿ'ಯಿಂದ ಕಾವೇರಿಗೆ ವಾಸ್ತವ್ಯ ಬದಲಿಸಲಿದ್ದಾರೆ.
ಹೀಗಾಗಿ ಮನೆ ಪ್ರವೇಶಕ್ಕೆ ಮೊದಲು ಅಲ್ಲಿ ನಡೆದಿರುವ ಸಿದ್ದತೆಗಳನ್ನು ಯಡಿಯೂರಪ್ಪ ಪರಿಶೀಲಿಸಿದ್ದಾರೆ. ವಾಸ್ತುಪ್ರಕಾರವೇ ಬಂಗಲೇ ನವೀಕರಣ ನಡೆದಿದೆ. ಹೀಗಾಗಿ ಅದೃಷ್ಟದ ನಿವಾಸ ಎಂದೇ ಗುರುತಿಸಿದ್ದ ರೇಸ್ಕೋರ್ಸ್ ರಸ್ತೆಯ ಕಾಟೇಜ್ ನಂಬರ್ 2ರ ಬದಲಿಗೆ ಕಾವೇರಿ ನಿವಾಸಕ್ಕೆ ವಾಸ್ತವ್ಯ ಬದಲಿಸಲು ಸಿಎಂ ಮುಂದಾಗಿದ್ದಾರೆ.
ಕಾವೇರಿ ನಿವಾಸ ಖಾಲಿ ಮಾಡುತ್ತಿಲ್ಲವೇಕೆ ಮಾಜಿ ಸಿಎಂ ಸಿದ್ದರಾಮಯ್ಯ?
ಸಿಎಂ ಗೃಹಕಚೇರಿ ಕೃಷ್ಣಾಕ್ಕೆ ಹೊಂದಿಕೊಂಡಂತಿರುವ ಸಿಎಂ ಅಧಿಕೃತ ನಿವಾಸ ಕಾವೇರಿಗೆ ಭೇಟಿ ಕೊಟ್ಟು ಮನೆ ನವೀಕರಣ ಪರಿಶೀಲನೆ ನಡೆಸಿದ್ದಾರೆ. ಯಾವ ಹಂತದಲ್ಲಿ ನವೀಕರಣ ಆಗ್ತಿದೆ, ಹೇಗೆ ಮನೆ ಸಿದ್ಧವಾಗುತ್ತಿದೆ ಎಂಬುದನ್ನು ಖುದ್ದಾಗಿ ನೋಡಿದ್ದಾರೆ. ಜೊತೆಗೆ ಸ್ವಲ್ಪ ಹೊತ್ತು ಅಲ್ಲಿಯೇ ಇದ್ದು ಮನೆಯ ಒಳಗೆ ಹಾಗೂ ಹೊರಗೆ ಸುತ್ತಾಡಿದ್ದಾರೆ. ಮುಂದಿನ ವಾರವೇ ಸರ್ಕಾರಿ ಬಂಗಲೆ ಕಾವೇರಿಗೆ ಯಡಿಯೂರಪ್ಪ ಅವರು ವಾಸ್ತವ್ಯ ಬದಲಿಸಲಿದ್ದಾರೆ.
ಇತ್ತೀಚೆಗೆ ಕಾವೇರಿ ತೆರವು ಮಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ
ಈ ಮೊದಲು ಸರ್ಕಾರಿ ಬಂಗಲೆ ಕಾವೇರಿಯಲ್ಲಿ ಸಿಎಂ ಆಗಿದ್ದಾಗ ಜಗದೀಶ್ ಶೆಟ್ಟರ್ ವಾಸ್ತವ್ಯ ಮಾಡಿದ್ದರು. ಬಳಿಕ ಕಾಂಗ್ರೆಸ್ ಸರ್ಕಾರ ಬಂದಾಗ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ವಾಸ್ತವ್ಯ ಮಾಡಿದ್ದರು. ಬಳಿಕ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೂ ಸಿದ್ದರಾಮಯ್ಯ ಅವರು ಅದೇ ಬಂಗಲೆಯಲ್ಲಿ ವಾಸವಾಗಿದ್ದರು. ಇದೀಗ ಬಿಜೆಪಿ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರಿಗೆ ಮನೆ ತೆರವುಗೊಳಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕೇಳಿಕೊಂಡಿತ್ತು. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕುಮಾರಕೃಪಾ ರಸ್ತೆಯ ಸರ್ಕಾರಿ ಬಂಗಲೆಯನ್ನು ಹಂಚಿಕೆ ಮಾಡಲಾಗಿತ್ತು. ಸಿದ್ದರಾಮಯ್ಯ ಅವರು ಕುಮಾರಕೃಪಾ ರಸ್ತೆಯ ನಿವಾಸಕ್ಕೆ ವಾಸ್ತವ್ಯ ಬದಲಿಸಿದ ಬಳಿಕ ಇದೀಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕಾವೇರಿ ನಿವಾಸವನ್ನು ಸಿದ್ಧಗೊಳಿಸಲಾಗುತ್ತಿದೆ.
ಕಾವೇರಿ ನಿವಾಸಕ್ಕಾಗಿ ಸಿಎಂ, ಮಾಜಿ ಸಿಎಂ ಮಧ್ಯೆ ನಡೆದಿದ್ದ ಹಗ್ಗ ಜಗ್ಗಾಟ
ಕಾವೇರಿ ಸರ್ಕಾರಿ ಬಂಗಲೆಗಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಧ್ಯೆ ಸಣ್ಣ ಮಟ್ಟದ ಹಗ್ಗಜಗ್ಗಾಟವೂ ನಡೆದಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಉಪಚುನಾವಣೆಯ ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕಾವೇರಿ ಖಾಲಿ ಮಾಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕೇಳಿಕೊಂಡಿತ್ತು.
ಸಿಎಂ ಯಡಿಯೂರಪ್ಪಗೆ 78; ಅದ್ದೂರಿ ಜನ್ಮದಿನದ ವಿಶೇಷತೆ ಏನು?
ಆದರೆ ಅದೇ ನಿವಾಸವನ್ನು ಹಂಚಿಕೆ ಮಾಡಬೇಕು ಎಂದು ಸಿದ್ದರಾಮಯ್ಯ ಅವರು ಇಲಾಖೆಗೆ ಪತ್ರ ಬರೆದಿದ್ದರು. ತಮಗೆ ಅದೃಷ್ಟದ ನಿವಾಸವೆಂದೇ ಸಿದ್ದರಾಮಯ್ಯ ಅವರು ಕಾವೇರಿ ಬಂಗಲೆ ತೆರವು ಮಾಡಲು ಒಪ್ಪಿರಲಿಲ್ಲ.
ಕೊನೆಗೆ ಮುಖ್ಯಮಂತ್ರಿಗಳ ಕಾರ್ಯನಿರ್ವಹಣೆ ದೃಷ್ಟಿಯಿಂದ ಗೃಹಕಚೇರಿ ಕೃಷ್ಣಾಕ್ಕೆ ಹೊಂದಿಕೊಂಡಂತಿರುವ ಕಾವೇರಿ ನಿವಾಸ ಖಾಲಿ ಮಾಡಬೇಕೆಂದು ಇಲಾಖೆ ಸೂಚಿಸಿತ್ತು. ಕೆಲ ದಿನಗಳ ಹಿಂದೆ ಕುಮಾರಕೃಪಾ ರಸ್ತೆಯ ಸರ್ಕಾರಿ ಬಂಗಲೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಾಸ್ತವ್ಯ ಬದಲಿಸಿದ್ದಾರೆ.
ಅದೃಷ್ಟದ ರೇಸ್ಕೋರ್ಸ್ ರಸ್ತೆ ನಿವಾಸಕ್ಕೆ ಹೋಗದ ಯಡಿಯೂರಪ್ಪ
ಕಳೆದ 2019ರ ಜುಲೈ ತಿಂಗಳಿನಲ್ಲಿ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅದೃಷ್ಟದ ಮನೆ ರೇಸ್ಕೋರ್ಸ್ ರಸ್ತೆಯ ಕಾಟೇಜ್ ನಂಬರ್ 2ಕ್ಕೆ ವಾಸ್ತವ್ಯ ಬದಲಿಸಲು ಚಿಂತನೆ ನಡೆಸಿದ್ದರು. ಅದಕ್ಕಾಗಿ ಅಲ್ಲಿ ವಾಸ್ತವ್ಯ ಮಾಡಿದ್ದ ಆಗಿನ ಸಚಿವ ಸಾ.ರಾ. ಮಹೇಶ್ ಅವರಿಗೆ ಮನೆ ತೆರವುಗೊಳಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸೂಚಿಸಿತ್ತು.
ಆದರೆ ಕೊನೆಯ ಕ್ಷಣದಲ್ಲಿ ನಿರ್ಧಾರ ಬದಲಿಸಿದ ಸಿಎಂ ಯಡಿಯೂರಪ್ಪ ಅವರು ಆಗ ಡಾಲರ್ಸ್ ಕಾಲನಿಯ ಖಾಸಗಿ ನಿವಾಸದಲ್ಲಿಯೇ ವಾಸ್ತವ್ಯ ಮಾಡಲು ತೀರ್ಮಾನ ಮಾಡಿದ್ದರು. ಜೊತೆಗೆ ಸರ್ಕಾರ ಸ್ಥಿರವಾಗುವವರೆಗೆ ವಾಸಸ್ಥಳ ಬದಲಿಸದಂತೆ ಜ್ಯೋತಿಷಿಗಳು ಹೇಳಿದ್ದರಂತೆ. ಹೀಗಾಗಿ ಉಪಚುನಾವಣೆಯಲ್ಲಿ ಗೆಲವು ಸಾಧಿಸುತ್ತಿದ್ದಂತೆಯೆ ಕಾವೇರಿ ನಿವಾಸಕ್ಕೆ ವಾಸ್ತವ್ಯ ಬದಲಿಸಲು ಯಡಿಯೂರಪ್ಪ ತೀರ್ಮಾನ ಮಾಡಿದ್ದರು.
ರೇಸ್ಕೋರ್ಸ್ ರಸ್ತೆಯ ಅದೃಷ್ಟದ ಬಂಗಲೆ ಬೇಡವೆಂದು ಸಲಹೆ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ರೇಸ್ಕೋರ್ಸ್ ರಸ್ತೆಯ ಕಾಟೇಜ್ ನಂಬರ್ 2 ಅದೃಷ್ಟದ ಮನೆ ಎಂದೆ ಭಾವಿಸಲಾಗಿತ್ತು. ಹೀಗಾಗಿ ಯಡಿಯೂರಪ್ಪ ಅವರು ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುವುದಕ್ಕಿಂದ ಮೊದಲು ಅದೇ ನಿವಾಸದಲ್ಲಿ ವಾಸ್ತವ್ಯ ಮಾಡಿದ್ದರು. ಬಳಿಕ 20:20 ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾದ ಬಳಿಕವೂ ರೇಸ್ಕೋರ್ಸ್ ರಸ್ತೆ ನಿವಾಸದಲ್ಲಿಯೇ ವಾಸ್ತವ್ಯ ಮಾಡಿದ್ದರು.
ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಪತನವಾಗಿ ಮತ್ತೆ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗ ಬಳಿಕವೂ ಅದೇ ನಿವಾಸದಲ್ಲಿ ವಾಸ್ತವ್ಯ ಮುಂದುವರೆಸಿದ್ದರು. ಆದರೆ ಅದಾದ ಬಳಿಕ ಬಂದ ಆರೋಪಗಳಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿ ಬಂದಿತ್ತು. ಹೀಗಾಗಿ ರೇಸ್ಕೋರ್ಸ್ ರಸ್ತೆಯ ನಿವಾಸದಲ್ಲಿ ವಾಸ್ತವ್ಯ ಬೇಡ ಎಂದು ಆಪ್ತರು ಒತ್ತಾಯ ಮಾಡಿದ್ದರು. ಹೀಗಾಗಿ ಇದೀಗ ಅಧಿಕೃತ ನಿವಾಸವನ್ನಾಗಿ ಕಾವೇರಿ ಬಂಗಲೆಯನ್ನು ಸಿಎಂ ಯಡಿಯೂರಪ್ಪ ಆಯ್ದುಕೊಂಡಿದ್ದಾರೆ.