ಬಿಎಸ್ವೈ ಆ ಒಂದು ನಿರ್ಧಾರ: ಹಳಿ ತಪ್ಪಿದ್ದ ಕೊರೊನಾ ನಿರ್ವಹಣೆ ನಿಧಾನವಾಗಿ ಟ್ರ್ಯಾಕಿಗೆ
ಬೆಂಗಳೂರು, ಮೇ 12: ಒಂದರ ಮೇಲೊಂದು ಸಮಸ್ಯೆಗಳ ಆಗರದಲ್ಲಿ ಸಿಲುಕಿ, ಕೊರೊನಾ ನಿರ್ವಹಣೆ ಸರಿದಾರಿಗೆ ತರಲಾಗದೇ ಕೈಚೆಲ್ಲಿ ಕೂತಿದ್ದ ರಾಜ್ಯ ಸರಕಾರ, ಈಗ ನಿಧಾನವಾಗಿ ಪರಿಸ್ಥಿತಿಯ ಮೇಲೆ ನಿಯಂತ್ರಣ ಸಾಧಿಸುತ್ತಿದೆ.
ಬೆಡ್ ಸಮಸ್ಯೆ, ಆಕ್ಸಿಜನ್ ಇಲ್ಲ, ವೆಂಟಿಲೇಟರ್ ಕೊರತೆ, ಖಾಸಗಿ ಆಸ್ಪತ್ರೆಗಳು ಕೊಟ್ಟ ಆದೇಶ ಪಾಲಿಸುತ್ತಿಲ್ಲ, ಸ್ಮಶಾನದಲ್ಲಿ ಶವಸಂಸ್ಕಾರಕ್ಕೆ ಕ್ಯೂ, ಅಂಬುಲೆನ್ಸ್ ಅಭಾವ.. ಹೀಗೆ, ಒಂದರ ಮೇಲೊಂದು ಸಮಸ್ಯೆಗಳ ಬೆಟ್ಟವೇ ತಲೆ ಏರಿ ಕೂತಿದ್ದಾಗ, ಅಕ್ಷರಸಃ ಯಡಿಯೂರಪ್ಪ ಸರಕಾರ ತಬ್ಬಿಬ್ಬಾಗಿ ಹೋಗಿತ್ತು.
ಕೊರೊನಾ ಎರಡನೇ ಅಲೆ: ರಾಜಧಾನಿ ಬೆಂಗಳೂರಿನಿಂದ ಶುಭಸುದ್ದಿ
ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 23 ಜನ ಸಾವನ್ನಪ್ಪಿದ ನಂತರ ಧುತ್ತೆಂದು ಎದ್ದು ಕೂತ ಸಿಎಂ ಯಡಿಯೂರಪ್ಪ, ಕೊರೊನಾ ನಿರ್ವಹಣೆಯ ವಿಚಾರದಲ್ಲಿ ಭಾರೀ ಬದಲಾವಣೆಯನ್ನು ಮಾಡಿದರು. ತಮ್ಮ ರಾಜಕೀಯ ವೃತ್ತಿ ಜೀವನದ ಎಲ್ಲಾ ಅನುಭವಗಳನ್ನು ಬಳಸಿಕೊಂಡು ನೇರವಾಗಿ ಕೊರೊನಾ ನಿರ್ವಹಣೆಯನ್ನು ತನ್ನ ಹೆಗಲ ಮೇಲೆ ತೆಗೆದುಕೊಂಡರು.
ಹಾಗಂತ, ಪರಿಸ್ಥಿತಿ ಈಗ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಖಂಡಿತವಾಗಿ ಹೇಳಲಾಗದಿದ್ದರೂ, ಕಳೆದ ಹತ್ತು ದಿನಗಳಿಂದ ಎದುರಿಸುತ್ತಿದ್ದ ಗಂಭೀರ ಸಮಸ್ಯೆಗಳಿಗೆ ಒಂದೊಂದಾಗಿಯೇ ತಕ್ಕ ಮಟ್ಟಿನ ಪರಿಹಾರ ಕಂಡುಕೊಳ್ಳಲು ಸರಕಾರಕ್ಕೆ ಸಾಧ್ಯವಾಗುತ್ತಿದೆ. (ಲಸಿಕೆ ಹೊರತು ಪಡಿಸಿ).
ಕೊರೊನಾ ನಿಯಂತ್ರಣಕ್ಕೆ ದೇಶಕ್ಕೆ ಮಾದರಿ: ಏನಿದು 'ಮುಂಬೈ ಮಾಡೆಲ್', ಯಾರಿದರ ನಾಯಕ?
ಕೊರೊನಾ ನಿರ್ವಹಣೆಯ ವಿಚಾರದಲ್ಲಿ ಆರೋಗ್ಯ ಸಚಿವರು ಅಸಮರ್ಥರು
ಕೊರೊನಾ ನಿರ್ವಹಣೆಯ ವಿಚಾರದಲ್ಲಿ ಆರೋಗ್ಯ ಸಚಿವರು ಅಸಮರ್ಥರು ಎಂದು ವಿರೋಧ ಪಕ್ಷಗಳ ಆಕ್ರೋಶ ವ್ಯಕ್ತ ಪಡಿಸುತ್ತಲೇ ಇದ್ದವು. ಈ ಮಾತು ಸಾರ್ವಜನಿಕ ವಲಯದಲ್ಲೂ ದೊಡ್ಡ ಸದ್ದು ಮಾಡಲಾರಂಭಿಸಿತು. ಅದೇ ಸಮಯಕ್ಕೆ ಸರಿಯಾಗಿ ಚಾಮರಾಜನಗರ, ಕಲಬುರಗಿ, ಬೀದರ್ ಮುಂತಾದ ಕಡೆ ಆಕ್ಸಿಜನ್ ಅಭಾವದಿಂದ ಜನರು ಸಾವನ್ನಪ್ಪಿದರು. ಕೂಡಲೇ ಸಭೆ ಕರೆದ ಸಿಎಂ ಬಿಎಸ್ವೈ ಅವರು ಡಾ. ಸುಧಾಕರ್ ಮೇಲಿದ್ದ ಜವಾಬ್ದಾರಿಯನ್ನು ಐದು ಹಿರಿಯ ಸಚಿವರಿಗೆ ಹಂಚಿದರು. ಒಂದು ಲೆಕ್ಕದಲ್ಲಿ ಸುಧಾಕರ್ ಅವರು ಲೆಕ್ಕಕ್ಕೆ ಮಾತ್ರ ಈಗ ಆರೋಗ್ಯ ಸಚಿವರಂತಾಗಿದ್ದಾರೆ.
ಜಿಲ್ಲಾ ಉಸ್ತುವಾರಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಯಿತು
ಕೊರೊನಾ ವ್ಯಾಪಕವಾಗಿ ಇತರ ನಗರ, ಪಟ್ಟಣಗಳಿಗೆ ಹರಡಲು ಆರಂಭಿಸಿದ ನಂತರ ಜಿಲ್ಲಾ ಉಸ್ತುವಾರಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿದರು. ಎಲ್ಲಾ ಉಸ್ತುವಾರಿಗಳನ್ನು ಕೊರೊನಾ ನಿಯಂತ್ರಣಕ್ಕೆ ಬರುವ ತನಕ ಬೆಂಗಳೂರಿಗೆ ಕಾಲಿಡಬೇಡಿ, ನಿಮ್ಮ ಜಿಲ್ಲೆಗೆ ಹೋಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಿ ಎಂದು ಫರ್ಮಾನು ಹೊರಡಿಸಿದರು. ಇದಾದ ಮೇಲೂ, ಕೆಲವು ಉಸ್ತುವಾರಿಗಳು ಸಿಎಂ ಮುಂದೆ ಕಾಣಿಸಿಕೊಂಡಾಗ, ಎಲ್ಲರ ಮುಂದೆಯೇ ತರಾಟೆಗೆ ತೆಗೆದುಕೊಂಡರು ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.
ಆಮ್ಲಜನಕ ವ್ಯವಸ್ಥೆ ಮಾಡುವ ಜವಾಬ್ದಾರಿ ಜಗದೀಶ್ ಶೆಟ್ಟರ್
ವಿವಿಧ ಕಂಪೆನಿಗಳು ಮತ್ತು ಕೇಂದ್ರ ಸರಕಾರದ ಜೊತೆಗೆ ಮಾತುಕತೆ ನಡೆಸಿ ಆಮ್ಲಜನಕ ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ಜಗದೀಶ್ ಶೆಟ್ಟರ್ ಅವರಿಗೆ ಸಿಎಂ ಬಿಎಸ್ವೈ ವಹಿಸಿದ್ದರು. ಕೊಟ್ಟ ಕೆಲಸವನ್ನು ವಿಶೇಷ ಮುತುವರ್ಜಿಯಿಂದಲೇ ಮಾಡುತ್ತಿರುವ ಶೆಟ್ಟರ್, ಕೇಂದ್ರ ಮತ್ತು ಜಿಂದಾಲ್ ಮುಂತಾದ ಕಂಪೆನಿಗಳ ಜೊತೆ ಮಾತುಕತೆ ನಡೆಸಿ, ಈ ಸಮಸ್ಯೆಯನ್ನು ತಕ್ಕಮಟ್ಟಿಗೆ ಸರಿದಾರಿಗೆ ತರುತ್ತಿದ್ದಾರೆ.
ವಾರ್ ರೂಂ ಜವಾಬ್ದಾರಿಯನ್ನು ಅರವಿಂದ ಲಿಂಬಾವಳಿಗೆ ವಹಿಸಲಾಯಿತು
ಇನ್ನು, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮತ್ತು ಬಿಜೆಪಿ ಶಾಸಕರು ಬಿಬಿಎಂಪಿ ವಾರ್ ರೂಂಗೆ ದಾಳಿ ಮಾಡಿದ ನಂತರ, ಆ ವಿಚಾರ ಡೈವರ್ಟ್ ಆದ ರೀತಿಯಿಂದ ಬಿಎಸ್ವೈ ಸರಕಾರಕ್ಕೆ ದೊಡ್ಡ ಮುಜುಗರವೇ ಎದುರಾಯಿತು. ಇದರಿಂದ, ವಾರ್ ರೂಂ ಜವಾಬ್ದಾರಿಯನ್ನು ಅರವಿಂದ ಲಿಂಬಾವಳಿಗೆ ವಹಿಸಲಾಯಿತು. ಇದಾದ ಮೇಲೆ ಬೆಡ್ ಹಂಚಿಕೆಯಲ್ಲಿ ಬದಲಾವಣೆ ಕಾಣಬಹುದಾಗಿದ್ದು, ಪಾರದರ್ಶಕತೆ ನಿಧಾನವಾಗಿ ಗೋಚರಿಸಲಾರಂಭಿಸಿದೆ.
ಔಷಧದ ಹೊಣೆಯನ್ನು ಡಿಸಿಎಂ ಡಾ.ಅಶ್ವಥ್ ನಾರಾಯಣ ಅವರಿಗೆ ಸಿಎಂ ವಹಿಸಿದ್ದರು
ಔಷಧದ ಹೊಣೆಯನ್ನು ಡಿಸಿಎಂ ಡಾ.ಅಶ್ವಥ್ ನಾರಾಯಣ ಅವರಿಗೆ ಸಿಎಂ ವಹಿಸಿದ್ದರು. ದಿನಂಪ್ರತಿ 35 ಸಾವಿರ ರೆಮ್ಡಿಸಿವರ್ ಚುಚ್ಚುಮದ್ದಿನ ಅವಶ್ಯಕತೆಯಿದೆ. ಆದರೆ, ಕಾಳಸಂತೆಯಲ್ಲಿ ಇದು ಬೇಕಾಬಿಟ್ಟಿ ಬೆಲೆಗೆ ಮಾರಾಟವಾಗುತ್ತಿತ್ತು. ಸರಕಾರದ ಮನವಿಗೆ ಸರಿಯಾಗಿ ಸ್ಪಂದಿಸದ ಔಷಧ ಪೂರೈಸುವ ಸಿಪ್ಲಾ, ಮೈಲಾನ್ ಮುಂತಾದ ಕಂಪೆನಿಗಳಿಗೆ ಸರಕಾರ ಎಚ್ಚರಿಕೆಯ ನೊಟೀಸ್ ನೀಡಿತು. ಈಗ, ಸದ್ಯ 10 ಸಾವಿರ ರೆಮ್ಡಿಸಿವರ್ ಲಭ್ಯವಾಗುತ್ತಿದ್ದ ಜಾಗದಲ್ಲಿ 25ಸಾವಿರ ಪೂರೈಕೆ ಆಗುತ್ತಿದೆ.
ಬೆಡ್ ವ್ಯವಸ್ಥೆ ಜವಾಬ್ದಾರಿ ಆರ್.ಅಶೋಕ್ ಮತ್ತು ಬಸವರಾಜ ಬೊಮ್ಮಾಯಿಗೆ
ಬೆಡ್ ವ್ಯವಸ್ಥೆಯನ್ನು ಆರ್.ಅಶೋಕ್ ಮತ್ತು ಬಸವರಾಜ ಬೊಮ್ಮಾಯಿಗೆ ಮುಖ್ಯಮಂತ್ರಿಗಳು ವಹಿಸಿದ್ದರು. ಇದಾದ ನಂತರ ಸತತ ಸಭೆಗಳನ್ನು ನಡೆಸಿದ ಈರ್ವರು ಸಚಿವರು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು ಎರಡು ಸಾವಿರ ಹೆಚ್ಚುವರಿ ಬೆಡ್ ಪಡೆಯಲು ಇದುವರೆಗೆ ಶಕ್ತರಾಗಿದ್ದಾರೆ.
ಯುದ್ದ ಗೆದ್ದಾಯಿತೆಂದು, ಈಗಲೇ ಮೈಮೆರೆತರೆ ಎಲ್ಲಾ ಪ್ರಯತ್ನ ನೀರಿನಲ್ಲಿ ಹೋಮ
ಆಕ್ಸಿಜನ್ ಬೆಡ್ ನೀಡಲೂ ಖಾಸಗಿ ಆಸ್ಪತ್ರೆಗಳು ಈಗ ಮುಂದೆ ಬರುತ್ತಿವೆ. ಒಂಬತ್ತು ನೋಡಲ್ ಆಫೀಸರ್ ಗಳ ತಂಡಗಳನ್ನು ನಿಯೋಜಿಸಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಬೆಡ್ ಸಿಗುವ ನಿರಂತರ ಪ್ರಯತ್ನ ಇವರಿಬ್ಬರಿಂದ ನಡೆಯುತ್ತಿದೆ. ಒಟ್ಟಿನಲ್ಲಿ (ಲಸಿಕೆ ಹೊರತು ಪಡಿಸಿ) ಸ್ವಲ್ಪಮಟ್ಟಿನ ನಿಯಂತ್ರಣ ಬಿಎಸ್ವೈ ಸರಕಾರಕ್ಕೆ ಕೊರೊನಾ ನಿರ್ವಹಣೆಯಲ್ಲಿ ಸಿಗುತ್ತಿದೆ. ಆದರೆ, ಯುದ್ದ ಗೆದ್ದಾಯಿತೆಂದು, ಈಗಲೇ ಮೈಮೆರೆತರೆ ಎಲ್ಲಾ ಪ್ರಯತ್ನ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ.
Recommended Video