ಪಕ್ಷದೊಳಗಿನ ಭಿನ್ನಮತೀಯರಿಗೆ ದೆಹಲಿಯಿಂದ ಯಡಿಯೂರಪ್ಪ ಖಡಕ್ ಸಂದೇಶ
ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿ ಪ್ರವಾಸ ಮುಗಿಸಿ ಶನಿವಾರ (ಸೆ 19) ಮುಗಿಸಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ವಿವಿಧ ಅಭಿವೃದ್ದಿ ಕೆಲಸಗಳಿಗೆ ಅನುಮೋದನೆ/ಅನುದಾನ ಪಡೆಯಲು ಬಿಎಸ್ವೈ ದೆಹಲಿಗೆ ಹೋಗಿದ್ದರೂ, ದೆಹಲಿ ಪ್ರವಾಸದ ಪ್ರಮುಖ ಉದ್ದೇಶ ಸಂಪುಟ ವಿಸ್ತರಣೆ.
Recommended Video
ಸಂಪುಟ ವಿಸ್ತರಣೆಯ ವಿಚಾರ ಇನ್ನೂ ತೂಗೊಯ್ಯಾಲೆಯಲ್ಲಿದ್ದರೂ, ತನ್ನ ಮೇಲಿದ್ದ ಭಾರವನ್ನು ಇಳಿಸಿ ಯಡಿಯೂರಪ್ಪ ನಿರಾಳವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಶನಿವಾರ ಸಂಜೆಯೊಳಗೆ, ಸಂಪುಟ ವಿಸ್ತರಣೆಯ ವಿಚಾರದಲ್ಲಿ ಸ್ಪಷ್ಟ ಆದೇಶ ವರಿಷ್ಠರಿಂದ ಬರುವ ಸಾಧ್ಯತೆಯಿದೆ.
ದೆಹಲಿಯಲ್ಲಿ ಸಿಎಂ ಯಡಿಯೂರಪ್ಪ: ಬಂದ ದಾರಿಗೆ ಸುಂಕವಿಲ್ಲ?
ಆದರೆ, ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆ ನಡೆಯದೇ ಇದ್ದರೆ, ರಾಜ್ಯ ಬಿಜೆಪಿ ಘಟಕದಲ್ಲಾಗುವ ಏರುಪೇರುಗಳನ್ನು ಯಡಿಯೂರಪ್ಪ ಸವಿವರವಾಗಿ ವರಿಷ್ಠರಿಗೆ ತಿಳಿಸಿದ್ದಾರೆ. ನಾನು ಹೇಳಬೇಕಿತ್ತೋ ಅದನ್ನು ಹೇಳಿದ್ದೇನೆ, ಇನ್ನು ನಿಮಗೆ ಬಿಟ್ಟ ವಿಚಾರ ಎನ್ನುವ ನಿರಾಳತೆಯಿಂದ ಬಿಎಸ್ವೈ ರಾಜ್ಯಕ್ಕೆ ಹಿಂದಿರುಗುತ್ತಿದ್ದಾರೆ.
ಪ್ರಮುಖವಾಗಿ, ಸಂಪುಟ ವಿಸ್ತರಣೆಯ ಜೊತೆಗೆ, ಮುಖ್ಯಮಂತ್ರಿ ಬದಲಾವಣೆಯ ವಿಚಾರದಲ್ಲೂ, ದೆಹಲಿಯಿಂದ, ಪಕ್ಷದೊಳಗಿನ ಭಿನ್ನಮತೀಯರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ ಎಂದು ಹೇಳಬಹುದಾಗಿದೆ.
ಇಂದಲ್ಲಾ, ನಾಳೆ ಸಂಪುಟ ಪುನರ್ ರಚನೆಯಾದಾರೆ, ಈ ನಾಲ್ವರಿಗೆ ಕೊಕ್?
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ದೆಹಲಿ ಪ್ರವಾಸ
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರ ದೆಹಲಿ ಪ್ರವಾಸದ ನಂತರ, ಮುಖ್ಯಮಂತ್ರಿ ಬದಲಾವಣೆ ವಿಚಾರ, ರಾಜ್ಯ ಬಿಜೆಪಿ ಘಟಕದಲ್ಲಿ ಸಂಚಲನ ಮೂಡಿಸಿತ್ತು. ಯಡಿಯೂರಪ್ಪನವರು ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈ ವಿಚಾರದಲ್ಲಿ, ಯಡಿಯೂರಪ್ಪ ರಾಜ್ಯದ ಮುಖಂಡರಿಗೆ ಸಂದೇಶ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ವರಿಷ್ಠರಿಗೆ ಮಾತು ಕೊಟ್ಟಿದ್ದೇನೆ
"ಯಾರೋ ಕೆಲವರು ಮುಖ್ಯಮಂತ್ರಿ ಬದಲಾವಣೆಯಾಗಬೇಕು ಎನ್ನುತ್ತಿದ್ದಾರೆ. ಪಕ್ಷದೊಳಗೆ ಆ ರೀತಿಯ ಬೆಳವಣಿಗೆಗಳು ನಡೆಯುತ್ತಿಲ್ಲ. ನಾನು ವರಿಷ್ಠರಿಗೆ ಮಾತು ಕೊಟ್ಟಿದ್ದೇನೆ. ಮುಂದಿನ ಚುನಾವಣೆಯಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ನನ್ನದು ಎನ್ನುವ ಭರವಸೆಯನ್ನು ವರಿಷ್ಠರಿಗೆ ನೀಡಿದ್ದೇನೆ"ಎಂದು ಯಡಿಯೂರಪ್ಪ ಹೇಳಿದ್ದಾರೆ.
ಪ್ರಧಾನಿ ಮೋದಿ ಮತ್ತು ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಜೊತೆಗಿನ ಮಾತುಕತೆ
ಪ್ರಮುಖವಾಗಿ, ಪ್ರಧಾನಿ ಮೋದಿ ಮತ್ತು ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರ ಜೊತೆಗಿನ ಮಾತುಕತೆ ಫಲಪ್ರದವಾಗಿರಬಹುದು ಎನ್ನುವುದು ಬಿಎಸ್ವೈ ಅವರ ಬಾಡಿ ಲಾಂಗ್ವೇಜ್ ಸಾರುವಂತಿತ್ತು. ವರಿಷ್ಠರ ಜೊತೆ ಸವಿವರವಾಗಿ ಚರ್ಚಿಸಿದ್ದೇನೆ ಎಂದು ಯಡಿಯೂರಪ್ಪ, ದೆಹಲಿಯಲ್ಲಿ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿಶ್ರಾಂತಿಯಲ್ಲಿ ಇರುವುದರಿಂದ ಕ್ಯಾಬಿನೆಟ್ ವಿಸ್ತರಣೆ ಸಂಬಂಧದ ವಿಚಾರವನ್ನು ನಡ್ಡಾ ಅವರೊಂದಿಗೆ ಚರ್ಚಿಸಬೇಕಾಗುತ್ತದೆ. ಹಾಗಾಗಿ, ಬಿಜೆಪಿ ವರಿಷ್ಠರು ತರಾತುರಿಯಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾರರು ಎಂದೂ ಹೇಳಲಾಗುತ್ತಿದೆ.