ಕೊಟ್ಟ ಮಾತು ಉಳಿಸಿಕೊಂಡ ಸಿಎಂ ಬಿ.ಎಸ್. ಯಡಿಯೂರಪ್ಪ!
ಬೆಂಗಳೂರು, ಜು. 22: ರಾಜಕೀಯ ನಾಯಕರು ಕೇವಲ ಭರವಸೆಗಳನ್ನು ಕೊಡುತ್ತಾರೆ ಎಂಬ ಮಾತಿದೆ. ಆದರೆ ಅದನ್ನು ಮೀರಿ ಕೊಟ್ಟ ಮಾತನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉಳಿಸಿಕೊಂಡಿದ್ದಾರೆ. ಯಡಿಯೂರಪ್ಪ ಅವರು ನನಗೆ ಮಾತು ಕೊಟ್ಟಿದ್ದಾರೆ. ಅವರು ಮಾತಿನ ಮೇಲೆ ನಡೆಯುವ ಮನುಷ್ಯ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಹೇಳಿದ್ದರು. ಆದರೆ ಬಹುತೇಕರು ಅದನ್ನು ಒತ್ತಡದ ತಂತ್ರ ಎಂದು ತಳ್ಳಿ ಹಾಕಿದ್ದು ಸುಳ್ಳಲ್ಲ.
Recommended Video
ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅತಂತ್ರರಾಗಿದ್ದ ಎಲ್ಲ 16 ಶಾಸಕರಿಗೆ ಕೊಟ್ಟಿದ್ದ ಭರವಸೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉಳಿಸಿಕೊಂಡಿದ್ದಾರೆ. ಆದರೆ ನಂಬಿದವರನ್ನು ಕೈಹಿಡಿಯುವ ಭರದಲ್ಲಿ ನಿಜವಾದ ಸಾಧಕರನ್ನು ಕಡೆಗಣಿಸಲಾಗಿದೆ. ಆಯಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ವಿಧಾನ ಪರಿಷತ್ಗೆ ನಾಮ ನಿರ್ದೇಶನ ಮಾಡುವುದು ಸಂಪ್ರದಾಯ. ಆದರೆ ಯಡಿಯೂರಪ್ಪ ಅವರು ಆ ಸಂಪ್ರದಾಯವನ್ನು ಮುರಿದಿದ್ದಾರೆ.
ಎಚ್. ವಿಶ್ವನಾಥ್
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲುನ ತ್ಯಾಗ ಮಾಡಿದವರು ಹಾಗೂ ಪ್ರಯತ್ನ ಪಟ್ಟವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಣೆ ಹಾಕಿದ್ದಾರೆ. ಭರವಸೆ ಕೊಟ್ಟಂತೆಯೆ ಮಾಜಿ ಸಚಿವ ಎಚ್. ವಿಶ್ವನಾಥ್ ಅವರನ್ನು ಪರಿಷತ್ಗೆ ನಾಮನಿರ್ದೇಶನ ಮಾಡಿದ್ದಾರೆ.
ವಿಧಾನ ಪರಿಷತ್: ಎಚ್. ವಿಶ್ವನಾಥ್ ಸೇರಿ 4 ಸದಸ್ಯರ ನಾಮನಿರ್ದೇಶನ
ಶಾಸಕಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಅನರ್ಹ ಶಾಸಕರಾಗಿ ನಂತರ ಹುಣಸೂರು ಕ್ಷೇತ್ರದಿಂದ ಉಪ ಚುನಾವಣೆಯನ್ನು ವಿಶ್ವನಾಥ್ ಎದುರಿಸಿದ್ದರು. ಆದರೆ ಚುನಾವಣೆಯಲ್ಲಿ ಸೋತಿದ್ದರಿಂದ ಅವರ ರಾಜಕೀಯ ಭವಿಷ್ಯವೇ ಅತಂತ್ರವಾಗಿತ್ತು. ಇದೀಗ ಸಾಹಿತ್ಯ ಕ್ಷೇತ್ರದ ಕೋಟಾದಡಿ ಎಚ್. ವಿಶ್ವನಾಥ್ ವಿಧಾನ ಪರಿಷತ್ ಪ್ರವೇಶ ಮಾಡಿದ್ದಾರೆ. ಇದರೊಂದಿಗೆ ಅವರು ಮಂತ್ರಿಯಾಗುವುದು ಖಚಿತವಾಗಿದೆ.
ಸಿ.ಪಿ. ಯೋಗೇಶ್ವರ್
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಸೋತಿದ್ದ ಸಿ.ಪಿ. ಯೋಗೇಶ್ವರ್ ಅವರು ಕಲಾ ಕ್ಷೇತ್ರದ ಕೋಟಾದಡಿ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ. ಕಳೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಎದುರು ಯೋಗೇಶ್ವರ್ ಸೋಲನ್ನು ಅನುಭವಿಸಿದ್ದರು.
ಅದಾದ ಬಳಿಕ ಮೈತ್ರಿ ಸರ್ಕಾರದ ಪತನ ಹಾಗೂ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಯೋಗೇಶ್ವರ್ ಮಹತ್ವದ ಪಾತ್ರ ವಹಿಸಿದ್ದರು. ಹೀಗಾಗಿ ಅವರನ್ನು ಕೂಡ ಮಂತ್ರಿ ಮಾಡುವ ನಿಟ್ಟಿನಲ್ಲಿ ವಿಧಾನಪರಿಷತ್ಗೆ ನಾಮನಿರ್ದೇಶನ ಮಾಡಲಾಗಿದೆ.
ಇನ್ನುಳಿದವರು
ಇನ್ನು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ ಅವರು ಯಡಿಯೂರಪ್ಪ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರು. ಭಾರತಿ ಶೆಟ್ಟಿ ಅವರು ಸಮಾಜ ಸೇವಾ ಕ್ಷೇತ್ರದ ಕೋಟಾದಡಿ ವಿಧಾನ ಪರಿಷತ್ ಪ್ರವೇಶ ಮಾಡಿದ್ದಾರೆ. ಈ ಹಿಂದೆಯೂ ಸಹ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದರು.
ಸಿದ್ದಿ ಜನಾಂಗದ ಏಳಿಗೆಯ ಕೈ ಶಾಂತಾರಾಮ ಸಿದ್ದಿ
ವಿಶಿಷ್ಟ ಸೇವಾ ಕ್ಷೇತ್ರದ ಕೋಟಾದಡಿ ಶಾಂತಾರಮ ಸಿದ್ದಿ ಹಾಗೂ ಶಿಕ್ಷಣ ಕ್ಷೇತ್ರದ ಕೋಟಾದಡಿ ಪ್ರೊ. ಸಾಬಣ್ಣ ತಳವಾರ್ ವಿಧಾನ ಪರಿಷತ್ತಿಗೆ ನಾಮನಿರ್ದೇಶಿತರಾಗಿದ್ದಾರೆ.
ಅತಂತ್ರರಾದ ರೋಶನ್ ಬೇಗ್
ಇನ್ನು ಈ 16 ಜನರೊಂದಿಗೆ ಶಾಸಕಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅನರ್ಹ ಶಾಸಕರಾಗಿರುವ ಮಾಜಿ ಸಚಿವ ರೋಶನ್ ಬೇಗ್ ಈಗಲೂ ಅತಂತ್ರರಾಗಿದ್ದಾರೆ. ಐಎಂಎ ಪ್ರಕರಣದಲ್ಲಿ ರೋಶನ್ ಬೇಗ್ ಹೆಸರು ಕೇಳಿ ಬಂದಿತ್ತು. ಅದೇ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಹಾಯ ಮಾಡಲಿಲ್ಲ ಎಂದು ಕಾಂಗ್ರೆಸ್ ಪಕ್ಷ ಹಾಗೂ ಶಾಸಕಸ್ಥಾನಕ್ಕೆ ಬೇಗ್ ರಾಜೀನಾಮೆ ಕೊಟ್ಟಿದ್ದರು.
ಆದರೆ ಐಎಂಎ ಹಗರಣದಲ್ಲಿ ಅವರ ಹೆಸರು ಕೇಳಿಬಂದಿದ್ದರಿಂದ ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ನಾಯಕರು ಹಿಂದೇಟು ಹಾಕಿದ್ದರು. ಹೀಗಾಗಿ ಆ ಕಡೆ ಶಾಸಕಸ್ಥಾನವೂ ಇಲ್ಲದೆ ಈ ಕಡೆ ಬಿಜೆಪಿಯನ್ನೂ ಸೇರಲಾಗದೆ ಬೇಗ ಅತಂತ್ರರಾಗಿದ್ದಾರೆ.